ವಿದೇಶದಲ್ಲಿ ಸಿಲುಕಿದ ನೂರಾರು ಅಫ್ಘಾನ್ ರಾಜತಾಂತ್ರಿಕರು: ಕಾಡುತ್ತಿದೆ ಹಣದ ಅಭಾವ
ಕಾಬೂಲ್, ಸೆಪ್ಟೆಂಬರ್ 16: ತಾಲಿಬಾನ್ ಭಯೋತ್ಪಾದಕರು ಆಗಸ್ಟ್ 15 ರಂದು ಹಠಾತ್ತಾಗಿ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಹಲವಾರು ದೇಶಗಳು ಅಫ್ಘಾನಿಸ್ತಾನದಲ್ಲಿರುವ ತಮ್ಮ ರಾಜತಾಂತ್ರಿಕರನ್ನು ತಮ್ಮ ದೇಶಕ್ಕೆ ವಾಪಾಸ್ ಕರೆಸಿಕೊಂಡಿದೆ. ತಾಲಿಬಾನ್ ಯಾವ ದೇಶಗಳು ಕೂಡಾ ತಮ್ಮ ರಾಜತಾಂತ್ರಿಕರನ್ನು ವಾಪಾಸ್ ಕರೆಸಿಕೊಳ್ಳಬೇಡಿ, ಇಲ್ಲಿ ಸುರಕ್ಷತೆ ಇದೆ ಎಂದು ಹೇಳಿಕೊಂಡರೂ ಕೂಡಾ ತಾಲಿಬಾನ್ನ ಈ ಹಿಂದಿನ ಆಡಳಿತವನ್ನು ಅರಿತಿರುವ ವಿಶ್ವದ ಹಲವು ರಾಷ್ಟ್ರಗಳು ತಮ್ಮ ರಾಜತಾಂತ್ರಿಕರನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಕರೆಸಿಕೊಂಡಿದೆ. ಈ ನಡುವೆ ವಿದೇಶದಲ್ಲಿರುವ ಅಫ್ಘಾನಿಸ್ತಾನದ ರಾಜತಾಂತ್ರಿಕರು ಮಾತ್ರ ತಮ್ಮ ಕುಟುಂಬವನ್ನು ಸೇರಲಾಗದೆ, ತಾವೂ ಅಫ್ಘಾನಿಸ್ತಾನಕ್ಕೆ ತೆರಳಲಾಗದೆ, ಹಣದ ಅಭಾವದ ನಡುವೆ ಸಿಲುಕಿಕೊಂಡಿದ್ದಾರೆ.
ತಾಲಿಬಾನ್ ಒಮ್ಮೆಲೇ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡು ಈಗ ಸರ್ಕಾರವನ್ನು ರಚನೆ ಮಾಡಿರುವುದು ವಿದೇಶದಲ್ಲಿರುವ ಅಫ್ಘಾನಿಸ್ತಾನದ ರಾಜತಾಂತ್ರಿಕರನ್ನು ಗೊಂದಲಕ್ಕೆ ದೂಡಿದೆ. ರಾಜತಾಂತ್ರಿಕರು ವಿದೇಶದಲ್ಲಿ ಹಣದ ಅಭಾವವನ್ನು ಅನುಭವಿಸುತ್ತಿದ್ದಾರೆ. ಹಾಗೆಯೇ ಅಫ್ಘಾನಿಸ್ತಾನದಲ್ಲಿ ನಮ್ಮ ಕುಟುಂಬಸ್ಥರು ಹೇಗೆ ಇರುತ್ತಾರೆ ಎಂಬ ಆತಂಕದ ನಡುವೆ ವಿದೇಶದಲ್ಲಿ ದಿನದೂಡುತ್ತಿದ್ದಾರೆ. ವಿದೇಶದಲ್ಲಿ ಆಶ್ರಯವನ್ನು ಪಡೆಯುವುದರಿಂದ ಹತಾಶರಾಗಿದ್ದಾರೆ.
ಆಗಸ್ಟ್ 15 ರಂದು ತಾಲಿಬಾನ್ ಭಯೋತ್ಪಾದಕರು ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಹಾಗೆಯೇ ಈಗ ಅಫ್ಘಾನಿಸ್ತಾನದಲ್ಲಿ ಸರ್ಕಾರವನ್ನು ರಚನೆ ಮಾಡಿರುವ ತಾಲಿಬಾನ್ ಈ ಮಂಗಳವಾರ ಎಲ್ಲಾ ರಾಯಭಾರಿ ಕಚೇರಿಗೆ ಪತ್ರ ಕಳುಹಿಸಲಾಗಿದೆ ಎಂದು ಹೇಳಿದೆ. "ಎಲ್ಲಾ ರಾಜತಾಂತ್ರಿಕರು ಆಯಾ ದೇಶದಲ್ಲಿ ಇದ್ದು ಕೆಲಸ ಮುಂದುವರಿಸುವಂತೆ ತಿಳಿಸಲಾಗಿದೆ," ಎಂದು ತಾಲಿಬಾನ್ ಹೇಳಿದೆ. ಆದರೆ ಕೆನಡಾ, ಜರ್ಮನಿ ಮತ್ತು ಜಪಾನ್ ಸೇರಿದಂತೆ ವಿವಿಧ ದೇಶಗಳಲ್ಲಿ ಇರುವ ಅಫ್ಘಾನಿಸ್ತಾದನ ರಾಜತಾಂತ್ರಿಕರು ತಮ್ಮ ಹತಾಶೆಯನ್ನು ಮಾಧ್ಯಮಗಳಿಗೆ ವಿವರಿಸಿದ್ದಾರೆ.
ನಮ್ಮ ಕುಟುಂಬಕ್ಕೆ ಏನಾಗುತ್ತದೆಯೋ ಎಂಬ ಆತಂಕವಿದೆ
"ನನ್ನ ಸಹೋದ್ಯೋಗಿಗಳು ಹಾಗೂ ಬೇರೆ ದೇಶದಲ್ಲಿರುವ ಅಫ್ಘಾನಿಸ್ತಾನದ ರಾಜತಾಂತ್ರಿಕ ಕಚೇರಿಯ ಸಿಬ್ಬಂದಿಗಳು ತಾವು ಇರುವ ರಾಷ್ಟ್ರವು ತಮ್ಮನ್ನು ಆ ರಾಷ್ಟ್ರದವರಾಗಿ ಒಪ್ಪಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ," ಎಂದು ಬೆರ್ಲಿನ್ನಲ್ಲಿ ಇರುವ ಅಫ್ಘಾನಿಸ್ತಾನದ ರಾಜತಾಂತ್ರಿಕರು ಹೇಳಿದ್ದಾರೆ. ಹಾಗೆಯೇ "ಕಾಬೂಲ್ನಲ್ಲಿ ಇರುವ ತನ್ನ ನಾಲ್ಕು ಮಕ್ಕಳು ಹಾಗೂ ಪತ್ನಿಗೆ ಏನು ಆಗುತ್ತದೆಯೋ ಎಂಬ ಆತಂಕದಲ್ಲಿ ನಾನು ಇಲ್ಲಿ ದಿನದೂಡುತ್ತಿದ್ದೇನೆ," ಎಂದು ಕೂಡಾ ತಿಳಿಸಿದ್ದಾರೆ. "ನಾನು ರಾಜತಾಂತ್ರಿಕ ಈ ದೇಶದಲ್ಲಿ ನಿರಾಶ್ರಿತರು ಆಗಲು ಸಿದ್ದರಿದ್ದೇವೆ ಎಂದು ನಾನು ಅಕ್ಷರಶಃ ಬೇಡಿಕೊಳ್ಳುತ್ತೇನೆ," ಎಂದು ಹೇಳಿರುವ ಬೆರ್ಲಿನ್ನಲ್ಲಿರುವ ಅಫ್ಘಾನ್ ರಾಜತಾಂತ್ರಿಕ, ತಾನು "ಕಾಬೂಲ್ನಲ್ಲಿ ಇರುವ ತನ್ನ ಎಲ್ಲಾ ಸಂಪತ್ತನ್ನು ಮಾರಾಟ ಮಾಡಬೇಕಾಗುತ್ತದೆ, ಮತ್ತೆ ಹೊಸದಾಗಿ ಜೀವನ ಆರಂಭ ಮಾಡಬೇಕಾಗುತ್ತದೆ," ಎಂದು ನೊಂದು ಹೇಳಿದ್ದಾರೆ.
ವಿದೇಶದಲ್ಲಿರುವ ಅಫ್ಘಾನ್ ರಾಜತಾಂತ್ರಿಕರು ಮಾಡುವುದಾದರೂ ಏನು?
ವಿದೇಶದಲ್ಲಿರುವ ಅಫ್ಘಾನಿಸ್ತಾನದ ರಾಜತಾಂತ್ರಿಕರು ದೀರ್ಘಾಕಾಲದವರೆಗೆ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಲಿದ್ದಾರೆ. ಏಕೆಂದರೆ ಎಲ್ಲಾ ದೇಶಗಳು ತಾಲಿಬಾನ್ ಸರ್ಕಾರವನ್ನು ನಾವು ಗಣನೆಗೆ ತೆಗೆದುಕೊಳ್ಳಬೇಕೆ ಎಂಬುವುದನ್ನು ಇನ್ನೂ ಕೂಡಾ ನಿರ್ಧಾರ ಮಾಡಿಲ್ಲ ಎಂದು ಅಂತರಾಷ್ಟ್ರೀಯ ಸಂಬಂಧಗಳ ತಜ್ಞ ಮತ್ತು ಬ್ರಿಟನ್ನ ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಭೇಟಿ ನೀಡುವ ಸಹೋದ್ಯೋಗಿ, ಭಯೋತ್ಪಾದನೆಯ ಬಗ್ಗೆ ಪಿಎಚ್ಡಿ ಮಾಡಿ ಈ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ಹೊಂದಿರುವ ಅಫ್ಜಲ್ ಅಶ್ರಫ್ ಹೇಳಿದ್ದಾರೆ. "ರಾಜತಾಂತ್ರಿಕರು ಮಾಡುವುದಾದರೂ ಏನು?, ಈ ರಾಜತಾಂತ್ರಿಕರು ಸರ್ಕಾರವನ್ನು ಪ್ರತಿನಿಧಿಸುವವರು ಆಗುವುದಿಲ್ಲ. ಜಾರಿಗೆ ತರಲು ಈ ರಾಜತಾಂತ್ರಿಕರ ಬಳಿ ಈಗ ಯಾವುದೇ ಯೋಜನೆಗಳು ಕೂಡಾ ಇಲ್ಲ. ಈ ಹಿನ್ನೆಲೆ ಈ ರಾಯಭಾರ ಕಚೇರಿಯ ಸಿಬ್ಬಂದಿಗಳು ಅಫ್ಘಾನಿಸ್ತಾನಕ್ಕೆ ವಾಪಾಸ್ ಹೋಗದೆ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ದೇಶಗಳು ರಾಜಕೀಯ ಆಶ್ರಯ ನೀಡುವುದು ಉತ್ತಮ," ಎಂದು ಹೇಳಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಮತ್ತೆ ಅಧಿಕಾರವನ್ನು ಪಡೆಯುವ ಸಂದರ್ಭದಲ್ಲಿ ಈ ಹಿಂದಿನ ಕೆಲವು ಕ್ರಮಗಳಲ್ಲಿ ರಾಜಿ ಮಾಡಿಕೊಳ್ಳುವಂತೆ ಕಂಡು ಬಂದಿತ್ತು. ಈ ಹಿಂದೆ ಅಫ್ಘಾನಿಸ್ತಾನವನ್ನು ತಾಲಿಬಾನ್ ಆಳ್ವಿಕೆ ಮಾಡಿದ್ದ ಸಂದರ್ಭದಲ್ಲಿ ಕಲ್ಲು ಹೊಡೆದು ಸಾಯಿಸುವ, ಸಾರ್ವಜನಿಕವಾಗಿ ಮರಣದಂಡಣೆ ವಿಧಿಸುವ ಶಿಕ್ಷೆಗಳನ್ನು ನೀಡಲಾಗುತ್ತಿತ್ತು. ಈ ಬಾರಿ ಇಂತಹ ಕಠೋರ ಕ್ರಮ ತಾಲಿಬಾನ್ ಕೈಗೊಳ್ಳದು ಎಂದು ಹೇಳಲಾಗುತ್ತಿರುವ ನಡುವೆ ತಾಲಿಬಾನ್ ನಾವು ಎಲ್ಲರ ಹಕ್ಕುಗಳಿಗೆ ಗೌರ ನೀಡುತ್ತೇವೆ ಎಂದಿತು. ಆದರೆ ಈಗ ತಾಲಿಬಾನ್ ಮನೆ ಮನೆಗೆ ತೆರಳಿ ತಮ್ಮ ವಿರೋಧಿಗಳನ್ನು ಹುಡುಕುತ್ತಿರುವುದನ್ನು ನೋಡಿದರೆ ತಾಲಿಬಾನ್ ತನ್ನ ನಿಯಮದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಕೊಂಡಂತೆ ಕಾಣುತ್ತಿಲ್ಲ. ಈ ಹಿನ್ನೆಲೆ ರಾಜತಾಂತ್ರಿಕರಿಗೆ ಅಫ್ಘಾನಿಸ್ತಾನಕ್ಕೆ ಮರಳವುದು ಆತಂಕವನ್ನು ಉಂಟು ಮಾಡಿದೆ. ಹಾಗೆಯೇ ತಮ್ಮ ಕುಟುಂಬದ ಸುರಕ್ಷತೆಯ ಬಗ್ಗೆಯೂ ಭೀತಿ ಉಂಟಾಗಿದೆ.
ವಿದೇಶದಲ್ಲಿರುವ ಅಫ್ಘಾನ್ ರಾಜತಾಂತ್ರಿಕರಿಗೆ ಹಣದ ಅಭಾವ
ಮಂಗಳವಾರ ಅಫ್ಘಾನಿಸ್ತಾನದ ಹಾಲಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಮಾಧ್ಯಮ ಗೋಷ್ಠಿ ನಡೆಸಿ, ತಾಲಿಬಾನ್ ಎಲ್ಲಾ ದೇಶದ ತನ್ನ ರಾಜತಾಂತ್ರಿಕರಿಗೆ ಪತ್ರವನ್ನು ಬರೆಯಲಾಗಿದೆ ಎಂದು ಹೇಳಿದೆ. ರಾಜತಾಂತ್ರಿಕರು ವಿದೇಶದಲ್ಲಿಯೇ ಇದ್ದು ತಮ್ಮ ಕರ್ತವ್ಯವನ್ನು ಮುಂದುವರಿಸಲು ತಿಳಿಸಲಾಗಿದೆ ಎಂದು ಹೇಳಿದ್ದಾರೆ. "ಅಫ್ಘಾನಿಸ್ತಾನ ನಿಮ್ಮ ಮೇಲೆ ಬಹಳಷ್ಟು ಹೂಡಿಕೆ ಮಾಡಿದೆ, ನೀವು ಅಫ್ಘಾನಿಸ್ತಾನದ ಸಂಪತ್ತು," ಎಂದು ಕೂಡಾ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ಹಾಲಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಹೇಳಿದ್ದಾರೆ. ಇನ್ನು ವಿದೇಶದಲ್ಲಿ ಅಫ್ಘಾನಿಸ್ತಾನದ ರಾಜತಾಂತ್ರಿಕರು ಸೇರಿದಂತೆ ರಾಯಭಾರಿ ಕಚೇರಿಯಲ್ಲಿ ಸರಿಸುಮಾರು ಮೂರು ಸಾವಿರ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾರೆ ಎಂದು ಹೇಳಲಾಗಿದೆ. ಈ ಹಿಂದೆ ಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ಸೆಪ್ಟೆಂಬರ್ 8 ರಂದು ತಾಲಿಬಾನ್ನ ಹೊಸ ಸರ್ಕಾರವು "ನ್ಯಾಯಸಮ್ಮತವಲ್ಲದ" ಸರ್ಕಾರ ಎಂದು ಕರೆದಿದ್ದು, "ರಾಯಭಾರಿಗಳು ಸಾಮಾನ್ಯವಾಗಿ ತಮ್ಮ ಕರ್ತವ್ಯವನ್ನು, ಕಾರ್ಯವನ್ನು ಮಾಡಿಕೊಂಡು ಹೋಗಬೇಕು," ಎಂದು ತಿಳಿಸಿದ್ದಾರೆ.
ಈ ಹೇಳಿಕೆಯು ಸಾಮಾನ್ಯವಾಗಿ ನಮಗೆ ಯಾವುದೇ ಗೊಂದಲವಿದ್ದಂತೆ ಕಂಡು ಬರುವುದಿಲ್ಲ ಆದರೆ ಬಗ್ಗೆ ಹೇಳಿಕೆ ನೀಡಿರುವ ಕೆನಡಾ ರಾಯಭಾರಿ ಕಚೇರಿಯ ಸಿಬ್ಬಂದಿ, "ನಮ್ಮಲ್ಲಿ ಯಾವುದೇ ಹಣವಿಲ್ಲ. ಈ ಸಂದರ್ಭದಲ್ಲಿ ನಾವು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ನನಗೆ ಸರ್ಕಾರದಿಂದ ಸಂಬಳವೇ ಬರುತ್ತಿಲ್ಲ," ಎಂದು ಹೇಳಿದ್ದಾರೆ. ಇನ್ನು ನವದೆಹಲಿಯಲ್ಲಿರುವ ಇಬ್ಬರು ಅಫ್ಘಾನಿಸ್ತಾನದ ರಾಯಭಾರಿ ಸಿಬ್ಬಂದಿಗಳು, "ನಮ್ಮಲ್ಲಿಯೂ ಹಣದ ಅಭಾವ ಕಾಡುತ್ತಿದೆ. ತಮ್ಮ ಕುಟುಂಬವನ್ನು ಸೇರಲು ಬಯಸುವ ಅಫ್ಘಾನಿಸ್ತಾನದ ಜನರಿಗೆ ಸಹಾಯ ಮಾಡಲು ನಮ್ಮಲ್ಲಿ ಹಣವು ಸಾಲುತ್ತಿಲ್ಲ," ಎಂದು ತಿಳಿಸಿದ್ದಾರೆ. ಇನ್ನು ಈ ಹಿಂದಿನ ಸರ್ಕಾರದ ಜೊತೆಗೆ ತಾವು ನಂಟು ಹೊಂದಿದ್ದ ಕಾರಣದಿಂದಾಗಿ ತಾಲಿಬಾನ್ ನಮಗೆ ಏನಾದರೂ ಮಾಡೀತು ಎಂಬ ಆತಂಕವನ್ನು ಹೊಂದಿರುವ ಈ ಅಫ್ಘಾನಿಸ್ತಾನದ ರಾಯಭಾರಿಗಳು ಅಫ್ಘಾನಿಸ್ತಾನಕ್ಕೆ ವಾಪಾಸ್ ಹೋಗಲು ಹಿಂಜರಿಯುತ್ತಿದ್ದಾರೆ. ಹಾಗೆಯೇ ಭಾರತದಲ್ಲಿ ಸಾವಿರಾರು ಅಫ್ಘಾನಿಸ್ತಾನಿಗಳು ನಿರಾಶ್ರಿತರ ಸ್ಥಾನಮಾನವನ್ನು ಪಡೆಯಲು ವರ್ಷಗಳನ್ನು ಕಳೆದಿರುವ ಹಿನ್ನೆಲೆ ಭಾರತದಲ್ಲಿ ಆಶ್ರಯವನ್ನು ಪಡೆಯಲು ಈ ರಾಯಭಾರಿಗಳು ಕಷ್ಟಪಡುತ್ತಿದ್ದಾರೆ. "ನಾನು ಪ್ರಸ್ತುತ ಇಲ್ಲಿ ಇರುತ್ತೇನೆ, ಬಳಿಕ ನನ್ನನ್ನು ಹಾಗೂ ನನ್ನ ಕುಟುಂಬವನ್ನು ಒಪ್ಪಿಕೊಳ್ಳಲು ಸಿದ್ದವಾಗಿರುವ ರಾಷ್ಟ್ರಕ್ಕೆ ನಾನು ಹೋಗುತ್ತೇನೆ," ಎಂದು ರಾಯಭಾರಿ ಕಚೇರಿ ಸಿಬ್ಬಂದಿಗಳು ಹೇಳುತ್ತಾರೆ.
ತಾಲಿಬಾನ್ ವಿರುದ್ದ ಅಫ್ಘಾನ್ ರಾಯಭಾರಿಗಳು ಕಿಡಿ
ಕೆಲವು ಅಫ್ಘಾನಿಸ್ತಾನದ ರಾಯಭಾರಿಗಳು ತಾಲಿಬಾನ್ ಅನ್ನು ನೇರವಾಗಿ ಟೀಕೆ ಮಾಡಿದ್ದಾರೆ. ಆಸ್ಟೇಲಿಯಾದ ಅಫ್ಘಾನ್ ರಾಯಭಾರಿ ಮನಿಜಾ ಭಕ್ತರಿ, ತಾಲಿಬಾನ್ ಮಾನವ ಹಕ್ಕುಗಳ ಮೇಲೆ ಮಾಡುತ್ತಿರುವ ದಾಳಿಗಳ ವಿರುದ್ದ ತನ್ನ ಟ್ವೀಟರ್ ಖಾತೆಯಲ್ಲಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಈ ನಡುವೆ ಚೀನಾ ರಾಯಭಾರಿ ಜಾವಿದ್ ಅಹ್ಮದ್ ಕಯೆಮ್, "ಈ ಉಗ್ರ ಸಂಘಟನೆಯ ಭರವಸೆಗಳನ್ನು ನಂಬಬೇಡಿ," ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನು ಹಲವು ರಾಯಭಾರಿಗಳು ತಾವು ಇರುವ ದೇಶವು ಅಫ್ಘಾನ್ನ ತಾಲಿಬಾನ್ ಸರ್ಕಾರವನ್ನು ಒಪ್ಪಿಕೊಳ್ಳುವುದಿಲ್ಲ, ಒಪ್ಪಿಕೊಳ್ಳುವ ಮೂಲಕ ತಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುವುದಿಲ್ಲ ಎಂಬ ಭರವಸೆಯಲ್ಲಿ ದಿನದೂಡುತ್ತಿದ್ದಾರೆ. ಇನ್ನು ಹಲವಾರು ಅಫ್ಘಾನಿಸ್ತಾನದ ರಾಯಭಾರಿಗಳು ನ್ಯೂಯಾರ್ಕ್ನಲ್ಲಿ ಮುಂದಿನ ವಾರ ನಡೆಯುವ ಅಂತಾರಾಷ್ಟ್ರೀಯ ನಾಯಕರ ಸಭೆಯಲ್ಲಿ ಏನು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ತಿಳಿಯಲು ಕಾತುರರಾಗಿದ್ದಾರೆ ಎಂದು ತಿಳಿಸಿದ್ದಾರೆ. "ತಾಲಿಬಾನ್ ಅನ್ನು ಕಾನೂನುಬದ್ಧಗೊಳಿಸುವ ಯಾವುದೇ ಒಂದು ನಿರ್ಧಾರವು ತಾಲಿಬಾನ್ ಎಲ್ಲಾ ರಾಷ್ಟ್ರಗಳಲ್ಲಿ ತಮಗೆ ಬೇಕಾದ ತಾಲಿಬಾನ್ ರಾಯಭಾರಿಗಳನ್ನು ನೇಮಕ ಮಾಡಲು ಅವಕಾಶ ನೀಡಬಹುದು," ಎಂದು ರಾಜತಾಂತ್ರಿಕರು ಹೇಳಿದ್ದಾರೆ. ತಜಕೀಸ್ತಾನದಲ್ಲಿ ತಮ್ಮ ಕುಟುಂಬವನ್ನು ತಾವಿರುವ ದೇಶಕ್ಕೆಯೇ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರಾಜತಾಂತ್ರಿಕ ಕಚೇರಿಯನ್ನು ತಮ್ಮ ಮನೆಯಾಗಿಸಿ ಅಲ್ಲೇ ವಾಸ ಮಾಡುವ ಬಗ್ಗೆ ಯೋಜಿಸಲಾಗುತ್ತಿದೆ ಎಂದು ರಾಯಭಾರಿಗಳು ಹೇಳಿದ್ದಾರೆ.
(ಒನ್
ಇಂಡಿಯಾ
ಸುದ್ದಿ)