ಸುಗ್ಗಿ ಹಿಗ್ಗಿನ ಸಂಕೇತ ಮಕರ ಸಂಕ್ರಾಂತಿ
ಮಕರ ಸಂಕ್ರಮಣದ ಇನ್ನೊಂದು ಮಹತ್ವವೇನೆಂದರೆ, ಇಚ್ಛಾಮರಣದ ವರ ಪಡೆದಿದ್ದ ಭೀಷ್ಮಾಚಾರ್ಯರು, ಕುರುಕ್ಷೇತ್ರದಲ್ಲಿ ಕೌರವ, ಪಾಂಡವರ ಯುದ್ಧಾನಂತರ, ಉತ್ತರಾಯಣದಲ್ಲಿ ಪ್ರಾಣ ಬಿಟ್ಟರೆ ಸ್ವರ್ಗದ ಬಾಗಿಲು ತೆರೆದಿರುತ್ತದೆ, ಸದ್ಗತಿ ದೊರೆಯುತ್ತದೆ ಎಂಬ ನಂಬಿಕೆಯಿಂದ ಶರಶಯ್ಯೆಯಲ್ಲೇ ಮಲಗಿದ್ದರು. ಉತ್ತರಾಯಣ ಆರಂಭವಾದ ಮೇಲೆ ಪ್ರಾಣತ್ಯಾಗ ಮಾಡಿದರು. ಪಿತೃಗಳ ಮುಕ್ತಿಗಾಗಿ ಮಹಾರಾಜ ಭಗೀರಥ ತಪಸ್ಸು ಮಾಡಿ ಗಂಗೆಯನು ಭುವಿಗೆ ಕರೆದು ತಂದ, ಪಿತೃಗಳಿಗೆ ಸಂಕ್ರಮಣದಂದು ಗಂಗಾಜಲ ತರ್ಪಣ ನೀಡಿದನೆಂದು ಗಂಗೆಯಲಿ ಸ್ನಾನ ಮಾಡಿದರೆ ಪುಣ್ಯವೆಂದು ಗಂಗಾತೀರ ನಿವಾಸಿಗಳ ಅಚಲ ನಂಬಿಕೆ.
ದಕ್ಷಿಣಾಯಣದಲಿ ಸೂರ್ಯನ ಪ್ರಖರತೆ, ಶಾಖ ಹಾಗೂ ಹಗಲು ಕಡಿಮೆ, ಚಳಿಯ, ಶೀತ ವಾತಾವರಣ, ರಾತ್ರಿ ಹೆಚ್ಚಾಗಿರುತ್ತದೆ. ಜೀವಲೋಕ ಕುಗ್ಗುವುದು. ಉತ್ತರಾಯಣದಲಿ ಹಗಲು ಹೆಚ್ಚು, ಬೆಚ್ಚನೆಯ ವಾತಾವರಣ, ಸೂರ್ಯನ ಪ್ರಖರತೆ, ಶಾಖ ಹೆಚ್ಚುತ್ತದೆ. ಪ್ರಕೃತಿಯಲಿ ಹೆಚ್ಚು ಲವಲವಿಕೆ ಮೂಡುತ್ತದೆ. ಇದು ಹಿಗ್ಗುವುದರ ಸಂಕೇತ.
ಹಣ್ಣೆಲೆಗಳು ಉದುರಿ, ಮದುಮಗಳಂತೆ ಹಸಿರು ಸೀರೆಯನುಟ್ಟು ಉತ್ತರಾಯಣ ಸ್ವಾಗತಕೆ ಸಜ್ಜಾದ ವನದೇವಿ, ವರುಷದ ದುಡಿಮೆಯ ಫಲದ ಭಾಗ್ಯವನು ಮನೆ ತುಂಬಿಸಿಕೊಂಡು ಸಂತೃಪ್ತಿಯ ನಗೆ ಸೂಸುವ ಕೃಷಿಕ. ಸಂಕ್ರಾಂತಿ ಇಡೀ ಪ್ರಕೃತಿ ಮತ್ತು ಮನುಷ್ಯನ ಬದುಕಿನಲಿ ಮೂಡುವ ಹೊಸ ಪರ್ವಕಾಲ. ಸಂಕ್ರಾಂತಿ ಹೊಸವರುಷದ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿ, ವಸಂತದ ಆಗಮನದ ನಿರೀಕ್ಷೆಯ, ಭರವಸೆಯ, ಹುರುಪನ್ನು ತರುವ ಹಬ್ಬ.