ಕಾಂಗ್ರೆಸ್ ಅಧ್ಯಕ್ಷರಾದರೆ ಅಶೋಕ್ ಗೆಹ್ಲೋಟ್ ಪಾಲಿಗಿಲ್ಲ ಸಿಎಂ ಕುರ್ಚಿ!
ನವದೆಹಲಿ, ಸೆಪ್ಟೆಂಬರ್ 23: ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಎಐಸಿಸಿ ಅಧ್ಯಕ್ಷ ಸ್ಥಾನವೂ ಇರಲಿ, ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನವೂ ನನಗೆ ಇರಲಿ ಅಂತಾ ಯೋಚಿಸುತ್ತಿದ್ದ ಅಶೋಕ್ ಗೆಹ್ಲೋಟ್ ಲೆಕ್ಕಾಚಾರ ಉಲ್ಟಾ ಹೊಡೆದಿದೆ.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆೆಯಲ್ಲಿ ಗೆದ್ದವರು ಎರಡು ಸ್ಥಾನಗಳಲ್ಲಿ ಮುಂದುವರಿಯುವುದಕ್ಕೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಖಡಕ್ ಸಂದೇಶವನ್ನು ರವಾನಿಸಿದ್ದಾರೆ. ಆ ಮೂಲಕ ಅಶೋಕ್ ಗೆಹ್ಲೋಟ್ ಗೆದ್ದರೆ, ರಾಜಸ್ಥಾನ ಸಿಎಂ ಸ್ಥಾನವನ್ನು ಸಚಿನ್ ಪೈಲಟ್ ಪಾಲಾಗುವ ಲಕ್ಷಣಗಳು ಗೋಚರಿಸುತ್ತಿವೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮುಂದಿನ ನಡೆ ಏನಾಗಿರುತ್ತದೆ? ಎಐಸಿಸಿ ಅಧ್ಯಕ್ಷೀಯ ಚುನಾವಣೆಯ ಸುತ್ತಮುತ್ತಲಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಈ ವರದಿಯಲ್ಲಿ ಓದಿ ತಿಳಿಯಿರಿ.
ಕಾಂಗ್ರೆಸ್ ಅಂಗಳದಲ್ಲಿ ಒಬ್ಬ ವ್ಯಕ್ತಿ, ಒಂದು ಹುದ್ದೆ ಚರ್ಚೆ:
* "ಒಬ್ಬ ವ್ಯಕ್ತಿ, ಒಂದು ಹುದ್ದೆ" ನಿಯಮ ಮತ್ತು ಅಶೋಕ್ ಗೆಹ್ಲೋಟ್ಗೆ ಅನ್ವಯಿಸುತ್ತದೆಯೇ ಎಂಬ ಪ್ರಶ್ನೆಗೆ ಕೇರಳದಲ್ಲಿ ರಾಹುಲ್ ಗಾಂಧಿ ಉತ್ತರಿಸಿದರು. "ನಾವು ಬದ್ಧತೆಯನ್ನು ಹೊಂದಿದ್ದು, ಅದನ್ನು ಉಳಿಸಿಕೊಳ್ಳುತ್ತೇವೆ ಎಂದರು.
* 71 ವರ್ಷ ವಯಸ್ಸಿನ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷರಾಗಲಿ ಎನ್ನುವುದು ರಾಹುಲ್ ಗಾಂಧಿ ಆಯ್ಕೆಯಾಗಿದೆ, ಆದರೆ ಅವರು ಆಯ್ಕೆಯಾದರೆ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ ಎಂಬ ಆತಂಕದಿಂದ ಅವರು ಇಲ್ಲಿಯವರೆಗೆ ಹೊರಗುಳಿದಿದ್ದಾರೆ.
* ಅಶೋಕ್ ಗೆಹ್ಲೋಟ್ ಎಐಸಿಸಿ ಅಧ್ಯಕ್ಷರಾದರೆ, 2020ರಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉರುಳಿಸುವ ಮಟ್ಟಕ್ಕೆ ತಲುಪಿದ್ದ ಸಚಿನ್ ಪೈಲಟ್ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗುವ ನಿರೀಕ್ಷೆಯಿದೆ.
* ಕೇರಳದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಗುರುವಾರ ರಾಹುಲ್ ಗಾಂಧಿ ಜೊತೆಗೆ ಅದೇ ಸಚಿನ್ ಪೈಲಟ್ ಹೆಜ್ಜೆ ಹಾಕಿದರು, ಅಶೋಕ್ ಗೆಹ್ಲೋಟ್ ಆಗಮಿಸುವುದಕ್ಕೂ ಕೆಲವು ಗಂಟೆಗಳ ಮೊದಲು ಯಾತ್ರೆಯಿಂದ ಅವರು ತೆರಳಿದ್ದರು.
* ಅಕ್ಟೋಬರ್ 17ರ ಚುನಾವಣೆಗೆ ಸೋಮವಾರ ತಮ್ಮ ನಾಮಪತ್ರಗಳನ್ನು ಸಲ್ಲಿಸುವ ಮೊದಲು ಕಾಂಗ್ರೆಸ್ ಅಧ್ಯಕ್ಷರಾಗಿ ಮರಳಲು ರಾಹುಲ್ ಗಾಂಧಿ ಮನವೊಲಿಸಲು "ಕೊನೆಯ ಬಾರಿಗೆ" ಪ್ರಯತ್ನಿಸುವುದಾಗಿ ಅಶೋಕ್ ಗೆಹ್ಲೋಟ್ ಹೇಳಿದ್ದರು.
* ತಮ್ಮ ನಿರ್ಧಾರಕ್ಕೆ ಬದ್ಧವಾಗಿರುವ ಬಗ್ಗೆ ಸಂಸದ ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು. ಗುರುವಾರ ಸಂಜೆ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಅಶೋಕ್ ಗೆಹ್ಲೋಟ್ ಭೇಟಿಯಾದರು.
* ಒಬ್ಬರು ಸಚಿವರಾಗಿ ಉಳಿಯಬಹುದು ಮತ್ತು ಕಾಂಗ್ರೆಸ್ ಅಧ್ಯಕ್ಷರಾಗಿಯೂ ಆಯ್ಕೆಯಾಗಬಹುದು, ಪಕ್ಷಕ್ಕೆ ಅನುಕೂಲವಾಗುವ ಯಾವುದನ್ನಾದರೂ ನಾನು ಮಾಡುತ್ತೇನೆ, ಒಂದು ಹುದ್ದೆ, ಎರಡು ಹುದ್ದೆ ಅಥವಾ ಮೂರು ಹುದ್ದೆ, ನಾನು ಹಿಂದೆ ಸರಿಯುವುದಿಲ್ಲ ಎಂದು ಸಭೆಗೂ ಮೊದಲು ಅಶೋಕ್ ಗೆಹ್ಲೋಟ್ ಹೇಳಿದ್ದರು.
* ಸೋನಿಯಾ ಗಾಂಧಿ ಭೇಟಿಯ ನಂತರ, ಹಿರಿಯ ನಾಯಕ ಕೆಸಿ ವೇಣುಗೋಪಾಲ್, "ಒಬ್ಬ ವ್ಯಕ್ತಿ ಒಂದು ಹುದ್ದೆ" ನಿಯಮದ ಕುರಿತು ಹೇಳಿದರು. "ಯಾರು ಸ್ಪರ್ಧಿಸುತ್ತಾರೆ ಮತ್ತು ಗೆಲ್ಲುತ್ತಾರೆ ಎಂಬುದರ ಆಧಾರದ ಮೇಲೆ ಇದು ಅನ್ವಯಿಸುತ್ತದೆ." ಆದರೆ ರಾಹುಲ್ ಗಾಂಧಿಯವರ ಕಟ್ಟುನಿಟ್ಟಿನ ಸಂದೇಶವು ಯಾವುದೇ ಅನುಮಾನಕ್ಕೆ ಅವಕಾಶ ನೀಡುವುದಿಲ್ಲ ಎಂದರು.
* ಕಾಂಗ್ರೆಸ್ ಸೆಪ್ಟೆಂಬರ್ 30 ರವರೆಗೆ ನಾಮಪತ್ರಗಳನ್ನು ಸ್ವೀಕರಿಸುತ್ತದೆ. ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಅಕ್ಟೋಬರ್ 17 ರಂದು ನಡೆಯಲಿದೆ. ಅಕ್ಟೋಬರ್ 19 ರಂದು ಫಲಿತಾಂಶಗಳು ಹೊರ ಬೀಳಲಿದೆ.