ಮಾವು ಬೇವುಬೆಲ್ಲ, ಮೈಸೂರು ಪಂಚಾಂಗ
ಮಾವು ಬೇವು ಬೆಲ್ಲದ ಜತೆ ಪಂಚಾಂಗ ಬೆರೆಯದಿದ್ದರೆ ಹೊಸ ವರ್ಷ ಸಂಪನ್ನವಾಗುವುದಿಲ್ಲ. ಕರ್ನಾಟಕ ಪುಸ್ತಕ ಮಾರುಕಟ್ಟೆಯಲ್ಲಿ ನಾನಾ ಪ್ರಕಟಣೆ ಸಂಸ್ಥೆಗಳ ಪಂಚಾಂಗಗಳು ಈ ಬಾರಿಯೂ ಲಭ್ಯ. ಸೂರ್ಯ ಸಿದ್ಧಾಂತ, ಆರ್ಯಭಟೀಯ, ವಾಕ್ಯ, ದೃಗ್ಗಣಿತ - ಈ ನಾಲಕ್ಕೂ ಸೇರಿದ ಒಂಟಿಕೊಪ್ಪಲ್ ಪಂಚಾಂಗಮಂದಿರದ ಮೈಸೂರು ಪಂಚಾಂಗ ಇದೀಗ ನಮ್ಮ ಕೈಸೇರಿದೆ. ಬೆಲೆ 55 ವರಹಗಳು.
ಶ್ರೀ ಸರ್ವಜಿತ್ ಸಂವತ್ಸರದಲ್ಲಿ (1887-88) ಆರಂಭವಾದ ಒಂಟಿಕೊಪ್ಪಲ್ ಪಂಚಾಂಗಕ್ಕೆ [Copyright regn. no. A 46707] ಪ್ರಸಕ್ತ ಸಾಲಿನ ಶ್ರೀವಿಜಯ ಸಂವತ್ಸರದ ಪ್ರಕಟಣೆಯಿಂದ 126 ವರ್ಷಗಳು ತುಂಬಿದೆ. ಸುದೀರ್ಘಕಾಲ ಕನ್ನಡದಲ್ಲಿ ಪಂಚಾಂಗ ಪ್ರಕಟಣೆ ಕಾರ್ಯವನ್ನು ತಪ್ಪದೆ ಮಾಡುತ್ತಾ ಬಂದಿರುವ ಪಂಚಾಂಗ ಬಳಗದ ಜ್ಯೋತಿಷರತ್ನರಿಗೆ ಮತ್ತು ಪ್ರಕಾಶಕರಿಗೆ ಒನ್ಇಂಡಿಯ ಕನ್ನಡ ಜಾಲತಾಣದ ಶುಭಾಶಯಗಳು.
ನಿಮಗೂ ಒಂದು ಕಾಪಿ ಬೇಕಿದ್ದರೆ ಸಂಸ್ಥೆಯ ಪಂಚಾಂಗ ಪರಿಶೋಧಕ ವಿ. ರಾಮಕೃಷ್ಣಶಾಸ್ತ್ರೀ ಹಾಗೂ ಆರ್ ಕುಮಾರ್ ಮತ್ತು ಕೆ. ಮನೋಹರ್ ಅವರನ್ನು ಸಂಪರ್ಕಿಸಬಹುದು. ಪಂಚಾಂಗ ಮಂದಿರ, ವಾಣೀವಿಲಾಸ ಮೊಹಲ್ಲ, ಮೈಸೂರು - 2.
ಪಂಚಾಂಗಕರ್ತರು ಹೇಳುತ್ತಾರೆ : "ಯುಗಾದಿ ಹಬ್ಬವನ್ನು ಚಾಂದ್ರಮಾನ ಮತ್ತು ಸೌರಮಾನ ರೀತಿಯಾಗಿ ಆಚರಿಸುವ ಎರಡು ಪದ್ಧತಿಗಳು ನಮ್ಮಲ್ಲಿವೆ. ಈ ವರ್ಷ ಚಾಂದ್ರಮಾನ ರೀತಿ ಚೈತ್ರ ಶುಕ್ಲ ಪ್ರತಿಪತ್ ತಾ. 11-4-2013ನೇ ಗುರುವಾರವೂ, ಸೌರಮಾನ ರೀತಿ ಸೂರ್ಯನು ನಿರಯಣ ಮೇಷರಾಶಿ ಪ್ರವೇಶಿಸುವ ಪುಣ್ಯಕಾಲದ ದಿನ ತಾ 14-04-2013ನೇ ಭಾನುವಾರವೂ ಯುಗಾದಿ ಹಬ್ಬ ಆಚರಿಸಬೇಕು."
ಇದೇ ವೇಳೆ, ಪಂಚಾಂಗದಲ್ಲಿ ನಮೂದಾಗಿರುವ ಒಂದು ವಿಜ್ಞಾಪನೆ ಹೀಗಿದೆ : ಮುಹೂರ್ತ ನಿಶ್ಚಯಿಸಲೂ, ಪ್ರಶ್ನಫಲ ಮತ್ತು ಜಾತಕ ಬರೆಯಲು ಉಪಯುಕ್ತವಾದ ಶ್ರೀವಿಜಯ ಸಂವತ್ಸರದ ನಿತ್ಯಕುಂಡಲಿ ಮತ್ತು ಗ್ರಹಸ್ಫುಟ (Ready Reckoner) ಪುಸ್ತಕವನ್ನೂ, ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರು ಹಬ್ಬ ವ್ರತ ಮೊದಲಾದುವುಗಳನ್ನು ಆಚರಿಸಲು ಹಾಗೂ ಅಮೆರಿಕಾದಲ್ಲಿ ಜನಿಸಿರುವವರ ಜಾತಕಗಳನ್ನು ಬರೆಯಲು ಅವಶ್ಯಕವಾದ ಶ್ರೀವಿಜಯ ಸಂವತ್ಸರದ ಅಮೆರಿಕಾ ಪಂಚಾಂಗವನ್ನೂ ಸಹ ಮಾರಾಟಕ್ಕೆ ಬಿಡುಗಡೆ ಮಾಡಲಾಗಿದೆ. ಸಂಪರ್ಕ : [email protected].