ಮಹಾಬಲೇಶ್ವರನಿಗೆ ರಮೇಶ್ ದಂಪತಿಯಿಂದ ಬೆಳ್ಳಿ ರಥ ಕಾಣಿಕೆ
ಜನಸಾಮಾನ್ಯರು ಚಿಕ್ಕ ಆರತಿ ತಟ್ಟೆಯನ್ನು ಖರೀದಿಸಲು ಹಿಂದುಮುಂದು ನೋಡುತ್ತಾರೆ. ಏಕೆಂದರೆ ಮಧ್ಯಮ ವರ್ಗದ ಜನರಲ್ಲಿ ಖರೀದಿ ಶಕ್ತಿ ಹೆಚ್ಚಾದಂತೆಲ್ಲ ಬೆಳ್ಳಿ-ಬಂಗಾರದ ಬೆಲೆ ಗಗನಚುಂಬಿಯಾಗುತ್ತಾ ಸಾಗುತ್ತದೆ. ಇಂದಿನ ಬೆಳ್ಳಿ ಧಾರಣೆಯನ್ನೇ ನೋಡಿ. ಚಿನಿವಾರ ಪೇಟೆಯಲ್ಲಿ ಇಂದು (ಫೆ.22) 1 ಕೆಜಿ ಬೆಳ್ಳಿಯ ಬೆಲೆ 50,000 ರುಪಾಯಿ ಗಡಿಯಲ್ಲಿದೆ. ಅಲ್ಲಿಗೆ 225 ಕೆ.ಜಿ. ಬೆಳ್ಳಿಯ ಬೆಲೆ 1.13 ಕೋಟಿ ರು! ರಮೇಶ್-ಊರ್ಮಿಳಾ ದಂಪತಿ ಸಮರ್ಪಿಸಿರುವ ರಥದ ಅಳತೆ 18.5 ಅಡಿ ಎತ್ತರ ಮತ್ತು 8.5 ಮೀಟರ್ ವ್ಯಾಸವಿದ್ದು, ಒಟ್ಟು 4,500 ಕೆ.ಜಿ. ತೂಗುತ್ತದೆ.
ಸಾಂಪ್ರದಾಯಿಕವಾಗಿ ರಥ ಸಮರ್ಪಣೆ ಪ್ರಕ್ರಿಯೆಯು ಫೆಬ್ರವರಿ 25ರಂದು ಶುಕ್ರವಾರ ಪ್ರಾರಂಭವಾಗಲಿದೆ. ಐದು ದಿನಗಳ ಕಾಲ ಭಕ್ತಿ ಭಾವಗಳೊಂದಿಗೆ ವಿಜೃಭಣೆಯಿಂದ ನಡೆಯುವ ರಥ ಸಮರ್ಪಣೆ ಕಾರ್ಯ ಮಾರ್ಚ್ 2ರಂದು ವೃಷಭ ಲಗ್ನ ಮಹೂರ್ತದಲ್ಲಿ 12.42 ಗಂಟೆಗೆ ಪೂರ್ಣಗೊಳ್ಳಲಿದೆ.
ಆ ನಂತರ ಗೋಕರ್ಣದ ಮಹಾಬಲೇಶ್ವರ ವಿಗ್ರಹವನ್ನು ರಥದಲ್ಲಿ ಮೆರವಣಿಗೆ ಕರೆದೊಯ್ಯಲಾಗುವುದು. ಕೊನೆಗೆ ಸಂಜೆ 5.30 ಕ್ಕೆ ರಥವು ದೇವಾಲಯಕ್ಕೆ ಸಮರ್ಪಣೆಯಾಗಲಿದೆ. ಈ ಮಧ್ಯೆ, ರಥಪೂಜೆ, ರಥಾರೋಹಣ, ರಥಬಲಿ ಮತ್ತು ಮಹಾಮಂಗಳಾರತಿ ನೆರವೇರಲಿದೆ ಎಂದು ಹರಿಕೃಷ್ಣ ವಿವರಿಸಿದ್ದಾರೆ.