ಚಿತ್ರಗಳಲ್ಲಿ : ಉ.ಪ್ರ, ಕೋಮುದಳ್ಳುರಿಗೆ ಅಮಾಯಕರ ಬಲಿ
ಮುಜಾಫರ್ ನಗರ, ಸೆ.10: ಎರಡು ಕೋಮುಗಳ ನಡುವೆ ಉಂಟಾದ ಸಂಘರ್ಷ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ಇನ್ನೂ ಬೂದಿಮುಚ್ಚಿದ ಕೆಂಡದಂಥ ಪರಿಸ್ಥಿತಿ ಉಂಟು ಮಾಡಿದೆ. ಸೋಮವಾರ ಮತ್ತಷ್ಟು ಕೋಮುಘರ್ಷಣೆಗಳು ನಡೆದಿದ್ದು, ಮೃತರ ಸಂಖ್ಯೆ 31ಕ್ಕೇರಿದೆ ಎಂದು ಪ್ರಧಾನ ಕಾರ್ಯದರ್ಶಿ ಆರ್ ಎಂ ಶ್ರೀವಾಸ್ತವ ಹೇಳಿದ್ದಾರೆ.
ಹಿಂಸಾಚಾರದ ಹಿನ್ನಲೆಯಲ್ಲಿ ಮುಜಾಫರ್ ನಗರ ಜಿಲ್ಲಾದ್ಯಂತ ಸೇನೆಯನ್ನು ನಿಯೋಜಿಸಿ ಕರ್ಫ್ಯೂ ಹೇರಲಾಗಿದೆ. ಅಕ್ಕಪಕ್ಕದ 2 ಜಿಲ್ಲೆಗಳಲ್ಲೂ ಹಲವೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. 800 ಸೈನಿಕರಿರುವ ಸೇನಾ ತುಕಡಿ ಧ್ವಜಪಥ ಸಂಚಲನ ಕೂಡ ನಡೆಸಿದ್ದಾರೆ. ಆದರೆ, ಪರಿಸ್ಥಿತಿ ಇನ್ನೂ ಹತೋಟಿಗೆ ಸಿಕ್ಕಿಲ್ಲದಿರುವುದು ಅಖಿಲೇಶ್ ಯಾದವ್ ಸರ್ಕಾರಕ್ಕೆ ತಲೆನೋವಾಗಿದೆ.
ಕೇಂದ್ರ ಸರ್ಕಾರದ ವತಿಯಿಂದ ಸರ್ವ ರೀತಿಯಲ್ಲಿ ನೆರವು ನೀಡುವುದಾಗಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.
ಈಗಾಗಲೇ 200ಕ್ಕೂ ಹೆಚ್ಚು ದಂಗೆಕೋರರನ್ನು ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಾಶಾಲ್ ರಾಜ್ ಶರ್ಮ ಹೇಳಿದ್ದಾರೆ. ಹಿಂದೂ ಮುಸ್ಲಿಂ ಗಲಭೆ ಹತ್ತಿಕೊಳ್ಳಲು ಪಾಕಿಸ್ತಾನ ಕೂಡಾ ಸಂಚು ರೂಪಿಸಿದೆ ಎಂದು ವಿಡಿಯೋ ತುಣುಕುಗಳು ಹೇಳುತ್ತಿದೆ. ಅಮಾಯಕರ ಸಾವಿಗೆ ಕಾರಣವಾಗಿರುವ ಕೋಮುದಳ್ಳುರಿಗೆ ಕಾರಣ ಎನ್ನಲಾದ ನಿಷೇಧಿತ ವಿಡಿಯೋ ತುಣುಕಿನ ಪರೀಕ್ಷೆಯಲ್ಲಿ ಪೊಲೀಸರು ತೊಡಗಿದ್ದಾರೆ. ಮುಜಾಫರ್ ನಗರದ ದೃಶ್ಯಗಳು ನಿಮಗಾಗಿ ಇಲ್ಲಿದೆ. ಚಿತ್ರಗಳು: ಪಿಟಿಐ
ಸಮಸ್ಯೆ ಏನಿಲ್ಲ ಎಂದ ಅಖಿಲೇಶ್
ಎಲ್ಲವೂ ನಿಯಂತ್ರಣದಲ್ಲಿದೆ ಎನ್ನುತ್ತಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಹಜ್ ಯಾತ್ರೆ ಹೊರಟ ಮೊದಲ ಬ್ಯಾಚಿಗೆ ಶುಭ ಹಾರೈಕೆ ತಿಳಿಸುವುದರಲ್ಲಿ ಬ್ಯುಸಿಯಾಗಿದ್ದಾರೆ.
ಎಲ್ಲೆಡೆ ಕರ್ಫ್ಯೂ
ಮುಜಾಫರ್ ನಗರ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಪೊಲೀಸರ ಪಹರೆ ಬಿಗಿಗೊಳಿಸಲಾಗಿದೆ.
ಗಾಯಗೊಂಡವರು
ಗಾಯಗೊಂಡವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗಲಭೆ ಪೀಡಿತ ಪ್ರದೇಶದಿಂದ ಜನರು ವಲಸೆ ಹೋಗುತ್ತಿದ್ದಾರೆ.
ಪೊಲೀಸ್ ಪಹರೆ
ಕರ್ಫ್ಯೂ ಸಮಯದಲ್ಲಿ ಗಸ್ತು ತಿರುಗುತ್ತಿರುವ ಪೊಲೀಸರು
ರಸ್ತೆಗಿಳಿದ ಯೋಧರು
ಉತ್ತರಪ್ರದೇಶದ ರಾಜ್ಯ ಪೊಲೀಸರು ಗಲಭೆ ಹತ್ತಿಕ್ಕುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ.
ಭದ್ರತಾ ಪಡೆ ಗಸ್ತು
ಮುಜಾಫರ್ ನಗರದಲ್ಲಿ ಎಲ್ಲೆಡೆ ಭದ್ರತಾ ಪಡೆ ಗಸ್ತು ತಿರುಗುವ ದೃಶ್ಯ ಕಂಡು ಬಂದಿದೆ.
ಅಲ್ಲಲ್ಲಿ ಗಲಭೆ
ದೊಂಬಿ ಜಗಳ, ಕಲ್ಲು ಎಸೆತ ಪ್ರಕರಣಗಳು ಇನ್ನೂ ಕೆಲವೆಡೆ ಮುಂದುವರೆದಿದ್ದು, ಪರಿಸ್ಥಿತಿಗೆ ನಿಯಂತ್ರಣಕ್ಕೆ ತರಲಾಗುತ್ತಿದೆ.
ಸಂತ್ರಸ್ತರು
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮಾಯಕ ಮಕ್ಕಳು
ಯೋಧರ ಪಹರೆ
ಮುಜಾಫರ್ ನಗರದಲ್ಲಿ ಯೋಧರು ಶಾಂತಿ ತರುವತ್ತ ಶ್ರಮಿಸುತ್ತಿದ್ದಾರೆ.
ಕರ್ಫ್ಯೂ ಸಂದರ್ಭದಲ್ಲಿ
ಎಲ್ಲೆಡೆ ಕರ್ಫ್ಯೂ ಇರುವುದರಿಂದ ಜನ ಜೀವನ ಸಹಜವಾಗಿ ಅಸ್ತವ್ಯಸ್ತಗೊಂಡಿದೆ.
ನಿಷೇಧಿತ ಸಿಡಿ ಕಾರಣವೇ
ಪಾಕಿಸ್ತಾನದ ಸಿಯಾಲ್ ಕೋಟ್ ನಗರದಲ್ಲಿ 2010ಲ್ಲಿ ನಡೆದಿದ್ದ ಘಟನೆಯೊಂದರಲ್ಲಿ ಜನರ ಗುಂಪೊಂದು ಇಬ್ಬರು ಯುವಕರನ್ನು ಥಳಿಸಿ ಸಾಯಿಸಿತ್ತು. ಅಂದು ಆ ದೃಶ್ಯವನ್ನು ಸೆರೆ ಹಿಡಿದಿದ್ದ ಸಿಡಿಯನ್ನು ನಿಷೇಧಿಸಲಾಗಿತ್ತು. ಮುಜಾಫರ್ ನಗರದಲ್ಲಿ ಸಿಡಿಯ ಪ್ರದರ್ಶನವೇ ಇಷ್ಟಕ್ಕೆಲ್ಲ ಕಾರಣವಾಗಿದೆ.