ಮಿಲ್ವಾಕಿಯ ಕನ್ನಡ ಕೂಟದ ಯುಗಾದಿ ಸದ್ದು, ಸಡಗರ
‘ನೀನ್ಯಾಕೋ ನಿನ್ನ ಹಂಗ್ಯಾಕೊ ನಿನ್ನ ನಾಮದ ಬಲ ಒಂದಿದ್ದರೆ ಸಾಕು' ಅಂತ ಪುರಂದರ ದಾಸರು ಹೇಳಿದ ಹಾಗೆ ಒಂದು ದೇವರ ನಾಮವನ್ನು ರೂಪಾರವರ ಹಾಡಿನ ಮೂಲಕ ಅಂದಿನ ಸಂಜೆಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮದ ನಿರೂಪಣೆಕಾರರಾದ ಪವನ್ ನಾಗರಾಜ್ ಹಾಗೂ ಮಧು ನಂದಕುಮಾರ್ ಅವರು ಬಹಳ ಅಚ್ಚುಕಟ್ಟಾಗಿ ವಿಭಿನ್ನ ಶೈಲಿಯಲ್ಲಿ ತಮ್ಮ ಜವಾಬ್ದಾರಿ ಪೂರೈಸಿದರು.
‘ನವ್ವಾಲೆ ಬಂತಪ್ಪ ನವ್ವಾಲೆ' ಎಂಬ ಜನಪದ ಹಾಡಿಗೆ ನಮ್ಮ ಮಿಲನದ ಪುಟಾಣಿಗಳಾದ ದಿವ್ಯ, ನೇಹ, ಸಂಜನ, ವರ್ಷ, ಅನಿಕ ಮತ್ತು ಇಳಾರವರುಗಳು ಮಾಡಿದ ಸೊಗಸಾದ ನೃತ್ಯ ಮುದನೀಡಿತು. ನಂತರ ಗೀತ ಕುರ್ಪಡ್ ಮತ್ತು ಅವರ ಪುತ್ರ ಕೃಷ್ಣ ರವರಿಂದ ಸಂಗೀತ ಗಾಯನ, ನಾಟ್ಯಾರ್ಪಣ ಸ್ಕೂಲ್ ಅಫ್ ಡ್ಯಾನ್ಸ್ ಸ್ಥಾಪಕಿ ಕೃಪ ಭಾಸ್ಕರ್ ಮತ್ತು ಅವರ ಶಿಷ್ಯೆಯರ ಭರತನಾಟ್ಯ ಜನಮೆಚ್ಚುಗೆ ಗಳಿಸಿತು.‘ಯಶೋಮತಿ ಮಯ್ಯಾಸೇ ಭೋಲೆ ನಂದಲಾಲ.. ' ಈ ಜನಪ್ರಿಯ ಹಾಡಿಗೆ ಅಭಿನಯಿಸಿದ ನಮ್ಮ ಮಿಲನ ಕನ್ನಡ ಕೂಟದ ಇನೊಂದು ಪುಟಾಣಿ ಪ್ರತಿಭೆ ಶಾಂಭವಿ. ಅನಂತರ ನಮ್ಮ ದೇವಸ್ಥಾನದ ಅರ್ಚಕ ರಘುಚಂದ್ರ ಭಟ್, ವ್ಯಯ ಸಂವತ್ಸರದ ಪಂಚಾಂಗ ಶ್ರವಣ ಮಾಡಿದರು.
ಮಿಲನ ಕೂಟದ ಅಧ್ಯಕ್ಷ ಮುರಳಿ ಹಾಗು ಅವರ ಪತ್ನಿ ಜಯಂತಿ ಅಯ್ಯರ್ ಅವರಿಂದ ಅರ್ಚಕ ಭಟ್ ದಂಪತಿಗಳು ಫಲ ತಾಂಬೂಲ ಸ್ವೀಕರಿಸಿದರು.ಇದಾದ ಮೇಲೆ ನರ್ತನದ ಸರದಿ ನಮ್ಮ ಮಹಿಳಾ ಸದಸ್ಯೆಯರದು. ಅವರೆಲ್ಲರೂ ಸಖತ್ತಾಗಿ ನರ್ತಿಸಿ ತಾವೇನು ಕಡಿಮೆ ಅಂತ ತೋರಿಸಿಕೊಟ್ಟರು.
ನರೇಂದ್ರನಾಥ್ ಮತ್ತು ಬಳಗದವರು ಪ್ರಸ್ತುತ ಪಡಿಸಿದ ಹಾಸ್ಯಭರಿತ ನಾಟಕ ‘ಭಾಗ್ಯದ ಲಕ್ಷ್ಮೀ ಬಾರಮ್ಮ' ನಗೆಗಡಲಿನಲ್ಲಿ ತೇಲಿಸಿತು.ಒಬ್ಬ ಸಂಗೀತ ವಿದ್ವಾಂಸರು ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡುತ್ತಿರುವಾಗ ಮದ್ಯೆ ಕೆಮ್ಮು ಒತ್ತರಿಸಿಕೊಂಡು ಬಂದು ಮುಂದೆ ಹಾಡಲು ಸಾದ್ಯವಾಗದೆ ಹೋದಾಗ , ಶಿಷ್ಯ ರಫೀಕ್ ಆ ದೇವರನಾಮವನ್ನು ಮುಂದುವರಿಸುವುದೇ ಇದರ ಕಥೆ.
ಯುವ ಪ್ರತಿಭೆ ಅಜಿತ್ ಅಯ್ಯರಿನ ಆಲ್ಟೊ ಸ್ಯಾಕ್ಸೊಪೋನ್, ಹಾಗೂ ಅಪರ್ಣಾ ರವರ ‘ಬಯಲುದಾರಿ'ಯ ‘ಬಾನಲ್ಲು ನೀನೆ.. ' ಹಾಡಿನೊಂದಿಗೆ ಅವತ್ತಿನ ಸಂಜೆಯ ಕಾರ್ಯಕ್ರಮ ಮುಕ್ತಾಯದ ಹಂತಕ್ಕೆ ಬಂದಿತು. ಕೊನೆಯಲ್ಲಿ ಮುರಳಿಯವರು ವಂದನಾರ್ಪಣೆ ಗೈದಾಗ ರಾತ್ರಿ 8.30 ಅಗಿತ್ತು.
ಎಲ್ಲರಿಗೂ ರಸದೌತಣ ಕಾದಿತ್ತು. ಸೆಟ್ ದೊಸೆ, ಮಾವಿನಕಾಯಿ ಚಿತ್ರಾನ್ನ, ಕಾಯಿ ಹೋಳಿಗೆ, ಲಾಡು ಒಂದಕ್ಕಿಂತ ಒಂದು ರುಚಿಯಾಗಿದ್ದವು. ಸಮಿತಿಯ ಸದಸ್ಯೆಯರು ಯುಗಾದಿ ಶುಭಾಶಯಗಳನ್ನು ಕೋರುತ್ತಾ ಬೇವು ಬೆಲ್ಲ ಹಂಚಿ ತಾಂಬೂಲ ವಿತರಿಸಿದರು.
ಊಟದ ನಂತರದ ಕೊನೆಯ ಕಾರ್ಯಕ್ರಮ ‘ಬೆಲೆ ಎಷ್ಟ್ರೀ?' ಹಿಂದಿಯ ‘ತೊಲ್ ಮೊಲ್ ಕೆ ಬೊಲ್'ನ ಕನ್ನಡ ಅವತರಣಿಕೆಯೇ ಈ ‘ಬೆಲೆ ಎಷ್ಟ್ರಿ'. ಸಮಿತಿಯ ಸದಸ್ಯೆ ಮೀನಾ ಮತ್ತು ಸಂತೋಷ್ ಈ ಆಟವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.ಇಷೋತ್ತಿಗಾಗಲೇ ಗಂಟೆ 10 ಆಗಿತ್ತು. ಎಲ್ಲರೂ ಈ ಸುಂದರ ಸಂಜೆಯ ರಸಾನುಭವವನ್ನು ಮೆಲುಕು ಹಾಕುತ್ತ ಮನೆಗೆ ಹೊರಟೆವು.