ಕಾಳಸರ್ಪ ದೋಷ ನಿವಾರಣೆಗೆ ಕೃಷ್ಣ ಜನ್ಮಾಷ್ಟಮಿ ಉತ್ತಮ ಸಮಯ
ನಿಮ್ಮ ಜಾತಕದಲ್ಲಿ ಕಾಳಸರ್ಪ ದೋಷ ಇದ್ದರೆ ಅದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಶಸ್ತ ಕಾಲ ಬಂದಿದೆ. ಕೃಷ್ಣ ಜನ್ಮಾಷ್ಟಮಿ ಹಬ್ಬದ ಸಂದರ್ಭ ಕಾಳಸರ್ಪ ದೋಷ ನಿವಾರಣೆಗೆ ಒಳ್ಳೆಯ ಕಾಲವೆನಿಸಿದೆ. ಈ ಸಂದರ್ಭದಲ್ಲಿ ಕೆಲ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬಹುದು.
ಕೃಷ್ಣ ಜನ್ಮಾಷ್ಟಮಿಯು ಯಾಕೆ ಕಾಳಸರ್ಪ ದೋಷ ನಿವಾರಣೆಗೆ ಪ್ರಶಸ್ತ ಕಾಲ ಎನ್ನುವುದಕ್ಕೆ ಪುರಾಣದಲ್ಲಿ ಉಲ್ಲೇಖ ಇದೆ. ಶ್ರೀಕೃಷ್ಣನ ಜಾತಕದಲ್ಲಿ ಕಾಳಸರ್ಪ ದೋಷ ಇತ್ತು ಎಂದು ಹೇಳಲಾಗುತ್ತದೆ. ಹೀಗಾಗಿ, ಶ್ರೀಕೃಷ್ಣ ಜೈಲಿನಲ್ಲಿ ಹುಟ್ಟಬೇಕಾಯಿತು, ಮತ್ತು ಹೆತ್ತರಿಂದ ದೂರವಾಗಿ ಬದುಕಬೇಕಾಯಿತು. ಶ್ರೀಕೃಷ್ಣ ಕೂಡ ತನ್ನ ಜಾತಕದಲ್ಲಿನ ಕಾಳಸರ್ಪ ದೋಷ ನಿವಾರಿಸಲು ಕ್ರಮ ಕೈಗೊಂಡನೆಂದು ಹೇಳಲಾಗುತ್ತದೆ.
ಕೃಷ್ಣ ಜನ್ಮಾಷ್ಟಮಿ: ಸಮಯ, ವ್ರತ, ಉಪವಾಸ, ಪೂಜಾ ವಿಧಾನ
ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿ ರಾಹು ಮತ್ತು ಕೇತು ಒಟ್ಟಿಗೆ ಇದ್ದು, ಉಳಿದ ಗ್ರಹಗಳು ಇನ್ನೊಂದೆಡೆ ಇದ್ದರೆ ಅಗ ಆ ಜಾತಕಕ್ಕೆ ಕಾಳಸರ್ಪ ದೋಷ ಇದೆ ಎಂದು ಪರಿಗಣಿಸಲಾಗುತ್ತದೆ.
ಜಾತಕದಲ್ಲಿ ಕಾಳಸರ್ಪ ದೋಷ ಇದ್ದ ವ್ಯಕ್ತಿಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಈ ದೋಷವನ್ನು ಕೃಷ್ಣ ಜನ್ಮಾಷ್ಟಮಿಯಂದು ನಿವಾರಿಸಿಕೊಳ್ಳಲು ಅವಕಾಶ ಇದೆ. ಇದು ಹೇಗೆ ಮಾಡಬಹುದು, ಇದರ ವಿಧಿವಿಧಾನಗಳು ಏನು ಎಂಬ ಮಾಹಿತಿ ಇಲ್ಲಿ ಮುಂದಿದೆ.
ಬಾಲಗೋಪಾಲನ ಪೂಜೆ
ಕೃಷ್ಣ ಜನ್ಮಾಷ್ಟಮಿ ದಿನದಂದು ಕಾಳಿಂಗ ಸರ್ಪದ ಜೊತೆ ಬಾಲಕ ಕೃಷ್ಣ ನರ್ತನ ಮಾಡುತ್ತಿರುವ ಚಿತ್ರ ಇದ್ದರೆ ಇಟ್ಟುಕೊಂಡು ಅದನ್ನು ಪೂಜೆ ಮಾಡಿ. ಉತ್ತರ ಭಾರತೀಯರು ಸಾಮಾನ್ಯವಾಗಿ ಮಥುರಾದಲ್ಲಿರುವ ಕಾಳಿಯಾ ನಾಗ್ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ. ಈ ದೇವಸ್ಥಾನಕ್ಕೆ ಒಂದು ವಿಶೇಷ ಹಿನ್ನೆಲೆ ಇದೆ. ಕಾಳಿಂಗ ಸರ್ಪ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಕೃಷ್ಣ ಆ ಹಾವನ್ನು ಕಲ್ಲಾಗಿಸಿದ ಎಂದು ಹೇಳಲಾಗುತ್ತದೆ. ಈ ದೇವಸ್ಥಾನದಲ್ಲಿ ಕಲ್ಲಿನ ರೂಪದಲ್ಲಿರುವ ಕಾಳಿಂಗ ಸರ್ಪವನ್ನು ನೋಡಬಹುದು. ಹೀಗಾಗಿ, ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ಕಾಳಸರ್ಪ ದೋಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ.
ಶ್ರೀಕೃಷ್ಣ ಏನು ಮಾಡಿದ?
ಆಗಲೇ ಹೇಳಿದಂತೆ ಕೃಷ್ಣನ ಜಾತಕದಲ್ಲೂ ಕಾಳಸರ್ಪ ಯೋಗ ಇತ್ತು. ಅದಕ್ಕೆ ಆತ ಪರಿಹಾರ ಕೂಡ ಮಾಡಿದ್ದನೆನ್ನಲಾಗಿದೆ. ಕಾಳಸರ್ಪ ದೋಷದ ಪರಿಹಾರಕ್ಕಾಗಿ ಕೃಷ್ಣ ತನ್ನ ಕಿರೀಟಕ್ಕೆ ನವಿಲುಗರಿಗಳನ್ನು ಹಾಕಿಕೊಳ್ಳುತ್ತಿದ್ದ ಎಂದು ಹೇಳಲಾಗುತ್ತದೆ.
ಹೀಗಾಗಿ, ಕೃಷ್ಣ ಜನ್ಮಾಷ್ಟಮಿ ದಿನದಂದು ಕೃಷ್ಣನಿಗೆ ನವಿಲುಗರಿಯನ್ನು ಅರ್ಪಿಸಿ, ಪೂಜೆ ಮಾಡಿದ ಬಳಿಕ ಆ ನವಿಲುಗರಿಯನ್ನು ನಿಮ್ಮ ಜೇಬಿನಲ್ಲೇ, ಬ್ಯಾಗಿನಲ್ಲೋ, ಪುಸ್ತಕದಲ್ಲೋ ಇಟ್ಟುಕೊಳ್ಳಿ. ಇದರಿಂದ ಕಾಳಸರ್ಪ ದೋಷ ದೂರವಾಗುತ್ತದೆ ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.
ಕೊಳಲು ಅರ್ಪಣೆ
ಕೃಷ್ಣ ಜನ್ಮಾಷ್ಟಮಿಯಂದು ಶ್ರೀ ಕೃಷ್ಣನಿಗೆ ಕೊಳಲನ್ನು ಅರ್ಪಿಸುವುದರಿಂದಲೂ ಕಾಳಸರ್ಪ ದೋಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ. ರಾಹು ಕೇತು ಗ್ರಹಗಳಿಂದಾಗಿ ಕಾಳಸರ್ಪ ದೋಷ ಹೆಚ್ಚು ಪ್ರಬಲಗೊಳ್ಳುತ್ತದೆ. ಕೃಷ್ಣನ ನೆಚ್ಚಿನ ವಾದನವಾದ ಕೊಳಲನ್ನು ನುಡಿಸಿದರೆ ಆ ಶಬ್ದದಿಂದ ಸಕಾರಾತ್ಮಕ ಶಕ್ತಿ ಎದ್ದು ಕಾಳಸರ್ಪ ದೋಷದ ನಿವಾರಣೆ ಮಾಡುತ್ತದೆ. ಹೀಗಾಗಿ, ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನಿಗೆ ಕೊಳಲನ್ನು ಅರ್ಪಿಸಿ ಪೂಜಿಸಿರಿ. ಮಾರನೆ ದಿನ ಅದನ್ನು ಮನೆ ಎದುರು ನೇತುಹಾಕಿ ದಿನವೂ ಪೂಜಿಸಿರಿ. ಹೀಗೆ ಮಾಡುವುದರಿಂದ ಕಾಳಸರ್ಪ ದೋಷ ನಿಮ್ಮನ್ನು ಬಾಧಿಸುವುದಿಲ್ಲ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಬೆಳ್ಳಿ ಗುಂಡುಗಳನ್ನು ಅರ್ಪಿಸಿ
ಜನ್ಮಾಷ್ಟಮಿಯಂದು ಸರಿಯಾದ ಪೂಜಾ ವಿಧಿವಿಧಾನಗಳನ್ನು ಪಾಲಿಸಿದ ಬಳಿಕ ಕೃಷ್ಣನಿಗೆ ಬೆಳ್ಳಿ ಅಥವಾ ಗಾಜಿನ ಗುಂಡುಗಳನ್ನು ಅರ್ಪಿಸಿ. ಈ ವಸ್ತುವನ್ನು ಸದಾ ನಿಮ್ಮ ಬಳಿಯೇ ಇಟ್ಟುಕೊಂಡಿರಿ. ಇದರಿಂದ ಕಾಳಸರ್ಪ ದೋಷ ನಿವಾರಣೆಯಾಗಿ, ನಿಮ್ಮ ಜೀವನಕ್ಕೆ ಶಾಂತಿ ತಂದುಕೊಡುತ್ತದೆ.
ಕಾಳಸರ್ಪ ದೋಷ ಇಲ್ಲದಿದ್ದವರೂ ಕೂಡ ಈ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಜೀವನದಲ್ಲಿ ಸಮಸ್ಯೆಗಳು ಬರದಂತೆ ತಡೆಯಬಹುದು.
ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನ ಮಂತ್ರ ಪಠಣ ಮಾಡುವುದರಿಂದ ಕೆಟ್ಟ ಗ್ರಹ ಪರಿಣಾಮಗಳನ್ನು ದೂರ ಮಾಡಬಹುದು. ಭಾಗವತ ಪುರಾಣದ ಕಥೆಗಳನ್ನು ಕೇಳಿದರೂ ಶುಭವಾಗುತ್ತದೆ. ಶ್ರೀಕೃಷ್ಣನ ಕೃಪಾಶೀರ್ವಾದ ನಿಮಗೆ ಒಲಿಯುತ್ತದೆ ಎಂಬ ನಂಬಿಕೆ ಭಕ್ತಾದಿಗಳಲ್ಲಿ ಇದೆ.
ಈ ವರ್ಷ ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 18 ಮತ್ತು 19ರಂದು ಇದೆ.
(ಒನ್ಇಂಡಿಯಾ ಸುದ್ದಿ)