ಯಾರೇನೇ ಹೇಳಲಿ; ಸೋನಿಯಾ ಗಾಂಧಿ "ಕೈ"ಯಲ್ಲೇ ಕಾಂಗ್ರೆಸ್ ಭವಿಷ್ಯ!?
ನವದೆಹಲಿ, ಅಕ್ಟೋಬರ್ 16: ಕಾಂಗ್ರೆಸ್ ನಾಯಕತ್ವದ ಬಗ್ಗೆ ಆಂತರಿಕ ವಲಯದಲ್ಲಿ ಸೃಷ್ಟಿಯಾಗಿರುವ ಗೊಂದಲ ಮತ್ತು ಟೀಕೆ-ಟಿಪ್ಪಣಿಗಳಿಗೆ ಅಧಿನಾಯಕಿ ಸೋನಿಯಾ ಗಾಂಧಿ ಪ್ರತ್ಯುತ್ತರ ನೀಡಿದ್ದಾರೆ. ತಾವು ಪೂರ್ಣಾವಧಿವರೆಗೂ ಕಾಂಗ್ರೆಸ್ ನಾಯಕತ್ವವನ್ನು ವಹಿಸಿಕೊಳ್ಳುವ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಕಳೆದೊಂದು ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಪರಿಣಾಮಕಾರಿ ನಾಯಕತ್ವದ ಬಗ್ಗೆ ಜಿ-23 ನಾಯಕರು ಸೇರಿದಂತೆ ಹಲವು ಸಂಘಟನೆ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು. ಈ ಹಿನ್ನೆಲೆ ಸೃಷ್ಟಿಯಾದ ಗೊಂದಲಗಳ ನಿವಾರಿಸುವ ನಿಟ್ಟಿನಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ತಾವು ಪೂರ್ಣಾವಧಿವರೆಗೂ ಕಾಂಗ್ರೆಸ್ ನಾಯಕತ್ವದಲ್ಲಿ ಮುಂದುವರಿಯುವ ಬಗ್ಗೆ ಸೋನಿಯಾ ಗಾಂಧಿ ಒತ್ತಿ ಹೇಳಿದ್ದಾರೆ.
ಜಿ-23 ಲೆಕ್ಕಾಚಾರ: ದೇಶದ ಚುನಾವಣಾ ಚಾಣಕ್ಯನ ಮೇಲೆ ಕಾಂಗ್ರೆಸ್ ಒಲವು
ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಂಸದ ರಾಹುಲ್ ಗಾಂಧಿ ರಾಜೀನಾಮೆ ಸಲ್ಲಿಸಿದ ನಂತರದಲ್ಲಿ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಮುಂದುವರಿದಿದ್ದಾರೆ. ಈ ಹಂತದಲ್ಲಿ ಪಕ್ಷದ ಹಿರಿಯ ಮತ್ತು ಉನ್ನತ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿಯವರು, "ನಾನು ಯಾವಾಗಲೂ ಸರಳತೆ ಮತ್ತು ನೇರವಾದ ಮಾತುಗಳನ್ನು ಪ್ರಶಂಸಿಸುತ್ತೇನೆ. ಮಾಧ್ಯಮಗಳ ಮೂಲಕ ನನ್ನೊಂದಿಗೆ ಮಾತನಾಡುವ ಅಗತ್ಯವಿಲ್ಲ," ಎಂದರು. ಈ ಮಧ್ಯೆ 'ಜಿ -23' ಸದಸ್ಯರು ಬಿಡುಗಡೆ ಮಾಡಿದ ಪತ್ರಗಳಲ್ಲಿ ಉಲ್ಲೇಖವಾದ ಅಂಶಗಳು ಎರಡೂ ಕಡೆ ನಾಯಕರ ನಡುವೆ ಜಟಾಪಟಿಗೆ ಕಾರಣವಾಯಿತು.
ಪೂರ್ಣಾವಧಿವರೆಗೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನ
"ನೀವು ಬಯಸುವುದಾದರೆ, ಅನುಮತಿ ನೀಡುವುದೇ ಆದರೆ ನಾನು ಪೂರ್ಣಾವಧಿವರೆಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಯುತ್ತೇನೆ ಹಾಗೂ ಅಧ್ಯಕ್ಷ ಸ್ಥಾನದ ಮೇಲೆ ಹಿಡಿತವನ್ನು ಕಾಯ್ದುಕೊಳ್ಳುತ್ತೇನೆ," ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ರೈತರ ಪ್ರತಿಭಟನೆಗಳು, ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಸಂತ್ರಸ್ತರಿಗೆ ನೆರವು ನೀಡುವುದು ಹಾಗೂ ಪರಿಹಾರ ಒದಗಿಸುವುದು. ಅಳಿವಿನ ಅಂಚಿನಲ್ಲಿರುವ ಗುಂಪುಗಳು ಮತ್ತು ಸಮುದಾಯಗಳ ಮೇಲೆ ನಡೆದ ದೌರ್ಜನ್ಯ ಸೇರಿದಂತೆ ರಾಷ್ಟ್ರೀಯ ಸಮಸ್ಯೆಗಳ ಕುರಿತು ಸರ್ಕಾರವನ್ನು ಎಚ್ಚರಿಸಬೇಕಿದೆ ಎಂದರು.
ದೇಶದಲ್ಲಿ ಮೋದಿ ಸರ್ಕಾರದ ವೈಫಲ್ಯದ ಬಗ್ಗೆ ಉಲ್ಲೇಖ
"ಕೇಂದ್ರ ಸರ್ಕಾರವು ಪ್ರಚಾರದ ಹೊರತಾಗಿ ಆರ್ಥಿಕತೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೋರುತ್ತಿಲ್ಲ. ದೇಶದ ಆರ್ಥಿಕತೆ ಚೇತರಿಕೆಗೆ ಕೇಂದ್ರ ಸರ್ಕಾರ ನೀಡುವ ಏಕೈಕ ಉತ್ತರವೆಂದರೆ ದಶಕಗಳ ಕಾಲ ಕಷ್ಟಪಟ್ಟು ಕಟ್ಟಿದ ರಾಷ್ಟ್ರೀಯ ಸ್ವತ್ತುಗಳನ್ನು ಮಾರಾಟ ಮಾಡುವುದೇ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಸಾರ್ವಜನಿಕ ವಲಯವು ಕೇವಲ ಕಾರ್ಯತಂತ್ರದ ಮತ್ತು ಆರ್ಥಿಕ ಉದ್ದೇಶಗಳನ್ನು ಹೊಂದಿಲ್ಲ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಸಬಲೀಕರಣ ಮತ್ತು ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯಂತ ಸಾಮಾಜಿಕ ಗುರಿಗಳನ್ನೂ ಹೊಂದಿರುತ್ತದೆ. ಆದರೆ ಇದೆಲ್ಲವೂ ಮೋದಿ ಸರ್ಕಾರದ ಜೊತೆ ಅಪಾಯದಲ್ಲಿದೆ."
"ಇದರ ಮಧ್ಯೆ ಅಗತ್ಯ ವಸ್ತುಗಳ ಆಹಾರ ಮತ್ತು ಇಂಧನದ ಬೆಲೆಗಳು ನಿರಂತರವಾಗಿ ಏರುತ್ತಲೇ ಇವೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 100 ರೂಪಾಯಿ, ಡೀಸೆಲ್ 100 ರೂಪಾಯಿಗೆ ಹತ್ತಿರ, ಗ್ಯಾಸ್ ಸಿಲಿಂಡರ್ ಬೆಲೆ 900 ರೂಪಾಯಿ ಮತ್ತು ಅಡುಗೆ ಎಣ್ಣೆ ಲೀಟರ್ಗೆ 200 ರೂಪಾಯಿ ಎಂದು ದೇಶದ ಯಾರಾದರೂ ಯೋಚಿಸಬಹುದೇ?," ಎಂದು ಸೋನಿಯಾ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ಸಮಾನ ಮನಸ್ಕರೊಂದಿಗೆ ಸಂವಹನದ ಉಲ್ಲೇಖ
"ನಿಮಗೆ ತಿಳಿದಿರಲಿ, ನಾನು ಡಾ. ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿಯವರಂತೆ ನಾನು ಅವರನ್ನು ಪ್ರಧಾನ ಮಂತ್ರಿಯೊಂದಿಗೆ ಕರೆದುಕೊಂಡು ಹೋಗುತ್ತಿದ್ದೇನೆ. ನಾನು ಸಮಾನ ಮನಸ್ಕ ರಾಜಕೀಯ ಪಕ್ಷಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದೇನೆ. ನಾವು ರಾಷ್ಟ್ರೀಯ ಸಮಸ್ಯೆಗಳ ಕುರಿತು ಜಂಟಿ ಹೇಳಿಕೆಗಳನ್ನು ನೀಡಿದ್ದೇವೆ ಹಾಗೂ ಸಂಸತ್ತಿನಲ್ಲಿ ನಮ್ಮ ಕಾರ್ಯತಂತ್ರ ಹೇಗಿರಬೇಕು ಎಂಬುದನ್ನು ಸಂಯೋಜಿಸಿದ್ದೇವೆ," ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ನೇರವಾಗಿ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಎಂದ ಸೋನಿಯಾ
"ನಾನು ಯಾವಾಗಲೂ ನೇರ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿಕೊಳ್ಳುತ್ತೇನೆ. ಮಾಧ್ಯಮಗಳ ಮೂಲಕ ನನ್ನೊಂದಿಗೆ ಮಾತನಾಡುವ ಯಾವುದೇ ಅಗತ್ಯಗಳೂ ಇಲ್ಲ.
ಕಾಂಗ್ರೆಸ್ ಪಕ್ಷದಲ್ಲಿ ಏನೇ ಸಮಸ್ಯೆಗಳಿದ್ದರೂ ಯಾವುದೇ ರೀತಿ ಗೊಂದಲಗಳಿದ್ದರೂ ನೇರವಾಗಿ ಬಂದು ಚರ್ಚೆ ನಡೆಸಿ. ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ನಡೆಸಿದ ಚರ್ಚೆಗಳು ಈ ನಾಲ್ಕುಗೋಡೆಗಳಿಂದ ಹೊರಗೆ ಹೋಗಬಾರದು. ಪಕ್ಷದ ಆಂತರಿಕ ವಿಚಾರಗಳನ್ನು ಬಾಹ್ಯವಾಗಿ ಚರ್ಚಿಸಬಾರದು," ಎನ್ನುವ ಮೂಲಕ ಜಿ-23 ನಾಯಕರಿಗೆ ಸೋನಿಯಾ ಗಾಂಧಿ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಸೆಪ್ಟೆಂಬರ್-22ರಲ್ಲಿ ಚುನಾವಣೆ
ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ಹಾಗೂ ಪರಿಣಾಮಕಾರಿ ನಾಯಕತ್ವದ ಕೊರತೆ ಬಗ್ಗೆ ಜಿ-23 ನಾಯಕರು ಮೊದಲಿನಿಂದಲೂ ಆರೋಪಿಸುತ್ತಾ ಬಂದಿದ್ದಾರೆ. ಶನಿವಾರದ ಸಭೆಯಲ್ಲಿ ಈ ಬಗ್ಗೆ ಹೆಚ್ಚು ಚರ್ಚೆಯಾಗಿದೆ. 2022ರಲ್ಲಿ ಉತ್ತರ ಪ್ರದೇಶ, ಪಂಜಾಬ್, ಗುಜರಾತ್ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಶುರುವಾಗಲಿದೆ. 2022ರ ಸೆಪ್ಟೆಂಬರ್ ಹೊತ್ತಿಗೆ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿರುವ ಸೋನಿಯಾ ಗಾಂಧಿಯವರನ್ನು ಬದಲಿಸುವ ಹಾಗೂ ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುವ ಬಗ್ಗೆ ಬೇಡಿಕೆ ಸಲ್ಲಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಸೆಪ್ಟೆಂಬರ್ ತಿಂಗಳಿನಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ.