ಶಿಕ್ಷಕರ ದಿನ: ಗುರುನಮನ ಸಲ್ಲಿಸಿದ ಟ್ವಿಟ್ಟಿಗರು
ಆಚಾರ್ಯ ದೇವೋ ಭವ ಎಂಬ ಸಂಸ್ಕೃತಿ ನಮ್ಮದು. ಹೆತ್ತ ತಾಯಿ, ಬದುಕು ಕಲಿಸಿದ ತಂದೆ ಮತ್ತು ಸಂಸ್ಕಾರ ನೀಡಿದ ಗುರು ಮೂವರನ್ನೂ ಪೂಜನೀಯ ಸ್ಥಾನದಲ್ಲಿಟ್ಟು ಗೌರವಿಸುವುದು ಭಾರತೀಯ ಸಂಸ್ಕೃತಿಯ ಹೆಗ್ಗಳಿಕೆಯೂ ಹೌದು.
ಅಸಂಖ್ಯ ಮಕ್ಕಳ ಭವಿಷ್ಯ ರೂಪಿಸಿ, ಆ ಮೂಲಕ ರಾಷ್ಟ್ರಕ್ಕೆ ಕೊಡುಗೆ ನೀಡಿದ ಶಿಕ್ಷರ ನೆನಕೆಗಾಗಿ ಸೆಪ್ಟೆಂಬರ್ 5 ಅನ್ನು ಭಾರತದಾದ್ಯಂತ ರಾಷ್ಟ್ರೀಯ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ.
ಸುಂದರ ಸಮಾಜವೆಂಬ ತೋಟದ ಮಾಲಿಕರೇ ಶಿಕ್ಷಕರು
ಭಾರತದ ಮೊದಲ ಉಪರಾಷ್ಟ್ರಪತಿಯಾಗಿಯೂ, ಎರಡನೇ ರಾಷ್ಟ್ರಪತಿಯಾಗಿಯೂ ಕಾರ್ಯನಿರ್ವಹಿಸಿದ ಮಹಾನ್ ಶಿಕ್ಷಕ ಡಾ.ಸರ್ವಪಳ್ಳಿ ರಾಧಾಕೃಷ್ಣನ್ (5 ಸೆಪ್ಟೆಂಬರ್ 1888 - 17 ಏಪ್ರಿಲ್ 1975)ಅವರ ಗೌರವಾರ್ಥವಾಗಿ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವ ಮೂಲಕ ಸಮಸ್ತ ಗುರುವೃಂದಕ್ಕೆ ನಮನ ಸಲ್ಲಿಸಲಾಗುತ್ತದೆ.
ಸರ್ವಪಳ್ಳಿ ರಾಧಾಕೃಷ್ಣನ್ ಸೆಪ್ಟೆಂಬರ್ 5, 1888 ರಲ್ಲಿ ತಮಿಳುನಾಡು-ಆಂಧ್ರಪ್ರದೇಶ ಗಡಿಯ ತಿರುತ್ತಣಿ ಎಂಬಲ್ಲಿ ಜನಿಸಿದರು. ತಂದೆ ಸರ್ವಪಳ್ಳಿ ವೀರಸ್ವಾಮಿ ಮತ್ತು ತಾಯಿ ಸೀತಮ್ಮ. 16 ನೇ ವಯಸ್ಸಿನಲ್ಲಿ ಶಿವಕಮು ಎಂಬುವವರನ್ನು ಮದುವೆಯಾದ ರಾಧಾಕೃಷ್ಣನ್ ಅವರಿಗೆ ಆರು ಮಕ್ಕಳಿದ್ದರು.
'ನಾನು ಮುಖ್ಯಮಂತ್ರಿಯಾಗಲು ಶಿಕ್ಷಕರೇ ಕಾರಣ'
ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ರಾಧಾಕೃಷ್ಣನ್ ಅವರ ಶಿಷ್ಯವೃಂದವೂ ಅಪಾರವಾಗಿತ್ತು. ಆಂಧ್ರ ವಿಶ್ವವಿದ್ಯಾಲಯ ಮತ್ತು ಬನಾರಸ್ ಹಿಂದು ವಿವಿಯ ಉಪಕುಲಪತಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಯು ಇವರದು. ರಾಧಾಕೃಷ್ಣನ್ ಅವರ ಶಿಷ್ಯರು ತಮ್ಮ ಗುರುವಿನ ಜನ್ಮದಿನವಾದ ಸೆಪ್ಟೆಂಬರ್ 5 ನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ನಿರ್ಧರಿಸಿದರು.
ಈ ಕುರಿತು ರಾಧಾಕೃಷ್ಣನ್ ಅವರಲ್ಲಿ ಮನವಿಮಾಡಿಕೊಂಡಾಗ, ನನ್ನ ಜನ್ಮದಿನವನ್ನು ಆಚರಿಸುವ ಬದಲು ಆ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತೀರಾದರೆ ಅದಕ್ಕಿಂತ ದೊಡ್ಡ ಹೆಮ್ಮೆ ಇನ್ನೇನಿದೆ? ಎಂದು ಉತ್ತರಿಸಿದ್ದರು. ಅಂದಿನಿಂದಲೂ ಸೆ.5 ಶಿಕ್ಷಕರ ದಿನವಾಗಿ ಆಚರಣೆಗೊಳ್ಳುತ್ತಿದೆ.
ಮೋದಿ ಪಾಠಶಾಲೆ: ತಾಯಿ ಜನ್ಮ ನೀಡಿದರೆ, ಶಿಕ್ಷಕರು ಜೀವನ ನೀಡುತ್ತಾರೆ
ಟ್ವಿಟ್ಟರ್ ನಲ್ಲಿಯೂ ಇಂದು ಹಲವರು ಶಿಕ್ಷಕರ ದಿನದಂದು ತಮ್ಮ ನೆಚ್ಚಿನ ಶಿಕ್ಷಕರನ್ನು ನೆನಪಿಸಿಕೊಂಡು ಶುಭಹಾರೈಸಿದ್ದಾರೆ. ಸಮಸ್ತ ಗುರುವೃಂದಕ್ಕೂ ಶುಭಹಾರೈಸುತ್ತ ಆ ಟ್ವೀಟ್ ಗಳತ್ತ ಕಣ್ಣು ಹಾಯಿಸೋಣ.
|
ನರೇಂದ್ರ ಮೋದಿ
ಮಕ್ಕಳ ಮನಸ್ಸನ್ನು ತಿದ್ದುವ, ಪೋಷಿಸುವ ಮತ್ತು ಶಿಕ್ಷಣದ ಕಂಪನ್ನು ಸಮಾಜದಲ್ಲಿ ಹರಡುವುದಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಎಲ್ಲ ಶಿಕ್ಷಕ ಸಮುದಾಯಕ್ಕೂ ನನ್ನ ನಮನಗಳು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಇನ್ನೊಂದು ಟ್ವೀಟ್ ನಲ್ಲಿ ಸರ್ವಪಳ್ಳಿ ರಾಧಾಕೃಷ್ಣನ್ ಅವರನ್ನೂ ನೆನಪಿಸಿಕೊಂಡಿದ್ದಾರೆ.
|
ಶಿಕ್ಷಕರಿಗೆ ಅಭಿನಂದನೆ
ಮಾಜಿ ರಾಷ್ಟ್ರಪತಿ ಡಾ ಎಸ್ ರಾಧಾಕೃಷ್ಣನ್ ರ ಸ್ಮರಣೆಯಲ್ಲಿ ಆಚರಿಸುವ ಶಿಕ್ಷಕರ ದಿನಾಚರಣೆಯಂದು ದೇಶ ಕಟ್ಟುವ ಕಾಯಕದಲ್ಲಿ ನಿರತರಾದ ಶಿಕ್ಷಕ ಸಮುದಾಯವನ್ನು ಅಭಿನಂದಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ದೇಶದ ಎಲ್ಲ ಶಿಕ್ಷಕ ವೃಂದಕ್ಕೂ ಶುಭ ಹಾರೈಕೆ
ಶಿಕ್ಷಕರ ದಿನದಂದು ಸರ್ವಪಳ್ಳಿ ರಾಧಾಕೃಷ್ಣನ್ ಅವರಿಗೆ ನನ್ನ ನಮನಗಳು. ಹಾಗೆಯೇ ನಮ್ಮ ರಾಷ್ಟದ ಎಲ್ಲ ಶಿಕ್ಷಕ ವೃಂದಕ್ಕೂ ನನ್ನ ಶುಭಹಾರೈಕೆಗಳು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿದ್ದಾರೆ.
|
ನಮನಗಳು
ಯುವಮನಗಳನ್ನು ತಿದ್ದಲು ತಮ್ಮ ಬದುಕನ್ನು ಮುಡಿಪಾಗಿಟ್ಟ ಎಲ್ಲಾ ಶಿಕ್ಷಕರಿಗೂ ನಮನಗಳು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
|
ನಿಜವಾದ ಶಿಕ್ಷಕ ಹೃದಯದಿಂದ ಕಲಿಸುತ್ತಾನೆ
ಒಬ್ಬ ಮಹಾನ್ ಶಿಕ್ಷಕ ಹೃದಯದಿಂದ ಕಲಿಸುತ್ತಾನೆ, ಪುಸ್ತಕದಿಂದಲ್ಲ. ನನಗೆ ಕಲಿಸಿದ ಎಲ್ಲ ಶಿಕ್ಷಕಕರಿಗೂ ನಾನು ಸದಾ ಋಣಿ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.