ವಿಶೇಷ: ವೈಕುಂಠ ಏಕಾದಶಿ ಆಚರಣೆ, ಉಪವಾಸದ ಮಹತ್ವ!
Recommended Video
ಏಕಾದಶಿಯ ಉಪವಾಸದೊಂದಿಗೆ ಮನಸ್ಸಿನ ಇಂದ್ರಿಯಗಳನ್ನು ಸ್ಥಿತಗೊಳಿಸಿ ಉತ್ತರದಿಕ್ಕಿನಲ್ಲಿರುವ ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಮಾಡಿದಾಗಲೇ ಧನ್ಯತಾಭಾಗ. ಈ ಹಿನ್ನಲೆಯಲ್ಲಿ ವೈಕುಂಠ ಏಕಾದಶಿ ಅಚರಣೆ ಕುರಿತು ಕೆಲವು ಸಂಗತಿಗಳು ಇಲ್ಲಿವೆ.
ವೈಕುಂಠವೆಂದರೇನೇ ನಾಶವಿಲ್ಲದ್ದು ಎಂದು. ನಮ್ಮ ಜನನ ಮರಣಾದಿ ಅವಸ್ಥೆಗಳೆಲ್ಲವೂ ನಾಶಕ್ಕೊಳಪಟ್ಟಿರುವಂಥವುಗಳು. ಆಸ್ತಿಕರ ಅಂತಿಮ ಕಾಮವು ಮೋಕ್ಷವೇ ಆಗಿದೆ. ಸಾಧನೆಯಿಂದ ಮೋಕ್ಷಪ್ರಾಪ್ತಿ. ವ್ರತ ನಿಯಮಗಳು, ಉಪವಾಸಗಳು ಸಾಧನೆಯ ಸೋಪಾನಗಳು.
ವೈಕುಂಠ ಏಕಾದಶಿಯಂದು ಪಠಿಸಿ ಶ್ರೀ ವೆಂಕಟೇಶ ಸ್ತೋತ್ರ
ಜಗತ್ತಿನ ಬಹುತೇಕ ಎಲ್ಲ ಧರ್ಮಗಳೂ ಉಪವಾಸಕ್ಕೆ ಮಹತ್ವ ನೀಡಿವೆ. ಕ್ರಿಶ್ಚಿಯನ್ನರ ಈಸ್ಟರ್ ಉಪವಾಸವಿರಲಿ, ಮುಸಲ್ಮಾನರ ರಮ್ಜಾನ್ ಇರಲಿ, ಯಹೂದಿಗಳ ಯ್ಯೋಮ್ ಕಿಪ್ಪುರ್ ಇರಲಿ, ಎಲ್ಲವೂ ಮನದ ಏಕಾಗ್ರತೆಗೆ, ತನ್ಮೂಲಕ ಆಧ್ಯಾತ್ಮ ಸಾಧನೆಗೆ ಅದರಿಂದ ಕೈವಲ್ಯಪ್ರಾಪ್ತಿಗೆ ಉಪವಾಸ ಸಹಾಯಕಾರಿ ಎಂಬುದನ್ನು ಮನಗಂಡಿದ್ದಾರೆ.
ಕಟ್ಟಳೆಗಳು ಮನವನ್ನು ಹಿಡಿತದಲ್ಲಿರಿಸುತ್ತವೆ. ಧರ್ಮವು ಒಂದು ಉಪಕರಣ ಮಾತ್ರ. ಹೇಗೆ 'ಕೆಜಿ'ಯಿಂದ 'ಪಿಜಿ', ಅದರ ನಂತರದ ಉಚ್ಚ ಶಿಕ್ಷಣಕ್ಕೆ ಅವಿರತ ಸಾಧನೆಯು ಮುಖ್ಯವೋ ಹಾಗೆಯೇ ಮೋಕ್ಷ ಸಾಧನೆಗೆ, ಸ್ನಾನದ ಮೂಲಕ ದೇಹ ಶುದ್ಧಿ ಮಾಡಿಕೊಳ್ಳುವುದರಿಂದ ಮೊದಲ್ಗೊಂಡು ಯೋಗದ ಮೂಲಕ ಸಮಾಧಿಯನ್ನು ಸಾಧಿಸುವುದರ ಹಂತದಲ್ಲಿ ನಾನಾ ವ್ರತ ನಿಯಾಮಾದಿಗಳು.
ಅದರಲ್ಲಿ ಉಪವಾಸವೂ ಒಂದು. ಎಲ್ಲ ತಿಥಿಗಳಿಗೂ ಒಬ್ಬೊಬ್ಬ ದೇವತೆಗಳಿದ್ದಾರೆ. ಏಕಾದಶಿಗೆ ಹರಿಯೇ ಅಭಿಮಾನಿ. ಆದ್ದರಿಂದಲೇ ಅದಕ್ಕೆ ಹರಿದಿನವೆಂದು ಹೆಸರು. ಆದ್ದರಿಂದ ಏಕಾದಶಿಗೆ ಎಲ್ಲಿಲ್ಲದ ಮಹತ್ವ.
ಏಕಾದಶಿ ಎಂದರೆ ಹನ್ನೊಂದು
ಏಕಾದಶಿ ಎಂದರೆ ಹನ್ನೊಂದು. ಹಿಂದೂ ಪಂಚಾಂಗದಲ್ಲಿ ಪ್ರತಿ ಪಕ್ಷದ ಹನ್ನೊಂದು ದಿನಗಳಿಗೆ ಏಕಾದಶಿಯಂದು ಹರಿದಿನವಿದ್ದುದರಿಂದ ಅಂದು ಉಪವಾಸ, ಆಷಾಢ ಏಕಾದಶಿ, ವೈಕುಂಠ ಏಕಾದಶಿ ಹೀಗೆ ವರ್ಷಪೂರ್ತಿ ಬರುವ ಅವುಗಳಿಗೆ ಅದರದ್ದೇ ಆದ ಮಹತ್ವವಿದೆ.
ಚೈತ್ರದ ಕಾಮದಾ ಏಕಾದಶಿಯಿಂದ ಫಾಲ್ಗುಣದ ಪಾಪವಿಮೋಚನೀಯವರೆಗೂ ಏಕಾದಶಿಗೆ ಮಹತ್ವದ ಹೆಸರುಗಳಿವೆ. ಆಷಾಢ ಏಕಾದಶಿಯು ದಕ್ಷಿಣಾಯನದಲ್ಲಿ ಪ್ರಾರಂಭವಾಗುವ ಮಹತ್ವದ ವ್ರತ, ದಕ್ಷಿಣಾಯನವು ದೇವತೆಗಳಿಗೆ ರಾತ್ರಿ. ಆಷಾಢ ಏಕದಶಿಯಂದು ಯೋಗ ನಿದ್ರೆಗೆ ಜಾರುವ ಶ್ರೀಹರಿ ಉತ್ಥಾನ ದ್ವಾದಶಿಯಂದು ಏಳುತ್ತಾನೆ. ಅದಕ್ಕಾಗಿ ನಾಕು ತಿಂಗಳು ಯಾವುದೇ ಶುಭಕಾರ್ಯಗಳಿಲ್ಲ. ಆದರೆ ಸಾಧನೆಗೆ ಪ್ರಶ್ತವಾದ ಅವಧಿ.
ಉತ್ತರಾಯಣದ ದ್ವಾರ
ವೈಕುಂಠ ಏಕದಶಿಯಂದು ಉತ್ತರ ದ್ವಾರದ ಮೂಲಕವೇ ಭಗವಂತನನ್ನು ಏಕೆ ದರ್ಶಿಸಬೇಕು? ಅದರ ಹಿನ್ನಲೆಯಲ್ಲಿ ಇರುವ ಸಂದೇಶವಾದರೂ ಏನು? ಸ್ಥೂಲವಾಗಿ ಯೋಚಿಸಿ. ಉತ್ತರಾಯಣದ ಮುನ್ನ ಕಾಲವೇ ಸಂಕ್ರಮಣ. ದಕ್ಷಿಣ ದಿಕ್ಕಿಗೆ ಕರ್ಮ ಸ್ಥಾನ ಎನ್ನುವ ಮಾತಿದೆ. 'ತಮಸೋಮಾ ಜ್ಯೋತಿರ್ಗಮಯ' ಎನ್ನುವ ಉಪನಿಷತ್ ವಾಕ್ಯದಂತೆ ಅಜ್ಞಾನದಿಂದ ಸುಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಸಮಯವೇ ಉತ್ತರಾಯಣ.
ಮನೆಗೊಂದು ಬಾಗಿಲಿರುವಂತೆ ಉತ್ತರಾಯಣದ ದ್ವಾರವೇ ವೈಕುಂಠ ಏಕಾದಶಿ! ಏಕಾದಶಿ ಆಚರಣೆಯ ನೆವದಲ್ಲಿ ಜಿಹ್ವಾ ಚಾಪಲ್ಯಕ್ಕೆ, ಉತ್ತರದ್ವಾರದಲ್ಲಿ ತಲೆ ತಗ್ಗಿಸುವ ನೆವದಲ್ಲಿ ಮನಸ್ಸಿನ ಅಹಂಕಾರಕ್ಕೆ ಒಂದಿಷ್ಟು ಬ್ರೇಕ್ ಹಾಕುತ್ತೇವೆ. ಅಂತಹ ಭಾವನೆಯಲ್ಲಿ ನಡೆದಾಗ ಮಾತ್ರವೇ ವೈಕುಂಠ ಏಕಾದಶಿ ಆಚರಣೆಯಲ್ಲಿ ಒಂದಷ್ಟು ಸಾರ್ಥಕತೆ ಕಂಡೀತು.
ಉಪವಾಸದೊಳಗಣ ವಿಜ್ಞಾನ
ಏಕಾದಶಿಯಂದು ಉಪವಾಸ ವ್ರತವನ್ನು ಆಚರಿಸುವವರು ಅನೇಕರು. ಈ ರೀತಿ ಉಪವಾಸ ವ್ರತಾಚರಣೆ ಮಾಡಿದರೆ ದೇಹದ ಮೇಲೆ ಬೀರುವ ಪರಿಣಾಮವೇನು? ವೈದ್ಯವಿಜ್ಞಾನ ಈ ಬಗ್ಗೆ ಏನು ಹೇಳುತ್ತದೆ?
ಮಾನವ ದೇಹದಲ್ಲಿ ಒಂದು ಆಂತರಿಕ ಪರಿಸರವಿದೆ. ಜೀವಕೋಶಗಳ ಬಾಹ್ಯದಲ್ಲಿ ದ್ರವವಿರುತ್ತದೆ. ಅದು ಲವಣ ಹಾಗೂ ನೀರಿನಿಂದ ಕೂಡಿದ ದ್ರವ. ಸುಮಾರು 70 ಕೆಜಿ ತೂಕವಿರುವ ವ್ಯಕ್ತಿಯಲ್ಲಿ 42 ಲೀಟರ್ ನೀರು (ದ್ರವ) ಇರುತ್ತದೆ. ಅದರಲ್ಲಿ 28 ಲೀಟರ್ ಜೀವಕೋಶಗಳ ಒಳಗೆ ಹಾಗೂ 14 ಲೀಟರ್ ಜೀವಕೋಶಗಳ ಹೊರಗೆ ಇರುತ್ತವೆ.
ಬಾಹ್ಯಕೋಶದ ದ್ರವದಲ್ಲಿ ಉಪ್ಪಿನಾಂಶ ಹೆಚ್ಚಿದ್ದು ಸಮುದ್ರದ ನೀರನ್ನು ಹೋಲುತ್ತದೆ. ದೇಹದ ಆಂತರಿಕ ಪರಿಸರ ಹಾಗೂ ಅಂಗಾಂಗಗಳ ಕ್ರಿಯಾಜಾಲವನ್ನು ಸಮಮಟ್ಟದಲ್ಲಿ ಸುರಕ್ಷಿತವಾಗಿಡುವುದೇ ಆರೋಗ್ಯದ ಗುರಿ.
ದೇಹದ ಸಂರಕ್ಷಣಾ ವಿಧಾನ
ಈ ಆಂತರಿಕ ಪರಿಸರವನ್ನು ಏರುಪೇರು ಮಾಡಲು ಹೊರಗಿನ ಪರಿಸರದಿಂದ ರೋಗಾಣುಗಳು, ಕಲುಷಿತ ಹವೆ, ನೀರು, ಕಲಬೆರಕೆ ಆಹಾರ ಇತ್ಯಾದಿಗಳಿಂದ ನಿರಂತರ ದಾಳಿ ನಡೆಯುತಿರುತ್ತದೆ. ಆದರೆ ದೇಹದ ಸಂರಕ್ಷಣಾ ವಿಧಾನ ಹಾಗೂ ತಂತ್ರಗಳು ಸೂಕ್ತ ಉತ್ತರ ನೀಡಿ ತಮ್ಮ ದೇಹಾರೋಗ್ಯ ಕಾಪಾಡುತ್ತವೆ. ಈ
ರೀತಿ ದೇಹದಲ್ಲಿ ರಕ್ಷಣಾತಂತ್ರಗಳು ಸುರಕ್ಷಿತವಾಗಿ ಸಾಗಬೇಕಾದರೆ - ಪ್ರತಿ ಹದಿನೈದು ದಿನಕ್ಕೊಮ್ಮೆ ಉಪವಾಸ ಮಾಡಿದರೆ ದೇಹದ ಚಕ್ರಗಳು ಸರಿಗೊಳ್ಳುತ್ತವೆ. ಹೀಗಾಗಿ ನಿಸರ್ಗಕ್ಕೂ-ದೇಹದ ಆಂತರಿಕ ಪರಿಸರಕ್ಕೂ ನಿಕಟ ಸಂಬಂಧವಿದೆ. ಈ ಉಪವಾಸದಿಂದ ದೇಹದಲ್ಲಿಯ ಜೈವಿಕ ಗಡಿಯಾರದ ಸಮಯ ಬದ್ಧತೆ, ತಾಳ, ಆಹಾರ, ಅರೆಯುವ ಜೀವದ್ರವ್ಯ ಕ್ರಿಯೆಗಳ 'ಚಕ್ರದ ಗತಿಗಳು' ಸಮತೋಲನಗೊಳ್ಳುತ್ತವೆ.
ಮನಸ್ಸನ್ನು ಬಂಧಿಸುವುದೇ ಯೋಗದ ಗುರಿ
ಮೆದುಳಿನ ಚಟುವಟಿಕೆ ಚುರುಕಾಗಲು ವಿಶ್ರಾಂತಿ ಹಾಗೂ ನಿದ್ದೆ ಅಗತ್ಯ. ಇದಕ್ಕೆಲ್ಲ ಮನಸ್ಸಿನ ಸ್ಥಿತಿಗತಿಗಳೇ ಕಾರಣ. ಆದರೆ ಕನಿಷ್ಠ ಹದಿನೈದು ದಿನಕ್ಕೊಮ್ಮೆ ಪುನಃಶ್ಚೇತನ ವಿಶ್ರಾಂತಿ ಅಗತ್ಯ. ಇದು ಮನೋನಿಗ್ರಹ ಹಾಗೂ ಕೇಂದ್ರೀಕೃತಗೊಂಡ ಮನಸ್ಸಿನಿಂದ ಸಾಧ್ಯ.
ಶರೀರಕ್ರಿಯೆಗಳನ್ನು ಹಾಗೂ ಮನಸ್ಸನ್ನು ಬಂಧಿಸುವುದೇ ಯೋಗದ ಗುರಿ. ಏಕಾದಶಿ ವ್ರತಾಚರಣೆಯು ಈ ಯೋಗದ ಒಂದು ಭಾಗವಾಗಿ ಬಂದಿದೆ. ಅಲ್ಪ ಉಪಹಾರ ಸೇವೆನೆಯಿಂದ ಹಗುರವಾದ ದೇಹವು ಪ್ರಾಣಾಯಾಮ ಹಾಗೂ ಧ್ಯಾನಗೈಯಲು ಸಹಾಯಕವಾಗುವುದು. ಜಪತಪಗಳು ಕೂಡ ಮನಸ್ಸಿನ ಕೇಂದ್ರೀಕರಣಕ್ಕೆ ತುಂಬ ಸಹಕಾರಿ. ಪೂಜೆ ಪುನಸ್ಕಾರದ ವಿಧಾನಗಳನ್ನು ಅರಿತು ಏಕಾಗ್ರಚಿತ್ತದಿಂದ ಆಚರಿಸಿದರೆ ದೇಹದ ಆಂತರಿಕ ಕ್ರಿಯೆಗಳಲ್ಲಿ ಏಕತೆ ಮೂಡುತ್ತದೆ.
ಏಕಾದಶಿಯಂದು ಮನಸ್ಸಿನ ಏಕಾಗ್ರತೆ ಸಾಧಿಸಿ
ಏಕಾದಶಿಯಂದು ಮನಸ್ಸಿನ ಏಕಾಗ್ರತೆ ಸಾಧಿಸಿ ಮನೋಚಂಚಲತೆ ಕಡಿಮೆಗೊಳಿಸಿದಾಗ ಮನಸ್ಸು ಪ್ರಶಾಂತತೆಯತ್ತ ವಾಲುತ್ತದೆ. ಆಹಾರ ಪದಾರ್ಥಗಳ ಆಕರ್ಷಣೆ ಹಾಗೂ ಖಾದ್ಯಗಳ ರುಚಿಕರ ಹವ್ಯಾಸ ಹಾಗೂ ವ್ಯಸನಗಳು ಕಡಿಮೆಗೊಂಡಾಗ ಮಾತ್ರ ಮನಸ್ಸು ಸತ್ ಚಿಂತನೆಯಲ್ಲಿ ತೊಡಗುತ್ತದೆ. ಉಪವಾಸದಿಂದ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳ ತಾಳ-ಗತಿ ಸುಸ್ಥಿತಿಗೆ ಬಂದು ಹೆಚ್ಚಿನ ನೀರು ಹಾಗೂ ಲವಣಗಳು ಸಮತೋಲನಗೊಳ್ಳುತ್ತವೆ.
ಒಂದು ಅಥವಾ ಎರಡು ದಿನಗಳವರೆಗೆ ಉಪವಾಸ ಮಾಡಬಹುದು. ಮುಂದೆ ದೇಹದ ಜೀವಜಲ ನಷ್ಟಗೊಂಡು ಧಾರಣಶಕ್ತಿಯ ಮಟ್ಟ ಕುಸಿದಾಗ ಶರೀರಕ್ರಿಯೆಗಳು ಅಪಾಯಕ್ಕೆ ಈಡಾಗುತ್ತವೆ. ಆದ್ದರಿಂದ ಉಪವಾಸವನ್ನು ನಿಯಮಿತವಾಗಿ, ಹಿತಿಮಿತವಾಗಿ ಮಾಡಬೇಕು. ಹೀಗಾಗಿಯೇ ಇರಬೇಕು, ಏಕಾದಶೀ ಪಕ್ಷಕ್ಕೊಂದೇ ಮಾಡಿದರೆ ಸಾಕು ಎಂದು ಹಿರಿಯರು ಹೇಳುವುದು.