ಅ.3ರಂದು ವಿಧಾನಪರಿಷತ್ ಚುನಾವಣೆ, ಅಂಕಿ-ಅಂಶಗಳು
ಬೆಂಗಳೂರು, ಸೆಪ್ಟೆಂಬರ್ 14 : ಚುನಾವಣಾ ಆಯೋಗ ಕರ್ನಾಟಕದ 3 ವಿಧಾನಪರಿಷತ್ ಕ್ಷೇತ್ರಗಳ ಚುನಾವಣೆಗೆ ದಿನಾಂಕ ನಿಗದಿ ಮಾಡಿದೆ. ಅಕ್ಟೋಬರ್ 3ರಂದು ವಿಧಾನಸಭೆಯಿಂದ ಪರಿಷತ್ತಿಗೆ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ.
ಕೆ.ಎಸ್.ಈಶ್ವರಪ್ಪ, ಡಾ.ಜಿ.ಪರಮೇಶ್ವರ ಮತ್ತು ವಿ.ಸೋಮಣ್ಣ ರಾಜೀನಾಮೆಯಿಂದ ತೆರವಾದ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಸೆ.22 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ.
3 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆ
ಶಿವಮೊಗ್ಗ ನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ ಕೆ.ಎಸ್.ಈಶ್ವರಪ್ಪ ಅವರ ಸ್ಥಾನ ತೆರವಾಗಿದೆ. ಹೊಸದಾಗಿ ಆಯ್ಕೆಯಾವ ಸದಸ್ಯರ ಅವಧಿ 2020ರ ಜೂನ್ 30ರ ತನಕ ಇರಲಿದೆ.
ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದ ವಿ.ಸೋಮಣ್ಣ ಅವರ ಕ್ಷೇತ್ರವೂ ತೆರವಾಗಿದೆ. ಹೊಸದಾಗಿ ಆಯ್ಕೆಯಾಗು ಸದಸ್ಯರ ಅವಧಿ 2022ರ ಜೂನ್ 14ರ ತನಕ ಇದೆ.
ಡಾ.ಜಿ.ಪರಮೇಶ್ವರ ಅವರು ಕೊರಟಗೆರೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದಾರೆ. ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೂ ಚುನಾವಣೆ ನಡೆಯುತ್ತಿದೆ. ಹೊಸದಾಗಿ ಆಯ್ಕೆಯಾಗುವ ಸದಸ್ಯರ ಅವಧಿ 2020ರ ಜೂನ್ 30ರ ತನಕ ಇದೆ.