ರಾಜ್ಯೋತ್ಸವ ವಿಶೇಷ: ಮಿನ್ನೆಸೋಟದ ಸಂಗೀತ ಕನ್ನಡ ಕೂಟ
ಅಮೆರಿಕಾದ ಮಿನ್ನೇಸೋಟ ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗರು ಸ್ಥಾಪಿಸಿರುವ 'ಸಂಗೀತ ಕನ್ನಡ ಕೂಟ' ನಡೆದು ಬಂದ ದಾರಿ, ರಾಜ್ಯೋತ್ಸವ, ಹಬ್ಬ ಹರಿದಿನಗಳ ಆಚರಣೆ ಬಗ್ಗೆ ಮಿನ್ನೇಸೋಟದಿಂದ ಪ್ರಶಾಂತ್ ಜೋಶಿ ಅವರು ಬರೆದು ಕಳಿಸಿರುವ ಪರಿಚಯಾತ್ಮಕ ಲೇಖನ ಇಲ್ಲಿದೆ..
ರಾಜ್ಯೋತ್ಸವ ವಿಶೇಷ: ಸ್ವಾಗತಿಸಿ ಕುವೈತ್ ಕನ್ನಡ ಸಂಘ
ವಿಶ್ವದೆಲ್ಲೆಡೆ ಕನ್ನಡದ ಕಂಪನ್ನು ಪಸರಿಸುತ್ತಿರುವ ಕನ್ನಡಿಗರಲ್ಲಿ, ಅಮೇರಿಕನ್ನಡಿಗರ ಪಾತ್ರ ವಿಶಿಷ್ಟವಾದದ್ದು. ಸಿಲಿಕಾನ್ ಸಿಟಿಯಿಂದ ಸಿಲಿಕಾನ್ ಕಣಿವೆಗೆ ಬೆಸೆದಿರುವ ಕೊಂಡಿ ತುಂಬಾ ಗಟ್ಟಿ ಮತ್ತು ಅಷ್ಟೇ ಹಳೆಯದ್ದು.
ರಾಜ್ಯೋತ್ಸವಕ್ಕೆ ಕನ್ನಡದ ಘಮಲಿನ ತಿಂಡಿಗಳ ಗಮ್ಮತ್ತು!
ಅಮೆರಿಕಾದ ಬೃಹತ್ ಭೂಪ್ರದೇಶದ ವಿವಿಧ ಭಾಗದಲ್ಲಿ ಹರಡಿ ನೆಲೆ ನಿಂತಿರುವ ಕನ್ನಡಿಗರು ತಮ್ಮ ಕುಟುಂಬ, ಸ್ನೇಹಿತರ ಬಳಗದ ಜೊತೆಗೆ ಕನ್ನಡ ಸಂಘಗಳನ್ನು ಕಟ್ಟಿ ಬೆಳೆಸುತ್ತಿದ್ದಾರೆ. ಅಂಥ ಕನ್ನಡ ಸಂಘಗಳಲ್ಲಿ, ಮಿನ್ನೇಸೋಟ ರಾಜ್ಯದಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿರುವ 'ಸಂಗೀತ ಕನ್ನಡ ಕೂಟ'ವೂ ಒಂದು.
ವಿಶೇಷ ಕನ್ನಡಿಗ: ಬಿಎಂಟಿಸಿ ನಿರ್ವಾಹಕ ಚಂದ್ರೇಗೌಡ
ನಡೆದು ಬಂದ ದಾರಿ: 1970ರ ದಶಕದಲ್ಲಿ ಕೆಲವು ಸ್ನೇಹಿತರ ನಡುವೆ ಆರಂಭಗೊಂಡ ಸಂಗೀತ ಕನ್ನಡ ಕೂಟ, ಇಂದು 300ಕ್ಕೂ ಹೆಚ್ಚು ಸದಸ್ಯರ ದೊಡ್ಡ ಪರಿವಾರವಾಗಿ ಬೆಳೆದಿದೆ.. ಮುಂದೆ ಓದಿ...
ನಡೆದು ಬಂದ ದಾರಿ
ಸ್ಥಳೀಯ ಸದಸ್ಯರ, ಮಕ್ಕಳ ಪ್ರತಿಭೆಗೆ ವೇದಿಕೆಯನ್ನು ಒದಗಿಸುವದರ ಜೊತೆಗೆ, ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಅಲ್ಲಿನ ಜನಕ್ಕೆ ಪರಿಚಯ ಮಾಡಿಕೊಡುವುದು, ಅದನ್ನು ಕಾಪಿಟ್ಟು ಪೋಷಿಸಿ ಅಲ್ಲಿಯೇ ಹುಟ್ಟಿ ಬೆಳೆದ ತಲೆಮಾರಿನ ಅನಿವಾಸಿ ಭಾರತೀಯ ಹಾಗೂ ಅನಿವಾಸಿ ಕನ್ನಡಿಗರಿಗೆ ಧಾರೆಯೆರೆಯುವ ಕೆಲಸವನ್ನು ಸಂಗೀತ ಕನ್ನಡ ಕೂಟ ಮಾಡುತ್ತಿದೆ.
ಅದಲ್ಲದೆ ಭಾರತ, ಮತ್ತು ಕರ್ನಾಟಕದ ವಿವಿಧೆಡೆ ದೇಣಿಗೆ ಸಂಗ್ರಹಣೆ, ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಸಲಕರಣೆ ಪೂರೈಕೆ, ಇತ್ಯಾದಿ ಸಾಮಾಜಿಕ ಸೇವೆಯನ್ನು ನಡೆಸುತ್ತಿದೆ.
ಪ್ರತಿ ವರ್ಷ, ಸಂಕ್ರಾತಿ ಹಬ್ಬದಂದು ಸದಸ್ಯರನೇಕರು ಸೇರಿ, ಸಾಮಾನು ಸರಂಜಾಮುಗಳ ವ್ಯವಸ್ಥೆ ಮಾಡಿಕೊಂಡು, ಸ್ಥಳೀಯ ದೇವಸ್ಥಾನವೊಂದರಲ್ಲಿ ಅಡುಗೆ ತಯಾರಿಸಿ, ಅದನ್ನು ಅಲ್ಲಿಯೇ ಮಾರಾಟ ಮಾಡಿ, ಬಂದ ನಿಧಿಯನ್ನು ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ ನೀಡಲಾಗುತ್ತದೆ. ಇದು ಕಳೆದ ಕೆಲವು ವರ್ಷಗಳಿಂದ ಒಂದು ಆಚರಣೆಯಂತೆ ನಡೆದುಕೊಂಡು ಬಂದಿದೆ.
ಪ್ರತಿವರ್ಷ ಯುಗಾದಿ ಹಬ್ಬ ವಾರ್ಷಿಕ ವಿಹಾರ
ಪ್ರತಿವರ್ಷ ಯುಗಾದಿ ಹಬ್ಬ, ವಾರ್ಷಿಕ ವಿಹಾರ - ಪಿಕ್ನಿಕ್, ದಸರಾ ಸಂಭ್ರಮ, ಮತ್ತು ದೀಪಾವಳಿ-ರಾಜ್ಯೋತ್ಸವದಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಸಂಗೀತ ಕನ್ನಡ ಕೂಟ ಆಯೋಜಿಸುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ಹಬ್ಬದೂಟ ಈ ಕಾರ್ಯಕ್ರಮಗಳ ಹೈಲೈಟ್. ವಾರ್ಷಿಕ ವಿಹಾರ - ಪಿಕ್ನಿಕ್, ಹೊರಾಂಗಣ ಕ್ರೀಡೆಗಳನ್ನು ಒಳಗೊಂಡಿರುತ್ತದೆ. ಮಕ್ಕಳ ಬೇಸಿಗೆ ರಜೆಗೆ, ಈ ಪಿಕ್ನಿಕ್ ಒಂದು ಮಜವಾದ ಅನುಭವ ನೀಡುತ್ತದೆ.
ಇವಲ್ಲದೇ, ಇದೇ ವರ್ಷದಿಂದ ಮಿನ್ನೇಸೋಟ ಕನ್ನಡಿಗರು, ಕನ್ನಡ ಶಾಲೆಯೊಂದನ್ನು ಆರಂಭಿಸಿ, ಅನಿವಾಸಿ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುತ್ತಿದ್ದಾರೆ.
ನಾಡಿನ ವಿವಿಧ ಕಲಾವಿದರಿಗೆ ವೇದಿಕೆ
ಸ್ಥಳೀಯ ಪ್ರತಿಭೆಗಳಷ್ಟೇ ಅಲ್ಲದೆ, ಕಾಲಕಾಲಕ್ಕೆ ಕರ್ನಾಟಕದ ಕಲಾವಿದರುಗಳನ್ನು ಸಹ ಸಂಗೀತ ಕನ್ನಡ ಕೂಟದ ವೇದಿಕೆಗೆ ಆಹ್ವಾನಿಸಲಾಗುತ್ತದೆ. ಬಿ.ಆರ್.ಛಾಯಾ, ಮಂಜುಳಾ ಗುರುರಾಜ್, ರಿಚರ್ಡ್ ಲೂಯಿಸ್, ಗಣೇಶ್ ದೇಸಾಯಿ, ಪ್ರವೀಣ್ ಗೋಡ್ಖಿಂಡಿ, ಪಲ್ಲವಿ ಅರುಣ್, ಪ್ರೊ.ಕೃಷ್ಣೇಗೌಡ, ಪ್ರಾಣೇಶ್, ಸುಧಾ ಬರಗೂರು, ಡಾ.ಶಮಿತಾ ಮಲ್ನಾಡ್, ರಮೇಶ್ ಅರವಿಂದ್, ಮೈಸೂರು ಆನಂದ್, ಮಿಮಿಕ್ರಿ ದಯಾನಂದ್, ಸುನೀಲ್ ರಾವ್, ಶ್ರೀ ವಿದ್ಯಾಭೂಷಣ, ಎಲ್.ಎನ್.ಶಾಸ್ತ್ರೀ, ಹೀಗೆ ಅನೇಕ ಸಾಧಕರು ಮತ್ತು ಗಣ್ಯರನ್ನು ಈ ವೇದಿಕೆ ಸತ್ಕರಿಸಿದೆ.
ಕರ್ನಾಟಕದ ಶಾಲೆಗಳಲ್ಲಿ ಕನ್ನಡ ಕಡ್ಡಾಯ
ಕರ್ನಾಟಕದ ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಅಧಿಸೂಚನೆ ಹೊರಡಿಸಿರುವ ಕರ್ನಾಟಕ ಸರಕಾರದ ನಿರ್ಧಾರಕ್ಕೆ, ಸಂಗೀತ ಕನ್ನಡ ಕೂಟದ ಮಿನ್ನೇಸೋಟ ಕನ್ನಡಿಗರು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.
ನವೆಂಬರ್ 4 ರಂದು ದೀಪಾವಳಿ - ರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಮಿನ್ನೆಸೋಟ ಕನ್ನಡಿಗರು, ಒಕ್ಕೊರಲಿನಿಂದ ಸಿ.ಬಿ.ಎಸ್.ಇ ಶಾಲೆಗಳ ಆಡಳಿತ ಮಂಡಳಿಗಳ ಕನ್ನಡ ವಿರೋಧಿ ನಿಲುವನ್ನು ಖಂಡಿಸಿದರು. ಮುಚ್ಚುತ್ತಿರುವ ಕನ್ನಡ ಶಾಲೆಗಳು, ಹೆಚ್ಚಾಗುತ್ತಿರುವ ಆಂಗ್ಲ ಮಾಧ್ಯಮ ಶಾಲೆಗಳ ಜನಪ್ರಿಯತೆಯಿಂದ ಒಂದಿಡೀ ತಲೆಮಾರು ಕನ್ನಡ ಭಾಷೆಯಿಂದ ನಂಟು ಕಳೆದುಕೊಳ್ಳಬೇಕಾಗಬಹುದು. ಇದು ಕಳವಳಕಾರಿ ಸಂಗತಿ.
ಕನ್ನಡಕ್ಕೆ ಆದ್ಯತೆ, ಕನ್ನಡ ಕಡ್ಡಾಯ
ರಾಜ್ಯ ಸರಕಾರ, ಕಡ್ಡಾಯವಾಗಿ ಕನ್ನಡವನ್ನು ಮೊದಲನೇ ಅಥವಾ ಎರಡನೆಯ ಭಾಷೆಯಾಗಿ ಕಲಿಸಲೇಬೇಕು ಅನ್ನುವ ಆದೇಶವನ್ನು ಜಾರಿಗೆ ತರುವತ್ತ ಸೂಕ್ತ ಕಾನೂನು ಕ್ರಮ ಕೈಗೊಂಡು ಈ ವಿಷಯವನ್ನು ತಾರ್ಕಿಕ ಅಂತ್ಯದತ್ತ ಕೊಂಡೊಯ್ಯಬೇಕೆಂದು ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಯಿತು.
ತನ್ನಿಮಿತ್ತ ಮಿನ್ನೇಸೋಟ ಕನ್ನಡಿಗರು, ಕನ್ನಡಕ್ಕೆ ಆದ್ಯತೆ, ಕನ್ನಡ ಕಡ್ಡಾಯ, ಇತ್ಯಾದಿ ನಾಮಫಲಕಗಳನ್ನು ಹಿಡಿದುಕೊಂಡು ಪ್ರದರ್ಶನ ಮಾಡಿದರು. ಕನ್ನಡಾಭಿವೃದ್ಧಿ ಪ್ರಾಧಿಕಾರ, ಮತ್ತು ಕರ್ನಾಟಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲು ಸಂಕಲ್ಪ ಮಾಡಲಾಯಿತು.
ದೀಪಾವಳಿ – ರಾಜ್ಯೋತ್ಸವ 2017
ನವೆಂಬರ್ 4 ರಂದು ಸಂಗೀತ ಕನ್ನಡ ಕೂಟ, ದೀಪಾವಳಿ- ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಸುಮಾರು 300 ಜನ ಸದಸ್ಯರು ಉಪಸ್ಥಿತರಿದ್ದ ಈ ಹಬ್ಬ ಅಭೂತಪೂರ್ವ ಯಶಸ್ಸನ್ನು ಕಂಡಿತು.
ಪುಟಾಣಿ ಮಕ್ಕಳ ಮುದ್ದಾದ ಹಾಡು, ನೃತ್ಯಗಳು ಮನಕ್ಕೆ ಮುದನೀಡಿದ್ದರೆ, ಚಿತ್ರಕಲೆ ಮತ್ತು ಬಣ್ಣ, ಪುಟಾಣಿಗಳ ಸೃಜನ ಶೀಲತೆಗೆ ತಲೆದೂಗುವಂತೆ ಮಾಡಿತ್ತು. ಪುಟಾಣಿಗಳ ಹೊರತಾಗಿಯೂ ಅನೇಕ ಸದಸ್ಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.