ಲಯಕಾರಕ ಈಶನ ಮಹಾಶಿವರಾತ್ರಿ: ಅಣು ಅಣುಗಳಲ್ಲೂ ಶಿವ ಶಿವ
ನಮ್ಮ ಜೀವಿತವನ್ನು ಮೂರು ಭಾಗವಾಗಿ ಸೃಷ್ಟಿ - ಸ್ಥಿತಿ - ಲಯಗಳೆಂಬುದಾಗಿ ವಿಭಾಗಿಸಬಹುದು. ಜನನ - ಮರಣಗಳು ಸೃಷ್ಟಿ - ಲಯಗಳಾದರೆ, ನಡುವಿನ ವಿವಿಧ ಹಂತಗಳ ಜೀವನವೇ ಸ್ಥಿತಿ. ಬ್ರಹ್ಮ ವಿಷ್ಣು ಮಹೇಶ್ವರರೆಂಬ ತ್ರಿಮೂರ್ತಿಗಳು ಕ್ರಮವಾಗಿ ಈ ಮೂರು ಭಾಗಗಳ ಅಧಿಪತಿಗಳು. ಹಾಗಾಗಿಯೇ ಬ್ರಹ್ಮನನ್ನು ಸೃಷ್ಟಿಕರ್ತನೆಂದು, ವಿಷ್ಣುವನ್ನು ಸ್ಥಿತಿಕರ್ತನೆಂದು ಮತ್ತು ಮಹೇಶನನ್ನು ಲಯಕರ್ತನೆಂದು ಕರೆಯುತ್ತೇವೆ. ಅಂಥಹಾ ಲಯಕಾರಕನಾದ ಈಶನಿಗೆ ಅತ್ಯಂತ ಪ್ರಿಯವಾದ ದಿನವೇ ಈ ಮಹಾಶಿವರಾತ್ರಿ.
ರಾಮನವಮಿ, ಕೃಷ್ಣಾಷ್ಟಮಿಗಳಂತೆ ಶಂಕರನು ಅವತಾರಿಸಿದ ದಿನವಲ್ಲ ಈ ಮಹಾಶಿವರಾತ್ರಿ ಬದಲಾಗಿ ಇದು ಕೋಟಿರುದ್ರಸಂಹಿತೆಯ ಅನುಸಾರವಾಗಿ ಬ್ರಹ್ಮ ವಿಷ್ಣುಗಳು ಕೈಲಾಸದಲ್ಲಿ ಶಂಕರನನ್ನು ಪೂಜಿಸಿ, ಆ ಶಂಕರನನ್ನು ಸಂಯುಷ್ಟಿಗೊಳಿಸಿದ ದಿನ. ಆದ್ದರಿಂದಲೇ ಶಂಕರನು ಆ ದಿನವನ್ನು ಶಿವರಾತ್ರಿಯೆಂದು ಕರೆದು ಪ್ರಸಿದ್ಧಿಗೊಳಿಸಿದ. ಈ ದಿನವು ಮಾಡಲ್ಪಟ್ಟ ಪೂಜಾದಿಗಳಿಗೆ ವಿಶೇಷಫಲಗಳನ್ನು ನೀಡುತ್ತೇನೆ ಎಂದು ಅಭಯವಿಟ್ಟ ಪರ್ವದಿನ.
ಜಗದೊಡೆಯ ಶಿವಗೆ ನಮನ, ಮಹಾಶಿವರಾತ್ರಿಯ ಮಹತ್ವವೇನು?
ಪ್ರತಿ ತಿಂಗಳಲ್ಲೂ ಬರುವ ಕೃಷ್ಣಪಕ್ಷದ ಚತುರ್ದಶಿಯು ಶಿವನಿಗೆ ಪ್ರಿಯವಾಗಿದ್ದು ಶಿವರಾತ್ರಿಯೆಂದೂ , ಮಾಘಮಾಸದ ಕೃಷ್ಣಚತುರ್ದಶಿಯು ಮಾತ್ರ ಸರ್ವೋತ್ತಮವಾದ ಮಹಾಶಿವರಾತ್ರಿಯೆಂದು ಶಾಸ್ತ್ರಸಮ್ಮತ.
ರಾತ್ರಿಯ ಸಮಯವೇ ಶಿವಪೂಜೆಗೆ ಅತ್ಯಂತಪ್ರಶಸ್ತ
ಮಾಘಮಾಸಸ್ಯ ಕೃಷ್ಣಾಯಾಂ ಚತುರ್ದಶ್ಯಾಂ ಸುರೇಶ್ವರ | ಅಹಂ ವತ್ಸ್ಯಾಮಿ ಭೂಪೃಷ್ಠೇ ರಾತ್ರೌ ನೈವ ದಿವಾ ಕಲೌ || ಎಂಬ ಶ್ಲೋಕದ ಆಧಾರದಂತೆ ಶಿವರಾತ್ರಿಯಂದು ರಾತ್ರಿಯ ಸಮಯವೇ ಶಿವಪೂಜೆಗೆ ಅತ್ಯಂತಪ್ರಶಸ್ತ. ಹಾಗಾಗಿಯೇ ಮಾಘ ಮಾಸದ ಯಾವ ರಾತ್ರಿಯು ಚತುರ್ದಶಿಯುಕ್ತವಾಗಿರುತ್ತದೆಯೋ ಅಂದೇ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಆ ರಾತ್ರಿಯು ಶಿವನು ಭೂಮಿಯಲ್ಲಿ ಚರಾಚರಗಳಲ್ಲಿ ನೆಲೆಸುತ್ತಾನೆ. ನಮ್ಮ ಪೂರ್ಣಪಾಪಗಳನ್ನು ನಾಶಮಾಡುತ್ತಾನೆ ಎಂದು ಮೇಲಿನ ಶ್ಲೋಕದಿಂದ ತಿಳಿಯುತ್ತದೆ.
"ಅಭಿಷೇಕಪ್ರಿಯಃ ಶಿವಃ" ಎನ್ನುವಂತೆ ಶಿವ ಅಭಿಷೇಕ ಪ್ರಿಯನಾದುದರಿಂದ ಈ ದಿನ ಪೂಜೆಯಲ್ಲಿ ವಿಶೇಷ ಅಭಿಷೇಕಗಳನ್ನು ನೆಡೆಸುವುದು ಉಚಿತವೆನಿಸುತ್ತದೆ. ನಮಕ ಚಮಕ ಪುರುಷಸೂಕ್ತಾದಗಳಿಂದ ಅಭಿಷೇಕ, ಶಿವಸಹಸ್ರನಾಮಾದಿಗಳಿಂದ ಭಸ್ಮಾರ್ಚನೆ ಬಿಲ್ವಾರ್ಚನೆಗಳು ಹರನ ಪೂಜೆಗಳಲ್ಲಿ ಅನಂತಫಲದಾತಕಗಳು.
ಉಪವಾಸ ಮತ್ತು ಜಾಗರಣೆ
ಶಿವರಾತ್ರಿಯ
ಆಚರಣೆಯಲ್ಲಿ
ಪೂಜೆಯನ್ನು
ಬಿಟ್ಟು
ಅತ್ಯಂತ
ಪ್ರಮುಖವಾದ
ಮತ್ತೆರಡು
ಆಚಾರಗಳೆಂದರೆ
ಉಪವಾಸ
ಮತ್ತು
ಜಾಗರಣೆ.
ಉಪವಾಸದಲ್ಲಿ
ಆಯಾ
ಪ್ರದೇಶಗಳ
ಸಂಪ್ರದಾಯಕ್ಕೆ
ಅನುಸಾರವಾಗಿ
ನೈವೇದ್ಯಗಳನ್ನು
ಮಾತ್ರ
ಸ್ವೀಕರಿಸುವುದೂ
ಇದೆ.
"ತಿಥ್ಯಂತೇ
ಪಾರಣಂ
ಭವೇತ್
"
ಅನ್ನುವಂತೆ
ಚತುರ್ದಶಿ
ತಿಥಿಯು
ಕಳೆದ
ನಂತರವೇ
ಆಹಾರ
ಸೇವನೆಯು
ಪೂರ್ಣಪ್ರಮಾಣದ
ಉಪವಾಸವೆನಿಸುತ್ತದೆ.
ನಮ್ಮಲ್ಲಿ
ಜಾಗರಣೆಯೆಂದರೆ
ಕೇವಲ
ನಿದ್ದೆಯನ್ನು
ಬಿಡುವುದು
ಎಂಬ
ಭ್ರಮೆಯಿದೆ.
ಆದರೆ
ಅದು
ಜಾಗರಣೆಯಾಗಲಾರದು.
ರಾತ್ರಿಯಲ್ಲಿ
ಶಿವನಾಮಸ್ಮರಣೆ
ಧ್ಯಾನ
ಪೂಜಾದಿಗಳನ್ನು
ಆಚರಿಸುವುದೇ
ನಿಜವಾದ
ಜಾಗರಣೆ.
ಭಕ್ತರ ಪಾಲಿನ ಭೂ ಕೈಲಾಸ ಶ್ರೀ ಕ್ಷೇತ್ರ ಗೋಕರ್ಣದ ಇತಿಹಾಸ, ಮಹಿಮೆ
ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಪೂಜೆ
ಪೂಜಾದಿಗಳಲ್ಲಿ ವಿಶೇಷವಾಗಿ ನಮಗೆಲ್ಲ ತಿಳಿದಿರುವಂತೆ ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯನ್ನು , ಎಕ್ಕೆ ,ಕಣಿಗಲು,ದತ್ತೂರೀ, ಬೃಹತೀ ಪತ್ರೆಗಳನ್ನು ಬಳಸಬಹುದು. ಶಿವನಿಗೆ ತುಂಬೆಹೂವು ಅತ್ಯಂತ ಪ್ರಿಯ. ಅದರ ಹಿಂದೆ ಒಂದು ಪ್ರಚಲಿತ ಕಥೆಯಿದೆ. ಒಬ್ಬ ಶಿವಭಕ್ತ ಶಿವನನ್ನು ಕುರಿತು ತಪಸ್ಸನ್ನು ಆಚರಿಸುತ್ತಾನೆ. ಭಕ್ತವತ್ಸಲನಾದ ಶಿವ ಪ್ರತ್ಯಕ್ಷನಾಗಿ ಏನು ವರಬೇಕೆಂದಾಗ ನಿನ್ನ ಪಾದ ಸದಾ ನನ್ನ ತಲೆಮೇಲಿರಲಿ ಎಂದು ಬೇಡುವ ಬದಲು ನನ್ನ ಪಾದ ಸದಾ ನಿನ್ನ ತಲೆಮೇಲಿರಲಿ ಎಂದು ತಪ್ಪಾಗಿ ಕೇಳಿಕೊಳ್ಳುತ್ತಾನೆ. ತಥಾಸ್ತು ಎಂದು ವರ ಕರುಣಿಸಿ ಆತನ ಪಾದದ ಆಕಾರವಾಗಿ ತುಂಬೆಯ ಹೂವನ್ನು ಸೃಷ್ಟಿಮಾಡುತ್ತಾನೆ ಭಗವಂತ. ಹೂವಿನ ಆಕಾರದಲ್ಲಿ ಸದಾ ಆ ಭಕ್ತನ ಪಾದ ಶಿವನ ಮೇಲೆ ಇರುವಂತಾಗುತ್ತದೆ. ಹಾಗಾಗಿಯೇ ತುಂಬೆ ಶಿವನಿಗೆ ಪ್ರಿಯವಾದ ಪುಷ್ಪ.
ಅಣು ಅಣುಗಳಲ್ಲಿಯೂ ಶಿವ ಶಿವ!
ಲಿಂಗೇಷು ಚ ಸಮಸ್ತೇಷು ಚಲೇಷು ಸ್ಥಾವರೇಷು ಚ | ಸಂಕ್ರಮಿಷ್ಯಾಮ್ಯಸಂದಿಗ್ಧಂ ವರ್ಷಪಾಪವಿಶುದ್ಧಯೇ || ಎನ್ನುವ ಶ್ಲೋಕದಂತೆ ಶಿವರಾತ್ರಿಯ ದಿನ ಆ ಪರಶಿವನು ಭೂಮಿಯ ಅಣುಅಣುವಿನಲ್ಲಿಯೂ ಪ್ರಕಟಗೊಳ್ಳುತ್ತಾನೆ. ಆ ದಿನ ವಿಶೇಷವಾಗಿ ಶಿವನನ್ನು ಆರಾಧಿಸಿದವರಿಗೆ ಒಂದು ವರ್ಷದ ಪೂಜಾಫಲ ಲಭಿಸುತ್ತದೆ. ಎಲ್ಲ ತೀರ್ಥಗಳಲ್ಲಿಯೂ ಪ್ರಯಾಗತೀರ್ಥವು ತೀರ್ಥರಾಜನೆಂದು ಪ್ರಸಿದ್ಧಿಯಾದಂತೆ, ಎಲ್ಲ ವ್ರತಗಳಲ್ಲಿಯೂ ಶ್ರೇಷ್ಠವಾಗಿರುವುದರಿಂದ ಮಹಾಶಿವರಾತ್ರಿಯು ವ್ರತರಾಜ ಎಂದು ಕರೆಯಲ್ಪಟ್ಟಿದೆ. ಅಂತಹ ಮಹಾಶಿವರಾತ್ರಿಯು ಈ ವರ್ಷ ಸುಯೋಗದಿಂದ ಪರಮೇಶ್ವರನಿಗೆ ಪ್ರಿಯವಾದ ಸೋಮವಾರದಂದು ಬದಿರುವುದು ಮತ್ತೊಂದು ವಿಶೇಷ.
ತ್ರಿಪುರಸಂಹಾರಕನಾದ ಸರ್ವಶಕ್ತಿ ಸಮನ್ವಿತನಾದರೂ ಭಗವಂತ ತನ್ನ ಭಕ್ತರ ಭಕ್ತಿಯ ಪಾಶಕ್ಕೆ ಬಂಧಿಯಾಗುತ್ತಾನೆ. ಮಹರ್ಷಿ ಮಾರ್ಕಂಡೇಯ, ಬೇಡರ ಕಣ್ಣಪ್ಪ ಮುಂತಾದವರ ಜೀವನಗಳೇ ಇದಕ್ಕೆ ಸಾಕ್ಷಿ. ಅಂತಹ ಪರಶಿವನನ್ನು ಭಕ್ತಿಭಾವದಿಂದ ಆರಾಧಿಸಿ ಪಾವನರಾಗೋಣ.
ಮಹಾ ಶಿವರಾತ್ರಿ ಆಚರಣೆಗೆ ಸಜ್ಜಾದ ಮೈಸೂರು, ದೇವಾಲಯಗಳಲ್ಲಿ ವಿಶೇಷ ಪೂಜೆ