ಸಂಕ್ರಾಂತಿ ಸುಗ್ಗಿಯಂದು ಜಗದೊಡೆಯನಿಗೆ ಮಂಗಳಾರತಿ
ಸಂಭ್ರಮದ ಸುಗ್ಗಿಯೊಟ್ಟಿಗೆ ಕಳೆದಿದೆ ಸಂಕ್ರಾಂತಿ ಪರ್ವ. ಜಗದೊಡೆಯ ಸೂರ್ಯ ಪಥ ಬದಲಿಸಿದ್ದಾನೆ. ಮೈಕೊರೆವ ಹವೆಯಲ್ಲಿ, ತನಗೂ ಚಳಿ ಎನ್ನುವಂತೆ ಮುದುಡಿರುತ್ತಿದ್ದ ಸೂರ್ಯ, ಬೆಳಗ್ಗೆ ಬೇಗ ಏಳುವುದಕ್ಕೆ ಶುರುಮಾಡಿದ್ದಾನೆ! ಕಿರಣಗಳು ಪ್ರಖರವಾಗಿವೆ.... ಹೌದು ಪ್ರಕೃತಿ ಮತ್ತೆ ಹುರುಪು ತೊಟ್ಟಿದ್ದಾಳೆ!
ಮಕರ ಸಂಕ್ರಾಂತಿ, ಪೊಂಗಲ್ ಬಿಹು, ಲೊಹ್ರಿ ಇತ್ಯಾದಿ ತರಹೇವಾರಿ ಹೆಸರುಗಳಿಂದ ಕರೆಸಿಕೊಳ್ಳುವ ಸಂಕ್ರಾಂತಿ ಹೊತ್ತು ತರುವ ಸಂಭ್ರಮ ಮಾತ್ರ ಒಂದೇ. ಜ.14 ಮತ್ತು 15 ಎರಡು ದಿನ ಹಲವೆಡೆಗಳಲ್ಲಿ ಸಂಕ್ರಾಂತಿಯನ್ನು ವಿಜೃಂಬಣೆಯಿಂದ ಆಚರಿಸಲಾಯ್ತು. ಕೆಲವೆಡೆ 14 ರಂದೇ ಹಬ್ಬ ಮುಗಿದಿದ್ದರೆ, ಮತ್ತಷ್ಟು ಕಡೆಗಳಲ್ಲಿ 15 ಕ್ಕೂ ಹಬ್ಬದ ಘಮ ಉಳಿದುಕೊಂಡಿತ್ತು.
ಮಕರ ಸಂಕ್ರಾಂತಿ ಪರ್ವಕಾಲ: ಆಚರಣೆ ಏಕೆ? ಹೇಗೆ?
ಕರ್ನಾಟಕದಾದ್ಯಂತ ಎಳ್ಳು ಬೆಲ್ಲ ಸವಿಯುತ್ತ, ಕಬ್ಬಿನ ಸಿಹಿ ಮೆಲ್ಲುತ್ತ ಹಬ್ಬ ಆಚರಿಸಿದರೆ ಉತ್ತರ ಭಾರತದ ಹಲವೆಡೆ ಸಂಕ್ರಾಂತಿಯ ಸಂಭ್ರಮವನ್ನು ಗಾಳಿಪಟ ಗಗನದೆತ್ತರಕ್ಕೆ ಹಾರಿಸಿತ್ತು! ದೇಶದಾದ್ಯಂತ ನಡೆದ ಸಂಕ್ರಾಂತಿ ಉತ್ಸವದ ಸುಂದರ ಚಿತ್ರಗಳು ನಿಮಗಾಗಿ ಇಲ್ಲಿವೆ.
ಗಂಗಾಸಾಗರದಲ್ಲಿ ಸೂರ್ಯದೇವನಿಗೆ ನಮನ
ಪಶ್ಚಿಮ ಬಂಗಾಳದ ಗಂಗಾ ಸಾಗರದಲ್ಲಿ ಸಂಕ್ರಾಂತಿಯ ಪರ್ವಕಾಲದಂದು ಸ್ನಾನ ಮಾಡುವುದರಿಂದ ಪಾಪವೆಲ್ಲ ನಾಶವಾಗಿ, ಪುಣ್ಯ ಲಭಿಸುತ್ತದೆ ಎಂಬ ಪ್ರತೀತಿ ಇದೆ. ಆದ್ದರಿಂದಲೇ ಸಹಸ್ರಾರು ಜನರು ಈ ಪುಣ್ಯಸಾಗರದಲ್ಲಿ ಮುಳುಗೆದ್ದು ಸಂಕ್ರಾಂತಿ ಆಚರಿಸಿದರು. ಈ ಸಂದರ್ಭದಲ್ಲಿ ಜಗ ದೊಡೆಯ ಸೂರ್ಯದೇವನಿಗೆ ವ್ಯಕ್ತಿಯೊಬ್ಬರು ಆರತಿ ಎತ್ತುತ್ತಿದ್ದ ಚಿತ್ರ ಗಮನಸೆಳೆಯಿತು.
ಅರಮನೆ ನಗರಿಯಲ್ಲಿ ಸಂಕ್ರಾಂತಿ ಸಂಭ್ರಮ
ಕರ್ನಾಟಕದಲ್ಲಿ ಸಂಕ್ರಾಂತಿಯಂದು ಹಸುಗಳಿಗೆ ಪೂಜೆ ಸಲ್ಲಿಸುವ ಪರಿಪಾಠವಿದೆ. ಹೊಲವನ್ನು ಊಳಲು ರೈತನಿಗೆ ಸಹಾಯ ಮಾಡುವ ಎತ್ತುಗಳನ್ನು ಸುಗ್ಗಿ ಹಬ್ಬದಂದು ಶೃಂಗರಿಸಿ, ಪೂಜಿಸಿ ಗೌರವ ಸಲ್ಲಿಸುವ ವಿಶಿಷ್ಠ ಪರಂಪರೆಯನ್ನು ಅರನೆ ನಗರಿ ಮೈಸೂರಿನ ಜನರು ಈಗಲೂ ಪಾಲಿಸುತ್ತಿರುವುದು ಹೆಮ್ಮೆಯ ಸಂಗತಿ. ಭಾರತದ ನಕ್ಷೆಯಂತ ಬಾಸಿಂಗವನ್ನು ತೊಟ್ಟ ಎತ್ತುಗಳು ಮೈಸೂರಿನ ಬೀದಿಗೆ ಕಳೆ ನೀಡಿದ್ದು ಹೀಗೆ!'
ಸ್ವರ್ಣಮಂದಿರದಲ್ಲಿ ಪುಣ್ಯಸ್ನಾನ
ಪಂಜಾಬಿನ ಅಮೃತಸರ ಕಲ್ಯಾಣಿಯಲ್ಲಿ ಭಕ್ತರೊಬ್ಬರು ಪುಣ್ಯಸ್ನಾನ ಮಾಡಿ ಸಂಕ್ರಾಂತಿ ಆಚರಿಸಿದರು. ಸಿಕ್ಖ್ ಸಮುದಾಯವೂ ಈ ಹಬ್ಬವನ್ನು ಶ್ರದ್ಧೆ-ಭಕ್ತಿಯಿಂದ ಆಚರಿಸುತ್ತದೆ.
ಪ್ರಯಾಗದಲ್ಲಿ ಸಾಧುಗಳಿಂದ ಮಾಘಮೇಳ
ಉತ್ತರ ಪ್ರದೇಶದ ಪ್ರಯಾಗ(ಅಲಹಾಬಾದ್)ದ ಸಂಗಮದಲ್ಲಿ ಸಂಕ್ರಾಂತಿ ಪ್ರಯುಕ್ತ ಆಚರಿಸಿದ ಮಾಘ ಮೇಳದಲ್ಲಿ ಸಾಧುಗಳು ಸೂರ್ಯದೇವನನ್ನು ಪೂಜಿಸಿ ಹಬ್ಬ ಆಚರಿಸಿದರು. ಈ ಸುಂದರ ಗಳಿಗೆಗೆ ಸಾವಿರಾರು ಜನ ಸಾಕ್ಷಿಯಾಗಿದ್ದರು.
ಹಟಕೇಶ್ವರ ಯಾತ್ರೆಯಲ್ಲಿ ಜಾನಪದ ಕಲಾ ಪ್ರದರ್ಶನ
ಮಕರಸಂಕ್ರಾಂತಿಯಂದು ಒಡಿಶಾದ ಖುರ್ದಾ ಎಂಬಲ್ಲಿ ಸಂಕ್ರಾಂತಿ ಪ್ರಯುಕ್ತ ನಡೆದ ಹಟಕೇಶ್ವರ ಯಾತ್ರೆಯಲ್ಲ ಹಲವರು ಪಾಲ್ಗೊಂಡು ಸಾಂಪ್ರದಾಯಿಕ ಕಲಾ ಪ್ರದರ್ಶನ ಮಾಡಿದರು. ಈ ಆಚರಣೆಯಲ್ಲಿ ಹುಲಿವೇಶವೂ ಒಂದು ಭಾಗವಾಗಿದ್ದದ್ದು ವಿಶೇಷ.
ಜಾನಪದ ಕ್ರೀಡೆಯ ನೆನಪು
ಕಿಚ್ಚುಹಾಯಿಸುವುದು ಸಂಕ್ರಾಂತಿಯಂದು ಪ್ರಮುಖವಾಗಿ ಕಂಡುಬರುವ ಜಾನಪದ ಕ್ರೀಡೆ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ರೈತರು ತಮ್ಮ ಹಸುಗಳೊಂದಿಗೆ ಕಿಚ್ಚು ಹಾಯುತ್ತಿದ್ದ ಚಿತ್ರ ನೋಡುವುದಕ್ಕೆ ರುದ್ರರಮಣೀಯವಾಗಿರುವುದು ಸತ್ಯ.
ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದ ಕೃಷ್ಣಮಠ
ಮಕರ ಸಂಕ್ರಾಂತಿಯಂದು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆದ ಸಾಂಪ್ರದಾಯಿಕ ಮೂರು ತೇರು ಉತ್ಸವವನ್ನು ಸಹಸ್ರಾರು ಜನರು ಕಣ್ತುಂಬಿಸಿಕೊಂಡರು. ಪ್ರಸಿದ್ಧ ಶ್ರೀಕೃಷ್ಣ ಮಠ ಭಕ್ತರ ಶ್ರದ್ಧೆಯ ಪ್ರಾರ್ಥನೆಯಲ್ಲಿ ಮಿಂದೆದ್ದಿತು.
ಜಾನಪದ ಕಲೆಗೆ ಸಾಕ್ಷಿಯಾದ ಪೊಂಗಲ್
ಮಧ್ಯಪ್ರದೇಶದ ಜಬಲ್ಪುರದಲ್ಲಿ ವಾಸವಿರುವ ತಮಿಳರು, ಪೊಂಗಲ್ ಉತ್ಸವವನ್ನು ಜಾನಪದ ನೃತ್ಯಗಳನ್ನು, ಕ್ರೀಡೆಗಳನ್ನು ಪ್ರದರ್ಶಿಸುವ ಮೂಲಕ ಆಚರಿಸಿದರು. ತಮಿಳರು ಸಂಕ್ರಾಂತಿಯನ್ನು ಪೊಂಗಲ್ ಎಂಬ ಹೆಸರಿನಲ್ಲಿ ಆಚರಿಸುತ್ತಾರೆ.
ಪ್ರಯಾಗದಲ್ಲಿ ಪುನೀತಗೊಳಿಸಿದ ಗಂಗಾಸ್ನಾನ
ಉತ್ತರ ಪ್ರದೇಶದ ಪ್ರಯಾಗ(ಅಲಹಾಬಾದ್)ದಲ್ಲಿ ಸಂಕ್ರಾಂತಿ ಸಮಯದಲ್ಲಿ ನಡೆಯುವ ಮಾಘ ಮೇಳದಲ್ಲಿ ಪವಿತ್ರ ಗಂಗಾನದಿಯಲ್ಲಿ ಮುಳುಗೆದ್ದು ಸಾವಿರಾರು ಭಕ್ತರು ಪುನೀತರಾದ ಕ್ಷಣ.