ವಿಶ್ವ ಆರೋಗ್ಯ ದಿನ : ಭಾರತದ ಆರೋಗ್ಯವೇ ಆರೋಗ್ಯಕರವಾಗಿಲ್ಲ!
ಬೆಂಗಳೂರು, ಏಪ್ರಿಲ್ 07 : ಕರ್ನಾಟಕದ ಹಲವಾರು ಶಾಲೆಗಳಲ್ಲಿ ಮಕ್ಕಳ ಪ್ರೋಗ್ರೆಸ್ ಕಾರ್ಡ್ ನೀಡಲಾಗುತ್ತಿದೆ. ಅದರಲ್ಲಿ ಹೆಲ್ತ್ ಕಾರ್ಡ್ ಕೂಡ ಇರುತ್ತದೆ. ಮಕ್ಕಳ ಒಟ್ಟಾರೆ ಆರೋಗ್ಯದ ತಪಾಸಣೆ ನಡೆಸಿದ ವರದಿ ಅದು. ಸರಕಾರಿ ಶಾಲೆಗಳಲ್ಲಿ ನೀಡ್ತಾರೋ ಇಲ್ವೋ, ಖಾಸಗಿ ಶಾಲೆಯಲ್ಲಂತೂ ಖಂಡಿತ ನೀಡುತ್ತಾರೆ.
ಅದೇ ರೀತಿ, ಇಡೀ ಭಾರತದ ಹೆಲ್ತ್ ಕಾರ್ಡ್ ಕೂಡ ಬಿಡುಗಡೆಯಾಗಿದೆ, ಶುಕ್ರವಾರ ಏಪ್ರಿಲ್ 7ರ ವಿಶ್ವ ಆರೋಗ್ಯ ದಿನದಂದು. ದುರಾದೃಷ್ಟವಶಾತ್ ಭಾರತದ ಆರೋಗ್ಯ ಅಷ್ಟು ಆರೋಗ್ಯಕರವಾಗಿಲ್ಲ. ದೇಶದ ಜನರ ಆರೋಗ್ಯ ಸುಧಾರಣೆಗೆ ಕಳೆದ 10 ವರ್ಷಗಳಲ್ಲಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದರೂ ಆರೋಗ್ಯ ಸುಧಾರಿಸಿಲ್ಲ.
ಟ್ರಾನ್ಸ್ಫಾರ್ಮ್ ನ್ಯೂಟ್ರಿಶಿಯನ್ ಕನ್ಸಾರ್ಷಿಯಮ್ ಎಂಬ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ಭಾರತ ಇನ್ನೂ ಅಪೌಷ್ಟಿಕತೆಯಿಂದ ಬಳಲುತ್ತಿದೆ. ಜನರಿಗೆ ಸತ್ವಯುತವಾದ ಆಹಾರ ದೊರೆಯುತ್ತಿಲ್ಲ. ರಾಜ್ಯ ಮಟ್ಟದಲ್ಲಿ ಜನರಿಗೆ ದೊರೆಯುತ್ತಿರುವ ಪೌಷ್ಟಿಕಾಂಶಗಳ ಅಧ್ಯಯನವನ್ನು ಕೈಗೊಳ್ಳಲಾಗಿತ್ತು.
ಈ ವರ್ಷ ವಿಶ್ವ ಆರೋಗ್ಯ ದಿನವನ್ನು ಖಿನ್ನತೆ ವಿಷಯದ ಮೇಲೆ ಕೇಂದ್ರೀಕರಿಸಲಾಗಿದೆ. ಖಿನ್ನತೆಯಿಂದ ಬಳಲಿ ಹೊರಬಂದವರು ತಮ್ಮ ಅನುಭವ ಹಂಚಿಕೊಳ್ಳಬೇಕೆಂದು ಉತ್ತೇಜಿಸಲಾಗುತ್ತಿದೆ. ಖಿನ್ನತೆಯ ತೀವ್ರತೆಯಿಂದಾಗಿ ಹಲವಾರು ಜನರು ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ. [ಬೆಂಗಳೂರು ಯುವಕನ ಆತ್ಮಹತ್ಯೆ- ಫೇಸ್ ಬುಕ್ ಲೈವ್!]
ಉತ್ತಮ ಆರೋಗ್ಯಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಭಾರತಕ್ಕೆ ನೀಡಿದ್ದ 8 ಗುರಿಗಳಲ್ಲಿ ಕೇವಲ ಎರಡನ್ನು ಮಾತ್ರ ತಲುಪಲು ಭಾರತಕ್ಕೆ ಸಾಧ್ಯವಾಗಿದೆ. ಎಷ್ಟೇ ಪ್ರಯತ್ನಪಟ್ಟರೂ ಭಾರತದ ಆರೋಗ್ಯ ಸುಧಾರಿಸದಿರಲು ಏನು ಕಾರಣಗಳು? ಆ ವರದಿಯಲ್ಲಿರುವ 10 ಪ್ರಮುಖ ಕಾರಣಗಳೇನು? ಮುಂದಿವೆ ಓದಿರಿ. [ದೀಪಿಕಾಳಿಂದ ದಿ ಲಿವ್ ಲವ್ ಲಾಫ್ ಫೌಂಡೇಷನ್]
ಮಹಿಳೆಯರಲ್ಲಿ ಅನೀಮಿಯಾ
ಆ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ದೇಶದ 15 ವರ್ಷದಿಂದ 49 ವರ್ಷದೊಳಗಿನ ಶೇ.55ರಷ್ಟು ಮಹಿಳೆಯರು ಅನೀಮಿಯಾ ಅಥವಾ ರಕ್ತ ಕಣಗಳ ಕೊರತೆಯಿಂದ ತೀವ್ರವಾಗಿ ಬಳಲುತ್ತಿದ್ದಾರೆ.
ಮಕ್ಕಳ ಬೆಳವಣಿಗೆ ಕುಂಠಿತ
ಭಾರತದ ಶೇ.38ರಷ್ಟು ಮಕ್ಕಳಲ್ಲಿ ಸರಿಯಾದ ಬೆಳವಣಿಗೆ ಆಗುತ್ತಿಲ್ಲ. ಅಂದರೆ ಬೆಳವಣಿಗೆ ಕುಂಠಿತವಾಗುತ್ತಿದೆ. ಮತ್ತು ಶೇ.18.6ರಷ್ಟು ಮೂರು ವರ್ಷಕ್ಕಿಂತ ಕೆಳಗಿನ ಮಕ್ಕಳು ಹುಟ್ಟುತ್ತಲೇ ಕಡಿಮೆ ತೂಕ ಪಡೆದಿರುತ್ತಾರೆ.
ಗರ್ಭಧಾರಣೆಗೆ ಸಂಬಂಧಿಸಿದ ತಪಾಸಣೆ
36 ತಿಂಗಳೊಳಗಿನ ಮಕ್ಕಳಿರುವ ತಾಯಂದಿರಲ್ಲಿ ಶೇ. 63ರಷ್ಟು ಮಾತ್ರ ಮೂರು ಅಥವಾ ಅದಕ್ಕಿಂತ ಹೆಚ್ಚು ಗರ್ಭಧಾರಣೆಗೆ ಸಂಬಂಧಿಸಿದಂತೆ ತಪಾಸಣೆಗೆ ಒಳಗಾಗಿರುತ್ತಾರೆ. ಉಳಿದವರು ನಿರ್ಲಕ್ಷಿಸುತ್ತಿದ್ದಾರೆ. [ಬೆಂಗಳೂರಿನ ತಾಯಂದಿರು ಮತ್ತು ಗರ್ಭಧಾರಣೆ ಸಮಸ್ಯೆಗಳು!]
ಚುಚ್ಚುಮದ್ದು ನೀಡುವ ಕಾರ್ಯಕ್ರಮ
ಮಕ್ಕಳಿಗೆ ಚುಚ್ಚುಮದ್ದು ನೀಡುವ ಕಾರ್ಯಕ್ರಮ ಕೂಡ ಅಷ್ಟೊಂದು ಸಂತೃಪ್ತಿಕರವಾಗಿಲ್ಲ. 12ರಿಂದ 23 ತಿಂಗಳೊಳಗಿನ ಶೇ.65.3ರಷ್ಟು ಮಕ್ಕಳು ಮಾತ್ರ ಸಂಪೂರ್ಣವಾಗಿ ಚುಚ್ಚುಮದ್ದನ್ನು ಪಡೆದಿದ್ದಾರೆ. ಉಳಿದವರಿಗೆ ಅದು ದಕ್ಕಿಲ್ಲದಿರುವುದು ದುರ್ದೈವ.
ಮಕ್ಕಳಲ್ಲಿ ಕಾಡುತ್ತಿರುವ ಅಪೌಷ್ಟಿಕತೆ
ಅಪೌಷ್ಟಿಕತೆ ಭಾರತದಲ್ಲಿ ಬೆಂಬಿಡದೆ ಕಾಡುತ್ತಿದೆ. ಆರರಿಂದ ಎಂಟು ತಿಂಗಳೊಳಗಿನ ಶೇ. 50.5ರಷ್ಟು ಶಿಶುಗಳು ಮಾತ್ರ ಪೌಷ್ಟಿಕವಾದ ಆಹಾರವನ್ನು ಪಡೆಯುತ್ತಿವೆ. ಉಳಿದವುಗಳು ವಂಚಿತವಾಗುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ.
ಮಕ್ಕಳಲ್ಲಿ ರಕ್ತದ ಕಣಗಳ ಕೊರತೆ
ಟ್ರಾನ್ಸ್ಫಾರ್ಮ್ ನ್ಯೂಟ್ರಿಶಿಯನ್ ಕನ್ಸಾರ್ಷಿಯಮ್ ಸಲ್ಲಿಸಿರುವ ವರದಿಯ ಪ್ರಕಾರ, 6ರಿಂದ 35 ತಿಂಗಳೊಳಗಿನ ಶೇ.69.5ರಷ್ಟು ಭಾರತದ ಮಕ್ಕಳು ಅನೀಮಿಯಾ ಅಥವಾ ರಕ್ತ ಕಣಗಳ ಕೊರತೆಯಿಂದ ಬಳಲುತ್ತಿವೆ.
ಬೇಸಲ್ ಮೆಟಬಾಲಿಕ್ ರೇಟ್
ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, 15 ವರ್ಷದಿಂದ 18 ವರ್ಷದೊಳಗಿನ ಶೇ.44.7ರಷ್ಟು ಹೆಣ್ಣುಮಕ್ಕಳ ಬೇಸಲ್ ಮೆಟಬಾಲಿಕ್ ರೇಟ್ (ಬಿಎಂಆರ್) ಪ್ರಮಾಣ ತುಂಬಾ ಕಡಿಮೆ ಇದೆ.
ವಯಸ್ಸಿಗೆ ಬರುವ ಮೊದಲೇ ಮದುವೆ
ಈ ವರದಿ ಕಂಡುಕೊಂಡಿರುವ ಸಂಗತಿಯೆಂದರೆ, ಶಿಶುಗಳಲ್ಲಿ ಅಪೌಷ್ಟಿಕತೆ ಕಾಡುತ್ತಿರುವುದಕ್ಕೆ ಮೂಲ ಕಾರಣ ಸಣ್ಣ ವಯಸ್ಸಿನಲ್ಲಿ ಯುವತಿಯರು ಮದುವೆಯಾಗುತ್ತಿರುವುದು. ಶೇ.30ರಷ್ಟು ಯುವತಿಯರು ಕಾನೂನಾತ್ಮಕವಾಗಿ 18ನೇ ವಯಸ್ಸಿಗೆ ಬರುವ ಮೊದಲೇ ಮದುವೆಯಾಗಿರುತ್ತಾರೆ.
ಸ್ತನ್ಯಪಾನದಲ್ಲಿ ಉತ್ತೇಜನ
ಆದರೆ, ಕಳೆದ 10 ವರ್ಷಗಳಲ್ಲಿ ಶಿಶುಗಳಿಗೆ ಸರಿಯಾಗ ಆಹಾರ ನೀಡುವ ಕ್ರಮದಲ್ಲಿ ಸ್ವಲ್ಪ ಸುಧಾರಣೆ ಕಂಡಿದೆ. 5 ತಿಂಗಳೊಳಗಿನ ಶೇ.64.9ರಷ್ಟು ಶಿಶುಗಳಿಗೆ ಸೂಕ್ತ ರೀತಿಯಲ್ಲಿ ಸ್ತನ್ಯಪಾನ ಲಭಿಸುತ್ತಿದೆ. ಇದಕ್ಕೆ ಕಾರಣ ತಾಯಂದಿರಿಗೆ ಸರಿಯಾದ ರೀತಿಯಲ್ಲಿ ಸ್ತನ್ಯಪಾನದ ಬಗ್ಗೆ ಶಿಕ್ಷಣ ನೀಡಿರುವುದು.
ಭಾರೀ ಸವಾಲುಗಳು ಎದುರಾಗಲಿವೆ
ಮುಂದಿನ ದಿನಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಭಾರೀ ಸವಾಲುಗಳು ಎದುರಾಗಲಿವೆ. ಏಕೆಂದರೆ, 3 ವರ್ಷದೊಳಗಿನ ಶೇ.21.3ರಷ್ಟು ಮಕ್ಕಳು ಮಾತ್ರ ತಿಂಗಳಲ್ಲಿ 21 ದಿನಗಳಿಗೆ ನೀಡಲಾಗುವ ಪೌಷ್ಟಿಕ ಆಹಾರ ದೊರಕಿದೆ.