ಹೀರೇನಾಗವೇಲಿ ಸ್ಫೋಟ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹ
ಬೆಂಗಳೂರು, ಫೆಬ್ರವರಿ 23: ಕರೊನಾ ಸಂಕಷ್ಟ ಕಾಲದಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ಕಲ್ಲು ಗಣಿಗಾರಿಕೆ ನಡೆಸಲು ವಿಧಿಸಿದ್ದ ಷರತ್ತುಗಳನ್ನು ಸಡಿಸಿಲಿಸಿತ್ತು. ಅದರ ಪರಿಣಾಮ ಇವತ್ತು ರಾಜ್ಯದ ಜನರು ಎದುರಿಸುವಂತಾಗಿದೆ. ಶಿವಮೊಗ್ಗ ಕಲ್ಲು ಗಣಿಗಾರಿಕೆ ಪ್ರಕರಣ ಮುಚ್ಚಿ ಹಾಕಿದ ರೀತಿಯಲ್ಲೇ ಚಿಕ್ಕಬಳ್ಳಾಪುರದ ಹೀರೇನಾಗವೇಲಿ ಜಿಲೆಟಿನ್ ಸ್ಫೋಟ ಪ್ರಕರಣ ಮುಚ್ಚಿ ಹೋಗಬಾರದು. ಭೂ ವಿಜ್ಞಾನಿ ಹಾಗೂ ನ್ಯಾಯಾಧೀಶರನ್ನು ಒಳಗೊಂಡ ಆಯೋಗದಿಂದ ತನಿಖೆ ನಡೆಸಬೇಕು. ಅಕ್ರಮ ಕಲ್ಲು ಗಣಿಗಾರಿಕೆ ಸಂಪೂರ್ಣ ನಿಷೇಧ ಮಾಡಬೇಕು!
ಶಾಶ್ವತ ನೀರಾವರಿ ಹೋರಾಟ ನಡೆಸುತ್ತಿರುವ ಚಿಕ್ಕಬಳ್ಳಾಪುರದ ಆಂಜನೇಯರೆಡ್ಡಿ ಅವರ ಆಗ್ರಹವಿದು. ರಾಜ್ಯದಲ್ಲಿ ಕಲ್ಲು ಗಣಿಗಾರಿಕೆಯಿಂದ ಪರಿಸರ ಹಾಗೂ ಕೃಷಿ ಮೇಲೆ ಆಗುತ್ತಿರುವ ಪರಿಣಾಮ ಹಾಗೂ ಸರ್ಕಾರ ಸುಗ್ರೀವಾಜ್ಞೆ ಮೂಲಕ ಗಣಿಗಾರಿಕೆ ಮೇಲಿನ ಷರತ್ತುಗಳನ್ನು ಸಡಿಲಿಸಿದ್ದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಆಂಜನೇಯರೆಡ್ಡಿ ಹೋರಾಟ ನಡೆಸುತ್ತಿದ್ದಾರೆ. ವಿಪರ್ಯಾಸವೆಂದರೆ ಇನ್ನೂ ಅರ್ಜಿ ವಿಲೇವಾರಿಯಾಗುವ ಮುನ್ನ ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ಎರಡು ಸ್ಪೋಟ ಸಂಭವಿಸಿದ್ದು ಗಮನಾರ್ಹ.
ರಾಜ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಕರಾಳ ಮುಖ
ಕಲ್ಲು ಗಣಿಗಾರಿಕೆ ಹಬ್ :
ಸಾಂಪ್ರದಾಯಿಕ ಕಲ್ಲು ಗಣಿಗಾರಿಕೆಗೆ ಹೆಸರು ವಾಸಿಯಾಗಿದ್ದ ಚಿಕ್ಕಬಳ್ಳಾಪುರ ಕಲ್ಲು ಕ್ವಾರಿ ಗಣಿಗಾರಿಕೆ ಕೇಂದ್ರವಾಗಿ ರೂಪಾಂತರಗೊಂಡಿದೆ. ಮರಳು ಖಾಲಿಯಾದ ಬಳಿಕ ಪರ್ಯಾಯವಾಗಿ ಎಂ ಸ್ಯಾಂಡ್ ಬಳಕೆಗೆ ಸರ್ಕಾರ ಅವಕಾಶ ನೀಡಿತ್ತು. ಇದು ರಾಜಧಾನಿ ಬೆಂಗಳೂರಿನ ಸುತ್ತಮುತ್ತ ಜಿಲ್ಲೆಗಳಲ್ಲಿ ಕಲ್ಲು ಗಣಿಗಾರಿಕೆಗೆ ನಾಂದಿ ಹಾಡಿತ್ತು. ಸ್ಥಳೀಯರ ಹೇಳುವ ಪ್ರಕಾರ ಚಿಕ್ಕಬಳ್ಳಾಪುರದಲ್ಲಿ ಕಾನೂನು ಬದ್ಧವಾಗಿ ಇರುವುದು ಕೇವಲ 36 ಕ್ರಷರ್ ಗಳು. ಅಕ್ರಮವಾಗಿ ತಲೆಯೆತ್ತಿರುವ ಕ್ರಷಕರ್ ಗಳ ಸಂಖ್ಯೆ ನೂರು ಗಡಿ ದಾಟಿದೆ ! ಜನ ಪ್ರತಿನಿಧಿಗಳ ನೆರಳಿನಲ್ಲಿ ನಡೆಯುವ ಈ ಅಕ್ರಮ ಕಲ್ಲು ಗಣಿಗಾರಿಕೆ ದಂಧೆ ವಿರುದ್ಧ ಕ್ರಮ ಜರುಗಿಸುವ ಅಧಿಕಾರಿಗಳಿಗೆ ಉಳಿಗಾಲವಿಲ್ಲ ! ಹೀಗಾಗಿ ಗೊತ್ತಿದ್ದೂ ಗೊತ್ತಿಲ್ಲದಂತೆ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ.
ಪರಿಸರ ಮೇಲೆ ದೌರ್ಜನ್ಯ:
ಜಿಲೆಟಿನ್ ಸ್ಪೋಟದಿಂದ ಆರು ಮಂದಿ ಮುಗ್ಧರು ಜೀವ ಕಳೆದುಕೊಂಡಿದ್ದಾರೆ. ಪರವಾನಗಿ ಪಡೆದ ಮಾತ್ರಕ್ಕೆ ಸುರಕ್ಷತಾ ನಿಯಮ ಪಾಲಿಸದಿದ್ದರೆ ಅದು ಕೂಡ ಅಕ್ರಮ ಕಲ್ಲು ಗಣಿಗಾರಿಕೆ. ರಾಜ್ಯದಲ್ಲಿ ಕಲ್ಲು ಗಣಿಗಾರಿಕೆ ಮೇಲೆ ನಿಯಂತ್ರಣ ಮಾಡಬೇಕಿರುವ ಕಂದಾಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಮ್ಮ ಕೆಲಸ ಸಮರ್ಥವಾಗಿ ನಿರ್ವಹಿಸದರೆ ಅಕ್ರಮದ ಕಲ್ಲು ಗಣಿಗಾರಿಕೆಗೆ ಆಸ್ಪದವೇ ಇರಲ್ಲ. ಆದರೆ, ಮಾಮೂಲಿ, ಹಪ್ತಾ, ಚುನಾವಣೆಗಳಿಗೆ ಫಂಡಿಂಗ್ ಕಾರಣಕ್ಕೆ ರಾಜಕಾರಣಿಗಳ ಹಿಡಿತಕ್ಕೆ ಕಲ್ಲು ಕ್ವಾರಿಗಳು ಒಳಗಾಗಿವೆ. ಕಲ್ಲು ಕ್ರಷರ್ ಗಳ ವಿರುದ್ಧ ನಿಷ್ಠಾವಂತಿಕೆಯಿಂದ ಕ್ರಮ ಜರುಗಿಸಿದ ಅಧಿಕಾರಿಗಳಿಗೆ ಉಳಿಗಾಲ ಇಲ್ಲದಂತಾಗಿದೆ. ಹೀಗಾಗಿ ಪದೇ ಪದೇ ಅವಘಡಗಳು ಸಂಭವಿಸುತ್ತಿವೆ ಎಂದು ಆಂಜನೇಯರೆಡ್ಡಿ ಆಕ್ರೋಶ ವ್ಕಕ್ತಪಡಿಸಿದ್ದಾರೆ. ಕಲ್ಲು ಗಣಿಗಾರಿಕೆಯಿಂದ ಜೀವಗಳು ಹೋದಾಗ ಮಾತ್ರ ಅದರ ಬಗ್ಗೆ ಚರ್ಚೆ ನಡೆಯುತ್ತದೆ. ಆದರೆ ನಿರಂತರವಾಗಿ ಪರಿಸರ ಮಾಲಿನ್ಯವಾಗುತ್ತಿದೆ. ಅಂತರ್ಜಲ ಕುಸಿಯುತ್ತಿದೆ. ಆರೋಗ್ಯದ ಮೇಲೆ ಪರಿಣಾಮ ಬೀರಿ ಲಕ್ಷಾಂತರ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದನ್ನು ಸರ್ಕಾರ ಈಗಲಾದರೂ ಗಂಭೀರವಾಗಿ ಪರಿಗಣಿಸಬೇಕು ಎಂಬುದು ಅವರ ಆಗ್ರಹ.
ಕಲ್ಲುಗಣಿಗಾರಿಕೆಗೆ ನಾಂದಿ ಹಾಡಿದ್ದು ಬೆಂಗಳೂರು
ಹಾಲು, ತರಕಾರಿ, ರೇಷ್ಮೆ ಉತ್ಪಾದನೆ ಮೂಲಕ ಚಿನ್ನದ ನಾಡಿನ ಭಾಗವಾಗಿದ್ದ ಚಿಕ್ಕಬಳ್ಳಾಪುರ ಅಕ್ರಮ ಕಲ್ಲುಗಣಿಗಾರಿಕೆ ಹಬ್ ಆಗಿ ರೂಪಾಂತರಗೊಳ್ಳಲು ನಾಂದಿ ಹಾಡಿದ್ದು ಬೆಂಗಳೂರು. ರಾಜಧಾನಿಗೆ ಸಮೀಪ ಇರುವ ಚಿಕ್ಕಬಳ್ಳಾಪುರದಿಂದ ನಾಲ್ಕು ದಶಕಗಳಿಂದ ಮರಳು ಬೆಂಗಳೂರಿಗೆ ಸಾಗಣೆಯಾಗುತ್ತಿತ್ತು. ಮರಳು ಖಾಲಿ ಆಯಿತು. ಅಂತರ್ಜಲ ಕುಸಿಯಿತು. ಇದೇ ವೇಳೆ ಮರಳು ಸಾಗಣೆ ಮೇಲೆ ನಿಷೇಧ ಹೇರಿದ ಸರ್ಕಾರ, ಎಂ ಸ್ಯಾಂಡ್ ಗೆ ಅವಕಾಶ ನೀಡಿತು. ಚಿಕ್ಕಬಳ್ಳಾಪುರದಲ್ಲಿ ಮನೆಗಳಿಗೆ, ಚರಂಡಿಗಳಿಗೆ ಬೇಕಾದ ಚಪ್ಪಡಿ, ದಿಂಡು ಕಲ್ಲುಗಳನ್ನು ಸಾಂಪ್ರದಾಯಿಕವಾಗಿ ಬೆಂಕಿ ಹಾಕಿ ತೆಗೆಯುತ್ತಿದ್ದರು. ರಾಜಧಾನಿಗೆ ಸಮೀಪ ಇರುವ ಈ ಜಾಗದ ಮೇಲೆ ಕ್ರಷರ್ ಗಳ ಕಣ್ಣು ಬಿತ್ತು. ಆಂಧ್ರ ಪ್ರದೇಶದ ಉದ್ಯಮಿಗಳು ಕ್ರಷರ್ ಗಳನ್ನು ತೆರೆದು ಲಾಭ ನೋಡಿದರು. ಇದು ಗೊತ್ತಾಗಿದ್ದೇ ತಡ, ಮಾಜಿ ಗೃಹಮಂತ್ರಿ ಸೇರಿದಂತೆ ಅನೇಕ ಪ್ರಭಾವಿ ರಾಜಕಾರಣಿಗಳು ಎಂ ಸ್ಯಾಂಡ್ ಕ್ರಷರ್ ಗಳನ್ನು ಆರಂಭಿಸಿದರು. ಚಿಕ್ಕಬಳ್ಳಾಪುರದ ಸುತ್ತಮುತ್ತಲೂ ಕ್ರಷರ್ ಗಳು ತಲೆಯೆತ್ತಿದವು. ಕ್ರಷರ್ ಲಾಭದಾಯಕ ಗಳಿಸಬೇಕಾದರೆ, ಬ್ಲಾಸ್ಟಿಂಗ್ ಅನಿವಾರ್ಯ. ಹೀಗಾಗಿ ಜಿಲೆಟಿನ್ ಸ್ಫೋಟಗಳ ತವರಾಗಿ ರೂಪಾಂತರವಾಯಿತು.
ನಂದಿ ತಪ್ಪಲಲ್ಲಿ ಗಣಿಗಾರಿಕೆ :
ಕೇವಲ ಚಿಕ್ಕಬಳ್ಳಾಪುರ ಹೀರೇನಾಗವೇಲಿ ಮಾತ್ರವಲ್ಲ, ಪ್ರವಾಸಿ ತಾಣ ನಂದಿ, ಮುದ್ದೇನಹಳ್ಳಿಯನ್ನೂ ಬಿಟ್ಟಿಲ್ಲ. ರಾತ್ರಿಯಾದರೆ ಜಿಲೆಟಿನ್ ಸ್ಫೋಟದ ಸದ್ದು. ಇದು ಜನ ಸಾಮಾನ್ಯರಿಗೆ ಸಾಮಾನ್ಯವಾಗಿಬಿಟ್ಟಿದೆ. ಅದನ್ನು ಪ್ರಶ್ನಿಸುವ ಶಕ್ತಿ ಅಧಿಕಾರಿಗಳಿಗೂ ಇಲ್ಲ. ಜನ ಸಾಮಾನ್ಯರಿಗೂ ಇಲ್ಲ. ಅಂತಹ ಪ್ರಭಾವಿಗಳ ಮಾಲಿಕತ್ವಕ್ಕೆ ಸೇರಿವೆ ಜನರನ್ನು ಬಲಿ ಪಡೆಯುತ್ತಿರುವ ಕಲ್ಲು ಕ್ವಾರಿಗಳು. ಇನ್ನು ಕಲ್ಲು ಕ್ವಾರಿಗಳು ಕೊಟ್ಟಿರುವ ಕೂಲಿ ಭಿಕ್ಷೆ ಮುಲಾಜಿಗೆ ಒಳಗಾಗಿ ಕೆಲವು ಹಳ್ಳಿಯ ಜನ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಸಹಿಸಿಕೊಂಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.