Sankranti Special: ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲ ಬೀರುವುದೇಕೆ? ಇಲ್ಲಿದೆ ವೈಜ್ಞಾನಿಕ ಕಾರಣ...
ವರ್ಷದ ಮೊದಲ ಹಬ್ಬ ಎಂದೇ ಕರೆಸಿಕೊಳ್ಳುವ ಸಂಕ್ರಾಂತಿಯನ್ನು ದಕ್ಷಿಣ ಭಾರತದಾದ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತದೆ. ಒಂದೊಂದು ರಾಜ್ಯಗಳಲ್ಲಿ ಒಂದೊಂದು ಸಂಪ್ರದಾಯದಂತೆ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.
ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯನು ತನ್ನ ಪಥ ಬದಲಿಸುವ ಪ್ರಕ್ರಿಯೆಯೇ ಸಂಕ್ರಾಂತಿಯಾಗಿದ್ದು. ಈ ವಿಶೇಷ ಬದಲಾವಣೆಯನ್ನು ಜನವರಿ 14ರಂದು ಹಬ್ಬ ಆಚರಿಸುವ ಮೂಲಕ ಸ್ವಾಗತಿಸಲಾಗುತ್ತದೆ.
Sankranti Special: ಮಕರ ಸಂಕ್ರಾಂತಿ ಹಬ್ಬದ ಮಹತ್ವವೇನು?
ತಮಿಳುನಾಡಿನಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ಕಟಾವು ಮಾಡಿ, ಪೊಂಗಲ್ ತಯಾರಿಸಿ ಹಂಚಿ ಹಬ್ಬ ಎಂದು ಮಾಡಿದರೆ, ಕೇರಳದಲ್ಲಿ ಮಕರ ಸಂಕ್ರಾಂತಿಗೆ ಶಬರಿಮಲೆಯಲ್ಲಿ ಕಾಣುವ ಮಕರ ಜ್ಯೋತಿಗೆ ಪ್ರಾಧಾನ್ಯ. ಗುಜರಾತ್, ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯಂದು ಗಾಳಿ ಪಟ ಹಾರಿಸುತ್ತಾರೆ. ಪಂಜಾಬ್ ಹಾಗೂ ಹರಿಯಾಣದಲ್ಲಿ ಸಂಕ್ರಾಂತಿಯನ್ನು ಲೋಹರಿ ಎಂದು ಆಚರಿಸುತ್ತಾರೆ.
ಕರ್ನಾಟಕದಲ್ಲಿ ಎಳ್ಳು ಬೆಲ್ಲ ಬೀರುವ ಮೂಲಕ ಸಂಕ್ರಾಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ರೈತರು ತಾವು ಬೆಳೆದ ಧಾನ್ಯ, ಕಬ್ಬನ್ನು ಹಬ್ಬದ ದಿನ ನೆರೆಹೊರೆಯವರಿಗೆ ಹಂಚುವುದು ರೂಢಿ. ಜೊತೆಗೆ ಎಳ್ಳು ಬೆಲ್ಲವನ್ನು ಹಂಚುವ ಮೂಲಕ ಸಂತೋಷವನ್ನು ಹಂಚುವ ಪ್ರತೀಕದಂತೆಯೂ ಸಂಕ್ರಾಂತಿಯನ್ನು ಕಾಣುತ್ತಾರೆ.
ಆದರೆ ಎಳ್ಳು ಬೆಲ್ಲವನ್ನೇ ಏಕೆ ಹಂಚುತ್ತಾರೆ? ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇದೆ. ಚಳಿಗಾಲದ ಈ ಶೀತ ವಾತಾವರಣದಲ್ಲಿ ದೇಹದ ಉಷ್ಣತೆಯನ್ನು ಕಾಪಾಡಲು ಎಳ್ಳು ಸಹಕಾರಿ ಎನ್ನಲಾಗಿದೆ. ವಾತಾವರಣ ಬದಲಾಗುವ ಈ ಕಾಲದಲ್ಲಿ ಎಳ್ಳು ದೇಹಕ್ಕೆ ಅಗತ್ಯ ಪೋಷಕಾಂಶವನ್ನು ಒದಗಿಸುತ್ತದೆ ಎಂಬುದು ಇದರ ಹಿಂದಿನ ಕಾರಣ.
ಎಳ್ಳಿನಲ್ಲಿನ ಪ್ರೊಟೀನ್ ಸ್ನಾಯುಗಳನ್ನು ಗಟ್ಟಿಗೊಳಿಸುತ್ತದೆ. ಜೀರ್ಣಕ್ರಿಯೆಗೂ ಸಹಕಾರಿ. ಇದು ವಾತದೋಷ ನಿವಾರಣೆಗೆ ಸಹಾಯ ಮಾಡುತ್ತದೆ.
ಎಳ್ಳಿನ ಜೊತೆಗೆ ನೆಲಗಡಲೆ, ಕೊಬ್ಬರಿ, ಬೆಲ್ಲ, ಸಕ್ಕರೆ ಅಚ್ಚು, ಹುರಿಗಡಲೆಯನ್ನೂ ಸೇರಿಸಿ ಹಂಚುತ್ತಾರೆ. ಕಡಲೆ, ಕೊಬ್ಬರಿಯಲ್ಲಿನ ಎಣ್ಣೆ ಅಂಶ ಚರ್ಮಕ್ಕೆ ಒಳ್ಳೆಯದು ಎನ್ನುವ ಕಾರಣ ಇದರಲ್ಲಿದ್ದು, ಎಣ್ಣೆ ಅಂಶ ಚಳಿಯಿಂದ ಮುರುಟುವ ಚರ್ಮವನ್ನು ಕಾಪಾಡುತ್ತದೆಯಂತೆ. ಬೆಲ್ಲದಲ್ಲಿನ ಆಂಟಿಯಾಕ್ಸಿಡಂಟ್ ಕೂಡ ದೇಹಕ್ಕೆ ಅಗತ್ಯ ಪೋಷಕಾಂಶ ಒದಗಿಸುತ್ತದೆ. ಈ ಮಿಶ್ರಣ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಎನ್ನಲಾಗಿದೆ.
ಹಿರಿಯರ ಆಚರಣೆ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ ಎಂಬುದಕ್ಕೆ ಸಂಕ್ರಾಂತಿಯ ಆಚರಣೆಯೂ ಉದಾಹರಣೆಯಾಗಿದೆ.