ರಿಚ್ಮಂಡ್ನಲ್ಲಿ ಉಗಾದಿ : ಮನತುಂಬಿದ ಸಾಂಸ್ಕೃತಿಕ ಸಂಜೆ
ಏಪ್ರಿಲ್ 29ರ ಶನಿವಾರ ಸಂಜೆಯ ಕಾರ್ಯಕ್ರಮಕ್ಕೆ ಶುಕ್ರವಾರ ರಾತ್ರಿಯಿಂದಲೇ ತಯಾರಿ ನಡೆದಿತ್ತು. ಈ ಬಾರಿಯ ಉಗಾದಿಯ ಹಬ್ಬದೂಟದ ವಿಭಾಗವನ್ನು ಗಂಡಸರೇ ವಹಿಸಿಕೊಂಡಿದ್ದರು. ಶುಕ್ರವಾರ ರಾತ್ರಿ ಅಧ್ಯಕ್ಷರ ಮನೆಯಲ್ಲಿ ತರಕಾರಿಗಳನ್ನು ಹೆಚ್ಚಿ ಸಿದ್ದ ಮಾಡಿಕೊಂಡು, ಶನಿವಾರ ಬೆಳಗ್ಗೆ ‘ಹಿಂದೂ ಸೆಂಟರ್'ನಲ್ಲಿ ಅಡಿಗೆ ಮಾಡಿದ್ದು ಈ ಬಾರಿಯ ವಿಶೇಷ.
ಸಂಜೆ 5:15ಕ್ಕೆ ಗಣೇಶನ ಪೂಜೆಯ ನಂತರ ಲಘು ಉಪಹಾರ. ಕಾಳಿನ ಉಸ್ಲಿ, ಕೋಸಂಬರಿ, ಚಿಪ್ಸ್ ಹಾಗೂ ಪಾನಕ ಸೇವನೆ ಜೊತೆ ‘ನಮಸ್ಕಾರ ಹೇಗಿದ್ದೀರಿ?', ‘ಅಪ್ಪ ಅಮ್ಮ ಊರು ಸೇರಿಕೊಂಡ್ರಾ?', ‘ನೀವು ಇಂಡಿಯಾಗೆ ಹೋಗೋದು ಯಾವಾಗ', ‘ಮಗುವಿನ ತಂದೆಯಾಗಿದ್ದು ಕೇಳಿ ಸಂತೋಷವಾಯಿತು. ಕಂಗ್ರಾಟ್ಸ್' ಇತ್ಯಾದಿ ಇತ್ಯಾದಿ ಮಾತುಕತೆಗಳು ವಾತಾವರಣಕ್ಕೆ ರಂಗೇರಿಸಿತ್ತು.
ಬಾಗಿಲ ಬಳಿ ನಗುಮೊಗದ ಕಾರ್ಯಕರ್ತರ ಬಳಿ ಪ್ರವೇಶ ಧನ ನೀಡಿ, ನದಿಯಂತೆ ಹರಿದು ಒಳಗೆ ಹಾಲ್ನಲ್ಲಿ ಜನ ಸಾಗರ ಸೇರಿ ಹರಟೆಯಲ್ಲಿ ಭಾಗವಹಿಸುತ್ತಿದ್ದಂತೆ, ಸ್ಟೇಜಿನ ಮೇಲೆ ಕಾರ್ಯಕ್ರಮ ನಿರೂಪಣೆಯ ಜವಬ್ದಾರಿ ಹೊತ್ತ ನಳಿನಿ ಪ್ರೇಮಕುಮಾರ್ ಹಾಗೂ ಗೀತಾ ರವೀಂದ್ರ ಪ್ರತ್ಯಕ್ಷರಾದರು. ಎಲ್ಲರಿಗೂ ಉಗಾದಿಯ ಶುಭಾಶಯ ಕೋರುತ್ತಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.