ಇಂದು ರಾಯರ ಆರಾಧನೆ:ರಾಘವೇಂದ್ರಾ ದಯ ತೋರು
ರಾಮಪದಾ೦ಬುಜಾಸಕ್ತ೦
ರಾಘವೇ೦ದ್ರಗುರುಪ್ರಿಯ೦|
ಮುನೀ೦ದ್ರಯೋಗಿನ೦
ಸೇವೇ
ಕಾಮಿತಾರ್ಥ
ಪ್ರದಾಯಕ೦||
ಆಚಾರ್ಯ ಮಧ್ವರ ಅನುಯಾಯಿಯಾಗಿ ಮಧ್ವ ಮತದ ಸಿದ್ದಾಂತವನ್ನು ಎತ್ತರಕ್ಕೆ ಏರಿಸಿದ, ಪ್ರಹ್ಲಾದ ರಾಯರ ಮೂರನೇ ಅವತಾರವೆಂದೇ ಭಾವಿಸಲಾಗಿರುವ ಶ್ರೀರಾಘವೇಂದ್ರ ಸ್ವಾಮಿಗಳ 342ನೇ ಆರಾಧನಾ ಮಹೋತ್ಸವ ಬುಧವಾರದಿಂದ (ಆ 21) ಆರಂಭವಾಗಿದೆ. ಇಂದು (ಆ 22) ರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ.
ಕರ್ನಾಟಕ ಜನತೆಯ ಆರಾಧ್ಯ ಗುರು, ಮಂತ್ರಾಲಯದ ಮಹಿಮಾ ಪುರುಷ ಶ್ರೀ ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದೂ ಭಕ್ತಿಯಿಂದ ಕರೆಯುತ್ತಾರೆ.
ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಉತ್ತಾರಾರಾಧನೆ ಹೀಗೆ ಶುಕ್ರವಾರದ (ಆ 23) ವರೆಗೆ ನಾಡಿನೆಲ್ಲಡೆ ಇರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ಆರಾಧನೆ ಭಕ್ತಿ, ಸಡಗರದಿಂದ ನಡೆಯಲಿದೆ.
ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಿಗೆಯವರೆಗೂ ರಾಯರ ಆರಾಧನೆ ನಡೆಯುತ್ತದೆ. ರಾಯರ ಮೂಲ ಬೃಂದಾವನವಿರುವ ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವದ ಸಪ್ತ ರಾತ್ರೋತ್ಸವ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿದೆ.
ಮೂರು ದಿನಗಳ ಕಾಲ ನಡೆಯುವ ವೈಭವದ ಆರಾಧನೆಯ ಸಮಯದಲ್ಲಿ ಸುಪ್ರಭಾತ, ದೇವರನಾಮಗಳು, ರಾಘವೇಂದ್ರಸ್ವಾಮಿಗಳ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಮಧ್ಯಾಹ್ನ ಹಸ್ತೋದಕ, ತೀರ್ಥಪ್ರಸಾದ, ರಥೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಮಂತ್ರಾಲಯದಲ್ಲಿ ನಡೆಯುತ್ತಿರುವ ರಾಯರ ಆರಾಧನೆ ನಿಮಿತ್ತ ರಾಯಚೂರು ಮತ್ತು ಬೆಂಗಳೂರಿನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಂದಿನಂತೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ.
ಮಂತ್ರಾಲಾಯಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ಕ್ಷೇತ್ರದಲ್ಲಿ ನೂರಾರು ವಸತಿಗೃಹಗಳಿದ್ದರೂ ಎಲ್ಲಾ ಭಕ್ತರಿಂದ ತುಂಬಿದೆ. ಯಾತ್ರಾರ್ಥಿಗಳಿಗೆ ಮಠದ ಹಾಲ್, ಭೋಜನಶಾಲೆ ಮುಂತಾದ ಕಡೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಕರ್ನೂಲ್ ಜಿಲ್ಲಾಡಳಿತ ಮಂತ್ರಾಲಯದಲ್ಲಿ ಸೂಕ್ತ ಬಂದೋಬಸ್ತ್ ಮಾಡಿದೆ.
ಪ್ರತಿ ಆರಾಧನೆಯಂದು ನೀಡುವ ಪ್ರತಿಷ್ಠಿತ ಗುರು ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಈ ಬಾರಿ ಬೆಂಗಳೂರಿನ ಪಿ ಪಿ ಲಕ್ಷ್ಮೀನಾರಾಯಣ ಅವರಿಗೆ ಮರಣೋತ್ತರವಾಗಿ ನೀಡಲಾಗಿದೆ. ಹಾಗೆಯೇ ಬೆಂಗಳೂರಿನವರೇ ಆದ ಇವರ ಸಹೋದರ ಸುಧೀಂದ್ರ ವಾಮನ ಅವರಿಗೂ ಈ ಪ್ರಶಸ್ತಿ ಜಂಟಿಯಾಗಿ ಒಲಿದಿದೆ.