ರಾಜ್ಯಸಭೆ ಚುನಾವಣೆ: 4 ರಾಜ್ಯಗಳ 16 ಕುರ್ಚಿಗಾಗಿ ಹೇಗಿದೆ ರಾಜಕೀಯ ಲೆಕ್ಕಾಚಾರ!?
ನವದೆಹಲಿ, ಜೂನ್ 7: ದೇಶದಲ್ಲಿ ರಾಜ್ಯಸಭೆ ಚುನಾವಣೆಯದ್ದೇ ಹಲ್ ಚಲ್ ನಡೆಯುತ್ತಿದೆ. 15 ರಾಜ್ಯಗಳ 57 ರಾಜ್ಯಗಳೆ ಚುನಾವಣೆಗಳಲ್ಲಿ ಈಗಾಗಲೇ ಹಲವು ಸ್ಥಾನಗಳನ್ನು ಆಯ್ಕೆ ಮಾಡಲಾಗಿದೆ. 11 ರಾಜ್ಯಗಳಲ್ಲಿ ಒಟ್ಟು 41 ರಾಜ್ಯಸಭೆ ಸದಸ್ಯರನ್ನು ಅವಿರೋಧವಾಗಿ ಚುನಾಯಿಸಲಾಗಿದೆ.
ಮಹಾರಾಷ್ಟ್ರ, ರಾಜಸ್ಥಾನ, ಕರ್ನಾಟಕ ಮತ್ತು ಹರ್ಯಾಣದ ರಾಜ್ಯಗಳಲ್ಲಿ 16 ಸಂಸದರ ಆಯ್ಕೆಯಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಈ ನಾಲ್ಕು ರಾಜ್ಯಗಳಲ್ಲಿ ಯಾರಿಗೆ ಅಧಿಕಾರದ ಗದ್ದುಗೆ ಒಲಿಯಲಿದೆ? ಎನ್ನುವುದು ರಾಜಕೀಯ ಕುತೂಹಲ ಕೆರಳಿಸುತ್ತಿದೆ.
ರಾಜ್ಯಸಭೆ ಚುನಾವಣೆ: ಹರಿಯಾಣ 'ಕೈ' ಪಾಳಯದಲ್ಲಿ ಕುದುರೆ ವ್ಯಾಪಾರದ ಭೀತಿ!
ಕಳ್ಳಬೇಟೆಗೆ ಹೆದರಿ ಕಾಂಗ್ರೆಸ್ ತನ್ನ ಶಾಸಕರನ್ನು ರಾಜಸ್ಥಾನ ಮತ್ತು ಹರಿಯಾಣದ ಹೋಟೆಲ್ಗಳು ಅಥವಾ ರೆಸಾರ್ಟ್ಗಳಿಗೆ ಸ್ಥಳಾಂತರಿಸಿದೆ. ರಾಜಸ್ಥಾನದಲ್ಲಿ ಬಿಜೆಪಿ ಕೂಡ ಅದೇ ತಂತ್ರವನ್ನು ಅನುಸರಿಸಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್ಸಿಪಿ ಕಾಂಗ್ರೆಸ್ ಮಾದರಿಯನ್ನು ಅನುಸರಿಸುತ್ತಿವೆ. ಹಾಗಾದರೆ ಈ ನಾಲ್ಕು ರಾಜ್ಯಗಳಲ್ಲಿ ಮೇಲ್ಮನೆ ಚುನಾವಣೆಗೆ ಹಾಕಿಕೊಂಡಿರುವ ಲೆಕ್ಕಾಚಾರಗಳು ಹೇಗಿವೆ? ಎನ್ನುವುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಮಹಾರಾಷ್ಟ್ರದಲ್ಲಿ ಹೇಗಿದೆ ಸೋಲು-ಗೆಲುವಿನ ಲೆಕ್ಕ?
ಮಹಾರಾಷ್ಟ್ರದಲ್ಲಿ ರಾಜ್ಯಸಭೆಯ ಆರು ಸಂಸದರನ್ನು ಆಯ್ಕೆ ಮಾಡಲು ಶಾಸಕರು ಜೂನ್ 10ರಂದು ಮತ ಚಲಾಯಿಸುತ್ತಾರೆ. ಈ ಸ್ಥಾನವನ್ನು ಗೆಲ್ಲುವುದಕ್ಕೆ ಪ್ರತಿಯೊಬ್ಬರಿಗೂ 42 ಮತಗಳು ಬೇಕಾಗುತ್ತವೆ. ಆಡಳಿತಾರೂಢ ಮಹಾ ವಿಕಾಸ್ ಅಗಾಧಿ ಎನಿಸಿರುವ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್, ಮೂರು ಸ್ಥಾನಗಳನ್ನು ಗೆಲ್ಲಲು 151 ಮತಗಳನ್ನು ಹೊಂದಿದೆ. ಈ ಮೈತ್ರಿಕೂಟವು ನಾಲ್ಕು ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದೆ.
ಇನ್ನೊಂದು ಕಡೆಯಲ್ಲಿ ಬಿಜೆಪಿಯು 106 ಶಾಸಕರನ್ನು ಹೊಂದಿದ್ದು, ಎರಡು ಸ್ಥಾನಗಳನ್ನು ಗೆಲ್ಲುವುದಂತೂ ಪಕ್ಕಾ ಆಗಿದೆ. ಅಲ್ಲಿಗೆ ಮೈತ್ರಿಕೂಟಕ್ಕೆ ಮೂರು, ಬಿಜೆಪಿಗೆ ಎರಡು ಸ್ಥಾನಗಳು ಪಕ್ಕಾ ಆಗಲಿದ್ದು, ಉಳಿದಿರುವ ಆರನೇ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಆರನೇ ಸ್ಥಾನಕ್ಕಾಗಿ ಹೋರಾಟ ಮುಂದುವರಿಸಲು ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಈ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎಂವಿಎ ಮೈತ್ರಿಕೂಟಕ್ಕೆ ಇನ್ನೂ 15 ಮತಗಳ ಅಗತ್ಯವಿದ್ದರೆ, ಬಿಜೆಪಿಗೆ 13ಕ್ಕೂ ಹೆಚ್ಚು ಮತಗಳು ಅನಿವಾರ್ಯವಾಗಿವೆ. ಇದಕ್ಕಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ 25 ಶಾಸಕರ ಗುಂಪು ಸಣ್ಣ ಪಕ್ಷಗಳು ಮತ್ತು ಸ್ವತಂತ್ರರ ಜೊತೆಗೆ ಸಂಧಾನಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ರಾಜಸ್ಥಾನದಲ್ಲಿ ಪೈಪೋಟಿಗೆ ಕಾರಣವಾದ 4ನೇ ಸ್ಥಾನ
ರಾಜ್ಯಸಭೆಯ ನಾಲ್ಕನೇ ಸದಸ್ಯ ಸ್ಥಾನದ ಮೇಲೆ ಮಾಧ್ಯಮ ಉದ್ಯಮಿ ಸುಭಾಷ್ ಚಂದ್ರ ಕಣ್ಣಿಟ್ಟಿದ್ದಾರೆ. ರಾಜ್ಯದಲ್ಲಿ ಮೇಲ್ಮನೆ ಚುನಾವಣೆಯನ್ನು ಗೆದ್ದುಕೊಳ್ಳುವುದಕ್ಕಾಗಿ ಒಬ್ಬ ಅಭ್ಯರ್ಥಿಗೆ ಕನಿಷ್ಠ 41 ಮತಗಳ ಅಗತ್ಯವಿದೆ. ಕಾಂಗ್ರೆಸ್ 108 ಶಾಸಕರನ್ನು ಹೊಂದಿದೆ. ಇದರ ಅರ್ಥ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದುಕೊಳ್ಳುವುದಕ್ಕೆ 123 ಮತಗಳ ಅಗತ್ಯವಿದೆ. ಬಿಜೆಪಿ ಒಂದು ಸ್ಥಾನ ಗೆದ್ದುಕೊಳ್ಳಲಿದ್ದು, ಚಂದ್ರುರನ್ನು ಕಣಕ್ಕಿಳಿಸಿದೆ.
ಕರುನಾಡಿನಲ್ಲಿ ಮೇಲ್ಮನೆ ಸೋಲು-ಗೆಲುವಿನ ಲೆಕ್ಕ
ಕರ್ನಾಟಕದಲ್ಲಿ ಒಬ್ಬ ಅಭ್ಯರ್ಥಿ ಗೆಲುವಿಗೆ ಕನಿಷ್ಠ 45 ಮತಗಳು ಅಗತ್ಯವಾಗಿದೆ. ಬಿಜೆಪಿಯು 121 ಶಾಸಕರನ್ನು ಹೊಂದಿದ್ದು, ರಾಜ್ಯಸಭೆಯ ಮೂರು ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. 70 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದೆ. ಇನ್ನೊಂದು ಮಗ್ಗಲಿನಲ್ಲಿ 32 ಶಾಸಕರನ್ನು ಹೊಂದಿರುವ ಜೆಡಿಎಸ್ ಒಬ್ಬರನ್ನು ಕಣಕ್ಕಿಳಿಸಿದ್ದು ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.
ಮೇಲ್ಮನೆ ಚುನಾವಣೆ ಗೆಲ್ಲುವುದಕ್ಕೆ ಹರಿಯಾಣ ರಾಜಕೀಯ
ಹರ್ಯಾಣದಲ್ಲಿ ಮತ್ತೊಬ್ಬ ಮಾಧ್ಯಮ ಉದ್ಯಮಿ ಕಾರ್ತಿಕೇಯ ಶರ್ಮಾ ಬಿಜೆಪಿಯ ಬೆಂಬಲ ಪಡೆದು ಅಖಾಡಕ್ಕೆ ಇಳಿದಿದ್ದಾರೆ. ಇದರಿಂದ ಹರ್ಯಾಣದಲ್ಲಿ ಸ್ಪರ್ಧೆ ಕಠಿಣಗೊಳ್ಳುವಂತೆ ಮಾಡಿದೆ. ಅವರಿಗೆ ಗೆಲ್ಲುವುದಕ್ಕೆ ಕನಿಷ್ಠ 31 ಮತಗಳ ಅಗತ್ಯವಿರುತ್ತದೆ, ಕಾಂಗ್ರೆಸ್ 31 ಸ್ಥಾನಗಳನ್ನು ಹೊಂದಿದೆ. ಆದರೆ ಕೈ ಪಾಳಯದಲ್ಲಿ ಅಡ್ಡ ಮತದಾನ ನಡೆಯುತ್ತದೆಯೇ ಎನ್ನುವ ಭಯ ಕಾಡುತ್ತಿದೆ.
ಮೇಲ್ಮನೆ ಚುನಾವಣೆ ಲೆಕ್ಕಾಚಾರ ಹೇಗಿದೆ?
ಕರ್ನಾಟಕವೂ ಸೇರಿದಂತೆ 15 ರಾಜ್ಯಗಳಲ್ಲಿನ 57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶವೊಂದರಲ್ಲೇ 11 ಸ್ಥಾನಗಳಿವೆ. ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ತಲಾ ಆರು ಸ್ಥಾನಗಳಿವೆ. ಬಿಹಾರದಲ್ಲಿ ಐದು, ಕರ್ನಾಟಕ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ ನಾಲ್ಕು ಸ್ಥಾನಗಳು ತೆರವಾಗಿದ್ದು, ಚುನಾವಣೆ ನಡೆಯಲಿದೆ. 57 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ ಎಂಟು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ.
ರಾಜಸ್ಥಾನದಲ್ಲಿ 2, ಛತ್ತೀಸ್ಗಢ್ನಲ್ಲಿ 2, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ತಲಾ ಒಂದೊಂದು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ. ರಾಜಸ್ಥಾನದಲ್ಲಿ ಬಿಜೆಪಿಯೇತರ ಎಲ್ಲಾ ಪಕ್ಷಗಳ ಬೆಂಬಲ ಸಿಕ್ಕರೆ ಒಂದು ಹೆಚ್ಚುವರಿ ಸ್ಥಾನ ಕೂಡ ಕಾಂಗ್ರೆಸ್ಗೆ ದಕ್ಕಬಹುದು.