ವರ್ಷಾವಧಿಯ ಶ್ರಾವಣದ ತೇರು ಯಾವುದೇ ಸಿಂಗಾರ, ಉಲ್ಲಾಸಗಳಿಲ್ಲದೆ ನೀರವ, ನೀರಸ
ಆಷಾಢ ಮಾಸದ ಚಳಿ, ಸೋನೆಮಳೆ ಎಲ್ಲಾ ಕಡಿಮೆಯಾಗಿ, ಶ್ರಾವಣದ ಆಗಮನವಾಗಿದೆ. ಮೈ,ಮನಸ್ಸಿಗೆ ಹಿತವಾದ ಅನುಭವ. ಭೀಮನ ಅಮಾವಾಸ್ಯೆಯಂದು ಅಂಬೆಗಾಲಿಟ್ಟು ಬರುತ್ತಿದ್ದ ದಿನಗಳು ನಾಗರ ಪಂಚಮಿಯ ಹೊತ್ತಿಗೆ ಪುಟಿದು ಬರುತ್ತವೆ.
ಇದರೊಂದಿಗೆ ಶ್ರಾವಣದ ಹಬ್ಬಗಳ ತೇರು ಮೆರವಣಿಗೆ ಹೊರಡುತ್ತದೆ. ಮೊದಲ ಹಬ್ಬವೇ ನಾಗರಪಂಚಮಿ. ಮದುವೆಯಾಗಿ ಗಂಡನ ಮನೆಗೆ ತೆರಳಿದ್ದ ಹೆಣ್ಣುಮಕ್ಕಳು ತವರಿಗೆ ಮರಳಿ ಸಹೋದರರೊಂದಿಗೆ ಹಬ್ಬವನ್ನು ಆಚರಿಸುತ್ತಾರೆ. ಭ್ರಾತೃ ಪ್ರೇಮದ ಸಂಕೇತವಾಗಿ ಈ ಹಬ್ಬ ಮಹತ್ವವನ್ನು ಪಡೆದುಕೊಂಡಿದೆ. ಇದರ ಬೆನ್ನಹಿಂದೆಯೇ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ.
2020: ಶ್ರಾವಣ, ಭಾದ್ರಪದ, ಕಾರ್ತಿಕ ಮಾಸದ ಹಬ್ಬಹರಿದಿನಗಳ ಪಟ್ಟಿ
ನವವಿವಾಹಿತೆಯರಿಗೆ ಶ್ರಾವಣದ ಮೊದಲ ಮಂಗಳವಾರ ವಿಶೇಷವಾದದ್ದು.ಮಂಗಳ ಗೌರಿಯನ್ನು ಮಾಂಗಲ್ಯ ಭಾಗ್ಯಕ್ಕಾಗಿ ಆರಾಧಿಸುತ್ತಾರೆ. ಐದು ಜನ ಮುತೈದೆಯರಿಗೆ ಬಾಗಿನ ನೀಡುತ್ತಾರೆ. ನಂತರದ ಶುಕ್ರವಾರದಂದು ಬರುವ ವರಮಹಾಲಕ್ಷ್ಮಿ ವ್ರತವು ಬೇಡಿದ್ದನ್ನು ನೀಡುವ ಲಕ್ಷ್ಮೀದೇವಿಯ ಆರಾಧನೆ. ಲಕ್ಷ್ಮಿಯು ಸಂಪತ್ತಿಗೆ ಅಧಿದೇವತೆ.
ಕಷ್ಟದಲ್ಲಿದ್ದ ಚಾರುಮತಿಯ ಕನಸಿನಲ್ಲಿ ದೇವಿ ಬಂದು,ತನ್ನನ್ನು ಪೂಜಿಸಿದ್ದಕ್ಕಾಗಿ ಅವಳಿಗೆ ಅಷ್ಟೈಶ್ವರ್ಯವನ್ನು ದಯಪಾಲಿಸಿದಳು ಎಂದು ಪುರಾಣಗಳು ಹೇಳುತ್ತವೆ. ಭಕ್ತಿಯಿಂದ ಪೂಜಿಸಿದವರ ಕಷ್ಟಗಳನ್ನು ನಿವಾರಣೆ ಮಾಡುವ ನಮ್ಮ ಹಬ್ಬಗಳ ಐತಿಹ್ಯವನ್ನೂ ಯಾರೂ ಅಲ್ಲ ಗಳೆಯುವಂತಿಲ್ಲ.
ಕೃಷ್ಣ ಜನ್ಮಾಷ್ಟಮಿಗೆ ಬಗೆ ಬಗೆ ತಿಂಡಿಗಳನ್ನು ಮಾಡಿ ಕೃಷ್ಣನನ್ನು ಆರಾಧಿಸಿದರೆ,ಗಣೇಶ ಚತುರ್ಥಿಯನ್ನು ಜನರೆಲ್ಲರೂ ಒಗ್ಗೂಡಿ ಆಚರಿಸುತ್ತಾರೆ. ಜನರಿಗೆ ಎಷ್ಟೇ ಬಡತನ ಇರಲಿ,ಕಷ್ಟ ಕಾರ್ಪಣ್ಯಗಳಿರಲಿ ನಮ್ಮ ದೇಶದ ಜನ ಹಬ್ಬಗಳ ಆಚರಣೆಗಳನ್ನು ಎಂದೂ ಕೈ ಬಿಟ್ಟವರಲ್ಲ. ಸಾಲ ಮಾಡಿಯಾದರೂ ಹಬ್ಬಗಳನ್ನು ಮಾಡುತ್ತಾರೆ.
'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ 'ಹಾಕಿದ ಹಾಗೆ ಆಗಬಾರದು
ದೂರದ ಊರಿನಲ್ಲಿರುವ ಮಕ್ಕಳೆಲ್ಲರೂ ತವರಿಗೆ ಬಂದು ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುವವರಿಗೆ ಈ ಹಬ್ಬಗಳು ಒಂದು ವರದಾನವೆಂದೇ ಹೇಳಬಹುದು. ಮನೆಗಳ ಮುಚ್ಚಿದ ಬಾಗಿಲುಗಳನ್ನು ತೆರೆಯಲು ಅನುವು ಮಾಡಿಕೊಡುತ್ತದೆ. ಅರಸಿನ ,ಕುಂಕುಮಕ್ಕೆ ಕರೆಯುವುದರ ಮೂಲಕ ಪರಸ್ಪರ ಪರಿಚಯವಾಗುತ್ತದೆ.
ಗಣೇಶೋತ್ಸವ ವನ್ನು ಅಪಾರ್ಟ್ಮೆಂಟ್ ನ ಜನರೆಲ್ಲ ಒಟ್ಟಾಗಿ ಸೇರಿ ಆಚರಿಸುತ್ತಾರೆ. ನಗರಕ್ಕೆ ಹೋದ ನಂತರ ಕಾಡುತ್ತಿದ್ದ ನನ್ನ ಖಿನ್ನತೆಯನ್ನು ದೂರ ಮಾಡಿದ್ದು ಈ ಹಬ್ಬಗಳು. ಈಗ ಮತ್ತೆ ಬಂದಿದೆ ಶ್ರಾವಣ. ಯಾವುದೇ ಸಂಭ್ರಮವಿಲ್ಲ. ಪಟ್ಟೆ ಸೀರೆ,ಒಡವೆಗಳನ್ನು ಧರಿಸಿ,ಬಾಗಿನ ಕೊಡಲು,ಅತ್ತಿತ್ತ ಓಡಾಡುತ್ತಿರುವ ಹೆಣ್ಮಕ್ಕಳ ಕಾಲಂದುಗೆಗಳ ಸಪ್ಪಳವಿಲ್ಲ.
ಜನಜಂಗುಳಿಯಿಂದ ತುಂಬಿರುತ್ತಿದ್ದ ಹೂವು ಹಣ್ಣು, ತರಕಾರಿಗಳ ಮಾರುಕಟ್ಟೆಗಳು ಬಿಕೋ ಎನ್ನುತ್ತಿವೆ. ಒಬ್ಬರ ಮುಖವನ್ನೊಬ್ಬರು ನೋಡದೆ ಎಷ್ಟೋ ದಿನಗಳಾಗಿವೆ. ಎಲ್ಲೆಲ್ಲೂ ಕೊರೊನಾದ ಭಯ, ಆತಂಕ,ರೋಗದ ಭೀಕರತೆಯ ಅರಿವಾಗುತ್ತಿದೆ. ಎಲ್ಲರ ಕೈಯೂ ಬರಿದು, ಹಣವಿದ್ದವರಿಗೂ,ಇಲ್ಲದವರಿಗೂ ಒಂದೇ ಅನುಭವ. ಅವರಿಗೆ ಹಣ ಇಲ್ಲ,ಇವರಿಗೆ ಅವಕಾಶವಿಲ್ಲ.
ಅಕ್ಷರಸ್ಥ, ವೈಜ್ಞಾನಿಕ ಪೀಳಿಗೆಗಳಿಂದ 'ಬೀದಿಗೆ ಬಂದ ಭಗವಂತ'
ದೂರದ ಊರುಗಳಿಂದ ಮಕ್ಕಳೂ ಬರುವಂತಿಲ್ಲ,ಹೆತ್ತವರೂ ಹೋಗುವಂತಿಲ್ಲ.ಯಾವ ಸಂಭ್ರಮಕ್ಕೆ ಹಬ್ಬ.ಮನಸ್ಸಿನಲ್ಲಿ ಖಿನ್ನತೆ,ಸಿಹಿ ತಿನ್ನಲೂ ಆಗುತ್ತಿಲ್ಲ.ಹಬ್ಬಗಳ ನೀರಸ ಆಚರಣೆಯ ದಿನಗಳು ಬರಬಹುದೆಂಬ ಕಲ್ಪನೆಯನ್ನೂ ಮಾಡಿಕೊಳ್ಳಲಾಗದ ದಿನಗಳು ಈಗ ಬಂದುಬಿಟ್ಟಿವೆ. ದೊಡ್ಡ ದೇವಸ್ಥಾನಗಳಲ್ಲೇ ಪೂಜೆಗಳು ನಿಂತು ಹೀಗಿರುವಾಗ ಇನ್ನು ನಮ್ಮದೇನು?
ಒಟ್ಟಿನಲ್ಲಿ ಹಬ್ಬಗಳನ್ನು ಹೊತ್ತ ವರ್ಷಾವಧಿಯ ಶ್ರಾವಣದತೇರು ಯಾವುದೇ ಸಿಂಗಾರ, ವೈಭವ, ಉಲ್ಲಾಸಗಳಿಲ್ಲದೆ, ವಾದ್ಯಘೋಷಗಳಿಲ್ಲದೆ ನೀರವ, ನೀರಸವಾಗಿ ಮುಂದೆ ಸಾಗುತ್ತಿದೆ. ಮುಂದಿನ ವರ್ಷದಲ್ಲಾದರೂ ನವೋಲ್ಲಾಸವನ್ನು ತರಬಹುದುದೆಂದು ಆಶಿಸೋಣವೇ.!