ರಾಮೇನಹಳ್ಳಿಯಲ್ಲಿ ಶಿವರಾತ್ರಿ ಮರುದಿನ ನಡೆಯುತ್ತದೆ ಅದ್ಧೂರಿ ರಥೋತ್ಸವ
ಮೈಸೂರು, ಫೆಬ್ರವರಿ 21: ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ರಾಮೇನಹಳ್ಳಿಯ ಬೆಟ್ಟದ ಮೇಲಿನ ಓಂಕಾರೇಶ್ವರಸ್ವಾಮಿ ದೇವಾಲಯ ಶಿವರಾತ್ರಿಗೆ ವಿಶೇಷವಾಗಿ ಅಲಂಕೃತಗೊಂಡಿದೆ. ಶಿವರಾತ್ರಿಗೆ ಇಲ್ಲಿನ ಗ್ರಾಮಸ್ಥರು ಮಾಂಸವನ್ನು ತ್ಯಜಿಸಿ ವಾರಗಳ ಕಾಲ ಶಿವನ ಸ್ಮರಣೆ ಮಾಡುವುದು ಇಲ್ಲಿನ ವಿಶೇಷ.
ಈ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಜಾತ್ರಾ ಮಹೋತ್ಸವ ನಡೆಸಲಾಗುತ್ತಿದ್ದು, ಸುತ್ತಮುತ್ತಲ ಗ್ರಾಮಗಳ ಜನ ಇಲ್ಲಿ ಸೇರಿ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಡುತ್ತಾರೆ. ಹರಕೆ ಹೊತ್ತವರು ಹರಕೆ ತೀರಿಸಿ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಬೇಡಿಕೊಳ್ಳುವುದು ಹಿಂದಿನಿಂದಲೂ ನಡೆದುಬಂದಿದೆ.
ಜಗದೊಡೆಯ ಶಿವಗೆ ನಮನ, ಮಹಾಶಿವರಾತ್ರಿಯ ಮಹತ್ವವೇನು?
ಸುಂದರ ಬೆಟ್ಟದ ಮೇಲೆ ನೆಲೆ ನಿಂತಿರುವ ಓಂಕಾರೇಶ್ವರ ದೇಗುಲಕ್ಕೆ ಹಲವು ಶತಮಾನಗಳ ಇತಿಹಾಸವಿದೆ. ಇದನ್ನು ಚೋಳರ ಕಾಲದಲ್ಲಿ ನಿರ್ಮಿಸಲಾಗಿದ್ದು, ಸುಮಾರು 426 ಎಕರೆ ಪ್ರದೇಶದ ಅತಿ ಎತ್ತರದ ಸಮತಟ್ಟಾದ ಪ್ರದೇಶದಲ್ಲಿ ನೆಲೆ ನಿಂತಿದೆ. ಈ ದೇವಾಲಯಕ್ಕೆ ತೆರಳಲು ಮೆಟ್ಟಿಲನ್ನು ನಿರ್ಮಿಸಲಾಗಿದ್ದು, ಮೆಟ್ಟಿಲನ್ನೇರುತ್ತಾ ದೇವಾಲಯಕ್ಕೆ ತೆರಳುವುದೇ ಒಂದು ಸುಂದರ ಅನುಭವ.
ಪ್ರತಿ ವರ್ಷವೂ ಶಿವರಾತ್ರಿ ಹಬ್ಬದ ಮಾರನೇ ದಿನ ದೇಗುಲವಿರುವ ಬೆಟ್ಟದ ತಪ್ಪಲಿನಲ್ಲಿ ರಥೋತ್ಸವ ನಡೆಯುತ್ತದೆ. ಈ ಸಂದರ್ಭ ಹರಕೆ ಹೊತ್ತವರು ಬಾಯಿ ಬೀಗ ಹಾಕಿಕೊಂಡು ಹರಕೆ ಸಲ್ಲಿಸುತ್ತಾರೆ. ಇದಾದ ಮಾರನೇ ದಿನ ಪಾರಟೋತ್ಸವ ನಡೆಯುತ್ತದೆ. ಈ ದಿನ ಬೆಟ್ಟದ ಕೆಳಗಿನ ದೇವರ ಮಂಟಪಕ್ಕೆ ದೇವಾಲಯದಿಂದ ಉತ್ಸವಮೂರ್ತಿಯನ್ನು ತಂದು ತೊಟ್ಟಿಲಲ್ಲಿರಿಸಿ ತೂಗಲಾಗುತ್ತದೆ. ಅದಾದ ಮಾರನೆಯ ದಿನ ಸಂಜೆ ಲಕ್ಷ್ಮಣತೀರ್ಥ ನದಿಯಲ್ಲಿ ತೆಪ್ಪೋತ್ಸವ ನಡೆಸಲಾಗುತ್ತಿದೆ. ಜಾತ್ರೆಯ ಆರಂಭದ ದಿನದಿಂದ ಒಂದು ವಾರಗಳ ಕಾಲ ರಾಮೇನಹಳ್ಳಿ ಗ್ರಾಮಸ್ಥರು ಮಾಂಸದ ಅಡುಗೆ ಮಾಡದೆ ವೃತ ಆಚರಣೆ ಮಾಡುತ್ತಾರೆ.
ಲಯಕಾರಕ ಈಶನ ಮಹಾಶಿವರಾತ್ರಿ: ಅಣು ಅಣುಗಳಲ್ಲೂ ಶಿವ ಶಿವ
ಮನೆಗಳಿಗೆ ಸುಣ್ಣಬಣ್ಣ ಬಳಿದು ಪ್ರತಿಯೊಬ್ಬರೂ ಹೊಸಬಟ್ಟೆ ಧರಿಸಿ ಹಬ್ಬ ಆಚರಿಸುತ್ತಾರೆ. ಇದೇ ವೇಳೆ ದನಗಳ ಜಾತ್ರೆಯೂ ನಡೆಯುತ್ತದೆ. ಈ ಬಾರಿ ಫೆ.22ರಂದು ಬೆಳಿಗ್ಗೆ 8.45 ರಿಂದ 9.30ರವರೆಗೆ ಓಂಕಾರೇಶ್ವರಸ್ವಾಮಿಯ ರಥೋತ್ಸವ, ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ, ಸಂಜೆ 5ಕ್ಕೆ ರಥವನ್ನು ಸ್ವಸ್ಥಾನಕ್ಕೆ ತರಲಾಗುತ್ತದೆ. ಫೆ. 23ರಂದು ಸಂಜೆ 4 ಗಂಟೆಗೆ ಪಾರಟೋತ್ಸವ ನಡೆದರೆ, ಫೆ.24ರಂದು ಸಂಜೆ 5ಕ್ಕೆ ಲಕ್ಷ್ಮಣತೀರ್ಥ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಜತೆಗೆ ಗ್ರಾಮದಲ್ಲಿ ದೇವರ ಉತ್ಸವವೂ ನೆರವೇರಲಿದೆ. ಕೊನೆಯದಾಗಿ ಫೆ.25ರಂದು ದನಗಳ ಜಾತ್ರೆ ನಡೆದು, ಉತ್ತಮ ರಾಸುಗಳಿಗೆ ಬಹುಮಾನವನ್ನು ವಿತರಿಸಲಾಗುತ್ತದೆ.