ಹವಾಮಾನ ವರದಿ; ಕರ್ನಾಟಕದಲ್ಲಿ ಮಳೆ ಮುಂದುವರೆಯಲಿದೆ
ಬೆಂಗಳೂರು ಆಗಸ್ಟ್ 10: ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ 48ಗಂಟೆ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ಕರ್ನಾಟಕ ರಾಜ್ಯ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.
ಹವಾಮಾನ ಬದಲಾವಣೆಗಳಿಂದ ನಿರಂತರವಾಗಿ ರಾಜ್ಯದಲ್ಲೆಡೇ ಸುರಿದಿದ್ದ ಮುಂಗಾರು ಮಳೆ ಇದೀಗ ಕಡಿಮೆ ಆಗಿದೆ. ಕರಾವಳಿಯ ಮೂರು ಜಿಲ್ಲೆಗಳು, ಉತ್ತರ ಒಳನಾಡಿನ ಒಂದು ಮತ್ತು ಮಲೆನಾಡಿನ ಮೂರು ಜಿಲ್ಲೆಗಳು ಸೇರಿದಂತೆ ಒಟ್ಟು ಎಂಟು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ಸಾಧ್ಯತೆ ಇದೆ.
ರಾಡಾರ್ಗಳಿಗೆ ನಿಲುಕದ ಹವಾಮಾನ: ಮುನ್ಸೂಚನೆಗೂ ಮೀರಿದ ವೈಪರೀತ್ಯ
ಶುಕ್ರವಾರದವರೆಗೆ ಕರಾವಳಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಕೊಡಗು, ಹಾಸನ, ಶಿವಮೊಗ್ಗ, ಮಡಿಕೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣದಿಂದ ಭಾರೀ ಮಳೆ ಆಗುವ ಸಂಭವವಿದೆ. ಈ ಕಾರಣಕ್ಕೆ ಮುಂದಿನ 48ಗಂಟೆ ಇಷ್ಟು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ ಕೊಡಲಾಗಿದೆ. ಇದರ ಹೊರತು ಯಾವುದೇ ಗಮನಾರ್ಹ ಬದಲಾವಣೆಗಳು ಇಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇಶದ ಹಲವೆಡೆ ಸುರಿದ ಮಳೆ
ದೇಶದ ನಾನಾ ಕಡೆಗಳಲ್ಲಿ ಅನೇಕ ದಿನಗಳಿಂದ ನಿರಂತರವಾಗಿ ಸುರಿದಿದ್ದ ಮುಂಗಾರು ಕೆಲವೇ ಕೆಲವು ರಾಜ್ಯ ಹೊರತುಪಡಿಸಿ ಉಳಿದೆಡೆ ಕಡಿಮೆಯಾಗಿದೆ. ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ರಾಜಸ್ತಾನ, ಪೂರ್ವ ಮತ್ತು ಪಶ್ಚಿಮ ಉತ್ತರ ಪ್ರದೇಶದ ಭಾಗಗಳು, ಬಿಹಾರ, ಆಂಧ್ರಪ್ರದೇಶ, ತೆಲಂಗಾಣ, ರಾಯಲ ಸೀಮಾ, ಪುದುಚೇರಿ, ಲಕ್ಷದ್ವೀಪ ಸೇರಿದಂತೆ ಹಲವೆಡೆ ಮಳೆ ಇಳಿಮುಖವಾಗಿದೆ. ಉಳಿದಂತೆ ಕರ್ನಾಟಕ, ಗೋವಾ, ಮಧ್ಯಪ್ರದೇಶ, ಉತ್ತರಾಖಂಡ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಸಾಧಾರಣ ಮಳೆ ಮುಂದುವರಿದಿದೆ.
ರಾಜ್ಯದಲ್ಲಿ ದಾಖಲಾದ ಅಧಿಕ ಮಳೆ ಮಾಹಿತಿ
ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಗಳಲ್ಲಿ ರಾಜ್ಯದಲ್ಲಿ ಉತ್ತರ ಕನ್ನಡದಲ್ಲಿ ಅತ್ಯಧಿಕ ಮಳೆ ಅಂದರೆ 13 ಸೆಂ.ಮೀ. ದಾಖಲಾಗಿದೆ. ಉಳಿದಂತೆ ಬೆಳಗಾವಿ ಜಿಲ್ಲೆಯ ಲೋಂಡಾ 11 ಸೆಂ.ಮಿ, ಕೊಟ್ಟಿಗೆಹಾರ, ಕಮ್ಮರಡಿಯಲ್ಲಿ ತಲಾ 9 ಸೆಂ.ಮೀ, ಶಿವಮೊಗ್ಗದಲ್ಲಿ 8 ಸೆಂ.ಮೀ. ಮಳೆ ಬಿದ್ದಿದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರಿದ ಪರಿಣಾಮ ಗಾಳಿಯ ವೇಗ ನಿರೀಕ್ಷಿತ ಮಟ್ಟದಲ್ಲಿ ಕಡಿಮೆ ಆಗಿಲ್ಲ. ಈಗಲೇ ಸಮುದ್ರ ತೀರ ಪ್ರದೇಶದಲ್ಲಿ ಪ್ರತಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬೀಸುತ್ತಿದೆ. ಇದರಿಂದಾಗಿ ಸಮುದ್ರದ ಅಲೆಗಳು ದೈತ್ಯ ರೂಪ ಪಡೆದಿವೆ. ಹೀಗಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರಿಗೆ ಹಗುರದಿಂದ ಸಾಧಾರಣ ಮಳೆ ಸಾಧ್ಯತೆ
ಕಳೆದ ಎರಡು ದಿನದಿಂದ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವೇ ಕಂಡು ಬಂದಿದೆ. ಮುಂದಿನ ಎರಡು ದಿನವೂ ಇದೇ ರೀತಿಯ ವಾತಾವರಣ ನಗರದಲ್ಲಿ ಮುಂದುವರಿಯಲಿದೆ. ಅಲ್ಲದೇ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಕೆಲವೊಮ್ಮೆ ತೀವ್ರ ಭೂಮೇಲ್ಮೈ ಸುಳಿಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 27 ಡಿ.ಸೆ. ಹಾಗೂ ಕನಿಷ್ಠ ತಾಪಮಾನ 20 ಡಿ.ಸೆ. ಇರಲಿದೆ ಎನ್ನಲಾಗಿದೆ.
ರಾಜ್ಯದ ಪ್ರಮುಖ ನಗರಗಳ ತಾಪಮಾನ ಪಟ್ಟಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 27ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 55, ಗಾಳಿಯ ವೇಗ ಗಂಟೆಗೆ 56ಕಿ.ಮೀ. ಕಂಡು ಬಂದಿದೆ. ಬಾಗಲಕೋಟೆಯಲ್ಲಿ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 78 ತೇವಾಂಶ, ಅಂತೆಯೇ ರಾಯಚೂರು 31ಡಿಗ್ರಿ ಸೆಲ್ಸಿಯಸ್ ಗರಿಷ್ಠ, 73ರಷ್ಟು ತೇವಾಂಶ, ಚಿತ್ರದುರ್ಗ 27ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇದ್ದು, 85ರಷ್ಟು ತೇವಾಂಶ ಇದೆ. ಕಲಬುರಗಿ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 73ರಷ್ಟು ತೇವಾಂಶ ಇದೆ, ಇನ್ನು ಚಿಕ್ಕಮಗಳೂರು 26ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ, 77ರಷ್ಟು ತೇವಾಂಶ ದಾಖಲಾಗಿದೆ.