ಲಾಲ್ ಬಾಗ್ ನಲ್ಲಿ ಗ್ರಾಮೀಣ ಸೊಗಡಿನ ವೈಭವ: ಸಂಕ್ರಾಂತಿ ಸಂಭ್ರಮ
ಬೆಂಗಳೂರು, ಜನವರಿ 12: ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ನಗರ ವಾಸಿಗಳಿಗೆ ಹಳ್ಳಿ ಸೊಗಡಿನ ವೈಭವದ ಜತೆಗೆ ಗ್ರಾಮ ಸಂಸ್ಕೃತಿ ಪರಿಚಯಿಸುವ ಸುಗ್ಗಿ-ಹುಗ್ಗಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸದ್ಯದಲ್ಲೇ ನಡೆಯಲಿರುವ ಸಾವಯವ ಹಾಗೂ ಸಿರಿಧಾನ್ಯಗಳ ಜಾಗತಿಕ ಮೇಳದ ಹಿನ್ನೆಲೆಯಲ್ಲಿ ಸುಗ್ಗಿ-ಹುಗ್ಗಿ ಆಯೋಜಿಸಲಾಗಿದೆ. ಸಿರಿಧಾನ್ಯಗಳ ಬಳಕೆಯನ್ನು ಉತ್ತೇಜಿಸಲು ಸಂಕ್ರಾಂತಿಯ ಸಡಗರದಲ್ಲೇ ಹಳ್ಳಿಯ ದೃಶ್ಯ ವೈಭವವನ್ನು ರಾಜಧಾನಿಗರಿಗೆ ಪರಿಚಯಿಸಲಾಗುತ್ತದೆ.
ಮಕರ ಸಂಕ್ರಾಂತಿ ಪರ್ವಕಾಲ: ಆಚರಣೆ ಏಕೆ? ಹೇಗೆ?
ಜನವರಿ ೧೫ ರಂದು ಸಿರಿಧಾನ್ಯ ಮೇಳ ನಡೆಯುವ ಹಿನ್ನೆಲೆಯಲ್ಲಿ ಜನವರಿ 14 ರಂದು ಸುಗ್ಗಿ-ಹುಗ್ಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದಿನವಿಡೀ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ನಾಗರಿಕರಲ್ಲಿ ಸಿರಿಧಾನ್ಯಗಳ ಕುರಿತು ಜಾಗೃತಿ ಮೂಡಿಸಲು ಕೃಷಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಟೊಂಕ ಕಟ್ಟಿದೆ.
ಪ್ರವಾಸೋದ್ಯಮ ಇಲಾಖೆ ಕೂಡ ಸಾಥ್ ನೀಡುತ್ತಿದೆ. ಸಂಕ್ರಾಂತಿ ಸಂಭ್ರಮದ ಕ್ಷಣಗಳಿಗಾಗಿ ಹಳ್ಳಿಗೆ ತೆರಳುವ ಮಂದಿಗೆ ಈ ಬಾರಿ ಲಾಲ್ ಬಾಗ್ ನಲ್ಲೇ ಆ ಅವಕಾಶ ಸಿಗಲಿದೆ. ಧಾನ್ಯಗಳನ್ನು ಒಪ್ಪ ಓರಣ ಮಾಡಿ ಮನೆಗೆ ಕೊಂಡೊಯ್ಯುವ ಮುನ್ನ ನಡೆಸಲಾಗುವ ರಾಶಿ ಪೂಜೆಯನ್ನು ವಿಶೇಷವಾಗಿ ನಡೆಸಲಾಗುತ್ತದೆ.
ಆಕರ್ಷಣೆಯಾದ ಎತ್ತುಗಳ ಶೃಂಗಾರ ಕಿಚ್ಚು ಹಾಯಿಸಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳು ಗಾಳಿಪಟ ಹಾರಿಸಿ ಎತ್ತಿನ ಬಂಡಿಯಲ್ಲಿ ಸಂಚರಿಸಿ ಆನಂದಿಸಬಹುದಾಗಿದೆ.
ಹತ್ತಾರು ಕಲೆಗಳ ಪ್ರದಶ್ನ: ಸುಗ್ಗಿ-ಹುಗ್ಗಿಯ ಪ್ರಮುಖ ಆಕರ್ಷಣೆಯಾಗಿ ಜಾನಪದ ಕಲಾ ಜಗತ್ತು ಅನಾವರಣಗೊಳ್ಳಲಿದೆ. ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸುವ ಜಾನಪದ ಕಲಾವಿದರು ನಾನಾ ಪ್ರದರ್ಶನ ನೀಡಲಿದ್ದಾರೆ. ಕರುನಾಡಿನ ಪ್ರಮುಖ ಕಲಾಪ್ರಕಾಗಳಲ್ಲಿ ಪ್ರಸಿದ್ಧಿ ಪಡೆದಿರುವವವರು 250 ಕ್ಕೂ ಹೆಚ್ಚು ಮಂದಿ ಪ್ರದರ್ಶನ ನೀಡಲಿದ್ದಾರೆ. ಸುಗ್ಗಿ ಹಾಡು, ಗೀಗೀ ಪದ ಹಾಗೂ ಚೌಡಿಕೆ ಪದಗಳನ್ನು ಹಾಡುವ ಕಲಾವಿದರು ಕೂಡ ಆಗಮಿಸಲಿದ್ದಾರೆ.