ಮಕರ ಸಂಕ್ರಾಂತಿ ಹಬ್ಬದ ಹಿಂದಿರುವ ಶ್ರೀಮಂತ ಜನಪದ ಸಂಸ್ಕೃತಿ
ನಭೋಮಂಡಲದಲ್ಲಿ ಪ್ರತಿ ವರ್ಷ ನಿಗದಿತ ದಿನಕ್ಕೆ, ನಿಗದಿತ ಸಮಯಕ್ಕೆ ಸಂಭವಿಸುವ ಅಚ್ಚರಿಯ ಪ್ರತಿಫಲವೇ ಸಂಕ್ರಾಂತಿ. ಸೂರ್ಯ ತನ್ನ ಚಲನ ಮಾರ್ಗವನ್ನು ಉತ್ತರಾಯಣದಿಂದ ದಕ್ಷಿಣಾಯಣಕ್ಕೆ ಬದಲಾಯಿಸುತ್ತಾನೆ. ಈ ಮಹಾಚಲನೆ ಇಡೀ ವಿಶ್ವದ ಪರಿಸರದ ದಿಕ್ಕನ್ನೇ ಪರಿವರ್ತಿಸುತ್ತದೆ. ಈ ಪರಿವರ್ತನೆಯನ್ನೇ ಭಾರತೀಯರು ಸಂಕ್ರಾಂತಿ ಹಬ್ಬವಾಗಿ ಆಚರಿಸುತ್ತ ಬಂದಿರುವುದು.
ಸಂಕ್ರಮಣವು ಕೇವಲ ಭೌಗೋಳಿಕ ಬದಲಾವಣೆಯಾಗಿ ಉಳಿದಿಲ್ಲ. ಅದಕ್ಕೆ ಪೌರಾಣಿಕ, ಐತಿಹಾಸಿಕ, ಜಾನಪದ, ವೈಜ್ಞಾನಿಕ ಹಾಗೂ ಕಲಾತ್ಮಕ ಮುಖಗಳೂ ಸೇರಿಕೊಂಡಿವೆ.
ಸನಾತನ ಧರ್ಮದ ಆರು ವೇದಾಂಗಗಳಲ್ಲಿ ಜ್ಯೋತಿಷ ಪ್ರಾಮುಖ್ಯತೆ ಪಡೆದಿದೆ. ಈ ಶಾಸ್ತ್ರದಂತೆ ಸೂರ್ಯನು ನಿರ್ಯಾಣ ಮಕರರಾಶಿಯನ್ನು ಪ್ರವೇಶಿಸಿದಾಗ 'ಮಕರ ಸಂಕ್ರಾಂತಿ' ಸಂಭವಿಸುತ್ತದೆ. ಗ್ರೆಗೋರಿಯನ್ ಪಂಚಾಂಗದ ಪ್ರಕಾರ ಜನವರಿ 13ರಂದು ರಾತ್ರಿ 12 ಗಂಟೆ 57 ನಿಮಿಷಕ್ಕೆ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ವೇಳೆಗೆ ರಾತ್ರಿಯಾಗಿದ್ದರಿಂದ ಜನವರಿ 14ರಂದು ಮಕರ ಸಂಕ್ರಾತಿ ಆಚರಿಸುವುದು ವಾಡಿಕೆಯಾಗಿದೆ.
ಗೆಲಿಲಿಯೋ ದುರ್ಬೀನು ಕಂಡುಹಿಡಿಯುವ ಮುಂಚೆ, ಉಪಗ್ರಹಗಳು ಭೂಮಿಯ ಆಚೆಗೆ ಹೋಗಿ ಇಣುಕಿ ನೋಡುವ ಸಾವಿರಾರು ವರ್ಷಗಳ ಮುಂಚೆಯೇ ಭಾರತೀಯರು ಸೂರ್ಯನ ಚಲನೆಯ ಬದಲಾವಣೆಯನ್ನು ಹೇಗೆ ಗುರುತಿಸಿದ್ದರು ಎನ್ನುವುದೇ ಅಚ್ಚರಿ.+
ಸಂಕ್ರಾಂತಿ ವಿಶೇಷ: ಮನಕ್ಕೆ ಮುದ ನೀಡುವ ಮಂಡಲ ಕಲೆ ಸುತ್ತಾ
ಇಚ್ಛಾ ಮರಣಿಯಾದ ಭೀಷ್ಮ ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನೇ ಆಯ್ದುಕೊಂಡಿದ್ದರು ಎಂಬ ಉಲ್ಲೇಖ ಮಹಾಭಾರತದಲ್ಲಿ ಬರುತ್ತದೆ. ಅಂದರೆ, ಸಂಕ್ರಮಣದ ಹೆಜ್ಜೆ ಗುರುತುಗಳು ಪೌರಾಣಿಕ ಕಾಲಗರ್ಭದಲ್ಲೂ ಇದ್ದವು ಎಂಬುದು ಸ್ಪಷ್ಟ.
ಖಗೋಳ ತಜ್ಞರ ವಿವರಣೆ
ಪೂರ್ವದಲ್ಲಿ ಸೂರ್ಯೋದಯ, ಪಶ್ಚಿಮದಲ್ಲಿ ಸೂರ್ಯಾಸ್ತ ಎಂಬ ಸಾಮಾನ್ಯ ಕಲ್ಪನೆ ಜನಜನಿತ. ಆದರೆ, ಖಗೋಳ ತಜ್ಞರು ಇದಕ್ಕೆ ಹೊರತಾದ ವಿವರಣೆ ನೀಡುತ್ತಾರೆ. ಸೂರ್ಯೋದಯ, ಸೂರ್ಯಾಸ್ತಗಳು ಕರಾರುವಾಕ್ಕಾಗಿ ಪೂರ್ವ- ಪಶ್ಚಿಮದಲ್ಲಿ ನಡೆಯುವುದು ವರ್ಷದಲ್ಲಿ ಎರಡೇ ದಿನ. ಈ ದಿನಗಳನ್ನು ಈಕ್ವಿನಾಕ್ಸ್ ಎನ್ನುತ್ತಾರೆ. ಉಳಿದ ದಿನಗಳಲ್ಲಿ ಉದಯವು ಪೂರ್ವದ ಬಲಕ್ಕೆ ಅಥವಾ ಎಡಕ್ಕೆ ಆಗುತ್ತದೆ. ಬಲಬದಿಯನ್ನು ಉತ್ತರಾಯಣವೆಂದೂ, ಎಡಬದಿಯನ್ನು ದಕ್ಷಿಣಾಯಣವೆಂದೂ ಪರಿಗಣಿಸಲಾಗಿದೆ.
ಸೂರ್ಯ ದಕ್ಷಿಣ ದಿಕ್ಕಿನತ್ತ ಚಲನೆ ನಿಲ್ಲಿಸಿ ಉತ್ತರಕ್ಕೆ ವಾಲುವುದೇ ಉತ್ತರಾಯಣದ ದಿನ. ಇದು ಚಳಿಗಾಲ ಮುಗಿದು ಬೇಸಿಗೆಯ ಮುನ್ಸೂಚನೆ. ಇನ್ನಾರು ತಿಂಗಳು ಇದೇ ಮಾರ್ಗದಲ್ಲಿ ಸಂಚಾರ ಮಾಡುವ ಸೂರ್ಯದೇವ; ಮತ್ತೆ ಹಳೆ ಮಾರ್ಗಕ್ಕೆ; ಅಂದರೆ ದಕ್ಷಿಣಾಯಣಕ್ಕೆ ವಾಲುತ್ತಾನೆ. ಆಗ ಬೇಸಿಗೆ ಮುಗಿದು ಮತ್ತೆ ಚಳಿಗಾಲ ಆರಂಭವಾಗುತ್ತದೆ.
ಸಂಕ್ರಾಂತಿ ಹಬ್ಬದ ದಾನ ವೈಶಿಷ್ಟ್ಯ, ಪಿತೃ ದೋಷ ನಿವಾರಣೆಯ ದಾರಿ
ಸಂಕ್ರಾಂತಿ ಸಡಗರದ ಹಬ್ಬ
ಹಿಂದೂಗಳ ಪಾಲಿಗೆ ಸಂಕ್ರಾಂತಿ ಸಡಗರದ ಹಬ್ಬ. ಕೌಟುಂಬಿಕ ಭ್ರಾಂತಿಗಳನ್ನು ದೂರ ಮಾಡಿ ನವಕ್ರಾಂತಿ ತರುವ ಕಾಲ. ಈ ಕಾರಣಕ್ಕಾಗಿಯೇ ಹಳ್ಳ- ಕೊಳ್ಳಗಳ ಬಳಿ ಹೋಗಿ ಪುಣ್ಯಸ್ನಾನ ಮಾಡಿಬರುವ ಆಚರಣೆ ಇದೆ. ಸೂರ್ಯನ ಹಾಗೆಯೇ ಬದುಕಿನ ಚಲನೆಗಳು ಬದಲಾಗಲಿ ಎನ್ನುವುದು ಹಬ್ಬದ ಸಂದೇಶ. ತಮಿಳುನಾಡಿನಲ್ಲಿ 'ಪೊಂಗಲ್' ಎಂದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ಭಕ್ತರು 'ಮಕರಮಿಳಕ್ಕು' ಎಂದೂ ಕರೆಯುತ್ತಾರೆ. ಹೀಗೆ, ಸಂಕ್ರಾಂತಿಯ ಧಾರ್ಮಿಕ ಮುಖಗಳೂ ಅನನ್ಯ ಪರಿವರ್ತನೆ ಹೊಂದಿವೆ.
ಸರ್ವರಿಗೂ ಒಳಿತುಂಟು ಮಾಡಲಿ ಈ ಸಂಭ್ರಮದ ಸಂಕ್ರಾಂತಿ
ಜನಪದರು ಮಾಡಿಕೊಂಡು ಬಂದ ರೂಢಿ
'ಎಳ್ಳುಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡೋಣ' ಎಂದು ಹೇಳಿ ಪರಸ್ಪರ ಎಳ್ಳುಬೆಲ್ಲ ಹಂಚುವುದು ಜನಪದರು ಮಾಡಿಕೊಂಡು ಬಂದ ರೂಢಿ. ಹಳ್ಳಿಗಾಡಿನಲ್ಲಿ ಈ ಪದ್ಧತಿ ಇನ್ನಷ್ಟು ಸಾಧ್ಯತೆಗಳನ್ನು ಕಂಡುಕೊಂಡಿದೆ. ಜಗಳವಾಡಿದ ಬಂಧುಗಳು, ಮುನಿಸಿಕೊಂಡ ದಂಪತಿ, ಬೇರೆಯಾದ ಸ್ನೇಹಿತರನ್ನು ಮಾತನಾಡಿಸಲು ಇದೊಂದು ಸುಸಂದರ್ಭ. ಎಳ್ಳುಬೆಲ್ಲ ಕೊಟ್ಟು ಹಳತನ್ನು ಮರೆತುಬಿಡುವ ಸಂಪ್ರದಾಯ ಶ್ರೇಷ್ಠ ಆಚರಣೆಯೇ ಸರಿ. ಎಳ್ಳು- ಬೆಲ್ಲದ ಮಿಶ್ರಣವು ಶೀತ- ವಾತದಿಂದ ಉಂಟಾಗುವ ಜಡ್ಡು, ಆಲಸ್ಯಗಳನ್ನು ದೂರಮಾಡುವ ದ್ರವ್ಯ ಎನ್ನುವುದು ನಂಬಿಕೆ. ಈ ಕಾರಣಕ್ಕಾಗಿಯೇ ಹಬ್ಬದಲ್ಲಿ ಎಳ್ಳು-ಬೆಲ್ಲದ ಮಿಶ್ರಣ ಹಂಚುತ್ತಾರೆ ಎಂಬುದು ಇನ್ನೊಂದು ಹೇಳಿಕೆ.
ಶ್ರೀಮಂತ ಜನಪದ ಸಂಸ್ಕೃತಿ
ಗಂಡುಮಕ್ಕಳು ಗಾಳಿಪಟ ಹಾರಿಸುವುದು, ಹೆಣ್ಣುಮಕ್ಕಳು ರಂಗೋಲಿ ಬಿಡುವುದು, ದೊಡ್ಡವರು ತಮ್ಮ ಸಾಕುಪ್ರಾಣಿಗಳನ್ನು ಕಿಚ್ಚಿನ ಮೇಲೆ ಓಡಿಸುವುದು ಎಲ್ಲವೂ ಜನಪದರ ಸಂಸ್ಕೃತಿ. ಅಂದಹಾಗೆ, ಈ ದಿನ ನಿಮಗೆ ಕೋಲೆ ಬಸವ ನೆನಪಾಗದೇ ಇರಲಾರ. ಎತ್ತಿನ ಬೆನ್ನ ಮೇಲೆ ಗರಿಗರಿ ಬಟ್ಟೆ ಹಾಕಿ, ಕೋಡಂಚುಗಳಿಗೆ ಬಣ್ಣ ಬಳಿದು, ಕಾಲಿಗೆ ಗೆಜ್ಜೆ ಗಟ್ಟಿ, ಕೊರಳಿಗೆ ಗಂಟೆ ಗಟ್ಟೆ, ತುತ್ತೂರಿ ಊದುತ್ತ ಮನೆಮುಂದೆ ಬರುವ ಕೋಲೆಬಸವನನ್ನು ಚಿಕ್ಕವರಿದ್ದಾಗ ನೋಡಿರುತ್ತೇವೆ. ಸಂಕ್ರಾಂತಿ ಬಂದಾಗೆಲ್ಲ ಆ ಕೋಲೆಬಸವ ಶ್ರೀಮಂತ ಜನಪದ ಸಂಸ್ಕೃತಿಯೊಂದನ್ನು ನಮ್ಮ ಸ್ಮೃತಿಪಟಲದ ಮೇಲೆ ಹಾಗೆಯೇ ಮರೆಮಾಚುತ್ತಾನೆ.