ನಾಳೆ ಭಾನುವಾರ ರಾಜ್ಯಕ್ಕೆ ಅತ್ಯಧಿಕ ಮಳೆ ನಿರೀಕ್ಷೆ: ರೆಡ್ ಅಲರ್ಟ್
ಬೆಂಗಳೂರು ಆಗಸ್ಟ್ 06: ಕರ್ನಾಟಕದಾದ್ಯಂತ ಮುಂದಿನ ಐದು ದಿನದವರೆಗೆ ಜೋರು ಮಳೆ ಮುಂದುವರಿಯಲಿದೆ. ಈ ಪೈಕಿ ನಾಳೆ ಭಾನುವಾರ ಒಂದು ದಿನ ರಾಜ್ಯದ ಕರಾವಳಿ ಹಾಗೂ ಮಲೆನಾಡು ಸೇರಿ ಆರು ಜಿಲ್ಲೆಗಳಲ್ಲಿ ಅತ್ಯಧಿಕ ಭಾರಿ ಮಳೆ ಬೀಳಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಆಗಸ್ಟ್ 11ರವರೆಗೆ ರಾಜ್ಯದ ಎಲ್ಲ ಭಾಗಗಳ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ. ಇದರಲ್ಲಿ ಭಾನುವಾರ ಮಾತ್ರ ಉಡುಪಿ, ಉತ್ತರ ಕನ್ನಡ, ದಕ್ಷಿಣ ಜಿಲ್ಲೆಗಳಲ್ಲಿ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ನಿತ್ಯ 20ಸೆಂ.ಮೀ.ಗಿಂತಲೂ ಅಧಿಕ ಮಳೆ ಬರಲಿದೆ. ಹೀಗಾಗಿ ಈ ಆರು ಜಿಲ್ಲೆಗಳಿಗೆ ಭಾನುವಾರ ಒಂದು ದಿನ ಮಾತ್ರ 'ರೆಡ್ ಅಲರ್ಟ್' ಘೋಷಿಸುವ ಮೂಲಕ ಆಯಾ ಜಿಲ್ಲೆಗಳಿಗೆ ಹೈ ಅಲರ್ಟ್ ಸೂಚನೆ ಕೊಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಉಳಿದ ನಾಲ್ಕು ದಿನ ಅತೀ ಮಳೆಯ ಆರು ಜಿಲ್ಲೆಗಳು ಸೇರಿದಂತೆ ಇನ್ನಿತರ ಜಿಲ್ಲೆಗಳಾದ ಬೆಳಗಾವಿ, ಬೀದರ್, ದಾವಣಗೆರೆ, ಹಾಸನ, ಮಂಡ್ಯ, ಮೈಸೂರು, ವಿಜಯಪುರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಿತ್ಯ 11.5ಸೆಂ.ಮೀ.ನಿಂದ 20ಸೆಂ.ಮೀ.ವರೆಗೆ ಮಳೆ ಬರಲಿದ್ದು, ಅವುಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ವಿವಿಧ ರಾಜ್ಯಗಳಲ್ಲಿ ಮಳೆ ಮುಂದುವರಿಕೆ
ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಮಳೆ ಅಬ್ಬರು ಶುರುವಿಟ್ಟುಕೊಂಡಿದೆ. ಈ ಪರಿಸ್ಥಿತಿ ಇನ್ನು ಕೆಲವು ದಿನ ಹೀಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಲ್ಲಿ ಕರ್ನಾಟಕ, ಕೇರಳ, ಲಕ್ಷದ್ವೀಪ, ತೆಲಂಗಾಣ, ಆಂಧ್ರಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಓಡಿಶಾ, ಜಾರ್ಖಂಡ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಗುಜರಾತ್ ಒಳಗೊಂಡಂತೆ ದೇಶದ ಅನೇಕ ರಾಜ್ಯಗಳಲ್ಲಿ ಮಳೆ ಇದೇ ರೀತಿ ಅಬ್ಬರಿಸಲಿದೆ.
ಕರ್ನಾಟಕದಲ್ಲಿ ಹೇಗಿರಲಿದೆ ಮಳೆ
ಕರ್ನಾಟಕದ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಮಳೆ ಅಬ್ಬರ ಜೋರಾಗಿ ಇರಲಿದೆ. ಮಲೆನಾಡು ಹೊರತುಪಡಿಸಿದರೆ ದಕ್ಷಿಣ ಒಳನಾಡಿನಲ್ಲೂ ಸಾಧಾರಣದಿಂದ ಭಾರಿ ಮಳೆ ಕಂಡು ಬರಲಿದೆ. ಆದರೆ ಕರಾವಳಿ ಮತ್ತು ಮಲೆನಾಡು ಸೇರಿ ಕೆಲವೇ ಕೆಲವು ಜಿಲ್ಲೆಗಳಿ ಮುಂದಿನ ಐದು ದಿನವು ಗುಡುಗು ಸಹಿತ ಅತ್ಯಧಿಕ ಭಾರಿ ಮಳೆ ಮುಂದುವರಿಯಲಿದೆ. ಕೆಲವು ದಿನಗಳಿಂದ ಸುರಿಯುತ್ತಿರುವ ಈ ಮಳೆಯಿಂದಾಗಿ ಬೆಳೆ ಕಟಾವಿಗೆ ಬಿಸಿಲು ಎದುರು ನೋಡುತ್ತಿರುವ ರೈತರಿಗೆ ತೊಂದರೆ ಉಂಟಾಗಿದೆ. ಮಳೆ ನಿಂತರ ಕಟಾವು ಮಾಡಲು ರೈತರು ಸಜ್ಜಾಗಲಿದ್ದಾರೆ.
ಬೆಂಗಳೂರಲ್ಲಿ ಮಳೆ ಇಳಿಕೆ ಸಾಧ್ಯತೆ
ಬೆಂಗಳೂರಿನಲ್ಲಿ ಭಾನುವಾರವು ಸಾಧಾರಣದಿಂದ ಉತ್ತಮ ಮಳೆ ಆಗಲಿದ್ದು, ನಂತರ ಸೋಮವಾರದಿಂದ ಮಳೆಯಲ್ಲಿ ತುಸು ಇಳಿಕೆ ಕಂಡು ಬರುವ ಸಾಧ್ಯತೆ ಇದೆ. ಆದರೆ ಎಲ್ಲೆಡೆ ಚಳಿ ಹಾಗೂ ಮೋಡ ಮುಸುಕಿನ ವಾತಾವರಣ ಮುಂದುವರಿಯಲಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಭಾನುವಾರ ವ್ಯಾಪಕ ಮಳೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಈ ವೇಳೆ ವಾತಾವರಣದಲ್ಲಿ ಗರಿಷ್ಠ ತಾಪಮಾನ 27ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 19ಡಿ.ಸೆ. ಕಂಡು ಬರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ವಿವಿಧ ನಗರಗಳ ಉಷ್ಣಾಂಶ ಬಗ್ಗೆ ಮಾಹಿತಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 25ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವಿದ್ದರೆ, ತೇವಾಂಶ 78ರಷ್ಟು, ಗಾಳಿಯ ವೇಗ ಗಂಟೆಗೆ 32ಕಿ.ಮೀ. ದಾಖಲಾಗಿದೆ. ಬಾಗಲಕೋಟೆಯಲ್ಲಿ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 71ತೇವಾಂಶ, ಮಂಗಳೂರಲ್ಲಿ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 84ರಷ್ಟು ತೇವಾಂಶ ಇದೆ. ಶಿವಮೊಗ್ಗದಲ್ಲಿ 25ಡಿ.ಸೆ. ಗರಿಷ್ಠ ಉಷ್ಣಾಂಶ ಮತ್ತು 80ರಷ್ಟು ತೇವಾಂಶ ಕಂಡು ಬಂದಿದೆ. ಇನ್ನು ಮೈಸೂರಲ್ಲಿ 26ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 75, ಬಳ್ಳಾರಿಯಲ್ಲಿ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಮತ್ತು ತೇವಾಂಶ 65 ದಾಖಲಾಗಿದೆ.
ರಾಯಚೂರಲ್ಲಿ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ, 65ರಷ್ಟು ತೇವಾಂಶ, ಚಿತ್ರದುರ್ಗದಲ್ಲಿ 276ಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 77ರಷ್ಟು ತೇವಾಂಶ ಇದೆ. ಕಲಬುರಗಿ 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 66ರಷ್ಟು ತೇವಾಂಶ ಇದೆ. ಚಿಕ್ಕಮಗಳೂರಲ್ಲಿ26 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 77ರಷ್ಟು ತೇವಾಂಶ ದಾಖಲಾಗಿದೆ.