ಶಿವರಾತ್ರಿಯಲ್ಲಿ 'ರಾತ್ರಿ' ಎಂಬ ಶಬ್ದದ ಪ್ರತೀಕಾರ್ಥ
ಶಿವನೊಂದಿಗೆ 'ರಾತ್ರಿ' ಎಂಬ ಶಬ್ದವು ಸೇರಿದೆ. ಇಲ್ಲಿ ರಾತ್ರಿ ಎಂಬುದು ನಾವು ತಿಳಿದುಕೊಂಡಂತೆ ಪ್ರತಿನಿತ್ಯ ಘಟಿಸುವ ಪ್ರಾಕೃತಿಕ ಪರಿವರ್ತನೆಯಲ್ಲ. ಅಜ್ಞಾನ ಅಂಧಕಾರದ ಪ್ರತೀಕಾರ್ಥವಾಗಿ 'ರಾತ್ರಿ' ಎಂಬ ಶಬ್ದವನ್ನು ಸೇರಿಸಲಾಗಿದೆ.
ಇಂದು ಮನುಷ್ಯನು ಪುಸ್ತಕದ ಜ್ಞಾನವನ್ನು ಅರಿತುಕೊಂಡು ಅಹಂಕಾರಿಯಾಗಿದ್ದಾನೆ, ಆದರೆ ತನ್ನನ್ನು ತಾನು ಅರಿತಿಲ್ಲ, ಬದುಕಿನ ಯಥಾರ್ಥ ಜ್ಞಾನವನ್ನು ತಿಳಿದಿಲ್ಲ, ಹಾಗಾಗಿ ಎಷ್ಟೇ ಪಂಡಿತನಾಗಿದ್ದರೂ ಅಜ್ಞಾನಿಯೇ. ಕತ್ತಲಲ್ಲಿ ಯಾವುದೇ ವಸ್ತುವೂ ಕಾಣುವುದಿಲ್ಲ. ಇದೇ ರೀತಿ ಅಜ್ಞಾನದ ಕತ್ತಲೆಯಲ್ಲಿ ಮುಳುಗಿರುವ ಮನುಷ್ಯಾತ್ಮರಿಗೆ ಪರಮಾತ್ಮ ಶಿವನ ಸತ್ಯ ಪರಿಚಯವೂ ಇರುವುದಿಲ್ಲ ಹಾಗೂ ಆತ್ಮ-ಜ್ಞಾನವೂ ಇರುವುದಿಲ್ಲ.[ಶಿವನ ಸತ್ಯ ಪರಿಚಯ, ಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯ]
ಇಂತಹ ಘೋರ ಅಜ್ಞಾನ-ಅಂಧಕಾರದ ಸಮಯದಲ್ಲಿ ಪರಮಾತ್ಮ ಶಿವನು ಈ ಧರೆಗೆ ಅವತರಿಸುತ್ತಾನೆ. ಈಶ್ವರನು ಸರ್ವ ಮನುಷ್ಯಾತ್ಮರಿಗೆ ಸಹಜ ಜ್ಞಾನ ಮತ್ತು ರಾಜಯೋಗವನ್ನು ಕಲಿಸಿ ಮಾನವರನ್ನು ದೇವ ಮಾನವರನ್ನಾಗಿ ಮಾಡುತ್ತಾನೆ. ಈ ದಿವ್ಯ ಕರ್ತವ್ಯದ ಪ್ರತೀಕಾರ್ಥವಾಗಿ ನಾವು ಪ್ರತಿವರ್ಷ ಶಿವರಾತ್ರಿಯನ್ನು ಆಚರಿಸುತ್ತೇವೆ.
ಉಪವಾಸ ಮತ್ತು ಜಾಗರಣೆಗಳ ಅರ್ಥ
ಶಿವರಾತ್ರಿಯಂದು ಭಕ್ತರು ಎರಡು ವಿಶೇಷ ರೀತಿಯ ಆಚರಣೆಗಳನ್ನು ಮಾಡುತ್ತಾರೆ. 1. ಉಪವಾಸ ಮತ್ತು 2. ಜಾಗರಣೆ. ಸಾಮಾನ್ಯವಾಗಿ ಬಹಳಷ್ಟು ಹಬ್ಬಗಳಲ್ಲಿ ಭಕ್ತರು ವಿಶೇಷ ರೀತಿಯ ಭಕ್ಷ್ಯ-ಭೋಜನಗಳನ್ನು ಸವಿದರೆ, ಶಿವರಾತ್ರಿಯಂದು ಮಾತ್ರ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ.
ಉಪವಾಸ ಅಂದ್ರೆ ಹತ್ತಿರದಲ್ಲಿ ನೆಲಸು
ಇಲ್ಲಿ ಉಪವಾಸದ ಅರ್ಥವು ಈ ರೀತಿಯಾಗಿದೆ - ಉಪ ಎಂದರೆ ಹತ್ತಿರ ಎಂದರ್ಥ. ವಾಸ ಎಂದರೆ ನೆಲೆಸು ಎಂದರ್ಥ. ಅಂದರೆ ಹತ್ತಿರದಲ್ಲಿ ವಾಸಿಸು, ನೆಲಸು ಎಂದರ್ಥ. ಹಾಗಾದರೆ ನಾವು ಮಾಡುತ್ತಿರುವ ಉಪವಾಸವೇ ಬೇರೆಯಾಗಿದೆ ಅಲ್ಲವೇ?
ಕೇವಲ ಆಚರಣೆಗಾಗಿ ಉಪವಾಸ
ದೈಹಿಕ ಆರೋಗ್ಯಕ್ಕಾಗಿ ಉಪವಾಸ ಕೈಗೊಳ್ಳುವುದು ಬೇರೆ. ಆದರೆ ಉಪವಾಸದ ಯಥಾರ್ಥ ಅರ್ಥವನ್ನು ಅರಿಯದೇ ಕೇವಲ ಆಚರಣೆಗಾಗಿ ಉಪವಾಸ ಮಾಡುವುದೆಂದರೆ ದೇಹವನ್ನು ದಂಡಿಸಿದಂತೆ. ದೇಹಕ್ಕೆ ಉಪವಾಸ ಹಾಕುವುದರಿಂದ ಮನಸ್ಸು ಆಹಾರದೆಡೆಗೆ ಹರಿದಾಡಬಹುದು. ಹಾಗಾಗಿ ಸದಾ ಮನಸ್ಸು-ಬುದ್ಧಿಯನ್ನು ಪರಮಾತ್ಮ ಶಿವನಲ್ಲಿ ನೆಲೆಸುತ್ತಾ ಸದಾ ಅವನ ನೆನಪಿನಲ್ಲಿರುವುದೇ ನಿಜ ಉಪವಾಸ.
ಜಾಗರಣೆಯು ಆತ್ಮ-ಜಾಗೃತಿಯ ಪ್ರತೀಕ
ಜಾಗರಣೆಯು ಆತ್ಮ-ಜಾಗೃತಿಯ ಪ್ರತೀಕವಾಗಿದೆ. ಆತ್ಮ-ಜಾಗೃತಿಯನ್ನು ಹೊಂದದೇ ತಮ್ಮನ್ನು ತಾವು ಈ ನಶ್ವರ ದೇಹವೆಂದು ತಿಳಿದು ದೇಹಾಂಕಾರಿಗಳಾದಾಗ ಮೃತ್ಯುವಿನ ಭಯ ಸಹಜ. ಇಲ್ಲಿ ಪರಮಾತ್ಮನು ಆತ್ಮ-ಜ್ಞಾನವನ್ನು ನೀಡಿ ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸುತ್ತಾನೆ.
ಆತ್ಮ ಜಾಗೃತಿ ಇಲ್ಲದಿದ್ದರೆ ಉಪಯೋಗವೇನು?
ಭಕ್ತರು ಶಿವಮಂದಿರಗಳಲ್ಲಿ ಅಥವಾ ತಮ್ಮ ಮನೆಗಳಲ್ಲಿ ರಾತ್ರಿಯಲ್ಲಾ ಶಿವ ನಾಮ-ಸ್ಮರಣೆ, ವಿಶೇಷ ಪೂಜೆ-ಸತ್ಕಾರ್ಯಗಳ ಮೂಲಕ ಜಾಗರಣೆ ಮಾಡಬಹುದು, ಆದರೆ ಆತ್ಮ-ಜಾಗೃತಿ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಹೊಂದದೇ ಸ್ಥೂಲ ಆಚರಣೆಗಳನ್ನು ಮಾಡಿದರೆ ಪ್ರಯೋಜನವಿಲ್ಲ.
ದೇಹಕ್ಕೆ ನಿದ್ದೆ ಬೇಕೇ ಬೇಕು
ದೇಹಕ್ಕೆ ನಿದ್ದೆ ಬೇಕೇ ಬೇಕು, ಹಾಗಾಗಿ ಸ್ಥೂಲ ಜಾಗರಣೆಯನ್ನು ಮಾಡದೇ ಆತ್ಮ-ಜಾಗೃತಿಯನ್ನು ಹೊಂದುತ್ತಾ ಶಿವನನ್ನು ನೆನೆದರೆ ಮುಕ್ತಿ-ಜೀವನ್ಮುಕ್ತಿಗಳು ಸಹಜವಾಗಿ ಲಭಿಸುವವು. ನಿದ್ದೆಗೆಟ್ಟು ಜಾಗರಣೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ, ಅಲ್ಲವೆ? (ಕೃಪೆ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ದಾವಣಗೆರೆ.)