ಐಎಂಎ ವಂಚನೆ : ಹಾಕಿದ್ದು ಇಷ್ಟು! ಬರೋದು ಎಷ್ಟು? ನೀವೇ ಲೆಕ್ಕ ಹಾಕಿ
ಬೆಂಗಳೂರು, ಫೆ. 04: ಐಎಂಎ ಕಂಪನಿಯಲ್ಲಿ ಹೂಡಿಕೆ ಮಾಡಿದ ಅಷ್ಟು ದುಡ್ಡು ಬರಬಹುದು ಎಂದು ಸಂತ್ರಸ್ತರು ಕನಸು ಕಾಣುತ್ತಿದ್ದಾರೆ. ಇನ್ನೇನು ಕೇಸುಗಳು ಮುಗೀತು. ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಇನ್ನೇನು ದುಡ್ಡು ಬಂದು ಬಿಡುತ್ತದೆ ಎಂಬ ಭಾವನೆಯಲ್ಲಿ ತೇಲಾಡುತ್ತಿದ್ದಾರೆ. ಆದರೆ ಐಎಂಎದಲ್ಲಿ ಹೂಡಿಕೆ ಮಾಡಿದವರಿಗೆ ಹಣ ಬರುವ ಪ್ರಮಾಣ ಎಷ್ಟು ? ಯಾವಾಗ ಬರುತ್ತದೆ ಎಂಬ ಸಂಗತಿ ಗೊತ್ತಾದರೆ ಸಂತ್ರಸ್ತರ ಹೃದಯ ಬಡಿತ ನಿಂತರೂ ಅಚ್ಚರಿ ಪಡಬೇಕಿಲ್ಲ!
ಐಎಂಎ ವಂಚನೆಯ ಸೂತ್ರಧಾರ ಮಹಮದ್ ಮನ್ಸೂರ್ ಖಾನ್ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಸಿಕ್ಕಿದೆ. ಇದೇ ಫೆ. 12 ರಂದು ಬಿಡುಗಡೆಯಾಗಲಿದ್ದಾನೆ. ವಾಸ್ತವದಲ್ಲಿ ಮನ್ಸೂರ್ ಖಾನ್ ಗಿಂತಲೂ ಆತನ ಬ್ಲೇಡ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ ಬಡವರೇ ಆತನಿಗಿಂತಲೂ ಘೋರ ಶಿಕ್ಷೆ ಅನುಭವಿಸುತ್ತಿದ್ದಾರೆ. ಎರಡು ಪಟ್ಟು ದುಡ್ಡು ಬರಬಹುದು ಎಂದು ನಂಬಿ ಇದ್ದಿದ್ದನ್ನಲ್ಲಾ ಹೂಡಿಕೆ ಮಾಡಿದ ಮಂದಿ, ಕೂಲಿ ಮಾಡಿ ಹಣ ಹಾಕಿದವರೆಲ್ಲರೂ ಪೈಸೆಗಾಗಿಯೂ ಪರದಾಡುತ್ತಿದ್ದಾರೆ. ಐಎಂಎ ಸಂತ್ರಸ್ತರು ಮೋಸಕ್ಕೆ ಒಳಗಾಗಿ ಅನುಭವಿಸುತ್ತಿರುವ ನರಕಯಾತನೆ ಮುಂದೆ ಖಾನ್ ಅನುಭವಿಸುತ್ತಿರುವ ಶಿಕ್ಷೆ ಏನೂ ಅಲ್ಲ. ಇದಕ್ಕಿಂತಲೂ ಘೋರ ಸಂಗತಿ ಇಲ್ಲಿದೆ.
ಐಎಂಎ ನಲ್ಲಿ ಮೋಸ ಮತ್ತು ಜಪ್ತಿ ಆಸ್ತಿ ವಿವರ
ಐಎಂಎ ವಂಚನೆ ಪ್ರಕರಣದಲ್ಲಿ ಕಳೆದ 2019 ಸೆಪ್ಟೆಂಬರ್ ನಲ್ಲಿ ಜೈಲಿಗೆ ಹೋದ ಮನ್ಸೂರ್ ಖಾನ್ ವಾಪಸು ಬರುತ್ತಿದ್ದಾನೆ. ಈತ ಸ್ಥಾಪಿಸಿದ್ದ ಐಎಎಂ ನಲ್ಲಿ ಹೂಡಿಕೆ ಮಾಡಿರುವ ಸುಮಾರು 72 ಸಾವಿರ ಮಂದಿ ಐಎಎಂ ಹಣ ವಾಪಸು ಬರುವುದನ್ನೇ ಕಾಯುತ್ತಿದ್ದಾರೆ. ಸದ್ಯ ಐಎಂಎ ನಿಂದ ವಂಚನೆಗೆ ಒಳಗಾಗಿರುವರು ಹೂಡಿಕೆ ಮಾಡಿರುವ ಹಣ ಅಷ್ಟೂ ನೀಡುವಂತೆ ಕೋರಿ 72 ಸಾವಿರ ಮಂದಿ ಐಎಂಎ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕ ಸರ್ಕಾರ ಈವರೆಗೂ ಐಎಂಎಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಸಂಗ್ರಹಿಸಿರುವ ಮೊತ್ತ ಕೇವಲ 475 ಕೋಟಿ ಮಾತ್ರ. ಆದ್ರೆ ಹೂಡಿಕೆ ಮಾಡಿದವರಿಗೆ ಕೊಡಬೇಕಾಗಿರುವ ಮೊತ್ತ 2900 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇನ್ನೂ ಐಎಂಎಗೆ ಸೇರಿದ ವಾಹನ ಹಾಗೂ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳ ಹರಾಜು ಪ್ರಕ್ರಿಯೆ ಬಾಕಿ ಇದೆ. ಎಲ್ಲಾ ಹರಾಜು ಹಾಕಿ ಹಣ ಗಡ್ಡೆ ಹಾಕಿದರೂ ಐಎಂಎ ರೀಕವರಿ ಮೊತ್ತ 500 ಕೋಟಿ ರೂ. ದಾಟುವುದಿಲ್ಲ ಎಂಬ ಮಾಹಿತಿ ಐಎಂಎ ಸಕ್ಷಮ ಪ್ರಾಧಿಕಾರದ ವೆಬ್ ತಾಣದ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಹಾಗಾದ್ರೆ ಸಂತ್ರಸ್ತರ ಕೈಗೆ ಎಷ್ಟು ಹಣ ಸೇರಲಿದೆ ?
ಐಎಂಎ ವಂಚಕ ಮನ್ಸೂರ್ ಖಾನ್ ಗೆ ಜಾಮೀನು: ಫೆ. 12 ರಂದು ಜೈಲಿನಿಂದ ಬಿಡುಗಡೆ!
ಲಕ್ಷಕ್ಕೆ ಹತ್ತು ಸಾವಿರ ಸಿಗಬಹುದೇನೋ ?
ಐಎಂಎ ಸಕ್ಷಮ ಪ್ರಾಧಿಕಾರಕ್ಕೆ ಪರಿಹಾರ ಕೋರಿ ಸಂತ್ರಸ್ತರು ಸಲ್ಲಿಸಿರುವ ಅರ್ಜಿ ಗಳ ಸಂಖ್ಯೆ 40 ಸಾವಿರದಿಂದ 60 ಸಾವಿರಕ್ಕೆ ಏರಿಕೆಯಾಗಿದೆ. ಒಟ್ಟಾರೆ ಜನರು ಐಎಂಎ ನಲ್ಲಿ ಹೂಡಿಕೆ ಮಾಡಿರುವುದು 3 ಸಾವಿರ ಕೋಟಿ. ಆದ್ರೆ ಐಎಂಎ ನಿಂದ ರೀಕವರಿಯಾಗಿರುವ ಮೊತ್ತ ಕೇವಲ 475 ಕೋಟಿ. ಹಾಗಾದ್ರೆ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದವರಿಗೆ ಎಷ್ಟು ಹಣ ಸಿಗಬಹುದು ಎಂದು ಲೆಕ್ಕ ಹಾಕಿದರೆ ಕನಿಷ್ಠ ಹತ್ತು ಸಾವಿರ. ಹೌದು. ಐಎಎಂನಲ್ಲಿ ಒಂದು ಲಕ್ಷ ಹೂಡಿಕೆ ಮಾಡಿದವರಿಗೆ ವಾಪಸು ಬರುವುದು ಸಾಮಾನ್ಯ ಹತ್ತರಿಂದ ಹದಿನೈದು ಸಾವಿರ ಅಷ್ಟೇ ಗ್ಯಾರೆಂಟಿ. ಅದಕ್ಕಿಂತೂ ಮೀರಿ ಕೊಡಲಿಕ್ಕೆ ಸಾಧ್ಯವೇ ಇಲ್ಲ ಎನ್ನುತ್ತವೆ. ಐಎಂಎ ವಂಚನೆ ಕುರಿತು ಸರ್ಕಾರ ರಚಿಸಿರುವ ಸಕ್ಷಮ ಪ್ರಾಧಿಕಾರ ಅಧಿಕೃತ ವೆಬ್ ತಾಣದಲ್ಲಿ ಬಿಡುಗಡೆ ಮಾಡಿರುವ ದಾಖಲೆಗಳು. ಹತ್ತು ಲಕ್ಷ ರೂಪಾಯಿ ಹೂಡಿಕೆ ಮಾಡಿದವರಿಗೆ ಒಂದು ಲಕ್ಷ ರೂಪಾಯಿ ಕೈಗೆ ಸಿಕ್ಕರೂ ಅದೃಷ್ಟ ಎಂಬಂತಾಗಿದೆ ಐಎಂಎ ಪರಿಹಾರದ ಕಥೆ.
ಜನರ ನಿರೀಕ್ಷೆ ಬಹು ಜೋರು
ಪೊಲೀಸರು, ವೈದ್ಯರು ಸೇರಿದಂತೆ ಅದರಲ್ಲೂ ಮುಸ್ಲಿಂ ಸಮುದಾಯದ ಸಾವಿರಾರು ಬಡವರು ಕೂಲಿ ಮಾಡಿ ಐಎಎಂನಲ್ಲಿ ಹೂಡಿಕೆ ಮಾಡಿದ್ದಾರೆ. ಕೆಲವರು ಮಕ್ಕಳಿಗೆ ಮದುವೆ ಮಾಡುವ ಆಸೆಯಿಂದ ಹೂಡಿಕೆ ಮಾಡಿದರೆ, ಇನ್ನೂ ಕೆಲವರು ಭವಿಷ್ಯದಲ್ಲಿ ಸೂರು ಕಟ್ಟಿಕೊಳ್ಳುವ ಆಸೆಯಿಂದ ಹೂಡಿಕೆ ಮಾಡಿದ್ದರು. ಐಎಂಎ ನಲ್ಲಿ ಹೂಡಿಕೆ ಮಾಡಿದ ಹಣದಲ್ಲಿ ಅಷ್ಟೂ ಮೊತ್ತ ಸಿಗುವ ಆಸೆಯಲ್ಲಿ ಸಂಗತ್ರಸ್ತರು ತೇಲಾಡುತ್ತಿದ್ದಾರೆ. ವಾಸ್ತವದಲ್ಲಿ ಹೂಡಿಕೆ ಮಾಡಿದವರಿಗೆ ಸಿಗುವುದು ಬಿಡಿಗಾಸು ಎಂಬುದು ಸ್ಪಷ್ಟ. ಯಾಕೆಂದರೆ ಮನ್ಸೂರ್ ಖಾನ್ ಹುಂಡಿಯಲ್ಲಿ ಹೂಡಿಕೆ ಮಾಡಿದ ಹಣವೇ ಇಲ್ಲ. ಹೀಗಾಗಿ ಇರುವ ಹಣವನ್ನೇ ಕಾನೂನು ಬದ್ಧವಾಗಿ ಐಎಂಎ ಪ್ರಕರಣದ ಸಕ್ಷಮ ಪ್ರಾಧಿಕಾರ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ರವಾನಿಸಲಿದೆ.
ಯಾವಾಗ ಬರುತ್ತೆ ಕಾಸು
ಐಎಂಎ ವಂಚಕ ಆಗಲೇ ಜೈಲು ನೋಡಿ ಹೊರ ಬಂದ. ಇನ್ನು ಐಎಂಎ ಪರಿಹಾರ ಹಣ ಯಾವಾಗ ಬರುತ್ತೆ ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. ಸಂತ್ರಸ್ತರು ಸಲ್ಲಿಸಿರುವ ಅರ್ಜಿಗಳನ್ನು ದಕ್ಷ ಐಎಎಸ್ ಅಧಿಕಾರಿ ಹರ್ಷ ಗುಪ್ತಾ ಹಾಳೆ ಬಿಡದಂತೆ ಪರಿಶೀಲನೆ ನಡೆಸುತ್ತಿದ್ದಾರೆ. ಈ ಮೂಲಕ ಯಾರಿಗೂ ಅನ್ಯಾಯವಾಗದಂತೆ ಟೊಂಕ ಕಟ್ಟಿ ನಿಂತು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದೇ ವೇಗದಲ್ಲಿ ಕಾರ್ಯ ನಿರ್ವಹಿಸಿದರೂ ಕನಿಷ್ಠ ಪಕ್ಷ ಇನ್ನೂ ಒಂದು ವರ್ಷ ವಾದರೂ ಕಾಯಲೇಬೇಕು ಎನ್ನುತ್ತದೆ ಪ್ರಾಧಿಕಾರದ ಮೂಲಗಳು. ಅಷ್ಟರಲ್ಲಿ ಹೂಡಿಕೆ ಮಾಡಿದವರಲ್ಲಿ ಇನ್ನೂ ಅದೆಷ್ಟು ಮಂದಿ ಜೀವ ಕಳೆದುಕೊಳ್ಳುತ್ತಾರೋ ಕಾದು ನೋಡಬೇಕು.
ಐಎಂಎ ಮನಿ ಡಬ್ಲಿಂಗ್ ಸ್ಕಿಮ್
ಐ ಮಾನಿಟರಿ ಅಡ್ವೈಸರ್ ಎಂಬ ಕಂಪನಿ ಸ್ಥಾಪಿಸಿದ ಮನ್ಸೂರ್ ಖಾನ್ ಆರಂಭದಲ್ಲಿ ದುಬಾರಿ ಬಡ್ಡಿ ನೀಡಿ ಜನರನ್ನು ಮರಳು ಮಾಡಿದ. ತನ್ನದೇ ಸಮುದಾಯದ ಮಸೀದಿಗಳಲ್ಲಿನ ಮುಖಂಡರನ್ನು ನಂಬಿಸಿದ. ಹೀಗಾಗಿ ಬಹುತೇಕ ಬಡ ವರ್ಗದ ಜನರು ಉಳಿತಾಯದ ಆಸೆಗೆ ಬಿದ್ದು ಇದ್ದ ಬಿದ್ದ ಹಣವನ್ನು ಹೂಡಿಕೆ ಮಾಡಿದರು. ಆದರೆ ಮನ್ಸೂರ್ ಖಾನ್ ಉದ್ದೇಶ ವಹಿವಾಟು ಮಾಡಿ ನಂಬಿದವರಿಗೆ ನ್ಯಾಯ ಬದ್ಧ ಅಸಲು ಕೊಡುವ ಉದ್ದೇಶವೂ ಇರಲಿಲ್ಲ. ರಾಜಕೀಯವಾಗಿ ಬೆಳೆಯಲು ಈ ಹಣ ದುರುಪಯೋಗ ಪಡಿಸಿಕೊಂಡ. ಕೋಟಿ ಕೋಟಿ ದುಂದು ವೆಚ್ಚ ಮಾಡಿದ.
ಮನ್ಸೂರ್ ಖಾನ್ ರಿಯಲ್ ಎಸ್ಟೇಟ್ ಮನ್ಸೂರ್ ಖಾನ್ ಜಿಮ್, ಮನ್ಸೂರ್ ಖಾನ್ ಶಾಲೆ ಎಂದು ಸಿಕ್ಕ ಸಿಕ್ಕ ವಹಿವಾಟು ಆರಂಭಿಸಿದ್ದ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡಿದ. ಜನರು ದುಡ್ಡು ಕೇಳಲು ಶುರು ಮಾಡಿದರು. ಇದ್ದಕ್ಕಿದ್ದಂತೆ ಬೆಂಗಳೂರು ಬಿಟ್ಟಿದ್ದ ಖಾನ್ ಮತ್ತು ಪಟಾಲಂ ಬೇಗ್ ನನ್ನನ್ನು ಮುಳಗಿಸಿದರು ಎಂದು ಅಡಿಯೋ ಹಾಗೂ ವಿಡಿಯೋ ಮಾಡಿ ಬಿಟ್ಟ. ಅಲ್ಲಿಗೆ ಐಎಂಎ ಮೇಲಿನ ನಂಬಿಕೆ ಹೂಡಿಕೆದಾರರಲ್ಲಿ ಸತ್ತು ಹೋಗಿತ್ತು. ಬಡವರೆಲ್ಲರೂ ಬಾಯಿ ಬಡಿದುಕೊಂಡು ಕಮರ್ಷಿಲ್ ಸ್ಟ್ರೀಟ್ ಠಾಣೆ ಮುಂದೆ ಜಮಾಯಿಸಿದರು. ಕೊನೆಗೆ ಎಸ್ಐಟಿ ರಚನೆ, ಇಡಿ ದಾಳಿ ಸಿಬಿಐಗೆ ಪ್ರಕರಣದ ಹಸ್ತಾಂತರ ಆಗಿದ್ದು ನಂತರದ ಬೆಳವಣಿಗೆ. ಇದು ಬ್ಲೇಡ್ ಸ್ಕೀಮ್, ಸಾರ್ವಜನಿಕರ ಹಣ ದುರುಪಯೋಗ ವಾಗುತ್ತಿದೆ ಎಂದು ಆರ್ಬಿಐ ಎಚ್ಚರಿಸಿದರೂ ಜನ ಸೇವಕ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿ ಪ್ರಕರಣವನ್ನೇ ಮುಚ್ಚಿ ಹಾಕಿದರು. ಇದರ ಪರಿಣಾಮ ಇದೀಗ ಬಡವರು ಬೀದಿಗೆ ಬಂದು ನಿಲ್ಲುವಂತಾಗಿದೆ. ಈ ಬಗ್ಗೆ ಜನರು ಅಧಿಕಾರಿಗಳನ್ನು ಕೇಳಿದರೆ, ದುಡ್ಡು ಜಾಸ್ತಿ ಕಡೀತಿತ್ತಾ, ನಮ್ಮನ್ನು ಕೇಳಿ ಹೂಡಿಕೆ ಮಾಡಿದರಾ ಎಂಬ ಪ್ರಶ್ನೆಗಳು. ಅಂತೂ ಐಎಂಎ ಸಂತ್ರಸ್ತರಿಗೆ ಹಾಕಿದ ದುಡ್ಡಲ್ಲಿ ಹದಿನೈದು ಪರ್ಸೆಂಟ್ ಬಂದ್ರೂ ಜಾಸ್ತಿ ಎಂಬುದು ಇವತ್ತಿನ ವಾಸ್ತವ.