ಸುಗ್ಗಿಯ ಸಂಕ್ರಾಂತಿ ಕುರಿತು ನಿಮಗೆ ಗೊತ್ತೆ 8 ಕುತೂಹಲಕಾರಿ ಸಂಗತಿ?!
ಮಕರ ಸಂಕ್ರಾಂತಿಗೆ ಆಗಲೇ ದಿನಗಣನೆ ಶುರುವಾಗಿದೆ. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಸಾಲು ಸಾಲು ಎಳ್ಳು, ಬೆಲ್ಲ, ಮಿಠಾಯಿಯ ಪೊಟ್ಟಣಗಳು ಲಗ್ಗೆ ಇಟ್ಟಿವೆ. ಜಗದ ಪ್ರತಿ ಆಗು ಹೋಗಿಗೂ ಪ್ರತ್ಯಕ್ಷ ಸಾಕ್ಷಿಯಾಗಿರುವ ಸೂರ್ಯ ತನ್ನ ಪಥ ಪದಲಿಸುವ ಈ ಪರ್ವಕಾಲ ಈ ಬಾರಿ ಜನವರಿ 15, 2019 ಮಂಗಳವಾರದಂದು ನಡೆಯಲಿದೆ.
ಧನುರ್ ಮಾಸದಿಂದ ಮಕರ ಮಾಸಕ್ಕೆ ಸೂರ್ಯ ಪಥ ಬದಲಿಸುತ್ತಿದ್ದಂತೆಯೇ ಉತ್ತರಾಯಣ ಅಡಿಯಿಡುತ್ತದೆ. ಉತ್ತರಾಯಣದಲ್ಲಿ ಸಾವು ಸಂಭವಿಸಿದರೆ ಮೋಕ್ಷ ಲಭಿಸುತ್ತದೆ, ಸ್ವರ್ಗಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಾರತೀಯ ಸಂಸ್ಕೃತಿಯಲ್ಲಿದೆ.
ಮಕರ ಸಂಕ್ರಾಂತಿ ಪರ್ವಕಾಲ: ಆಚರಣೆ ಏಕೆ? ಹೇಗೆ?
ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಭೀಷ್ಮಾಚಾರ್ಯರು ಶರಶಯ್ಯೆಯ ಮೇಲೆ ಮಲಗಿ ಕಾಯುತ್ತಿದ್ದುದೂ ಈ ಉತ್ತರಾಯಣದ ಪರ್ವಕಾಲಕ್ಕಾಗಿಯೇ.
ಎಳ್ಳು-ಬೆಲ್ಲ ಹಂಚಿ, ಪರಸ್ಪರ ದ್ವೇಷಾಸೂಯೆ, ಶತ್ರುತ್ವಗಳನ್ನೆಲ್ಲ ಮರೆತು ಸಾಮರಸ್ಯದಿಂದ ಬದುಕುವ ಪ್ರತಿಜ್ಞೆ ಮಾಡುವ ಈ ಸಂಭ್ರಮದ ಹಬ್ಬದ ಹಿಂದೆ ಹಲವು ಆಸಕ್ತಿದಾಯಕ ಸಂಗತಿಗಳಿವೆ. ಅವುಗಳಲ್ಲಿ ಕೆಲವು, ನಿಮಗಾಗಿ ಇಲ್ಲಿವೆ.
ಸಂಕ್ರಾಂತಿ ದಿನ ಎಳ್ಳು-ಬೆಲ್ಲ ಯಾಕೆ ತಿನ್ನಬೇಕು?
ಸೌರಮಾನ ಪದ್ಧತಿಯ ಪ್ರಕಾರ ನಡೆವ ಏಕೈಕ ಹಬ್ಬ
ಸೌರಮಾನ ಮಾಸದ ಪ್ರಕಾರ ಹಿಂದುಗಳೆಲ್ಲರೂ ಆಚರಿಸುವ ಏಕೈಕ ಹಬ್ಬ ಸಂಕ್ರಾಂತಿ. ಸೌರಮಾನ ಯುಗಾದಿಯನ್ನು ಕೆಲವೆಡೆ ಆಚರಿಸಿದರೂ, ಸೌರಮಾನ ಮಾಸದಅನುಗುಣವಾಗಿ ಸಾರ್ವತ್ರಿಕವಾಗಿ ಆಚರಣೆಗೊಳ್ಳುವುದು ಸಂಕ್ರಾಂತಿ ಮಾತ್ರ. ಹಿಂದು ಸಂಪ್ರದಾಯದಲ್ಲಿ ಎಲ್ಲ ಹಬ್ಬಗಳನ್ನೂ ಚಾಂದ್ರಮಾನ ಮಾಸದ ಪ್ರಕಾರವೇ ಮಾಡಲಾಗುತ್ತದೆ. ಆದರೆ ಸಂಕ್ರಾಂತಿ ಮಾತ್ರ ಸೂರ್ಯನ ಹಬ್ಬ.
ಸಂಕ್ರಾಂತಿ ಪ್ರತಿವರ್ಷ ಜ.14 ಕ್ಕೇ ಯಾಕೆ?
ಸಂಕ್ರಾಂತಿ ಹಬ್ಬವನ್ನು ಸೌರಮಾನ ಪದ್ಧತಿಯ ಪ್ರಕಾರವೇ ನಡೆಸುವುದರಿಂದ ಪ್ರತಿ ವರ್ಷ ಇದು ಜ.14 ನೇ ತಾರೀಖಿಗೇ ಬರುತ್ತಿತ್ತು. ಆದರೆ 2015 ರಿಂದೀಚೆಗೆ ಈ ಹಬ್ಬ ಜನವರಿ 15 ರಂದು ಆಚರಣೆಗೊಳ್ಳುತ್ತಿರುವುದು ವಿಶೇಷ. ಈ ವರ್ಷವೂ ಜ.15 ರಂದೇ ನಡೆಯಲಿದೆ.
ಸಾವಿರ ವರ್ಷದ ಹಿಂದೆ ಡಿ.31ಕ್ಕೆ ಮಕರ ಸಂಕ್ರಾಂತಿ!
1000 ವರ್ಷದ ಹಿಂದೆ ಮಕರ ಸಂಕ್ರಾಂತಿ ಹಬ್ಬವನ್ನು ಡಿ.31 ರಂದು ಆಚರಿಸಲಾಗುತ್ತಿತ್ತು. ಭೂಮಿಯ ಚಲನೆಕ್ಕೆ ತಕ್ಕಂತೆ ಈ ದಿನಾಂಕದಲ್ಲಿ ಕ್ರಮೇಣ ಬದಲಾಗುತ್ತ ಆಗುತ್ತ ಇದೀಗ ಜ. 15 ಕ್ಕೆ ಬಂದು ನಿಂತಿದೆ.
ಸುಗ್ಗಿಗಾಗಿ ಸಂಕ್ರಾಂತಿ
ಚಳಿಗಾಲದ ಸಮಯದಲ್ಲಿ ಸುಗ್ಗಿ ಸಂಭ್ರಮವನ್ನು ಆಚರಿಸಲು ಈ ಹಬ್ಬ ಆಚರಿಸಲಾಗುತ್ತದೆ. 'ಅಯನ'ದ ಆರಂಭವನ್ನು ಸೂಚಿಸುವುದಕ್ಕೆ ಹಿಂದು ಮತದಲ್ಲಿ ಸಂಕ್ರಾಂತಿಯನ್ನು ಬಿಟ್ಟರೆ ಬೇರೆ ಹಬ್ಬವಿಲ್ಲ. ಉತ್ತರಾಯಣ ಆರಂಭವನ್ನು ಸಂಕ್ರಾಂತಿ ಸೂಚಿಸುತ್ತದೆ.
ಎಲ್ಲೆಲ್ಲೂ ಸಂಕ್ರಾಂತಿ
ಮಕರ ಸಂಕ್ರಾಂತಿ ಆಚರಣೆಗೆ ರಾಜ್ಯ, ಮತ, ಜಾತಿಯ ಭೇದವಿಲ್ಲ. ಭಾರತದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಅಸ್ಸಾಂ, ಬಿಹಾರ್, ಗುಜರಾತ್, ಮಹಾರಾಷ್ಟ್ರ, ಓರಿಸ್ಸಾ, ಪಂಜಾಬ್, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿಂದಂತೆ ಹಲವು ರಾಜ್ಯಗಳಲ್ಲಿ ಸಂಕ್ರಾಂತಿ ಆಚರಣೆಗೊಳಪಡುತ್ತದೆ. ಆದರೆ ಆಯಾ ರಾಜ್ಯದಲ್ಲಿ ಬೇರೆ ಬೇರೆ ಹೆಸರುಗಳಿಂದ ಈ ಹಬ್ಬ ಕರೆಯಲ್ಪಡುತ್ತದೆ.
ನೇಪಾಳದಲ್ಲೂ ಸಂಕ್ರಾಂತಿ
ಮಕರ ಸಂಕ್ರಾಂತಿಯನ್ನು ಮಾಘ ಮಾಸದ ಆರಂಭದ ದಿನ ನೇಪಾಳದಲ್ಲೂ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಧನುರ್ಮಾಸವಿದ್ದಂತೆ, ನೇಪಾಳದಲ್ಲಿ ಪುಷ್ಯ ಮಾಸದಂದು ಯಾವುದೇ ಮಂಗಳ ಕಾರ್ಯ ಮಾಡುವಂತಿಲ್ಲ. ಆದರೆ ಮಾಘಮಾಸದ ಆರಂಭ ಶುಭ ಮುಹೂರ್ತದ ಆರಂಭವನ್ನೂ ಸೂಚಿಸುವುದರಿಂದ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ಗಾಳಿಪಟಕ್ಕೂ ಸಂಕ್ರಾಂತಿಗೂ ಏನು ಸಂಬಂಧ?
ಸಂಕ್ರಾಂತಿ ಎಂದರೆ ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಗಾಳಿಪಟ ಹಾರಿಸುವ ವಾಡಿಕೆಯಿದೆ. ಇದಕ್ಕೆ ಯಾವುದೇ ಧಾರ್ಮಿಕ ಅರ್ಥವೇನೂ ಇಲ್ಲ. ಆದರೆ ಸಂಕ್ರಾಂತಿಯ ಎಳೆಬಿಸಿಲು ದೇಹದ ಆರೋಗ್ಯಕ್ಕೆ ಬಹಳ ಉತ್ತಮ. ಗಾಳಿಪಟ ಹಾರಿಸುವುದಕ್ಕೆಂದು ಜನರು ಬೆಳ್ಳಂಬೆಳಗ್ಗೆ ಸೂರ್ಯನ ಬಿಸಿಲಿಗೆ ಮೈವೊಡ್ಡುವುದರಿಂದ ವಿಟಾಮಿನ್ ಡಿ ಕೊರತೆ ಕಾಡುವುದಿಲ್ಲ.
ತರಂಗಿಣಿಯಲ್ಲಿ ಸ್ನಾನ
ಉತ್ತರ ಪ್ರದೇಶದಲ್ಲಿ ಮಕರ ಸಂಕ್ರಾಂತಿಯಂದು ಕುಂಭ ಮೇಳ, ಮತ್ತು ಪಶ್ಚಿಮ ಬಂಗಾಳದಲ್ಲಿ ಗಂಗಾಸಾಗರ ಅಥವಾ ಸಾಗರ ದ್ವೀಪ ಮೇಳ ಆರಂಭವಾಗುತ್ತದೆ. ಈ ಸಮಯದಲ್ಲಿ ಪವಿತ್ರ ನದಿಯಲ್ಲಿ ಮುಳುಗುವುದರಿಂದ ಪಾಪಗಳೆಲ್ಲ ನಾಶವಾಗುತ್ತವೆ ಎಂಬ ಪ್ರತೀತಿ ಇರುವುದರಿಂದ, ಸಂಕ್ರಾಂತಿಯಂದು ಹಲವರು ನದಿ ನೀರಿನಲ್ಲಿ ಸ್ನಾನ ಮಾಡುವ ಪರಿಪಾಠ ರೂಢಿಸಿಕೊಂಡಿದ್ದಾರೆ.