ಪಂಚಲಿಂಗ ಕ್ಷೇತ್ರದ ಉತ್ತರ ಕನ್ನಡದಲ್ಲಿ ಶಿವರಾತ್ರಿಯ ಮಹಾಸಂಭ್ರಮ
ಕಾರವಾರ, ಫೆಬ್ರವರಿ 21: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಪಂಚ ಲಿಂಗದ ಕ್ಷೇತ್ರವಿರುವ ಉತ್ತರ ಕನ್ನಡ ಜಿಲ್ಲೆಯ ಶಿವನ ದೇವಾಲಯಗಳಲ್ಲಿ ಬೆಳಗ್ಗಿನಿಂದಲೇ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿದ್ದು, ಲಕ್ಷಾಂತರ ಜನರು ಶಿವನ ದರ್ಶನ ಪಡೆಯುತ್ತಿದ್ದಾರೆ.
ಆತ್ಮಲಿಂಗಗಳನ್ನು ಹೊಂದಿರುವ ಭಟ್ಕಳದ ಮುರುಡೇಶ್ವರ, ಹೊನ್ನಾವರದ ಗುಣವಂತೆಯ ಶಂಭುಲಿಂಗೇಶ್ವರ, ಗೋಕರ್ಣದ ಮಹಾಬಲೇಶ್ವರ, ಕುಮಟಾದ ಧಾರೇಶ್ವರ ಹಾಗೂ ಕಾರವಾರ ಶೇಜವಾಡದ ಶೆಜ್ಜೇಶ್ವರ ದೇಗುಲಗಳಲ್ಲಿ ಶಿವರಾತ್ರಿಯ ವಿಶೇಷ ಪೂಜೆಗಳು ನಡೆಯುತ್ತಿವೆ. ಬೆಳಿಗ್ಗೆ 4 ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಲಕ್ಷಾಂತರ ಭಕ್ತರು ಸರದಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ.
ರಾಮೇನಹಳ್ಳಿಯಲ್ಲಿ ಶಿವರಾತ್ರಿ ಮರುದಿನ ನಡೆಯುತ್ತದೆ ಅದ್ಧೂರಿ ರಥೋತ್ಸವ
ಆತ್ಮಲಿಂಗದ ದರ್ಶನಕ್ಕೆ ಬಂದ ಜನಸಾಗರ
ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರನ ದರ್ಶನಕ್ಕಾಗಿ ಜನಸಾಗರವೇ ಹರಿದುಬರುತ್ತಿದೆ. ಗೋಕರ್ಣ ಶಿವನ ಆತ್ಮಲಿಂಗ ಇರುವ ಪವಿತ್ರ ಸ್ಥಳ ಆಗಿರುವ ಹಿನ್ನಲೆ ಶಿವರಾತ್ರಿಯ ದಿನ ಆತ್ಮಲಿಂಗವನ್ನು ಮುಟ್ಟಿದರೆ ಕಷ್ಟಗಳು ಬಗೆಹರಿದು ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಕೇವಲ ರಾಜ್ಯದಿಂದ ಮಾತ್ರವಲ್ಲದೇ ನಾನಾ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆತ್ಮಲಿಂಗದ ದರ್ಶನಕ್ಕಾಗಿ ಆಗಮಿಸಿದ್ದಾರೆ.
ದೇವಸ್ಥಾನದ ಆವರಣದಲ್ಲಿ ಬಿಗಿ ಬಂದೋಬಸ್ತ್
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ಹಿನ್ನೆಲೆಯಲ್ಲಿ ಕಿಲೋ ಮೀಟರ್ಗಟ್ಟಲೆ ಸಾಲು ನಿಂತಿದ್ದು, ಬೆಳಿಗ್ಗೆ 2.30ರಿಂದಲೇ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಕ್ತರು ಆತ್ಮಲಿಂಗಕ್ಕೆ ಹಾಲು, ಬಿಲ್ವಪತ್ರೆ, ನೀರು ಹಾಕಿ ಪೂಜಾ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ದೇವಸ್ಥಾನದ ಆವರಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ದೇವಸ್ಥಾನದ ಆಡಳಿತ ಮಂಡಳಿಯವರು ಕ್ರಮ ಕೈಗೊಂಡಿದ್ದಾರೆ. ಇಂದು ರಾತ್ರಿಯವರೆಗೆ ಸಹಸ್ರಾರು ಭಕ್ತರು ಆತ್ಮಲಿಂಗ ದರ್ಶನವನ್ನು ಪಡೆಯಲಿದ್ದಾರೆ.
ಶಿವರಾತ್ರಿಗೆ ಮೈಸೂರಿನ ತ್ರಿನೇಶ್ವರನಿಗೆ 11 ಕೆ.ಜಿ ಚಿನ್ನದ ಮುಖವಾಡ
ದೇಗುಲಕ್ಕೆ ಕೋರೆ, ಎಸ್.ಪಿ ಭೇಟಿ
ಶಿವರಾತ್ರಿಯ ಈ ವಿಶೇಷ ದಿನದಂದು ಎಲ್ಲೆಡೆಯಿಂದಲೂ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇದೇ ಸಂದರ್ಭ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರು ಕುಟುಂಬ ಸಮೇತರಾಗಿ ಗೋಕರ್ಣದ ದೇವಸ್ಥಾನಕ್ಕೆ ಆಗಮಿಸಿ, ಮಹಾಬಲೇಶ್ವರನ ದರ್ಶನ ಪಡೆದರು.
ಮರಳಿನಲ್ಲಿ ಮೂಡಿದ ಶಿವಲಿಂಗ
ಶಿವರಾತ್ರಿ ನಿಮಿತ್ತ ಗೋಕರ್ಣಕ್ಕೆ ಸಾಕಷ್ಟು ಪ್ರವಾಸಿಗರ ಆಗಮನವಾಗಿದೆ. ಕಡಲ ತೀರಗಳಲ್ಲಿ ಮರಳಿನಲ್ಲೇ ಶಿವಲಿಂಗ ರಚಿಸಿ ಸಂಭ್ರಮಿಸುತ್ತಿದ್ದಾರೆ. ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಮರಳಿನಲ್ಲಿ ಶಿವಲಿಂಗಗಳನ್ನು ರಚಿಸಿ, ಅದಕ್ಕೆ ಹಲವರು ಪೂಜಿಸುತ್ತಿದ್ದಾರೆ. ಸಮುದ್ರ ಸ್ನಾನವನ್ನೂ ಮಾಡಿರುವ ಅನೇಕರು, ಕೋಟಿತೀರ್ಥದಲ್ಲೂ ಸ್ನಾನ ಮಾಡಿ ಕೃತಾರ್ಥರಾದರು.