ಸಹೋದರತ್ವದ ಸಂಕೇತವಾದ ರಕ್ಷಾಬಂಧನ ಆಚರಣೆ ಏಕೆ?
ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲೊಂದಾದ ರಕ್ಷಾಬಂಧನ ಭಾರತದ ಇತಿಹಾಸ ಮತ್ತು ಪುರಾಣಗಳಲ್ಲಿ ತನ್ನದೇ ಮಹತ್ವ ಪಡೆದಿದೆ.
ಮಾನವರೆಲ್ಲರೂ ನಾನಾ ಪ್ರಕಾರದ ರಕ್ಷಣೆಯನ್ನು ಬಯಸುತ್ತಾರೆ. ತನುವಿನ ರಕ್ಷಣೆ, ಮನಸ್ಸಿನ ರಕ್ಷಣೆ, ಧನದ ರಕ್ಷಣೆ, ಧರ್ಮ-ಪವಿತ್ರತೆ ಅಥವಾ ಸತಿತ್ವದ ರಕ್ಷಣೆ, ಆಪತ್ತುಗಳು ಹಾಗೂ ಸಂಕಟಗಳಿಂದ ರಕ್ಷಣೆ, ಕಾಲ ಅಥವಾ ಮೃತ್ಯುವಿನ ಪಾಶದಿಂದ ರಕ್ಷಣೆ- ಇವು ಮುಖ್ಯವಾದವು. ಇದರಲ್ಲಿ ತನುವಿನ ರಕ್ಷಣೆಯನ್ನು ಮೃತ್ಯುವು ಸನ್ನಿಹಿತವಾದಾಗ ನಿಗದಿಯಾಗಿರುವ ಮೃತ್ಯುವಿನಿಂದ ರಕ್ಷಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಮನಸ್ಸಿನ ರಕ್ಷಣೆಯನ್ನು ಮಾಯೆಯ ಬಂಧನಗಳಿಂದ ಅಥವಾ ತಾಮಸಿಕ ವಿಕಾರಗಳಿಂದ ಮುಕ್ತರಾಗಲು ದೇವರ ಸನ್ನಿಧಿಗೆ ಹೋಗಬೇಕಾಗುತ್ತದೆ.
ಭ್ರಾತೃತ್ವದ ದ್ಯೋತಕ ರಾಖಿ ಹಬ್ಬ: ಪುರಾಣ, ಐತಿಹಾಸಿಕ ಮಹತ್ವ
ಆದ್ದರಿಂದಲೇ ವಿಷಯ-ವಿಕಾರಗಳನ್ನು ನಾಶಮಾಡು, ಪಾಪವನ್ನು ಹರಿಸು ಎಂದು ಪತಿತಪಾವನ, ಪಾಪಕಟೇಶ್ವರನಾದ ಪರಮಾತ್ಮನಿಗೆ ಪ್ರಾರ್ಥನೆ ಮಾಡುತ್ತಾರೆ. ಧರ್ಮದ-ಪವಿತ್ರತೆ ಹಾಗೂ ಸತಿತ್ವದ ರಕ್ಷಣೆಯನ್ನು ಸರ್ವಸಮರ್ಥನಾದ ಭಗವಂತನೊಬ್ಬನೇ ಮಾಡಲು ಸಾಧ್ಯವಿದೆ. ಇದಕ್ಕೆ ದ್ರೌಪದಿಯ ದೃಷ್ಟಾಂತವಿದೆ.
ಕಾಲ ಅಥವಾ ಯಮನ ಪಾಶದಿಂದ ಪಾರು ಮಾಡುವವನೂ ಸಹ ಕಾಲರಕಾಲ ಮಹಾಕಾಲ, ಮಹಾಕಾಲೇಶ್ವರನೇ ಆಗಿದ್ದಾನೆ. ಈಶ್ವರನು ಯಾರನ್ನು ರಕ್ಷಣೆ ಮಾಡುತ್ತಾನೆಯೋ ಅವರಿಗೆ ಇಡೀ ಪ್ರಪಂಚವೇ ವೈರಿಯಾದರೂ ಅವರ ಕೂದಲನ್ನೂ ಅಲುಗಾಡಿಸಲು ಯಾರಿಗೂ ಸಾಧ್ಯವಾಗುವುದಿಲ್ಲ ಅಂದರೆ ಎಂತಹ ಸಮಸ್ಯೆಗಳೇ ಬರಲಿ, ಯಾರೇ ವಿರೋಧಿಸಲಿ ಅಂತಹ ಸಮಯದಲ್ಲಿ ಸ್ವತಃ ಭಗವಂತನೇ ಅವರ ರಕ್ಷಕನಾಗಿರುತ್ತಾನೆ. ಇದಕ್ಕೆ ಭಕ್ತ ಮಾರ್ಕಂಡೇಯನ ದೃಷ್ಟಾಂತವಿದೆ. ಸಾಂಸಾರಿಕ ಆಪತ್ತುಗಳು ಆಥವಾ ಲೌಕಿಕ ಸಂಕಟಗಳಿಂದಲೂ ರಕ್ಷಣೆಯನ್ನು ಈಶ್ವರನ ಹೊರತು ಅನ್ಯರೂ ಯಾರೂ ಮಾಡಲು ಸಾಧ್ಯವಿಲ್ಲ. ಆದ್ದರಿಂದಲೇ ಅವನಿಗೆ ದುಃಖಹರ-ಸುಖಕರ, ವಿಘ್ನವಿನಾಶಕನೆಂದು ಕರೆಯುತ್ತಾರೆ.
ರಕ್ಷಾಬಂಧನವೆಂಬ ಪವಿತ್ರ ಬೆಸುಗೆ: ಏನಿದರ ಮಹತ್ವ?
ಕಲಿಯುಗದ ಅಂತಿಮ ಸಮಯದಲ್ಲಿ ಜೀವಾತ್ಮರು ತಮ್ಮ ನಿಜ ಸ್ವರೂಪವನ್ನು (ಆತ್ಮ ಸ್ವರೂಪವನ್ನು) ಮರೆಯುತ್ತಾರೆ. ದೇಹಾಭಿಮಾನಿಗಳಾಗಿ ಪಂಚ ವಿಕಾರಗಳಿಗೆ ವಶರಾದಾಗ ದು:ಖ, ಅಶಾಂತಿ, ಕಷ್ಟ, ರೋಗ-ಶೋಕಗಳ ಬಂಧನಕ್ಕೆ ಒಳಗಾಗುತ್ತಾರೆ. ಅಂತಹ ಸಮಯದಲ್ಲಿ ಸರ್ವರ ಮುಕ್ತಿದಾತ, ಪತಿತ ಪಾವನ, ಜ್ಞಾನಸಾಗರ ಪರಮಾತ್ಮನೇ ಸ್ವತಃ ಅವತರಿಸಿ ಆತ್ಮರನ್ನು ಎಲ್ಲಾ ಬಂಧನಗಳಿಂದ ಮುಕ್ತಮಾಡಿ, ಸುಖ, ಶಾಂತಿ, ಆನಂದ ಮತ್ತು ಸೌಭಾಗ್ಯದ ರಕ್ಷಣೆ ನೀಡುತ್ತಾನೆ. ಇದೇ ನಿಜವಾದ ರಕ್ಷಾಬಂಧನ.
ಸಕಲ-ಜೀವರಾಶಿಗಳಿಗೆ ಲೇಸನ್ನು ಬಯಸುವ, ಸಬ್ಕಾ ಮಾಲೀಕ್ ಏಕ್ ಆಗಿರುವ, ಸರ್ವರ ರಕ್ಷಕನಾದ ಭಗವಂತನ ಜೊತೆಗೆ ಬೆಸೆಯುವ ಸಂಬಂಧದ ಬಂಧನವೇ 'ರಕ್ಷಾಬಂಧನ'. ಅವನನ್ನು ತಿಳಿದು, ಅವನನ್ನೇ ನೆನೆಯುತ್ತಾ, ನಾವೆಲ್ಲರೂ ಅವನ ಮಕ್ಕಳು ಎಂದು ತಿಳಿದು ನಡೆದಾಗ 'ವಸುಧೈವ ಕುಟುಂಬಕಂ' ಎಂಬ ಮಹಾಮಂತ್ರದ ಆಚರಣೆಯು ಸಾಧ್ಯವಾಗುವುದು. ನಾವೆಲ್ಲರೂ ಭಗವಂತನ ಮಕ್ಕಳು ಸಹೋದರ ಸಹೋದರಿಯರು, ನಮ್ಮ ಪವಿತ್ರ ಸ್ನೇಹದ ಸೂಚಕವೇ 'ರಾಖಿ' ಈ ಹಬ್ಬದಲ್ಲಿ ಸಹೋದರಿ ಸಹೋದರನಿಗೆ ರಾಖಿ ಕಟ್ಟಿ ಮಸ್ತಕದಲ್ಲಿ ತಿಲಕವನ್ನಿಟ್ಟು ಬಾಯಿಯನ್ನು ಸಿಹಿ ಮಾಡುತ್ತಾಳೆ. ಇದರ ಪ್ರತಿಯಾಗಿ ಸಹೋದರನು ಕಾಣಿಕೆಯನ್ನು ನೀಡುತ್ತಾನೆ.
ತನ್ನ ಕಿಡ್ನಿಯನ್ನೇ ನೀಡಿ ತಮ್ಮನ ಪ್ರಾಣಕ್ಕೆ ರಕ್ಷೆಯಾದ ಅಕ್ಕ
ಮಸ್ತಕದಲ್ಲಿ ಇಡುವ ತಿಲಕ ಆತ್ಮಜ್ಯೋತಿಯ ಪ್ರತೀಕ, ಬಾಯಿ ಸಿಹಿ ಮಾಡುವುದೆಂದರೆ ಮಧುರವಾದ ನುಡಿಗಳನ್ನು ನುಡಿಯುವುದು, ರಾಖಿಯಲ್ಲಿ ಇರುವ ದಾರವು ನಿಯಮ ಹಾಗೂ ಸಂಯಮದ ಸೂಚಕ, ದುರ್ಗುಣ, ದುಶ್ಚಟಗಳನ್ನು ಬಿಡುವುದು ಕಾಣಿಕೆಯ ಅರ್ಥವಾಗಿದೆ. ಹಾಗಾದರೆ ಬನ್ನಿ ನಾವೆಲ್ಲರೂ ಭಗವಂತನ ಶ್ರೀರಕ್ಷೆಯಲ್ಲಿ ಬಂಧಿತರಾಗಿ ಇತರ ಅನೇಕ ಬಂಧನಗಳನ್ನು ಸ್ನೇಹದ ಸಂಬಂಧದಲ್ಲಿ ಪರಿವರ್ತಿಸಿಕೊಂಡು, ಜಾತಿ, ಮತ, ಧರ್ಮ, ಭಾಷಾ-ಭೇದಗಳನ್ನು ಮರೆತು, ಸಹೋದರತ್ವದ ಭಾವನೆಯಿಂದ ಜೀವನದಲ್ಲಿ ಸುಖ-ಶಾಂತಿಯನ್ನು ಪಡೆಯೋಣ.