ಕೃಷ್ಣ ಜನ್ಮಾಷ್ಟಮಿ- ಬೆಂಗಳೂರು ಹಾಗೂ ರಾಜ್ಯದ ಪ್ರಖ್ಯಾತ ಕೃಷ್ಣ ಮಂದಿರಗಳು
ಬಹುತೇಕ ಹಿಂದೂಗಳ ನೆಚ್ಚಿನ ದೇವರೆನಿಸಿರುವ ಶ್ರೀ ಕೃಷ್ಣನ ಜನ್ಮದಿನದ ಸಂಭ್ರಮ ಈಗ. 2022ರ ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 18 ಮತ್ತು 19ರಂದು ಇದೆ. ಕೃಷ್ಣನ ಭಕ್ತರಿಗೆ ಸಂಭ್ರಮದ ದಿನಗಳಿವು.
ದೇಶಾದ್ಯಂತ, ಅದರಲ್ಲೂ ಉತ್ತರ ಭಾರತದಲ್ಲಿ ಕೃಷ್ಣ ಜನ್ಮಾಷ್ಟಮಿಯ ವೈಭವ ಹೆಚ್ಚು. ಮಥುರಾದ ವೃಂದಾವನದಲ್ಲಿರುವ ಕೃಷ್ಣನ ಮಂದಿರಕ್ಕೆ ಲಕ್ಷಾಂತರ ಭಕ್ತರು ಎಡತಾಕುತ್ತಾರೆ. ಆದರೆ, ಸಾವಿರಾರು ಕಿಮೀ ದೂರದಲ್ಲಿರುವ ಕರ್ನಾಟಕ ಮತ್ತಿತರ ದಕ್ಷಿಣ ಭಾರತೀಯ ಜನರಿಗೆ ಅಲ್ಲಿಗೆ ಹೋಗಲು ಕಷ್ಟಸಾಧ್ಯ.
ಕಾಳಸರ್ಪ ದೋಷ ನಿವಾರಣೆಗೆ ಕೃಷ್ಣ ಜನ್ಮಾಷ್ಟಮಿ ಉತ್ತಮ ಸಮಯ
ನಮ್ಮ ಬೆಂಗಳೂರು ಮತ್ತು ಕರ್ನಾಟಕದ ಹಲವು ಕಡೆ ಕೃಷ್ಣನ ದೇವಸ್ಥಾನಗಳು ಬಹಳ ಇವೆ. ಇಂಥ ಕೆಲ ಪ್ರಮುಖ ದೇವಸ್ಥಾನಗಳ ಸ್ಥಳ ಮತ್ತು ಪರಿಚಯ ಇಲ್ಲಿದೆ.
ಬೆಂಗಳೂರಿನಲ್ಲಿರುವ ಪ್ರಮುಖ ಕೃಷ್ಣ ಮಂದಿರಗಳು
ಇಸ್ಕಾನ್ ದೇವಸ್ಥಾನ: ಇದು ರಾಜಾಜಿನಗರ ಮತ್ತು ಕನಕಪುರ ರಸ್ತೆಯಲ್ಲಿ ಇದೆ. ಎರಡೂ ಕೂಡ ಭವ್ಯವಾಗಿ ನಿರ್ಮಿತವಾಗಿವೆ. ರಾಜಾಜಿನಗರದ ಕಾರ್ಡ್ ರಸ್ತೆಯಲ್ಲಿ ಒಂದು ದೇವಸ್ಥಾನ ಇದೆ. ಕನಕಪುರ ರಸ್ತೆಗೆ ಸಮೀಪದಲ್ಲೇ ಹೊಸದಾಗಿ ಇನ್ನೊಂದು ಇಸ್ಕಾನ್ ದೇವಸ್ಥಾನ ಇದೆ. ಕೃಷ್ಣನಿಗೆ ಮುಡಿಪಾದ ಅಪ್ಪಟ ಕೃಷ್ಣ ಮಂದಿರ. ಇಸ್ಕಾನ್ ದೇವಸ್ಥಾನ ಬಹುಶಃ ಭಾರತದಲ್ಲಿ ಇದೆ. ವಿಶ್ವದ ಕೆಲ ದೇಶಗಳಲ್ಲೂ ಇಸ್ಕಾನ್ ಮಂದಿರಗಳಿಗೆ.
ಬಸವನಗುಡಿ ಗೋವರ್ಧನ ಕ್ಷೇತ್ರ: ಬಸವನಗುಡಿ ಹಲವು ಮಂದಿರಗಳಿಗೆ ಖ್ಯಾತವಾಗಿದೆ. ಐತಿಹಾಸಿಕ ಬಸವನ ದೇವಸ್ಥಾನ, ದೊಡ್ಡ ಗಣಪತಿ ದೇವಸ್ಥಾನ, ಗವಿಗಂಗಾಧರೇಶ್ವರ ದೇವಸ್ಥಾನ ಹಾಗು ಗೋವರ್ಧನಗಿರಿ ದೇವಸ್ಥಾನಗಳು ಇಲ್ಲಿವೆ. ಗೋವರ್ಧನ ಕ್ಷೇತ್ರದಲ್ಲಿ ನಿಮಗೆ ಶ್ರೀಕೃಷ್ಣ ಗೋವರ್ಧನ ಗುಡ್ಡವನ್ನು ತನ್ನ ಬೆರಳಿನಲ್ಲಿ ಎತ್ತಿ ಹಿಡಿದಿರುವ ಚಿತ್ರವನ್ನು ಕಾಣಬಹುದು. ಬಸವನಗುಡಿಯ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಎದುರಿಗೆಯೇ ಈ ಕ್ಷೇತ್ರ ಇದೆ.
ಎಡ್ನೀರು ಮಠ ಶ್ರೀಕೃಷ್ಣ ದೇವಸ್ಥಾನ: ಕೋರಮಂಗಲ 5ನೇ ಬ್ಲಾಕ್ನ ಕೆಎಚ್ಬಿ ಕಾಲೊನಿಯಲ್ಲಿ ಎಡನೀರು ಮಠ ಇದೆ. ಅಲ್ಲಿಯ ಶ್ರೀ ಕೃಷ್ಣ ಮಂದಿರ ಬಹಳ ಖ್ಯಾತವಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಯಂದು ಬೆಂಗಳೂರಿನ ಬಹಳಷ್ಟು ಭಕ್ತರು ಇಲ್ಲಿಗೆ ಬರುತ್ತಾರೆ. ಈ ದೇವಸ್ಥಾನದ ಪರಿಸರ ಕೂಡ ಭಕ್ತಿಯ ಭಾವ ಹೆಚ್ಚಿಸುವಂತಿದೆ.
ರಾಧಾ ಕೃಷ್ಣ ದೇವಸ್ಥಾನ: ಹೆಚ್ ಎಸ್ ಆರ್ ಲೇಔಟ್ನ 5ನೇ ಸೆಕ್ಟರ್ನಲ್ಲಿರುವ ಅಗರ ಗ್ರಾಮದ ಬಳಿ ಕೃಷ್ಣನ ದೇವಸ್ಥಾನ ಕೂಡ ಜನಪ್ರಿಯ ಎನಿಸಿದೆ. ಮಂದಿರ ಚಿಕ್ಕದಾದರೂ ಅದರ ವಾಸ್ತುಕಲೆ ನಿಜಕ್ಕೂ ಪ್ರಶಂಸಾರ್ಹವಾಗಿದೆ. ಕೃಷ್ಣನ ಒಂದು ಪಕ್ಕ ರಾಧೆ ಇದ್ದರೆ, ಇನ್ನೊಂದು ಬದಿಯಲ್ಲಿ ಅಣ್ಣ ಬಲರಾಮನಿದ್ದಾನೆ. ಈ ದೇವಸ್ಥಾನ ರಾತ್ರಿ ೧೧:೩೦ರವರೆಗೂ ತೆರೆದಿರುವುದು ವಿಶೇಷ.
Janmashtami 2022 : ಕೃಷ್ಣ ಜನ್ಮಾಷ್ಟಮಿ: ಸಮಯ, ವ್ರತ, ಉಪವಾಸ, ಪೂಜಾ ವಿಧಾನ
ಚನ್ನಪಟ್ಟಣದ ಅಂಬೆಗಾಲು ಕೃಷ್ಣ
ಬೆಂಗಳೂರು ಸಮೀಪದಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಅಂಬೆಗಾಲು ಕೃಷ್ಣನ ದೇವಸ್ಥಾನ ಇದೆ. ದೊಡ್ಡಮಳ್ಳೂರಿನ ಅಪ್ರಮೇಯ ಸ್ವಾಮಿ ದೇವಸ್ಥಾನದ ಕೃಷ್ಣ ಅಂಬೆಗಾಲು ನವನೀತ ಕೃಷ್ಣ ಅಥವಾ ಅಂಬೆಗಾಲು ಕೃಷ್ಣ ಎಂದು ಖ್ಯಾತನಾಗಿದ್ದಾನೆ. ಮಕ್ಕಳಿಲ್ಲದ ದಂಪತಿ ಇಲ್ಲಿಗೆ ಹೋದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ದೇವಸ್ಥಾನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲೇ ಇದೆ.
ಹಾಗೆಯೇ, ಚನ್ನಪಟ್ಟಣದ ಮಾಕಳಿ-ಕುಣಿಗಲ್ ರಸ್ತೆಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಇದೆ. ಇದೂ ಕೂಡ ಜನಪ್ರಿಯವಾಗಿರುವ ಮಂದಿರ ಎನಿಸಿದೆ.
ಉಡುಪಿ ಕೃಷ್ಣ ಮಠ
ಕರ್ನಾಟಕದಲ್ಲಿ ಕೃಷ್ಣನ ದೇವಸ್ಥಾನ ಎಂದರೆ ಮೊದಲಿಗೆ ನೆನಪಿಗೆ ಬರುವುದು ಉಡುಪಿಯ ಕೃಷ್ಣ ಮಠ. ಐತಿಹಾಸಿಕವಾದ ಸ್ಥಳ ಇದು. ಮಂಗಳೂರಿಗೆ ಪ್ರವಾಸ ಹೋದವರು ಉಡುಪಿ ಕೃಷ್ಣನ ದರ್ಶನ ತಪ್ಪದೇ ಪಡೆಯುವುದು ರೂಢಿ. ವರ್ಷಕ್ಕೆ ಲಕ್ಷಾಂತರ ಜನರು ಇಲ್ಲಿನ ಕೃಷ್ಣನ ದರ್ಶನ ಪಡೆಯುತ್ತಾರೆ. ಕೃಷ್ಣ ಜನ್ಮಾಷ್ಟಮಿಯಂದು ಈ ದೇವಸ್ಥಾನದಲ್ಲಿ ವಿಶೇಷ ಅಲಂಕಾರಗಳಿರುತ್ತದೆ.
ಗೋಪಾಲಕೃಷ್ಣ ದೇವಸ್ಥಾನ: ಉಡುಪಿ ಪಕ್ಕದ ಮಂಗಳೂರಿನಲ್ಲಿ ಗೋಪಾಲಕೃಷ್ಣ ದೇವಸ್ಥಾನ ಇದೆ. ಉಡುಪಿ ಕೃಷ್ಣ ಮಠಕ್ಕೆ ಹೋಗಿ ಹಾಗೆಯೇ ಈ ಗೋಪಾಲ ಕೃಷ್ಣ ದೇವಸ್ಥಾನದಲ್ಲೂ ಕೃಷ್ಣನ ದರ್ಶನ ಪಡೆಯಬಹುದು. ಬಹಳ ಅದ್ಭುತ ಪರಿಸರದಲ್ಲಿ ಇರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ವಿಶೇಷ ಪೂಜೆ ಇರುತ್ತದೆ.
ಇತರೆಡೆಯ ಕೃಷ್ಣ ಮಂದಿರಗಳು
ವೇಣುಗೋಪಾಲಸ್ವಾಮಿ ದೇವಸ್ಥಾನ: ಮೈಸೂರಿನ ಕೆಆರ್ಎಸ್ ಜಲಾಶಯದ ಬಳಿ ಇರುವ ವೇಣುಗೋಪಾಲ ಸ್ವಾಮಿ ದೇವಸ್ಥಾನ ಇದೆ. ಇದು 12ನೇ ಶತಮಾನದಲ್ಲಿ ಕಟ್ಟಲಾದ ಮಂದಿರ.
ಬಾಲಕೃಷ್ಣ ದೇವಸ್ಥಾನ: ಖ್ಯಾತ ಪ್ರವಾಸೀ ಸ್ಥಳ ಹಂಪಿಯಲ್ಲಿ ಈ ಮಂದಿರ ಇದೆ. ವಿಜಯನಗರ ಅರಸರ ಕಾಲದಲ್ಲಿ 15ನೇ ಶತಮಾನದಲ್ಲಿ ಈ ದೇವಸ್ಥಾನ ಕಟ್ಟಲಾಗಿದೆ. ಆದರೆ, ನಿತ್ಯ ಇಲ್ಲಿ ಪೂಜೆ ಪುನಸ್ಕಾರ ಆಗದೇ ಇದ್ದರೂ ಐತಿಹಾಸಿಕ ದೇವಸ್ಥಾನ ನೋಡುವ ಸಲುವಾಗಿ ಇಲ್ಲಿಗೆ ಭೇಟಿ ಕೊಡಬಹುದು. ಮೇಲಾಗಿ ಬಳ್ಳಾರಿಯ ಹಂಪಿಯಲ್ಲಿ ಇನ್ನೂ ಅನೇಕ ಐತಿಹಾಸಿಕ ಸ್ಥಳಗಳು ಇವೆ.
(ಒನ್ಇಂಡಿಯಾ ಸುದ್ದಿ)
Recommended Video