ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್ನೆಟ್ಟಿನಲ್ಲಿ ಹಗಲೂ ರಾತ್ರಿ ಮಹಾಶಿವರಾತ್ರಿ

By * ಬಸವಣ್ಣ
|
Google Oneindia Kannada News

Worshipping Shiva on Mahashivratri
ಇಂದು ಮಾರ್ಚ್ 2, ಬುಧವಾರ. ಮಹಾಶಿವರಾತ್ರಿ. ಪ್ರದೋಷ. ನಂಜನಗೂಡು, ಕಪ್ಪಡಿ, ಕುರುವತ್ತಿಯಲ್ಲಿ ಉತ್ಸವ. ವಿಶ್ವದಾದ್ಯಂತ ಎಲ್ಲ ಶಿವಾಲಯಗಳಲ್ಲಿ ಶಿವಭಗವನ್ನಾಮ ಸ್ಮರಣೆ. ಕರ್ನಾಟಕದ ಪ್ರಸಿದ್ಧ ಶಿವಾಲಯಗಳಲ್ಲಂತೂ ಭಕ್ತಸಾಗರ. ಪೂಜೆ, ಪ್ರಸಾದಗಳಲ್ಲಿ ಭಯ, ಭಕ್ತಿ, ಗೌರವದಿಂದ ಮೈಮರೆತ ಜನ. ಎಲ್ಲಿ ನೋಡಿದರೂ ಶಿವದರುಶನಕ್ಕೆ ಮುಗಿ ಬೀಳುತ್ತಿರುವ ಜನಸಾಗರ.

ಶಿವಲಿಂಗಗಳಿಗೆ ಅಹೋರಾತ್ರಿ ಅಭಿಷೇಕ. ಇಂದು ರಾತ್ರಿ ನಾಲಕ್ಕು ಯಾಮದ ಪೂಜೆ. ಅಂದಹಾಗೆ ಇವತ್ತು ಸರಕಾರಿ ರಜಾ ದಿನ. ಬುಧವಾರ ರಾತ್ರಿ ಜಾಗರಣೆ. ಆದ್ದರಿಂದ ನಾಳೆ ಗುರುವಾರ ರಜೆ ಕೊಡಬಹುದಿತ್ತು. ಹೋಗಲಿ ಬಿಡಿ. ನಾಳೆ ಕಚೇರಿಯಲ್ಲಿ ತೂಕಡಿಸಿದರಾಯಿತು.

ಸರ್ವಶಕ್ತನಾದ ಶಿವನನ್ನು ಆರಾಧಿಸುವುದಕ್ಕೆ ಇವತ್ತು ಅತ್ಯಂತ ಪ್ರಶಸ್ತವಾದ ದಿನ. ಹಾಗಾಗಿ ಮನೆಗೆ ಸಮೀಪದ ಶಿವ ದೇವಸ್ಥಾನದಿಂದ ಹಿಡಿದು ದೂರದ ಗೋಕರ್ಣ, ಧರ್ಮಸ್ಥಳ, ಮಲೆ ಮಹದೇಶ್ವರ, ನಂಜನಗೂಡು ನಂಜುಂಡ ಮುಂತಾದ ದೇಗುಳದಲ್ಲಿ ಜನಸಾಗರದಿಂದ ಒಂದು ಭಕ್ತಿ ಪುರಸ್ಸರ ನಮಸ್ಕಾರ. ದೇಗುಳದವರೆಗೆ ಹೋಗಲಾರದವರಿಗೆ ಇಂಟರ್ನೆಟ್ಟೇ ದೇವಸ್ಥಾನ. ಕ್ರಿಕೆಟ್ಟುಗಳ ಟಿಕೆಟ್ಟುಗಳು, ಪೀಜಾಗಳು, ಬ್ಯಾಂಕ್ ಲೋನುಗಳು, ಹೂವು, ಉಡುಗೊರೆಗಳ ಪೊಟ್ಣಗಳು ಇಂಟರ್ನೆಟ್ ಮುಖಾಂತರವಾಗೇ ಮನೆತಲುಪುವ ಈ ದಿನಗಳಲ್ಲಿ ದೇವರೂ ಕೂಡ ಅಂತರ್ಜಾಲದಲ್ಲಿ ಇಣುಕುವುದು, ಅದೂ ಪುಕ್ಕಟೆ ದರ್ಶನ ಕೊಡುವುದು ಈ ಕಾಲದ ಮಹಿಮೆ. ತಾವು ಕೂಡ ಈ ಪುಟದಲ್ಲೇ ಶಿವ ದರುಶನ ಪಡೆದುಕೊಂಡು ಪಾವನರಾಗಬಹುದು.

ಮುಕ್ಕೋಟಿ ದೇವತೆಗಳಿದ್ದರೂ ಹಿಂದೂಗಳಿಗೆ ಶಿವನಲ್ಲಿ ಎಲ್ಲಿಲ್ಲದ ಭಕ್ತಿ. ಶಿವ ಯಾರು? ತಲೆಯಲ್ಲಿ ನಲ್ಲಿ ಇಟ್ಟುಕೊಂಡು, ಕೊರಳಲ್ಲಿ ಹಾವು ಸುತ್ತಿಕೊಂಡು, ಹುಲಿ ಚರ್ಮದಿಂದ ಮಾಡಿದ ಲೆವಿಸ್ ಲುಂಗಿ ತೊಟ್ಟುಕೊಂಡು, ಕಪಾಲ ಹಿಡಿದುಕೊಂಡು ಸ್ಮಶಾನಗಳಲ್ಲಿ ತಿರುಗುವ ಅಲೆಮಾರಿ ಮಾತ್ರವಲ್ಲ. ಆತನೂ ನಮ್ಮ ನಿಮ್ಮಂತೆಯೇ ಕುಟುಂಬದ ಯಜಮಾನ. ನೋಡುವುದಕ್ಕೆ ಆತನಿಗೆ ಇಬ್ಬರು ಹೆಂಡಿರು (ಗಂಗೆ, ಗೌರಿ) ನಾಲ್ವರು ಮುದ್ದು ಮಕ್ಕಳಿದ್ದರೂ (ಮಾನಸ, ಗಣೇಶ, ಷಣ್ಮುಖ ಮತ್ತು ವೀರಭದ್ರ) ಇಡೀ ಬ್ರಹ್ಮಾಂಡವೇ ಅವನ ಸಂಸಾರ. ಆತನ ಕರುಣೆಯಿಲ್ಲದೆ ನಮಗೆ ಐಹಿಕವಾಗಿ, ಪಾರಮಾರ್ಥಿಕವಾಗಿ ಇಲ್ಲೇನೂ ಗಿಟ್ಟುವುದಿಲ್ಲ.

ಶಿವನ ಮಹಿಮೆ ಅಪಾರ. ಎಷ್ಟು ಬಣ್ಣಿಸಿದರೂ ಕಡಿಮೆಯೇ. ಅದ್ವೈತ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವ ಸಮುದಾಯಕ್ಕೆ ಶಿವನೇ ಅಂತಿಮ ನಿಲ್ದಾಣ. ಆದರೆ, ದ್ವೈತ ಸಿದ್ಧಾಂತ ಪ್ರಿಯರಿಗೆ ವಿಷ್ಟುವೇ ಸರ್ವೋತ್ತಮ. ಹಾಗಾಗಿ, ಕಟ್ಟಾ ಸಂಪ್ರದಾಯವಾದಿಗಳಿಗೆ ಶಿವ ದೂರವೇ. ಹಾಗೆಯೆ, ಕೆಲ ದ್ವೈತ ಸಿದ್ಧಾಂತಿಗಳು ಶಿವನೇ ಪ್ರಥಮ ವೈಷ್ಣವ ಎಂದು ನಂಬುವವರೂ ಇದ್ದಾರೆ. ಅವರವರ ಭಾವಕ್ಕೆ ತಕ್ಕಂತೆ. ಆದರೆ, ನಮ್ಮಲ್ಲಿರುವ ಪ್ರತೀತಿ ಪ್ರಕಾರ ದ್ವೈತ ಸಿದ್ಧಾಂತಿಗಳು ಕೂಡ ಇಂದು ಶಿವ ದರುಶನವನ್ನು ಕಡ್ಡಾಯ ಪಡೆಯಲೇಬೇಕು. ಇಲ್ಲದಿದ್ದರೆ ಅವರಿಗೆ ಮುಂದೆ ಕತ್ತೆ ಜನ್ಮ ಬರುತ್ತದೆಂದು ನಂಬಿಕೆ.

English summary
For believers in adwaita siddhanta Lord Shiva is the ultimate destination. Few dwaita followers say Shiva is the first Vaishnava. Whatever be the belief Shiva is worshipped with religious fervor in all parts of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X