5 ರಾಜ್ಯಗಳ ಚುನಾವಣೆ : ಸಮೀಕ್ಷೆ ಹೇಳಿದ್ದೇನು? ಫಲಿತಾಂಶ ಬಂದಿದ್ದೇನು?
Recommended Video
ಬೆಂಗಳೂರು, ಡಿಸೆಂಬರ್ 12 : ಮತದಾರನ ಮನದಲ್ಲೇನಿರುತ್ತದೋ ಆ ಬ್ರಹ್ಮನೂ ಬಲ್ಲ! ಆದರೆ, ಹುಲುಮಾನವರಾದ, ತಮ್ಮ ಲೆಕ್ಕಾಚಾರವೇ ಸರಿ ಎಂಬ ಹುಂಬತನ ತೋರುವ, ತಮ್ಮನ್ನು ಸದೆಬಡಿಯುವವರು ಯಾರೂ ಇಲ್ಲ ಎಂಬ ಅಹಂಕಾರ ತೋರುವ ರಾಜಕಾರಣಿಗಳಾದರೂ ಹೇಗೆ ಅರಿತಾರು?
ನರೇಂದ್ರ ಮೋದಿಯವರು ವಿನಮ್ರತೆಯಿಂದ ಒಪ್ಪಿಕೊಳ್ಳುವಂಥ ಸೋಲಿನ ಫಲಿತಾಂಶವನ್ನು 5 ರಾಜ್ಯಗಳ ಚುನಾವಣೆಯಲ್ಲಿ ಮತದಾರರು ನೀಡಿದ್ದಾರೆ. ಛತ್ತೀಸ್ ಗಢ, ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ನಮ್ಮನ್ನು ಕಡೆಗಣಿಸಿದರೆ ಏನಾಗುತ್ತದೆಂದು ತೋರಿಸಿರುವ ಮತದಾರರು ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದಾರೆ.
ನಿಜವಾದ ಎಕ್ಸಿಟ್ ಪೋಲ್ ಭವಿಷ್ಯ: ಮಧ್ಯಪ್ರದೇಶದಲ್ಲಿ ಅತಂತ್ರ ಸ್ಥಿತಿ
ಪ್ರತಿ ಚುನಾವಣೆಯಲ್ಲಿ ಮತದಾನವಾದ ನಂತರ ಪ್ರಕಟವಾಗುವ, ವಿವಿಧ ಏಜೆನ್ಸಿಗಳು ನಡೆಸುವ ಚುನಾವಣೋತ್ತರ ಸಮೀಕ್ಷೆ, ಬರಲಿರುವ ಫಲಿತಾಂಶದ ಬಗ್ಗೆ ಸುಳಿವನ್ನು ನೀಡಿರುತ್ತದೆ. ಎಲ್ಲ ಚುನಾವಣೋತ್ತರ ಫಲಿತಾಂಶಗಳು ನಿಖರವಾಗಿರುವುದಿಲ್ಲವಾದರೂ, ಮತದಾರರು ಯಾವ ದಿಕ್ಕಿನೆಡೆ ಚಿಂತಿಸುತ್ತಿದ್ದಾರೆ, ಅವರ ಒಲವು ಯಾವ ಪಕ್ಷದ ಕಡೆಗಿದೆ ಎಂಬುದು ಸ್ಥೂಲವಾಗಿ ಗೊತ್ತಾಗುತ್ತದೆ.
5 ವರ್ಷಗಳಲ್ಲಿ ಭಾರತದ 'ಬಣ್ಣ' ಎಷ್ಟೆಲ್ಲ ಬದಲಾಯಿತು ನೋಡಿ...
ಈ ಬಾರಿ ಹಲವಾರು ಸಂಸ್ಥೆಗಳು, ಟಿವಿ ಮಾಧ್ಯಮಗಳ ಜೊತೆ ನಡೆಸಿದ ಸಮೀಕ್ಷೆ ಮತ್ತು ಡಿಸೆಂಬರ್ 11ರಂದು ಪ್ರಕಟವಾದ 5 ರಾಜ್ಯಗಳ ಚುನಾವಣೆಯ ಫಲಿತಾಂಶದ ತುಲನೆ ಇಲ್ಲಿದೆ. ಕೆಲವೆಡೆ ಚುನಾವಣೋತ್ತರ ಸಮೀಕ್ಷೆಯನ್ನು ಮೀರಿ ಫಲಿತಾಂಶ ಹೊರಬಿದ್ದಿದೆ.
ಛತ್ತೀಸ್ ಗಢ : ಹುಸಿಯಾದ ಸಮೀಕ್ಷೆ
ಕಳೆದ 15 ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಭಾರತೀಯ ಜನತಾ ಪಕ್ಷ ಈ ಬಾರಿ ಕಾಂಗ್ರೆಸ್ ಕೈಯಲ್ಲಿ ಸೋಲು ಉಣ್ಣುತ್ತದೆಂದೇ ಹಲವು ಸಮೀಕ್ಷೆಗಳು ನುಡಿದಿದ್ದವು. ಕೆಲವು ಬಿಜೆಪಿ ಪರವಾಗಿದ್ದವಾದರೂ ಕಡೆಗೆ ಮತದಾರರು ಬಿಜೆಪಿ ಕೈಗೆ ಸೋಲಿನ ಬುತ್ತಿ ನೀಡಿದ್ದಾರೆ. ಇಂಡಿಯಾ ಟುಡೇ- ಮೈ ಆಕ್ಸಿಸ್ ಇಂಡಿಯಾ ನಡೆಸಿದ ಸಮೀಕ್ಷೆಯನ್ನು ಹೊರತುಪಡಿಸಿ ಯಾವ ಸಂಖ್ಯೆಯೂ ಬಿಜೆಪಿ ಪಡೆದಿರುವ ಸ್ಥಾನಕ್ಕೆ ಹತ್ತಿರವಾಗಿಲ್ಲ. ಈ ಸಮೀಕ್ಷೆ ಮಾತ್ರ ಬಿಜೆಪಿ 21ರಿಂದ 31 ಸ್ಥಾನ ಪಡೆಯುತ್ತದೆ ಎಂದು ಹೇಳಿತ್ತು. ಆದರೆ, ಬಿಜೆಪಿಗೆ ದಕ್ಕಿರುವುದು ಅದಕ್ಕಿಂತಲೂ ಕಡಿಮೆ, ಅಂದರೆ ಕೇವಲ 15 ಸ್ಥಾನಗಳು. ಜೋಗಿ ಮತ್ತು ಬಿಎಸ್ಪಿ ಮೈತ್ರಿಕೂಟವನ್ನು ಮುಳುಗಿಸಿರುವ ಕಾಂಗ್ರೆಸ್ ಅಭೂತಪೂರ್ವ 68 ಸ್ಥಾನಗಳನ್ನು ಗಳಿಸಿ ಗದ್ದುಗೆಯ ಮೇಲೆ ವಿರಾಜಮಾನವಾಗಲಿದೆ.
15 ವರ್ಷದ ಬಳಿಕ ಛತ್ತೀಸ್ ಗಢದಲ್ಲಿ ಮುಗ್ಗರಿಸಿದ ಬಿಜೆಪಿ: ಸೋಲಿಗೆ 5 ಕಾರಣಗಳು
ಮಧ್ಯ ಪ್ರದೇಶ : ನಿಜವಾದ ಸಮೀಕ್ಷೆ
ಜಿದ್ದಾಜಿದ್ದಿ ಫೈಟ್ ನಲ್ಲಿ ಕಾಂಗ್ರೆಸ್ 114 ಸ್ಥಾನ ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಬಿಜೆಪಿ 109 ಸ್ಥಾನ ಗಳಿಸಿ ವಿರೋಧ ಪಕ್ಷದಲ್ಲಿ ಕೂಡಲಿದೆ. ಈ ಫಲಿತಾಂಶ ಯಾವ ಚುನಾವಣೋತ್ತರ ಸಮೀಕ್ಷೆಗೆ ಹತ್ತಿರವಾಗಿದೆ? ಇಲ್ಲಿ ಹಲವಾರು ಸಂಸ್ಥೆ ಇದೇ ಬಗೆಯ ಫಲಿತಾಂಶವನ್ನು ನೀಡಿದ್ದವು. ಇಂಡಿಯಾ ಟುಡೇ- ಮೈ ಆಕ್ಸಿಸ್ ಇಂಡಿಯಾ 102-120, ನ್ಯೂಸ್ ಎಕ್ಸ್ ನೇತಾ 106, ರಿಪಬ್ಲಿಕ್ - ಸಿವೋಟರ್ 106, ನ್ಯೂಸ್ ನೇಷನ್ 108-112, ರಿಪಬ್ಲಿಕ್ - ಜನ್ ಕಿ ಬಾತ್ 110-126, ಟುಡೇಸ್ ಚಾಣಕ್ಯ 103 ಸ್ಥಾನ ಬರುತ್ತದೆಂದು ಗ್ರಹಿಸಿದ್ದವು. ಟೈಮ್ಸ್ ನೌ ಮಾತ್ರ ಬಿಜೆಪಿಗೆ ಬಹುಮತ ದೊರೆತು ಕಾಂಗ್ರೆಸ್ ಮಣ್ಣುಮುಕ್ಕುತ್ತದೆಂದು ಹೇಳಿತ್ತು. ಇಲ್ಲಿ ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಮತದಾರರು ಅತ್ಯಂತ ನಿಖರವಾಗಿ ಫಲಿತಾಂಶ ನೀಡಿದ್ದಾರೆ. ಮತದಾರ ಪ್ರಭುವಿಗೆ ನಮೋ ನಮಃ.
ಪಂಚ ರಾಜ್ಯ ವಿಧಾನಸಭಾ ಚುನಾವಣೆಯ ಸಮಗ್ರ ಫಲಿತಾಂಶ
ಮಿಜೋರಾಂ : ಟುಸ್ ಆದ ಸಮೀಕ್ಷೆ
ಕ್ರೈಸ್ತರೇ ಹೆಚ್ಚಾಗಿರುವ ಈ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಮಿಜೋ ನ್ಯಾಷನಲ್ ಫ್ರಂಟ್ ನಡುವೆ ಭಾರೀ ಕದನವಿರಲಿದೆ ಎಂದು ಸಮೀಕ್ಷೆ ಹೇಳಿತ್ತು. ಎಲ್ಲ ಐದು ಸಂಸ್ಥೆಗಳು ಕಾಂಗ್ರೆಸ್ ಮತ್ತು ಎಂಎನ್ಎಫ್ ಸರಿಸಮವಾಗಿ ಸ್ಥಾನ ಗೆದ್ದುಕೊಳ್ಳಲಿವೆ ಎಂದು ನುಡಿದಿದ್ದವು. ಆದರೆ ಆಗಿದ್ದೇನು? ಈಶಾನ್ಯ ರಾಜ್ಯದಲ್ಲಿ ಉಳಿಸಿಕೊಂಡಿದ್ದ ಒಂದು ರಾಜ್ಯವನ್ನೂ ಕಾಂಗ್ರೆಸ್ಸಿನಿಂದ ಮಿಜೋ ನ್ಯಾಷನಲ್ ಫ್ರಂಟ್ ಕಿತ್ತುಕೊಳ್ಳುವಂತಾಗಿದೆ. ಅಂತಿಮವಾಗಿ ಮಿಜೋ ನ್ಯಾಷನಲ್ ಫ್ರಂಟ್ 40ರಲ್ಲಿ 26 ಸ್ಥಾನಗಳನ್ನು ಕಬಳಿಸಿಕೊಂಡು ಕಾಂಗ್ರೆಸ್ಸಿಗೆ ಭಾರೀ ಮುಖಭಂಗ ಉಂಟು ಮಾಡಿದೆ. ಕಾಂಗ್ರೆಸ್ ಕೇವಲ 5 ಕ್ಷೇತ್ರಗಳಲ್ಲಿ ಗಳಿಸಿ ಸೋಲು ಕಾಣುವಂತಾಗಿದೆ. ಇತರ 6 ಸ್ಥಾನಗಳು ಇತರ ಪಕ್ಷಗಳ ಮತ್ತು ಸ್ವತಂತ್ರ ಅಭ್ಯರ್ಥಿಗಳ ಪಾಲಾಗಿವೆ.
ಮಿಜೋರಾಂ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ ಅಭ್ಯರ್ಥಿ ಡಾ. ಛಕ್ಮಾ
ರಾಜಸ್ಥಾನ : ಎಬಿಪಿ ನ್ಯೂ ಸಮೀಕ್ಷೆ ನಿಖರ
ಇಲ್ಲಿ ಎಬಿಪಿ - ಸಿಎಸ್ ಡಿಎಸ್, ರಿಪಬ್ಲಿಕ್ - ಜನ್ ಕಿ ಬಾತ್ ಪ್ರತ್ಯೇಕವಾಗಿ ನಡೆಸಿದ ಸಮೀಕ್ಷೆ ಫಲಿತಾಂಶಕ್ಕೆ ಅತ್ಯಂತ ನಿಖರವಾಗಿದೆ. ಟುಡೇಸ್ ಚಾಣಕ್ಯ ಹೊರತುಪಡಿಸಿದರೆ ಎಲ್ಲ ಸಮೀಕ್ಷೆಗಳು ಇಲ್ಲಿ ಕಾಂಗ್ರೆಸ್ಸಿಗೆ ಸರಳ ಬಹುಮತಕ್ಕೆ ಬೇಕಾದ ಸ್ಥಾನಕ್ಕಿಂತಲೂ ಹೆಚ್ಚು ದೊರೆಯುತ್ತವೆಂದು ಊಹಿಸಿದ್ದವು. ಆದರೆ, ಕಾಂಗ್ರೆಸ್ ಕೇವಲ 1 ಮತದಿಂದ ಸರಳ ಬಹುಮತ ಪಡೆಯುವುದರಿಂದ ವಂಚಿತವಾಗಿದೆ. ಈ ಎಲ್ಲ ಸಮೀಕ್ಷೆಗಳ ನಿರೀಕ್ಷೆ ಹುಸಿ ಮಾಡಿದ್ದು ಸ್ವತಂತ್ರ ಅಭ್ಯರ್ಥಿಗಳು. ಇತರ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಕ್ಕೆ ಭಾರೀ ಹೊಡೆತ ಕೊಟ್ಟಿದ್ದಾರೆ. ಬಿಜೆಪಿ ಕೇವಲ 73 ಸೀಟು ಗಳಿಸಿ ಸೋಲೊಪ್ಪಿಕೊಂಡಿದೆ. ಈಗ ಸರಕಾರ ರಚಿಸಲು ಹೊರಟಿರುವ ಕಾಂಗ್ರೆಸ್ ಸ್ವತಂತ್ರ ಅಭ್ಯರ್ಥಿಗಳತ್ತ ನೋಡುವಂತಾಗಿದೆ.
ಪಂಚ ರಾಜ್ಯ ವಿಧಾನಸಭಾ ಚುನಾವಣೆಯ ಸಮಗ್ರ ಫಲಿತಾಂಶ
ತೆಲಂಗಾಣ : ಸಮೀಕ್ಷೆಗಳೆಲ್ಲ ಉಲ್ಟಾಪುಲ್ಟಾ
ಆಂಧ್ರ ಪ್ರದೇಶದಿಂದ ಸಿಡಿದು ಹೋಗಿ ಪ್ರತ್ಯೇಕ ರಾಜ್ಯ ಸ್ಥಾಪನೆಯಾದ ನಂತರ ಎರಡನೇ ಚುನಾವಣೆ ಎದುರಿಸುತ್ತಿರುವ ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಮತ್ತೊಮ್ಮೆ ಜಯಭೇರಿ ಬಾರಿಸಿ ತಮ್ಮ ಸಮನಾರಿಲ್ಲ ಎಂದು ಸಾರಿದೆ. ಕೆ ಚಂದ್ರಶೇಖರ ರಾವ್ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಕ್ಕೆ ಭರ್ಜರಿ ಬಿಸಿ ಮುಟ್ಟಿಸಿದ್ದಾರೆ. ಇಲ್ಲಿ ಟಿಆರ್ಎಸ್ ನಿರೀಕ್ಷೆಯನ್ನೂ ಮೀರಿ 88 ಕ್ಷೇತ್ರಗಳಲ್ಲಿ ಜಯಗಳಿಸಿದರೆ, ತೆಲುಗು ದೇಶಂ ಪಕ್ಷದೊಡನೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಧೂಳಿಪಟವಾಗಿದೆ. ಇಲ್ಲಿ ಇಂಡಿಯ್ ಟುಡೇ- ಮೈ ಆಕ್ಸಿಸ್ ಇಂಡಿಯಾ ನಡೆಸಿದ ಸಮೀಕ್ಷೆ ಮಾತ್ರ ಪ್ರಸ್ತುತ ಫಲಿತಾಂಶಕ್ಕೆ ಹತ್ತಿರವಾಗಿದೆ. ಉಳಿದೆಲ್ಲ ಸಮೀಕ್ಷೆಗಳು ಟಿಆರ್ಎಸ್ ಗೆ ಕಡಿಮೆ ಅಥವಾ ಬಹುಮತಕ್ಕೆ ಬೇಕಿರುವ ಸ್ಥಾನ ಮಾತ್ರ ಸಿಗುತ್ತದೆಂದು ಹೇಳಿದ್ದವು. ಎಲ್ಲ ಉಲ್ಟಾಪುಲ್ಟಾ ಆಗಿ ಕೆ ಚಂದ್ರಶೇಖರ ರಾವ್ ಅವರು ಮತ್ತೆ ಕಿಂಗ್ ಆಗಿ ಹೊರಹೊಮ್ಮಿದ್ದಾರೆ.