ಈ ವರ್ಷದ ಕನ್ನಡ ರಾಜ್ಯೋತ್ಸವ ದಿನದಿಂದಲಾದರೂ ಹೀಗಾಗಲಿ...
ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ನವೆಂಬರ್ 1 ಪ್ರತೀ ವರ್ಷವೂ ಬರುತ್ತದೆ. ಆದರೆ ಏನಾದರೂ ಕನ್ನಡ ಪರವಾಗಿ ಬೆಳವಣಿಗೆ ಆಗುತ್ತಿದೆಯಾ ಎಂದು ನೋಡಿದರೆ, ಅಭಿವೃದ್ಧಿ ಮಾತ್ರ ಶೂನ್ಯ. ನಮ್ಮ ಶೂನ್ಯ ಸಂಪಾದನೆಗಳ ಪುಟ್ಟ ಪಟ್ಟಿ ನೋಡಿ...
1) ಮೊದಲಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂಬ ಸರ್ಕಾರದ ಅಡಿಯಲ್ಲೇ ಬರುವ ಒಂದು ವಿಭಾಗ ಸರ್ಕಾರಕ್ಕೆ ದಿಕ್ಸೂಚಿಯಂತೆ ಕೆಲಸ ಮಾಡುತ್ತಿದೆ. ಆದರೆ ಆ ದಿಕ್ಸೂಚಿಯನ್ನು ಪಾಲಿಸದೆ, ಆಲಿಸದೆ ಸರ್ಕಾರ ಸುಮ್ಮನಿರುವುದನ್ನು ನೋಡಿದರೆ , ಆ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಮುಚ್ಚುವುದು ಒಳಿತು.
ಕನ್ನಡ ರಾಜ್ಯೋತ್ಸವ: ನಮ್ಮ 'ಆಟೋ ರಾಜ'ರ ಪಾತ್ರ ಎಷ್ಟಿದೆ?
2) ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ವಾಡಿಕೆ ಈಗಲೂ ಇದೆಯಂತೆ. ಪತ್ರವೆಂದರೆ ಅಧಿಕೃತ ವ್ಯವಹಾರಕ್ಕಾಗಿ ಇರಬಹುದು. ಇರಲಿ. ಆದರೆ ಈ-ಮೇಲ್ ವ್ಯವಸ್ಥೆ ಇಲ್ಲವೆ? ನಮಗಿಂತ ಮೇಲಿರುವ (ಭೂಪಟದಲ್ಲಿ ಕಾಣಿಸುವಂತೆ ಹಾಗೂ ತುಂಬಾ ಜನ ನಿಜವಾಗಿಯೂ ಭಾವಿಸಿರುವಂತೆ ದೆಹಲಿ ನಮಗಿಂತ ಮೇಲಿದೆ, ನಮ್ಮನ್ನು ಆಳಲು) ಉತ್ತರ ಭಾರತದ ಪ್ರಭುಗಳ ಬಳಿ ನಾವು ದಶಕಗಳಿಂದ ಬೇಡುತ್ತಲೇ ಬಂದಿದ್ದೇವೆ. ನಾವು ಬೇಡುವವರು, ಅವರು ನಮ್ಮ ಮೇಲೆ ಕರುಣೆ ತೋರಿಸಿ ನಮಗೆ ಸಮ್ಮತಿ, ಅವಕಾಶಗಳನ್ನು ದಯಪಾಲಿಸುವವರು. ಸ್ವಾಮಿ, ದೆಹಲಿ ಪ್ರಭುಗಳನ್ನು ಇಷ್ಟು ವರ್ಷಗಳಂದ ಕೇಳಿದ್ದು ಸಾಕು, ಬೇಡಿದ್ದೂ ಸಾಕು.
3) ನಾವು ನಮ್ಮ ರಾಜ್ಯದ ಬಾವುಟ ಹಾರಿಸಲು ಅವರನ್ನೇ ಕೇಳಬೇಕು.
4) ನಮ್ಮ ರಾಜ್ಯದಲ್ಲಿ ವಾಸಿಸುವ ಜನತೆಗೆ, ನಮ್ಮ ಮಕ್ಕಳಿಗೆ ಕನ್ನಡ ಕಲಿಸಬಹುದಾ ಎಂದು ಅವರನ್ನೇ ಕೇಳಬೇಕು.
5) ನಮ್ಮ ರಾಜ್ಯದಲ್ಲಿ ವಾಸಿಸುವ ಜನತೆಗೆ ಕೆಲಸ ನೀಡಬಹುದಾ ಎಂದು ಅವರನ್ನೇ ಕೇಳಬೇಕು.
6) ನಮ್ಮ ರಾಜ್ಯದಲ್ಲಿ ಬೀಳುವ ಮಳೆಗೆ, ಹರಿಯುವ ನೀರಿಗೆ ನಾವು ಭಿಕ್ಷೆಯ ರೀತಿ ಅವರನ್ನೇ ಕೇಳಬೇಕು.
7) ನಮ್ಮ ರಾಜ್ಯದಲ್ಲಿ ಓಡುವ ರೈಲಿನಲ್ಲಿ ಕನ್ನಡದಲ್ಲಿ ಫಲಕ ಸಾಕು, ಹಿಂದಿ ಫಲಕ ಬೇಡ ಎಂಬುದಕ್ಕೂ ಕೋರ್ಟ್ ಮೆಟ್ಟಿಲು ಏರಬೇಕು.
ರಾಜ್ಯೋತ್ಸವ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ್ರ ಸಂದರ್ಶನ
8) ನಮ್ಮ ರಾಜ್ಯದಲ್ಲಿ ಇರುವ ಬ್ಯಾಂಕ್ ಅಥವ ಇನ್ನಿತರ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡದಲ್ಲಿ ಸೇವೆ ಬೇಕೆಂದರೆ ಹರಸಾಹಸ ಪಡಬೇಕು.
9) ಒಂದು ಲಕ್ಷ ಕೋಟಿ ರೂಪಾಯಿ ಕರ್ನಾಟಕ ಸರ್ಕಾರದಿಂದ ಆದಾಯ ತೆರಿಗೆ ಕೇಂದ್ರ ಸರ್ಕಾರಕ್ಕೆ ಕೊಟ್ಟ ಮೇಲೂ, ಕೊಚ್ಚಿಹೋದ ಕೊಡಗಿಗೆ 1 ಕೋಟಿ ಸಹ ನೀಡದ ಕೇಂದ್ರ ಸರ್ಕಾರ ಮತ್ತು ಈ ರೀತಿಯ ವ್ಯವಸ್ಥೆಗಳನ್ನೆಲ್ಲಾ ನೋಡುತ್ತಾ ಸುಮ್ಮನೆ ಇರುವ ಸಂಸತ್ತು ಮತ್ತು ಸುಪ್ರೀಮ್ ಕೋರ್ಟ್ ಕಾಲ ಕಾಲಕ್ಕೆ ನಮ್ಮ ಸಂವಿಧಾನದಲ್ಲಿ ಬದಲಾವಣೆಗಳನ್ನು ಮಾಡದೆ ಸುಮ್ಮನಿರುವುದನ್ನು ನಾವು "ಒಕ್ಕೂಟ ವ್ಯವಸ್ಥೆ" ಎಂಬ ಒಂದೇ ಕಾರಣಕ್ಕಾಗಿ ಮೂಕ ಪ್ರೇಕ್ಷಕರಾಗಿ ಮೂಲೆಗುಂಪಾಗಿದ್ದೇವೆ.
ಚುನಾವಣೆ ನೀತಿ ಸಂಹಿತೆ: ರಾಜ್ಯೋತ್ಸವ ಪ್ರಶಸ್ತಿ ನ.3ನಂತರ ಪ್ರಕಟ
10) ಕನ್ನಡ ಪರವಾಗಿ ಕೇವಲ ಭಾಷಣಗಳಲ್ಲಿ ಮಾತ್ರ ಘೋಷಣೆ ಮಾಡುತ್ತಾ, ಕನ್ನಡಿಗರ ಕಣ್ಣಿಗೆ ಮಣ್ಣೆರಚುತ್ತಿರುವ ಇದುವರೆಗಿನ ಕರ್ನಾಟಕವನ್ನಾಳಿದ ಸರಿಸುಮಾರು ಎಲ್ಲಾ ಪಕ್ಷಗಳ ಸರ್ಕಾರಗಳು, ನಾಯಕರುಗಳು, ಅಧಿಕಾರಿಗಳಿಂದ ನಾವು ನಿರಾಶೆಗೊಂಡಿದ್ದರೂ, ನಾಡು, ನುಡಿಯ ಪರವಾಗಿರುವ ಒಂದೂ ಪ್ರಾಂತೀಯ ಪಕ್ಷದ ಉದಯವಾಗದೇ ಇರುವುದು ನಮ್ಮೆಲ್ಲರ ದೌರ್ಭಾಗ್ಯವೇ ಸರಿ.
ಸಾಕು ಸ್ವಾಮಿ ಸಾಕು.. ರಾಜ್ಯದ ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ಬೇಡುವುದು ಸಾಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೇಂದ್ರಕ್ಕೆ ಪತ್ರ ಬರೆಯುವುದೂ ಸಾಕು. ಆ ಕೇಂದ್ರ ಸರ್ಕಾರದಿಂದ ನಿಜವಾಗಿಯೂ ಉತ್ತರ ಬರತ್ತದೆಯಾ? ಆ ಉತ್ತರ ಭಾರತದವರ ಉತ್ತರಕ್ಕಾಗಿ, ಕೃಪೆಗಾಗಿ, ಕರುಣೆಗಾಗಿ ನಾವುಗಳು ಕಾಯುತ್ತಾ ಕೂರಬೇಕಾ?
ಕಾಸರಗೋಡಲ್ಲಿ ಕನ್ನಡ ಉಳಿಸಲು ಹರಸಾಹಸ:ಶಾಲೆಗಳ ಸ್ಥಿತಿ ಹೇಗಿದೆ ಗೊತ್ತಾ
ಸ್ವಾಮಿ ಈ ವ್ಯವಸ್ಥೆಯನ್ನೇ ಧಿಕ್ಕರಿಸಿ, ಬಹಿಷ್ಕರಿಸಿ, ತಿರಸ್ಕರಿಸಿ.... ನಾವುಗಳು ಮಂದಗಾಮಿಗಳಾಗಿದ್ದು ಸಾಕು, ಉಗ್ರಗಾಮಿಗಳಾಗೋಣ (ಅಂದರೆ ಕೊಲ್ಲುವುದು, ಬಡಿಯುವದು ಎಂದಲ್ಲ. ನಮ್ಮ ಹೋರಾಟ ಉಗ್ರವಾಗಿರಬೇಕಷ್ಟೇ....) ಹೊರಬನ್ನಿ. ಸುಮ್ಮನಿದ್ದದ್ದೂ ಸಾಕು.. ಸ್ವಲ್ಪ ಎಚ್ಚೆತ್ತುಕೊಳ್ಳೋಣ. ಬನ್ನಿ... ಕುವೆಂಪುರವರ ದಶಕಗಳ ಹಿಂದಿನ ಬರಹ "ಸತ್ತಂತಿಹರನು ಬಡಿದೆಚ್ಚರಿಸು...." ಎಂಬುದನ್ನು ಮತ್ತೇ ನೆನಪಿಸುತ್ತಿದ್ದೇನೆ ಅಷ್ಟೇ.
ಅಷ್ಟೇ ಅಲ್ಲ.. ಎಲ್ಲ ಜವಾಬ್ದಾರಿಗಳು ಕೇವಲ ಸರ್ಕಾರ ಅಥವ ಅಧಿಕಾರಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ನಮ್ಮ ಹಕ್ಕುಗಳು ಏನಿದೆಯೋ ಅದರ ಜೊತೆಗೆ ನಮ್ಮ ಕರ್ತವ್ಯಗಳು ಇವೆ. ನಾವು ಪಾಲಿಸಬೇಕಿರುವುದು ತುಂಬಾ ಇದೆ. ಅದರಲ್ಲಿ ಕನಿಷ್ಟ ಕರ್ತವ್ಯಗಳು ಇಲ್ಲಿವೆ..
1) ಮೊದಲಿಗೆ ನಮ್ಮ ಮಕ್ಕಳಿಗೆ ಕನ್ನಡ ಕಲಿಸುವ ಕೆಲಸ ಆರಂಭಿಸಬೇಕು.
2) ಯಾವ್ಯಾವ ಶಾಲೆಗಳಲ್ಲಿ ಕನ್ನಡ ಕಲಿಸುವ ವ್ಯವಸ್ಥೆ ಇಲ್ಲವೋ, ಅಲ್ಲಿ ಅಲ್ಲಿನವರೇ ಸಣ್ಣ ಹೋರಾಟ ಮಾಡಬೇಕು.
3) ನಮ್ಮ ನಿತ್ಯದ ವ್ಯವಹಾರ ಎಲ್ಲವೂ ಕನ್ನಡದಲ್ಲೇ ಇರಬೇಕು. ಎಲ್ಲಿ ಕನ್ನಡದಲ್ಲಿ ವ್ಯವಹಾರ ಮಾಡಲು ಅನುಕೂಲ ಇಲ್ಲವೋ ಅಲ್ಲಿ ಸಣ್ಣ ಪ್ರತಿಭಟನೆ ತೋರಬೇಕು.
4) ನಮ್ಮ ಕನ್ನಡದ ಟಿ.ವಿ., ರೇಡಿಯೋ ಮಾಧ್ಯಮಗಳಲ್ಲಿ ಸಹ ಹಿಂದಿ, ಇಂಗ್ಲಿಷ್ ಗಳಲ್ಲಿ ಬರುವ ಜಾಹೀರಾತುಗಳನ್ನು ಒಪ್ಪದೇ, ಕನ್ನಡ ಭಾಷೆಯ ಜಾಹೀರಾತುಗಳನ್ನೇ ಮಾಡಿ ಕೊಡಿ ಎನ್ನುವ ಧೈರ್ಯ, ನಿಲುವು ನಮ್ಮ ಮಾಧ್ಯಮದ ಮುಖ್ಯಸ್ಥರಿಗೆ ಬರುವಂತಾಗಲಿ. ಈ ರೀತಿಯ ತಪ್ಪುಗಳನ್ನು ಪ್ರಶ್ನಿಸುವ ಮನೋಭಾವ ಹೆಚ್ಚಾಗಲಿ.
5) ಕೊನೆಯದಾಗಿ ಕೆಲಸ, ಉತ್ತಮ ವಾತಾವರಣ, ಅಥವ ಇನ್ನಿತರ ಕಾರಣಗಳಿಗಾಗಿ ನಮ್ಮ ರಾಜ್ಯಕ್ಕೆ ವಲಸೆ ಬರುವ ಅನ್ಯಭಾಷಿಕರಿಗೆ ಕನ್ನಡ ಕಲಿಯುವಂತಹ ಅವಕಾಶ ಮಾಡಿಕೊಡಿ.
ಅವರವರನ್ನು ಅವರವರದೇ ಭಾಷೆಯಲ್ಲೇ ಮಾತನಾಡಿಸುವ ಬಹುಭಾಷಾ ಪಂಡಿತರಾದ ಕನ್ನಡಿಗರು ಇತರೆ ಭಾಷೆಯವರಿಗೆ ಕನ್ನಡ ಕಲಿಯುವ ಅವಕಾಶವನ್ನೇ ನೀಡುವುದಿಲ್ಲ. ಕನ್ನಡಿಗರಿಗೆ ಅತಿ ಬೇಗ ತಮ್ಮ ಈ ತಪ್ಪಿನ ಅರಿವಾಗಲಿ ಎಂದು ಆಶಿಸುತ್ತೇನೆ.