ಕೈಯಲ್ಲಿ ಪಿಳ್ಳಂಗೋವಿ ಹಿಡಿದು ಬಂದನೋ ಪುಟ್ಟ ಕಿಟ್ಟಪ್ಪ!
ರೇಷ್ಮೆ ವಸ್ತ್ರದಿಂದ ಕಚ್ಚೆ ಹಾಕಿ, ಪುಟ್ಟ ತಲೆಯ ಮೇಲೆ ಅಲಂಕೃತ ಕಿರೀಟ ಕಟ್ಟಿ, ಅದಕ್ಕೊಂದು ಅಂಗಡಿಯಿಂದ ತಂದ ನವಿಲುಗರಿಯನ್ನು ಸಿಕ್ಕಿಸಿ, ಒಂದು ಕೈಯಲ್ಲಿ ಬಂಗಾರದ ಕೊಳಲನ್ನು ಕೊಟ್ಟು, ಮತ್ತೊಂದರಲ್ಲಿ ಚಾಕಲೇಟು ನೀಡಿ, ಕೊರಳ ತುಂಬ ಮುತ್ತಿನ ಸರಗಳನ್ನು ಹಾಕಿ ಮುದ್ದುಮುದ್ದಾದ ಹಾಲುಗಲ್ಲಕ್ಕೆ ಲೊಚಲೊಚನೆ ಮುತ್ತು ಕೊಟ್ಟಾಗಲೇ ಅಮ್ಮನಿಗೆ ಆನಂದ, ಕಣ್ಣಲ್ಲಿ ಪನ್ನೀರು!
ಕಿರೀಟವನ್ನು ಎಲ್ಲಿ ಕಿತ್ತು ಬಿಸಾಕ್ತಾನೋ ಏನೋ, ನಡೆಯುವಾಗ ಕಚ್ಚೆಯಲ್ಲಿ ಕಾಲು ಸಿಕ್ಕು ಎಡವಿ ಬಿದ್ದರೆ, ಅಯ್ಯೋ ಗಲ್ಲದ ಮೇಲಿನ ಲಾಲಿ ಜಾಸ್ತಿಯಾಯಿತು, ಕಿರೀಟ ತಲೆಯ ಮೇಲೆ ಸರಿಯಾಗಿ ಕೂಡುತ್ತಲೇ ಇಲ್ಲ, ನೋಡಿ ನೋಡಿ ಪಿಳ್ಳಗೋವಿ ಬಿಸಾಕಿ ಚಾಕಲೇಟಿಗೆ ಕೈಯೊಡ್ಡುತ್ತಿದ್ದಾನೆ, ಅಯ್ಯೋ ನನ್ನ ಮುತ್ತಿನ ಸರ ಕಿತ್ತು ಬಿಸಾಕಿದ ಹೋಯ್ತು ಹೋಯ್ತು ಅಂತ ಅಮ್ಮಂದಿರ ಗೋಳಾಟದಲ್ಲಿಯೇ ಎಷ್ಟೊಂದು ಆನಂದವಿರುತ್ತದೆಯಲ್ಲ?
ನಿಮ್ಮ ಮುದ್ದು ಕೃಷ್ಣ ನಮ್ಮ ಗ್ಯಾಲರಿಯಲ್ಲಿ ನಗಬೇಕಾ: ಚಿತ್ರ ಕಳಿಸಿ
ಕೃಷ್ಣ ಜನ್ಮಾಷ್ಟಮಿಯ ವಿಶೇಷವೇ ಅಂತಹುದು. ಅಮ್ಮಂದಿರಿಗೆ ಮಾತ್ರವಲ್ಲ, ಅಪ್ಪನಿಗೆ, ಅಜ್ಜಅಜ್ಜಿಯರಿಗೆ, ಸಹೋದರ ಸಹೋದರಿಯರಿಗೆ ಸಂಭ್ರಮವೋ ಸಂಭ್ರಮ. ಮನೆಯಲ್ಲಿ ಚಕ್ಕುಲಿ, ಕೋಡುಬಳೆ, ಅರಳಿನ ಉಂಡೆ, ಗೋಡಂಬಿಯ ಲಾಡು, ಅಂಟಿನುಂಡೆ, ಗೊಜ್ಜವಲಕ್ಕಿ, ಮೊಸರವಲಕ್ಕಿ ಮಾಡಿ, ಮನೆತುಂಬೆಲ್ಲ ಪುಟ್ಟ ಪಾದ ಮೂಡಿಸಿ, ಕಿಟ್ಟಪ್ಪನಿಗೆ ನೈವೇದ್ಯ ಮಾಡಿ, ಅರ್ಘ್ಯ ನೀಡಿದ ನಂತರ ಹೊಟ್ಟೆಗಿಳಿಸುವ ಖುಷಿಯೊಂದಿಗೆ ಪುಟಾಣಿ ಮಗುವಿಗೆ ಕೃಷ್ಣನಂತೆ ಅಲಂಕಾರ ಮಾಡಿ ನೋಡುವ ಸಂಭ್ರಮವಿದೆಯಲ್ಲ ಯಾವ ಪದಗಳಿಂದಲೂ ವರ್ಣಿಸಲು ಸಾಧ್ಯವಿಲ್ಲ.
ಕಳ್ಳ ಕೃಷ್ಣಂಗೆ ಜನ್ಮದಿನ... ಎಲ್ಲೆಲ್ಲೂ 'ಮೊಸರು ಕುಡಿಕೆ' ಸಂಭ್ರಮ
ಈ ಮುದ್ದುಪುಟಾಣಿಗಳ ಭಾವಚಿತ್ರಗಳನ್ನು ನೋಡಲು ನಮಗೂ ನಿಮಗೂ ಕುತೂಹಲ ಇರುವುದರಿಂದ, ನಮ್ಮ ಕರೆಗೆ ಓಗೊಟ್ಟು ಹಲವಾರು ಕನ್ನಡ ಬಾಂಧವರು, ಕನ್ನಡ ಓದುಗರು ತಮ್ಮ ಮಕ್ಕಳ ಕೃಷ್ಣವೇಷಧಾರಿ ಚಿತ್ರಗಳನ್ನು ನಮಗೆ ಕಳಿಸಿದ್ದಾರೆ. ಅವನ್ನು ಇಲ್ಲಿ ಅವರ ಅನುಮತಿಯೊಂದಿಗೆ ಇಲ್ಲಿ ಪ್ರಕಟಿಸುತ್ತಿದ್ದೇವೆ. ಇಲ್ಲಿ ಎಲ್ಲವನ್ನೂ ಒಂದೇ ಬಾರಿಗೆ ಪ್ರಕಟಿಸಲು ಸಾಧ್ಯವಿಲ್ಲದಿರುವುದರಿಂದ, ಹಂತಹಂತವಾಗಿ ಪ್ರಕಟಿಸಲಾಗುವುದು. ಹಾಗೆಯೆ, ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
ಅಂಬೆಗಾಲಿಡುತ ಬಂದಬಂದ ನಂದಗೋಪಾಲ
ಇದೀಗ ಅಂಬೆಗಾಲಿಡಲು ಪ್ರಯತ್ನಿಸುತ್ತಿರುವ ಚಣ್ಣಪುಟಾಣಿ 6 ತಿಂಗಳ ಸೌಜಸ್ ಸೂರಿಗೆ ನೀವಿದ್ದಲ್ಲಿಂದಲೇ ಫ್ಲೈಯಿಂಗ್ ಕಿಸ್ ಕೊಟ್ಟುಬಿಡಿ. ಬೆಂಗಳೂರಿನ ಕತ್ರಿಗುಪ್ಪೆಯ ಸುರೇಂದ್ರ ಕುಮಾರ್ ಮತ್ತು ದೀಪಾ ಸೂರಿ ಅವರ ಚೊಚ್ಚಲ ಮಗನಿಗೆ ಇನ್ನೂ ಸರಿಯಾಗಿ ಕೂಡಲೂ ಬಾರದಿದ್ದರೂ, ಸರ್ವಾಲಂಕಾರ ಮಾಡಿ ಕಷ್ಟಪಟ್ಟು ಸೋಫಾಗೆ ಆನಿಸಿ, ಆತ ಡುಬಕ್ಕನೆ ಬೀಳುವ ಮೊದಲು ಫೋಟೋ ತೆಗೆದಿದ್ದಾರೆ. ಅಪ್ಪಅಮ್ಮಂದಿರ ಸಂಭ್ರಮ ಮುಗಿಲುಮುಟ್ಟಿದೆ.
ಉಡುಪಿಯಲ್ಲಿ ಕೃಷ್ಣನ ಆರಾಧನೆಗೆ ತಯಾರಿ, ಎಷ್ಟೊಂದು ಉಂಡೆ-ಚಕ್ಕುಲಿ!
ಕಂದಮ್ಮನ ಕಣ್ಣಲ್ಲಿ ನೀರು, ಅಮ್ಮನಿಗೆ ಪನ್ನೀರು
ಅಪ್ಪ, ಅಮ್ಮ, ಅಜ್ಜ, ಅಜ್ಜಿ ಅಂತ ತೊದಲು ಮಾತಾಡಲು ಕಲಿತಿರುವ, ತನ್ನ ಭಾಷೆಯಲ್ಲೇ ಇನ್ನೂ ಏನೇನೋ ಕಥೆಗಳನ್ನು ಹೇಳುವ ಚಾಮರಾಜನಗರದ ತೇಜಸ್ ನಿಗೆ ಕೃಷ್ಣನಂತೆ ಅಲಂಕಾರ ಮಾಡಿ, ಗಲ್ಲಕ್ಕೆ ಲಾಲಿ ಹಚ್ಚಿ, ಕೈಯಲ್ಲಿ ಡಿಜಿಟಲ್ ಕ್ಯಾಮೆರಾ ಕೊಟ್ಟು, ಫೋಟೋ ಸ್ಟುಡಿಯೋದ ಕುರ್ಚಿಯ ಮೇಲೆ ಕುಳ್ಳಿರಿಸಿ ಫೋಟೋ ಕ್ಲಿಕಿಸುವಲ್ಲಿ ಅಪ್ಪ ಗಿರೀಶ ಬಿ ಮತ್ತು ಅಮ್ಮ ಗೀತಾ ಅವರಿಗೆ ಸಾಕುಬೇಕಾಗಿತ್ತು. ಕಣ್ಣಂಚಿನಿಂದ ಮುತ್ತಿನ ಹನಿಯನ್ನು ಸುರಿಸುತ್ತಲೇ ತನ್ನದೇ ಫೋಟೋವನ್ನು ಕ್ಯಾಮೆರಾದಲ್ಲಿ ನೋಡಿದಾಗಲೇ ತೇಜಸ್ ಗೆ ಸಮಾಧಾನ.
ದ್ವಾರಕೆಯಲ್ಲಿದ್ದ ಕೃಷ್ಣ ವಿಗ್ರಹ ಉಡುಪಿಗೆ ಬಂದದ್ದು ಹೇಗೆ?
ಮೈಸೂರಿನ ನೂತನ್ ಗೆ ಕುಣಿಯುವುದೆಂದ್ರೆ ತುಂಬಾ ಇಷ್ಟ
ಗೋಪಿಕಾ ಸ್ತ್ರೀಯರ ಜೊತೆ ಹಾಡುತ್ತಾ ಕೊಳಲು ನುಡಿಸುತ್ತಿದ್ದ ದ್ವಾಪರ ಯುಗದ ನಂದಗೋಪಾಲನಿಗೆ ಕುಣಿಯುವುದು ಹೇಗೆ ಇಷ್ಟವಿತ್ತೋ, ಮೈಸೂರಿನ ರೂಪಾ ನಾಗಶ್ರೀ ಉರಾಲ್ ಅವರ ಎರಡು ವರ್ಷ ಎಂಟು ತಿಂಗಳ ಮಗ ನೂತನ್ ಗೂ ನರ್ತಿಸುವುದೆಂದರೆ ಅಷ್ಟೇ ಇಷ್ಟವಂತೆ. ಈ ಚೆಲುವ ಇನ್ನೂ ಶಾಲೆಗೆ ಹೋಗಲು ಶುರು ಮಾಡಿಲ್ಲವಂತೆ. ಇನ್ನು ಶಾಲೆಗೆ ಹೋಗಲು ಶುರು ಮಾಡಿದರೆ ಯಾರ್ಯಾರನ್ನು ಕುಣಿದಾಡಿಸಲು ಶುರು ಮಾಡುತ್ತಾನೋ?
ಜನ್ಮಾಷ್ಟಮಿ ವಿಶೇಷ: ಸರ್ವಗುಣ ಸಂಪನ್ನ ನಮ್ಮ ಬೆಣ್ಣೆ ಕೃಷ್ಣ!
ಈ ಕೃಷ್ಣ ಇಂದಿಗೂ ಬೆಣ್ಣೆ ಕದಿಯುತ್ತಾನೆ!
ತಮಾಷೆ ಗೊತ್ತಾ? ಬೆಂಗಳೂರಿನ ನಿವಾಸಿ, ಬಾಲಕೃಷ್ಣನ ವೇಷಧಾರಿ ಶ್ರೀವತ್ಸನ ಫೋಟೋ ತೆಗೆದಿದ್ದು ಈಗಲ್ಲ, 26 ವರ್ಷಗಳ ಹಿಂದೆ! ಆತ ಆಗಲೂ ಬೆಣ್ಣೆ ಕದಿಯುತ್ತಿದ್ದನಂತೆ ಈಗಲೂ ಬೆಣ್ಣೆ ಕದಿಯುತ್ತಾರಂತೆ! ಮಕ್ಕಳು ದೊಡ್ಡವರಾದರೇನಂತೆ ಅಪ್ಪ ಅಮ್ಮಂದಿರಿಗೆ ಇಂದಿಗೂ ಪುಟ್ಟ ಕಂದನೇ. ಸ್ವತಃ ಶ್ರೀವತ್ಸ ಅವರೇ ತಮ್ಮ ಚಿತ್ರವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ತೂಗಿರೆ ರಂಗನ, ತೂಗಿರೆ ಕೃಷ್ಣನ
ತೂಗಿರೆ ರಂಗನ, ತೂಗಿರೆ ಕೃಷ್ಣನ, ತೂಗಿರೆ ಯದುಕುಲ ತಿಲಕನ... ತುಂಟ ಮಕ್ಕಳನ್ನು ಮಲಗಿಸುವುದು ಎಷ್ಟು ಕಷ್ಟವೆಂದು ತೊಟ್ಟಿಲು ತೂಗುವ ಅಮ್ಮಂದಿರಿಗೇ ಗೊತ್ತು. ಇಲ್ಲಿ ನೋಡಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ 2.3 ವರ್ಷದ ವಿವಸ್ವಾನ್ ಚಾತ್ರ ಕೃಷ್ಣನ ವೇಷ ಧರಿಸಿಯೇ ನಿದ್ದೆಗೆ ಜಾರಿದ್ದಾನೆ. ಪಾಪ ಎಷ್ಟು ಸುಸ್ತಾಗಿದ್ದನೋ ಏನೋ? ವಿವಸ್ವಾನ್ ನ ಮೂಲ ಊರು ಉಡುಪಿ ಜಿಲ್ಲೆಯ ಕುಂದಾಪುರ.