ಕರ್ನಾಟಕ; ಕಡಿಮೆಯಾದ ಮಳೆ, ಅಲ್ಲಲ್ಲಿ ಸಾಧಾರಣ ಮಳೆ ಸಾಧ್ಯತೆ
ಬೆಂಗಳೂರು ಆಗಸ್ಟ್ 09: ಮೂರು ಜಿಲ್ಲೆಗಳನ್ನು ಬಿಟ್ಟು ಬಹುತೇಕ ರಾಜ್ಯಾದ್ಯಂತ ಮಳೆ ಅಬ್ಬರ ಕ್ಷೀಣಿಸಿದೆ. ಅತ್ಯಧಿಕ ಭಾರೀ ಮಳೆ ದಾಖಲಾಗಿದ್ದ ಜಿಲ್ಲೆಗಳಲ್ಲಿ ಮುಂಗಾರು ಮಳೆ ಕೊಂಚ ವಿರಾಮ ನೀಡಿದೆ. ಕೆಲವೆಡೆ ಸಾಧಾರಣದಿಂದ ಭಾರೀ ಮಳೆ ನಿರೀಕ್ಷೆ ಮಾತ್ರ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
ರಾಜ್ಯದಲ್ಲಿ ಮುಂದಿನ ಮೂರು ದಿನ ಉತ್ತಮ ಮಳೆ ಆಗುವ ಮುನ್ಸೂಚನೆ ಇದ್ದು, ಈ ಪೈಕಿ ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಮಾತ್ರ ಭಾರೀಯಿಂದ ಅತೀ ಭಾರೀ ಮಳೆ ಸುರಿಯುವ ಸಂಭವವಿದೆ.
Breaking:ಕರ್ನಾಟಕದಲ್ಲಿ ತಗ್ಗಿದ ಮುಂಗಾರು ಆರ್ಭಟ: 3ಜಿಲ್ಲೆಗೆ ಭಾರಿ ಮಳೆ
ಈ ಮೂರು ಜಿಲ್ಲೆಗಳ ಕೆಲವು ಕಡೆಗಳಲ್ಲಿ ಸುಮಾರು 11.5 ರಿಂದ 20 ಸೆಂ.ಮೀ.ವರೆಗೆ ಮಳೆ ಸುರಿಯುವ ಲಕ್ಷಣಗಳು ಕಂಡು ಬಂದ ಕಾರಣ ಬುಧವಾರ ಒಂದು ದಿನ 'ಆರೆಂಜ್ ಅಲರ್ಟ' ಘೋಷಿಸಲಾಗಿದೆ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಬೀಳಲಿದೆ. ಇದರಲ್ಲಿ ಉತ್ತರ ಒಳನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳು ಸೇರಿವೆ. ಇಲ್ಲಿ ಮುಂದಿನ ಶುಕ್ರವಾರದವರೆಗೆ (ಆಗಸ್ಟ್ 12ರವರೆಗೆ) ಮೂರು ದಿನ ಸಾಧಾರಣದಿಂದ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಇದರ ಹೊರತು ರಾಜ್ಯದಲ್ಲಿ ಗಂಭೀರ ರೂಪ ಹವಾಮಾನ ಬದಲಾವಣೆಗಳು ಇಲ್ಲ ಎಂದು ತಿಳಿದು ಬಂದಿದೆ.
ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಮಳೆ ಇಳಿಕೆ
ಹಲವು ವಾರಗಳಿಂದ ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಚುರುಕಾಗಿದ್ದು, ಆರ್ಭಟಿಸಿದ್ದ ವರುಣ ಇದೀಗ ತಣ್ಣಗಾಗುತ್ತಿದ್ದಾರೆ. ಕಳೆದ ಎರಡು ದಿನದಿಂದ ಮಳೆ ಅಬ್ಬರ ಇಳಿಮುಖವಾಗಿದೆ. ಇದಕ್ಕೆ ಕರ್ನಾಟಕವು ಹೊರತಾಗಿಲ್ಲ. ಇನ್ನು ದೇಶದ ಉತ್ತರ ಪ್ರದೇಶ, ಉತ್ತರಾಖಂಡ, ಹರ್ಯಾಣ, ಪಂಜಾಬ್, ನವದೆಹಲಿ, ಹಿಮಾಚಾಲ ಪ್ರದೇಶ, ರಾಜಸ್ಥಾನ, ಸಿಕ್ಕಿಂ, ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ಭಾಗಗಳಲ್ಲಿ ಮಳೆ ಕ್ಷೀಣಿಸಿದೆ. ಕೆಲವು ರಾಜ್ಯಗಳಲ್ಲಿ ಮಾತ್ರ ಮಳೆ ಮುಂದುವರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರದ ವರದಿ ತಿಳಿಸಿದೆ.
ಕರ್ನಾಟಕದ ಯಾವ ಜಿಲ್ಲೆಗಳಿಗೆ ಏನೇನು? ಎಚ್ಚರಿಕೆ ಇದೆ
ಮಲೆನಾಡಿನಲ್ಲಿ ಬುಧವಾರ ಒಂದು ದಿನ ಮಳೆ ಅಬ್ಬರ ಹೆಚ್ಚಾಗಿರಲಿದೆ. ಹೀಗಾಗಿ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಿಗೆ ಅಂದು 'ಆರೆಂಜ್ ಅಲರ್ಟ್' ಕೊಡಲಾಗಿದೆ. ಉಳಿದಂತೆ 12ರವರೆಗೆ ಕರಾವಳಿ ಮೂರು ಜಿಲ್ಲೆಗಳಿಗೆ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಬಾಗಲಕೋಟೆ, ಹಾವೇರಿ, ಕಲಬುರಗಿ ಜಿಲ್ಲೆಗಳಿಗೆ ಮಾತ್ರ 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ ರಾಜ್ಯ ಹವಾಮಾನ ಕೇಂದ್ರದ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
ಬೆಂಗಳೂರಿಗೆ ಹಗುರದಿಂದ ಸಾಧಾರಣ ಮಳೆ ಸಾಧ್ಯತೆ
ಬೆಂಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನ ಕೆಲವು ನಿಮಿಷಗಳ ಕಾಲ ತುಂತುರು ಮಳೆ ಅಬ್ಬರಿಸಿತು. ಬೆಳಗ್ಗೆ ಆಗಾಗ ಬಿಸಿಲು ಕಂಡು ಬಂತಾದರೂ ಮಧ್ಯಾಹ್ನದ ವೇಳೆಗೆ ಬಿಸಿಲು ಮರೆಯಾಗಿಮೋದ ಕವಿದ ವಾತಾವರಣ ಆವರಿಸಿತು. ನಂತರ ಒಮ್ಮೇಲೆ ಜೋರು ಮಳೆ ದಾಖಲಾಯಿತು. ಎಲ್ಲೆಡೆ ಆಗಾಗ ಬಿಸಿಲು ಮತ್ತು ತುಂತುರು ಮಳೆ ಬೀಳಬಹುದು. ಮುಖ್ಯವಾಗಿ ಮಂಗಳವಾರ ರಾತ್ರ ಹೊತ್ತಿಗೆ ಜೋರು ಮಳೆ ಆಗುವ ಲಕ್ಷಣಗಳು ಇವೆ. ಇದೇ ರೀತಿಯ ವಾತಾವರಣ ಮುಂದಿನ 48ಗಂಟೆಯು ಮುಂದುವರಿಯುವ ಸಾಧ್ಯತೆ ಇದ್ದು, ಗರಿಷ್ಠ ತಾಪಮಾನ 27 ಡಿ.ಸೆ. ಹಾಗೂ ಕನಿಷ್ಠ ಉಷ್ಣಾಂಶ 19 ಡಿ. ಸೆ. ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ.
ತಾಪಮಾನ ಮತ್ತು ತೇವಾಂಶ ದಾಖಲಾತಿ ವಿವರ
ಬೆಂಗಳೂರಿನಲ್ಲಿ 26ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 68 ಇದೆ, ಜತೆಗೆ ಗಾಳಿಯ ವೇಗ ಗಂಟೆಗೆ 63 ಕಿ.ಮೀ.ದಾಖಲಾಗಿದೆ. ಇನ್ನು ಬಾಗಲಕೋಟೆ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 67ತೇವಾಂಶ, ಮಂಗಳೂರಲ್ಲಿ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಪಾಮಾನ ಇದ್ದು, 77ರಷ್ಟು ತೇವಾಂಶ ಇದೆ. ಶಿವಮೊಗ್ಗದಲ್ಲಿ 26ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 73ರಷ್ಟು ತೇವಾಂಶ, ಮೈಸೂರಲ್ಲಿ 27ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 61, ಬಳ್ಳಾರಿಯಲ್ಲಿ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ, ತೇವಾಂಶ 54ರಷ್ಟು ಕಂಡು ಬಂದಿದೆ.
ಅದೇ ರೀತಿ ರಾಯಚೂರಿನಲ್ಲಿ 31ಡಿಗ್ರಿ ಸೆಲ್ಸಿಯಸ್ ಗರಿಷ್ಠ ಇದ್ದು, 52ರಷ್ಟು ತೇವಾಂಶ, ಚಿತ್ರದುರ್ಗದಲ್ಲಿ 27ಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 78ರಷ್ಟು ತೇವಾಂಶ, ಇನ್ನು ಕಲಬುರಗಿ 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 83ರಷ್ಟು ತೇವಾಂಶ ಇದ್ದರೆ ಚಿಕ್ಕಮಗಳೂರಲ್ಲಿ 26ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ, 76ರಷ್ಟು ತೇವಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.