ಸಂಕ್ರಾಂತಿ : ಚನ್ನಪಟ್ಟಣ ಗೊಂಬೆ ಜೊತೆ ಕರಿ ಕಬ್ಬಿಗೂ ಪ್ರಸಿದ್ಧಿ!
ಸಂಕ್ರಾಂತಿ ಹಬ್ಬ ಬಂದರೆ ಸಾಕು ಕಬ್ಬಿಗೆ ಎಲ್ಲಿಲ್ಲದ ಬೇಡಿಕೆ. ರಾಜ್ಯದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬಿಳಿ ಕಬ್ಬು ಬೆಳೆಯುತ್ತದೆ. ಆದರೆ, ಸಂಕ್ರಾಂತಿ ಸಮಯದಲ್ಲಿ ಕರಿ ಕಬ್ಬಿಗೆ ಬೇಡಿಕೆ ಹೆಚ್ಚು.
ಕರಿ ಕಬ್ಬು ಬೆಳೆಯುವ ರೈತರು ಮತ್ತು ಗ್ರಾಮಗಳು ರಾಜ್ಯದಲ್ಲಿ ವಿರಳ. ಆದರೆ, ಇಲ್ಲೊಂದು ಗ್ರಾಮ ಮಾತ್ರ ಕರಿ ಕಬ್ಬು ಗ್ರಾಮ ಎಂದೇ ಹೆಸರುವಾಸಿಯಾಗಿದೆ. ಇದು ರಾಮನಗರ ಜಿಲ್ಲೆಯ ಬೊಂಬೆನಗರಿ ಖ್ಯಾತಿಯ ಚನ್ನಪಟ್ಟಣ ತಾಲೂಕಿನಲ್ಲಿರುವ ಪಟ್ಲು ಗ್ರಾಮ.
ಸೂರ್ಯ ಭಗವಂತ ಪಥ ಬದಲಿಸುವ ಪರ್ವಕಾಲ ಮಕರ ಸಂಕ್ರಾಂತಿ
ಪಟ್ಲು ಗ್ರಾಮದ ರೈತರು ನಂಬಿಕೊಂಡಿರುವುದು ಕರಿ ಕಬ್ಬಿನ ಬೇಸಾಯವನ್ನೇ. ರಾಮನಗರ ಜಿಲ್ಲೆಯಲ್ಲಿಯೇ ಕರಿ ಕಬ್ಬನ್ನು ಬೆಳೆಯುವ ಏಕೈಕ ಗ್ರಾಮ ಎಂಬ ಹಿರಿಮೆಯನ್ನು ಈ ಗ್ರಾಮ ಹೊಂದಿದೆ.
ಪಟ್ಲು ಗ್ರಾಮದ ಕರಿ ಕಬ್ಬಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಅಕ್ಕ-ಪಕ್ಕದ ರಾಜ್ಯಗಳಾದ ಕೇರಳ, ತಮಿಳುನಾಡು, ಗುಜರಾತ್ಗಳಿಗೂ ಇಲ್ಲಿನ ಕಬ್ಬು ರಫ್ತಾಗುತ್ತದೆ.
ಈ ಪುಟ್ಟ ಗ್ರಾಮದ ಬಹುತೇಕ ರೈತರು ಕರಿ ಕಬ್ಬಿನ ವ್ಯವಸಾಯವನ್ನೇ ನೆಚ್ಚಿಕೊಂಡಿದ್ದಾರೆ. ಸುಮಾರು 50-60 ಎಕರೆಗೂ ಹೆಚ್ಚು ಪ್ರದೇಶಗಳಲ್ಲಿ ಈ ಕಬ್ಬನ್ನು ವಾಣಿಜ್ಯ ಬೆಳೆಯಾಗಿ ಗ್ರಾಮಸ್ಥರು ಬೆಳೆಯುತ್ತಿದ್ದಾರೆ.
ಈ ಬಾರಿ ನೀರು ಹಾಗೂ ವಿದ್ಯುತ್ ಅಭಾವದಿಂದ ಬೆಳೆಗೆ ಹೊಡೆತ ಬಿದ್ದಿದ್ದು, ಕಬ್ಬಿನ ಬೆಳವಣಿಗೆ ಹಂತದಲ್ಲಿ ಏರುಪೇರಾಗಿದೆ. ವಿದ್ಯುತ್ ಕೊರತೆಯ ನಡುವೆಯೂ ಈ ಭಾರಿ ಉತ್ತಮ ಮಳೆಯಾಗಿದ್ದರಿಂದ ರೈತರು ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಹುತೇಕರ ಮನೆಯ ಅತಿಥಿಯಾಗುವ ಕರಿ ಕಬ್ಬನ್ನು ಬೆಳೆಯಲು ಸಂತಸವಾಗುತ್ತದೆ. ಈ ಕಬ್ಬನ್ನು ಗ್ರಾಮದಲ್ಲಿ 40-50 ವರ್ಷಗಳಿಂದ ಬೆಳೆಯಲಾಗುತ್ತಿದೆ ಎನ್ನುತ್ತಾರೆ ರೈತರು.
ಸಂಕ್ರಾಂತಿ ಹಬ್ಬದ ವೇಳೆ ಎಳ್ಳು ಬೆಲ್ಲದ ಜೊತೆಗೆ ಕರಿ ಕಬ್ಬಿನ ಒಂದು ತುಂಡನ್ನು ನೀಡುವುದು ಹಾಗೂ ಈ ಹಬ್ಬದ ಸಂದರ್ಭದಲ್ಲಿ ಒಂದು ಗೇಣು ಕರಿ ಕಬ್ಬು ತಿಂದರೆ ನೆಮ್ಮದಿ ಎಂಬ ನಂಬಿಕೆ ಜನರಲ್ಲಿದೆ.
ಒಂದು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲು ಸುಮಾರು 50 ರಿಂದ 60 ಸಾವಿರ ಖರ್ಚಾದರೆ, ರೂ 1.50 ಲಕ್ಷಗಳಿಗೂ ಹೆಚ್ಚು ಲಾಭ ದೊರೆಯುತ್ತದೆ ಎಂಬುದು ಕಬ್ಬು
ರೈತರು ನೀಡುವ ಮಾಹಿತಿ. ಸಂಕ್ರಾಂತಿ ಸಮಯದಲ್ಲಿ ಮಾತ್ರ ಈ ಕಬ್ಬು ಚೆನ್ನಾಗಿ ಬರುತ್ತದೆ. ಹಾಗಾಗಿ ಎಲ್ಲಿಲ್ಲದ ಬೇಡಿಕೆ ಇದೆ.