ಮುದ್ದುಕೃಷ್ಣನ ಲೀಲೆಯ ನೋಡಬನ್ನಿ ಉಡುಪಿಗೆ
ಉಂಡೆ, ಚಕ್ಕುಲಿ ಸಹಿತ ಬಗೆಬಗೆಯ ಸಿಹಿತಿಂಡಿಗಳನ್ನು ಉಡುಪಿ ಪರ್ಯಾಯ ಪೀಠದ ಮಠದಲ್ಲಿ ತಯಾರಾಗಿವೆ. ಮೊಸರು ಕುಡಿಕೆ ಉತ್ಸವ ಎಂದೇ ಖ್ಯಾತಿವೆತ್ತಿರುವ ದ್ವಾದಶಿಯ ವಿಟ್ಲಪಿಂಡಿಗೆ ಭರದ ಸಿದ್ಧತೆಗಳು ನಡೆದಿವೆ. ಅಷ್ಟಮಠದ ರಥಬೀದಿಯಲ್ಲಿ ನಡೆಯುವ ಮೊಸರು ಕುಡಿಕೆ ಉತ್ಸವಕ್ಕೆ ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ. ಮೊಸರು ಕುಡಿಕೆ ಒಡೆಯುವ ಕಲಿಗಳು ಬಹುಮಾನವಾಗಿ ನಗದು ಪಡೆಯುತ್ತಾರೆ.
ಮೊಸರು ಕುಡಿಕೆ ಉತ್ಸವದ ಮತ್ತೊಂದು ವಿಶೇಷವೆಂದರೆ ಹುಲಿವೇಷಗಳು. ನೂರಾರು ಹುಲಿವೇಷದ ತಂಡಗಳು ಉಡುಪಿಗೆ ಆಗಮಿಸಲಿವೆ. ತಾಸೆಯ ವಾದನಕ್ಕೆ ಹೆಜ್ಜೆಹಾಕಿ ಕುಣಿಯುವ ಹುಲಿಗಳ ಬಿಂಕವನ್ನು ನೋಡುವುದೇ ಸೊಗಸು. ಕುಣಿತದೊಂದಿಗೆ ಅವು ನಡೆಸುವ ವಿವಿಧ ಕಸರತ್ತುಗಳು ಚಿತ್ತಾಕರ್ಷಕವಾಗಿರುತ್ತವೆ. ಈ ಹುಲಿಗಳಿಗೆ ಪರ್ಯಾಯ ಪೀಠಾಧೀಶರು ನೋಟುಗಳ ಮಾಲೆ ಹಾಕಿ ಗೌರವಿಸುತ್ತಾರೆ.
ಉಡುಪಿಯಿಂದ ಹೊರಗೆ ಬಂದರೆ ಕರಾವಳಿ ಜಿಲ್ಲೆಗಳಲ್ಲಿ ಮೊಸರು ಕುಡಿಕೆ ಉತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಸಾರ್ವಜನಿಕ ಸಂಘ ಸಂಸ್ಥೆಗಳು ಮೊಸರು ಕುಡಿಕೆ ಉತ್ಸವವನ್ನು ತಮ್ಮ ಇತಿಮಿತಿಯಲ್ಲಿ ವೈಭವದಿಂದಲೇ ಆಚರಿಸುತ್ತವೆ. ಕೃಷ್ಣವೇಷ ಸ್ಪರ್ಧೆ ಕರಾವಳಿಯ ವಿಶೇಷ. ಮುದ್ದು ಕೃಷ್ಣ, ಬೆಣ್ಣೆ ಕೃಷ್ಣ, ಬಾಲಕೃಷ್ಣ ಹೀಗೆ ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ ವಿಭಾಗಿಸಿ ಸ್ಪರ್ಧೆಗಳಿರುತ್ತವೆ. ಹಾಲುಗೆನ್ನೆಯ ಹಸುಗೂಸುಗಳೂ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ಪುಟಾಣಿಗಳಿಗೆ ಕೃಷ್ಣನ ವೇಷ ಹಾಕಿ ಹೆತ್ತವರು ಸಂತಸಪಡುತ್ತಾರೆ.
ಎತ್ತರವಾದ ಅಡಕೆ ಮರದ ತುದಿಯಲ್ಲಿ ಮೊಸರು ಕುಡಿಕೆ ಕಟ್ಟಿ ಅದರೊಳಗೆ ಹಣ ಹಾಕುತ್ತಾರೆ, ಸಾಹಸಿಗಳು ಮರವನ್ನು ಏರಿ ಕುಡಿಕೆ ಒಡೆದು ಹಣ ತಮ್ಮದಾಗಿಸಿಕೊಳ್ಳಬೇಕು. ಹೀಗೆ ಗೋಪಿಕೃಷ್ಣನ ಆಟ, ಲೀಲೆಗಳನ್ನು ಮರುಮನನ ಮಾಡುವುದಕ್ಕೆ ಕೃಷ್ಣಾಷ್ಟಮಿ ನೆಪ. ಆ ಮೂಲಕ ಈ ಪೀಳಿಗೆಗೆ ಕೃಷ್ಣನ ಲೀಲೆಗಳನ್ನು ಪರಿಚಯಿಸುವ ಅವಕಾಶ.