ದ್ವಾದಶ ಜ್ಯೋತಿರ್ಲಿಂಗ ದರ್ಶನದಿಂದ ಪುಣ್ಯಪ್ರಾಪ್ತಿ
ಜಗತ್ತಿನಲ್ಲಿ ನಾವು ಗುರುತಿಸಿಕೊಂಡಿದ್ದೇ ನಮ್ಮ ಧರ್ಮಗಳಿಂದ. ಧರ್ಮದಲ್ಲಿ ನಂಬಿಕೆಯಿಲ್ಲದ ಭಾರತೀಯರು ಎಲ್ಲಿಯೂ ಇಲ್ಲ. ಇಷ್ಟು ದಿನ ಹನ್ನೆರಡು ಜ್ಯೋತಿರ್ಲಿಂಗಗಳ ದರ್ಶನ ಪಡೆಯಲು ಇಡೀ ಭಾರತ ಸುತ್ತಬೇಕಿತ್ತು. ಅದಕ್ಕಾಗಿ ತಿಂಗಳುಗಟ್ಟಲೇ ಸಮಯ, ಲಕ್ಷಾಂತರ ರೂ. ಖರ್ಚು ಮಾಡಬೇಕಿತ್ತು. ಆದರೆ ರಾಜ್ಯದ ಎಲ್ಲ ಶಿವಭಕ್ತರಿಗೆ ಈ ಮಹಾಶಿವರಾತ್ರಿಯ ಸಮಯದಲ್ಲಿ ಸಂತಸದ ಸುದ್ದಿ ಏನೆಂದರೆ, ಹುಬ್ಬಳ್ಳಿ ಸಮೀಪವೇ ದ್ವಾದಶ ಜ್ಯೋತಿರ್ಲಿಂಗಗಳು ಇರುವುದು.
ಹೌದು, ಹುಬ್ಬಳ್ಳಿ-ಕಾರವಾರ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಈ ದೇವಸ್ಥಾನ ಇದೆ. ಹುಬ್ಬಳ್ಳಿಯಿಂದ ಕೇವಲ 12 ಕಿ.ಮೀ. ಮಾತ್ರ. ಸಹ್ಯಾದ್ರಿ ಬೆಟ್ಟಗಳ ಸಾಲಿನ ಸುಂದರ ಪ್ರಕೃತಿ ಸೌಂದರ್ಯದಲ್ಲಿ ಇರುವ ದೇವಸ್ಥಾನ ನಿರ್ಮಾಣಗೊಂಡಿದ್ದು ದಶಕದ ಹಿಂದೆ. ಮೂಲ ಜ್ಯೋತಿರ್ಲಿಂಗಗಳ ರೀತಿಯಲ್ಲಿಯೇ ಇಲ್ಲಿ ಜ್ಯೋತಿರ್ಲಿಂಗಗಳು ಸ್ಥಾಪನೆಗೊಂಡಿರುವುದು ವಿಶೇಷ. ಇಡೀ ರಾಜ್ಯಕ್ಕೆ ಒಂದೇ ಆಗಿರುವ ಈ ಹನ್ನೆರಡು ಜ್ಯೋತಿರ್ಲಿಂಗಗಳ ದೇವಸ್ಥಾನಕ್ಕೆ ಮಹಾಶಿವರಾತ್ರಿ ಸಮಯದಲ್ಲಿ ಭೇಟಿ ನೀಡಿದರೆ ಪುಣ್ಯ ಪ್ರಾಪ್ತಿ ಎಂಬ ಪ್ರತೀತಿ.
ಓದಿ : ಗೋಕರ್ಣ ಮಹಾಬಲೇಶ್ವರನಿಗೆ ಬೆಳ್ಳಿರಥ ಕಾಣಿಕೆ
ರಾಜ್ಯದ ಹಲವೆಡೆಯಿಂದ ಈಗಾಗಲೇ ಭಕ್ತರು ಜ್ಯೋತಿರ್ಲಿಂಗಗಳ ದರ್ಶನಕ್ಕೆ ಆಗಮಿಸಲಾರಂಭಿಸಿದ್ದಾರೆ. 80ರ ಆಸುಪಾಸಿನ ನಾಗಮ್ಮ ಕುಬಸದ ಈ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಾಗರಹಾವೊಂದು ಸತತ ಐದು ದಿನಗಳ ಕಾಲ ದೇವಸ್ಥಾನದಲ್ಲಿಯೇ ಬೀಡು ಬಿಟ್ಟಿತ್ತು. ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆ ನೀಡದೇ ಜ್ಯೋತಿರ್ಲಿಂಗಗಳ ಬಳಿಯೇ ಆಡುತ್ತಿತ್ತು. ಇಂತಹ ಪವಾಡಗಳು ಇಲ್ಲಿ ಅನೇಕ ಎನ್ನುತ್ತಾರೆ ನಾಗಮ್ಮನವರು. ಇಲ್ಲಿರುವ ಸಾಕ್ಷಿ ಗಣೇಶನ ದರ್ಶನ ಈ ಶುಭ ಸಂದರ್ಭದಲ್ಲಿ ಮಾಡಿದರೆ ಬಯಸಿದ ಬೇಡಿಕೆ ಈಡೇರುತ್ತದೆ ಎಂಬ ಪ್ರತೀತಿ ಕೂಡ ಇದೆ. ಶಿವರಾತ್ರಿ ಶುಭಸಂದರ್ಭದಲ್ಲಿ ಜ್ಯೋತಿರ್ಲಿಂಗಗಳ ದರ್ಶನ ಪಡೆದವರು ತಮ್ಮ ಕೋರಿಕೆ ಈಡೇರುತ್ತಿರುವುದರಿಂದ ವರ್ಷ ವರ್ಷವೂ ಇಲ್ಲಿಗೆ ಬರುವುದು ಸಾಮಾನ್ಯವಾಗಿದೆ. ಇನ್ನು ವೈದ್ಯರು, ವಿಜ್ಞಾನಿಗಳು, ಉಪನ್ಯಾಸಕರು ಈ ದೇವಸ್ಥಾನದ ನಿರಂತರ ಭಕ್ತರಾಗಿರುವುದರಿಂದ ಶಿವಭಕ್ತಿ ಮೂಢನಂಬಿಕೆ ಅಲ್ಲ ಎಂಬುವುದಕ್ಕೆ ಸಾಕ್ಷಿ.
ಜ್ಯೋತಿರ್ಲಿಂಗಗಳು : ಪುರಾಣ ಕಾಲದಲ್ಲಿ ಶಿವನು ಪ್ರತ್ಯಕ್ಷಗೊಂಡ ಸ್ಥಳಗಳಲ್ಲಿ ಸ್ಥಾಪನೆಗೊಂಡ ಶಿವಲಿಂಗಗಳೇ ಜ್ಯೋತಿರ್ಲಿಂಗಗಳು. ದೇಶದ ಎಲ್ಲೆಡೆ ಹರಡಿಕೊಂಡಿರುವ ಈ ಜ್ಯೋತಿರ್ಲಿಂಗಗಳನ್ನು ಒಂದೆಡೆಯೇ ಮೂಲ ರೂಪದಲ್ಲಿ ಇರುವಂತೆ ನಿರ್ಮಿಸಿರುವ ಇಲ್ಲಿ ದರ್ಶನ ಪಡೆಯುವುದೇ ಒಂದು ಭಾಗ್ಯ ಎನ್ನಬಹುದು.
ಶ್ರೀ ಸೋಮನಾಥ, ಶ್ರೀ ಮಲ್ಲಿಕಾರ್ಜುನ, ಶ್ರೀ ಮಹಾಕಾಲೇಶ್ವರ, ಶ್ರೀ ಮಾಮಲೇಶ್ವರ, ಶ್ರೀ ವೈಜನಾಥ, ಶ್ರೀ ಭೀಮಾಶಂಕರ, ಶ್ರೀ ರಾಮೇಶ್ವರ, ಶ್ರೀ ನಾಗೇಶ್ವರ, ಶ್ರೀ ವಿಶ್ವನಾಥ, ಶ್ರೀ ತ್ರ್ಯಂಬಕೇಶ್ವರ, ಶ್ರೀ ಕೇದಾರನಾಥ, ಶ್ರೀ ಘೃಷ್ಣೇಶ್ವರ - ಇವೇ ಆ 12 ಜ್ಯೋತಿರ್ಲಿಂಗಗಳು.
ದೇವಸ್ಥಾನ ವಿಶೇಷ : ಚಾಲುಕ್ಯರ ಶೈಲಿಯ ಈ ದೇವಸ್ಥಾನವನ್ನು ದಶಕದ ಹಿಂದೆ ಶರಣ ಶಂಕ್ರಪ್ಪ ಕುಬಸದ ಸಮಾಜದ ಸಹಾಯದಿಂದ ನಿರ್ಮಿಸಿದ್ದಾರೆ. ಎಲ್ಲ ಜ್ಯೋರ್ತಿಲಿಂಗಗಳ ದರ್ಶನ ಪಡೆದಿದ್ದ ಇವರು ಸಾಮಾನ್ಯ ಜನರಿಗೆ ಈ ಭಾಗ್ಯ ಲಭಿಸಲಿ ಎಂದು ತಮ್ಮ ತೋಟದಲ್ಲಿ ಪರಿಶ್ರಮದಿಂದ ಈ ದೇವಸ್ಥಾನ ನಿರ್ಮಿಸಿದ್ದಾರೆ. ಸದ್ಯ ಅವರ ಮಗ ಬಸವರಾಜ ಕುಬಸದ (94481 84183) ಈ ದೇವಸ್ಥಾನದ ಟ್ರಸ್ಟ್ನ ಅಧ್ಯಕ್ಷರಾಗಿ ಜ್ಯೋರ್ತಿಲಿಂಗಗಳ ಸೇವೆ ಮಾಡಿ ಸಮಾಜದಲ್ಲಿ ಧಾರ್ಮಿಕತೆ ನೆಲೆಯೂರುವಂತೆ ಮಾಡುತ್ತಿರುವುದು ಇತರರಿಗೆ ಮಾದರಿ.
ಮಹಾಶಿವರಾತ್ರಿಯಂದು ದೇವಸ್ಥಾನದಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತು ವಿಶೇಷ ಪೂಜೆ ನಡೆಯುತ್ತದೆ. ಶಿವನ ಅವತಾರವೆನಿಸಿಕೊಂಡಿರುವ ಈ ಜ್ಯೋರ್ತಿಲಿಂಗಗಳ ದರ್ಶನ ಭಾಗ್ಯ ಈ ಶಿವರಾತ್ರಿ ಶುಭ ಸಂದರ್ಭದಲ್ಲಿ ಪಡೆಯುವುದು ನಿಮ್ಮ ಭಾಗ್ಯದಲ್ಲಿದ್ದರೆ ಮಾತ್ರ ಎನ್ನುವುದು ನೆನಪಿನಲ್ಲಿರಲಿ.