ನೈಸ್ ರೋಡ್ ಮೇಲ್ಸೇತುವೆಯಿಂದ ಕಲ್ಲು ಬೀಳುತ್ತೆ !
ಬೆಂಗಳೂರು ಡಿಸೆಂಬರ್ 22: ತುಮಕೂರು ರಸ್ತೆಯಿಂದ ಹಿಡಿದು ಹೊಸೂರು ರಸ್ತೆ ಸಂಪರ್ಕಿಸುವ ನೈಸ್ ರಸ್ತೆಯ ಮೇಲ್ಸೇತುವೆಯಿಂದ ಇಳಿ ಸಂಜೆ ಮತ್ತು ರಾತ್ರಿ ಹೊತ್ತು ಕಲ್ಲು ಬೀಳುತ್ತವೆ..! ಭಾನಾಮತಿ ಕಾಟ ಎಂದು ಭಾವಿಸಬೇಡಿ. ಇದರ ಹಿಂದೆ ಭಯಾನಕ ಸಂಗತಿಯಿದೆ. ಸ್ವ ಅನುಭವದ ಮೇಲೆ ಕ್ಯಾಬ್ ಚಾಲಕ ಆಡಿಯೋ ಬಿಡುಗಡೆ ಮಾಡಿದ್ದು, , ಅದು ಚಾಲಕರ ವಲಯದಲ್ಲಿ ವೈರಲ್ ಆಗಿದೆ.
ತುಮಕೂರು ರಸ್ತೆಯಿಂದ ಹೊಸೂರು ರಸ್ತೆ ಸಂಪರ್ಕಿಸುವ ಅರ್ಧ ಚಂದ್ರಾಕೃತಿಯ ನೈಸ್ ಎಂಬ ಖಾಸಗಿ ರಸ್ತೆಯಲ್ಲಿ ಶುಲ್ಕ ಪಾವತಿಸದೇ ಯಾರೂ ಎಂಟ್ರಿ ಕೊಡಲು ಅವಕಾಶವಿಲ್ಲ. ಆದರೆ ರಸ್ತೆ ಹಾದು ಹೋಗುವ ಹಳ್ಳಿಗಳಿಗೆ ಮೇಲ್ಸೇತುವೆ ಭಾಗ್ಯವನ್ನು ನೈಸ್ ರಸ್ತೆ ಕಲ್ಪಿಸಿದೆ. ಸುಮಾರು ಹತ್ತಕ್ಕೂ ಹೆಚ್ಚು ಮೇಲ್ಸೇತುವೆಗಳಿವೆ. ಆದರೆ ಈ ಮೇಲ್ಸೇತುವೆಗಳೇ ಜನರ ಪಾಲಿಗೆ ಜೀವ ತೆಗೆಯುವ ಅಪಾಯ ತಂದೊಡ್ಡಿವೆ.
ಮೇಲ್ಸೇತುವೆ ಮೇಲೆ ನಿಂತು ನೈಸ್ ರಸ್ತೆ ಮೇಲೆ ಕಾಣದಂತೆ ಕೂತು ಕಿರಾತಕರು ಕಲ್ಲು ಎಸೆಯುತ್ತಾರೆ. ಕಾರುಗಳ ಮೇಲೆ ಕಲ್ಲು ಬಿದ್ದ ಕೂಡಲೇ ಭಯ ಬಿದ್ದು ಸವಾರರು ನಿಲ್ಲಿಸುತ್ತಾರೆ. ಸಹಾಯ ಮಾಡುವ ಸೋಗಿನಲ್ಲಿ ಬಂದು ದರೋಡೆ ಮಾಡುತ್ತಾರೆ ! ಹೌದು ಇಂತಹ ಸ್ವ ಅನುಭವವನ್ನು ಕ್ಯಾಬ್ ಚಾಲಕ ಎಚ್ಚರಿಕೆ ಸಂದೇಶವಾಗಿ ಬಿಡುಗಡೆ ಮಾಡಿದ್ದಾರೆ. ಇದು ವಾಹನ ಚಾಲಕರ ವಲಯದಲ್ಲಿ ಭಾರೀ ವೈರಲ್ ಆಗಿದೆ.
ಚಾಲಕ ಹೇಳಿದ್ದೇನು ?
ಬೆಂಗಳೂರಿನ ಕಾರು ಚಾಲಕರಲ್ಲಿ ವಿನಂತಿ. ನೈಸ್ ರಸ್ತೆಯಲ್ಲಿ ಹೋಗುವಾಗ ಎಚ್ಚರಿಕೆ. ನೈಸ್ ರಸ್ತೆಯ ಮೇಲ್ಸೇತುವೆಗಳಿವೆ. ಅ ಮೇಲ್ಸೇತುವೆ ನೋಡಿಕೊಂಡು ಕಾರು ಚಾಲನೆ ಮಾಡಿ. ದರೋಡೆ ಮಾಡುವರು ಮೇಲಿಂದ ಕಲ್ಲು ಹಾಕುತ್ತಿದ್ದಾರೆ. ಕಲ್ಲಿನಿಂದ ಕಾರು ಗ್ಲಾಸು ಒಡೆದು ನಿಲ್ಲಿಸಿದರೆ, ಸಹಾಯ ಮಾಡುವ ಸೋಗಿನಲ್ಲಿ ಕಿರಾತಕರು ಬರುತ್ತಾರೆ. ಅವರು ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಾರೆ. ನನ್ನ ಕಾರಿನ ಚಾಲಕನಿಗೆ ಈ ಅನುಭವವಾಗಿದೆ. ಕಾರು ಚಾಲನೆ ಮಾಡುವಾಗ ಹುಷಾರಾಗಿ ನೋಡಿಕೊಂಡು ಚಾಲನೆ ಮಾಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಕುರಿತ ಅಡಿಯೋ ಸಂದೇಶ ಚಾಲಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಎರಡು ಕೇಸು ದಾಖಲು
ಮುಸುಕು ದಾರಿ ದರೋಡೆಕೋರರ ಗುಂಪು ನೈಸ್ ರಸ್ತೆಯಲ್ಲಿ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡಿರುವ ಸಂಬಂಧ ಇತ್ತೀಚೆಗೆ ಎರಡು ಪ್ರಕರಣ ದಾಖಲಾಗಿವೆ. ಮನು ಮತ್ತು ಪ್ರದೀಪ್ ಎಂಬ ಇಬ್ಬರು ಕಳೆದ ಫೆಬ್ರವರಿಯಲ್ಲಿ ಧರ್ಮಸ್ಥಳಕ್ಕೆ ತೆರಳಿದ್ದರು. ಬೆಳಗಿನ ಜಾವ 1.30 ರ ಸುಮಾರಿಗೆ ಕಾರಿನಲ್ಲಿ ಹೋಗುವಾಗ ನೈಸ್ ರಸ್ತೆಯ ಯಲೇನಹಳ್ಳಿ ಮೇಲ್ಸೇತುವೆ ಸಮೀಪ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗೆ ಹೋಗಿದ್ದರು. ಎರಡು ಬೈಕ್ ನಲ್ಲಿ ಬಂದಿದ್ದ ಮುಸುಕುದಾರಿ ಕಿರಾತಕರು ಕಾರಿನ ಗ್ಲಾಸು ಒಡೆದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹನ್ನೆರಡು ಸಾವಿರ ನಗದು ಮತ್ತು ಚಿನ್ನದ ಸರ ದೋಚಿ ಪರಾರಿಯಾಗಿದ್ದರು. ಸಮೀಪದ ಟೋಲ್ ಸಿಬ್ಬಂದಿಯನ್ನು ಕರೆತರುವಷ್ಟರಲ್ಲಿ ಬನ್ನೇರುಘಟ್ಟ ರಸ್ತೆ ಮಾರ್ಗವಾಗಿ ಪರಾರಿಯಾಗಿದ್ದರು. ಈ ಕುರಿತು ಹುಳಿಮಾವು ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಇದಕ್ಕೂ ಮೊದಲೇ ತುಮಕೂರು ರಸ್ತೆ ಸಂಪರ್ಕಿಸು ನೈಸ್ ರಸ್ತೆಯಲ್ಲಿ ಮಧ್ಯ ರಾತ್ರಿ ಲಾರಿ ಚಾಲಕನನ್ನು ಅಡ್ಡಗಟ್ಟಿ ದರೋಡೆಕೋರರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಲಾರಿ ಚಾಲಕ ಮಂಜುನಾಥ್ ರಾಮಸಂದ್ರ ಮೇಲ್ಸೇತುವೆ ಸಮೀಪ ಹೋಗುವಾಗ ಅಡ್ಡಗಟ್ಟಿದ ನಾಲ್ವರು ಮುಸುಕುದಾರಿಗಳು ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆತನ ಬಳಿಯಿದ್ದ ಎರಡು ಸಾವಿರ ನಗದು ಮತ್ತು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು. ರಕ್ತದ ಸಾವ್ರದಲ್ಲಿ ಬಿದ್ದಿದ್ದ ಚಾಲಕನನ್ನು ನೈಸ್ ರಸ್ತೆಯ ಪಾರ್ಟೋಲಿಂಗ್ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಳೆದ ಜನವರಿಯಲ್ಲಿ ಕೇಸು ದಾಖಲಾಗಿತ್ತು.
ಹನ್ನೆರಡು ಡಕಾಯಿತರ ಸೆರೆ
ಮೂರು ವರ್ಷದ ಹಿಂದೆ ನೈಸ್ ರಸ್ತೆ ಅಪರಾಧಗಳ ತಾಣವಾಗಿತ್ತು. 2017 ರಲ್ಲಿ ಯುವತಿ ಸೇರಿದಂತೆ ಹನ್ನೆರಡು ಡಕಾಯಿತರ ಗುಂಪನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದರು. ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ದರೋಡೆ ಪ್ರಕರಣ ಪತ್ತೆ ಮಾಡಿದ್ದರು. ನೈಸ್ ರಸ್ತೆಯಲ್ಲಿ ಹೋಗುವ ದ್ವಿಚಕ್ರ ವಾಹನ ಸವಾರರನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದರು. ನೈಸ್ ರಸ್ತೆಗೆ ಹೊಂದಿಕೊಂಡಂತೆ ಯಾವುದೇ ಪೊಲೀಸ್ ಠಾಣೆಗಳು ಇಲ್ಲ. ಹೀಗಾಗಿ ಇದು ಅಪರಾಧಿಗಳ ಪಾಲಿಗೆ ಸ್ವರ್ಗವಾಗಿದೆ. ವ್ಹೀಲಿಂಗ್ ಮಾಡುವುದು, ಒಂಟಿಯಾಗಿ ಪ್ರಯಾಣಿಸುವರನ್ನು ದರೋಡೆ ಮಾಡುವ ಪ್ರಕರಣಗಳು ನಿರಂತರ ವರದಿಯಾಗುತ್ತಿವೆ. ಇಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಬೇಕಾದ ನೈಸ್ ಸಂಸ್ಥೆ ಟೋಲ್ ವಸೂಲಿ ಬಿಟ್ಟರೆ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ.
ವಸೂಲಿ ಜೋರು
ಕಾರಿನಲ್ಲಿ ಒಂದು ಕಿ.ಮೀ ಸಂಚಾರಕ್ಕೆ ಸರಾಸರಿ ಐದು ರೂಪಾಯಿ ಶುಲ್ಕ ವಸೂಲಿ ಮಾಡುತ್ತಿದೆ ನೈಸ್ ಸಂಸ್ಥೆ. ಹೀಗಾಗಿ ಏಳು ಕಿ.ಮೀ. ಕ್ರಮಿಸಬೇಕಾದರೆ ಕನಿಷ್ಠ 35 ರೂಪಾಯಿ ಶುಲ್ಕ ಪಾವತಿಸಬೇಕು.ಇದು ಕಾರಿಗೆ ಮಾತ್ರ. ಇನ್ನು ದೊಡ್ಡ ವಾಹಗಳಿಗೆ ಇದರ ದುಪ್ಪಟ್ಟು ದರ ವಸೂಲಿ ಮಾಡಲಾಗುತ್ತಿದೆ. ಆದರೆ ಈ ರಸ್ತೆಯಲ್ಲಿ ಸಂಚರಿಸುವರಿಗೆ ಭದ್ರತೆ ಒದಗಿಸಿಲ್ಲ. ಇಬ್ಬರು ವಯೋ ವೃದ್ಧರನ್ನು ನೇಮಿಸಿ ಪಾರ್ಟೋಲಿಂಗ್ ಭದ್ರತಾ ವಾಹನ ಬಿಟ್ಟಿದೆ. ಅದು ದರೋಡೆ ನಡೆದು ಎರಡು ತಾಸು ಆದ ಬಳಿಕ ಅಲ್ಲಿಗೆ ಆಗಮಿಸುತ್ತದೆ. ಇನ್ನು ಅವರಿಗೆ ಕ್ರಮ ಜರುಗಿಸುವ ಅಧಿಕಾರ ಕೂಡ ಇರಲ್ಲ. ಅವರು ಪೊಲೀಸರಿಗೆ ಹೇಳಬೇಕು. ನೈಸ್ ರಸ್ತೆ ವಿಚಾರಕ್ಕೆ ಬಂದರೆ ಪೊಲೀಸರದ್ದು ಸರಹದ್ದು ವಿವಾದ. ಹೀಗಾಗಿ ಎಷ್ಟೋ ಪ್ರಕರಣ ವರದಿಯಾಗುವುದೇ ಇಲ್ಲ. ಈ ಕುರಿತು ನೈಸ್ ಮುಖ್ಯಸ್ಥ ಅಶೋಕ್ ಖೇಣಿಯವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಸಿಗಲಿಲ್ಲ.