ಮಕ್ಕಳ ಕಳೆದುಕೊಂಡ ಅಮ್ಮಂದಿರ ಗೋಳು ಕೇಳೋರ್ಯಾರು?
ಭಾನುವಾರ ಅಮ್ಮನ ದಿನ. ಇದೊಂದೇ ದಿನ ಅಮ್ಮನ ದಿನ ಆಚರಿಸಬೇಕೆ? ಅಮ್ಮ ಇರುವವರಿಗೆಲ್ಲ ಪ್ರತಿದಿನವೂ ಅಮ್ಮನ ದಿನವೇ. ಇರಲಿ. ಈ ದಿನ ಅಮ್ಮನಿಗೆ ಉಡುಗೊರೆ ನೀಡಿ ವಿಶೇಷ ಗಿಫ್ಟುಗಳನ್ನು, ವಿಶಿಷ್ಟ ಸಂದೇಶಗಳನ್ನು ರವಾನಿಸುವವರು ಈ ಚಿತ್ರಗಳಲ್ಲಿರುವ ತಾಯಂದಿರ ಬಗ್ಗೆಯೂ ಗಮನ ಹರಿಸಲಿ.
ಅಮ್ಮಂದಿರೋದೇ ಕಷ್ಟ ಪಡೋಕಾ? ಲೋಕದ ಸಂಕಟಗಳನ್ನೆಲ್ಲಾ ಮೂಕವಿಸ್ಮಿತಳಾಗಿ ನೋಡುತ್ತ ಗಪ್ ಚುಪ್ ಇರುವ, ಆಗಾಗ ಎಚ್ಚೆತ್ತುಕೊಳ್ಳುವ ಭೂಮಿಯನ್ನು ಇದೇ ಕಾರಣಕ್ಕಾ ತಾಯಿಗೆ ಹೋಲಿಸುವುದು? ಒಂಬತ್ತು ತಿಂಗಳು ಹೊತ್ತು ಹೆತ್ತು ಪಾಲಿಸುವ ಅಮ್ಮನೆಂಬ ಅಮ್ಮ ಎಷ್ಟು ನೋವುಗಳನ್ನು ಹೀಗೇ ನೋಡುತ್ತಿರಬಹುದು?
ಎಲ್ಲ ಅಮ್ಮಂದಿರೂ ಹೀಗಿರುವುದಿಲ್ಲ. ಮಕ್ಕಳನ್ನು ಲಾಲಿಸುತ್ತ ಪಾಲಿಸುತ್ತ ಅವರೊಂದಿಗೆ ಅವರಾಗಿ ನಲಿಯುವ ತಾಯಂದಿರಿಗೇನೂ ಕಮ್ಮಿಯಿಲ್ಲ. ಆದರೆ, ಅಪಘಾತದಲ್ಲಿ, ಭೂಕಂಪದಲ್ಲಿ, ಆತ್ಮಹತ್ಯೆಯಿಂದಾಗಿ ಮಕ್ಕಳನ್ನು ಕಳೆದುಕೊಳ್ಳುವ, ಅತ್ಯಾಚಾರಕ್ಕೊಳಗಾದ ಮಗಳನ್ನು ಕಾಪಾಡುವ ತಾಯಂದಿರ ಗೋಳನ್ನು ನೋಡುವುದೂ ಅಸಾಧ್ಯ, ಕೇಳುವುದೂ ಅಸಾಧ್ಯ.
ಆಫ್ ಕೋರ್ಸ್ ಅಮ್ಮ ಅಂದ್ರೆ ಹೀರೋ, ಅಮ್ಮ ಅಂದ್ರೆ ಪ್ರೀತಿ ವಾತ್ಸಲ್ಯ, ಅಮ್ಮ ಅಂದ್ರೆ ದೇವರು, ಅಮ್ಮ ಅಂದ್ರೆ ಸರ್ವಸ್ವವೂ. ಆದರೆ, ಇದೆಲ್ಲವೂ ಮಕ್ಕಳು ಇದ್ದರೆ ತಾನೆ? ಬೇರೆಬೇರೆ ಕಾರಣಗಳಿಂದಾಗಿ ಮಕ್ಕಳನ್ನು ಕಳೆದುಕೊಂಡಿರುವ ಅಮ್ಮಂದಿರ ನೋವು, ಸಂಕಟಗಳಿಗೂ ನಾವು ಸ್ಪಂದಿಸಬೇಡವೆ? ಅಂಥ ಕೆಲವೊಂದು ಚಿತ್ರಗಳು ನಿಮ್ಮ ಕಣ್ಣ ಮುಂದಿವೆ. ಸಾಧ್ಯವಾದರೆ ಅಂಥ ಅಮ್ಮಂದಿರಿಗಾಗಿ ಅಮ್ಮನ ದಿನದಂದು ಕಂಬನಿ ಮಿಡಿಯಿರಿ.
ಐಎಎಸ್ ಅಧಿಕಾರಿ ಡಿಕೆ ರವಿ ಅಮ್ಮನ ಅರಣ್ಯರೋದನ
ಆ ಸಾವಿನ ಹಿಂದೆ ಅದ್ಯಾವ ಮಾಯಾವಿ(ಯ)ಗಳ ಕೈವಾಡವಿದೆಯೋ ಸಿಬಿಐನೇ ಭೇದಿಸಬೇಕು. ಒಬ್ಬೇ ಒಬ್ಬ ಮಗನನ್ನು ಕಳೆದುಕೊಂಡ ಗೌರಮ್ಮ ಮತ್ತು ಕರಿಯಪ್ಪ ವಿಧಾನಸೌಧದ ಮುಂದೆ ಕುಳಿತು ಅಳುತ್ತಿದ್ದರೆ ಎಂಥವರ ಕರುಳು ಚುರುಕ್ ಅನ್ನುತ್ತಿತ್ತು.
ಧೀರೋದಾತ್ತ ಯೋಧನನ್ನು ಕಳೆದುಕೊಂಡ ಅಮ್ಮ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಹತನಾದ ಮಗನನ್ನು ಕಳೆದುಕೊಂಡ ಅಮ್ಮ ಆತನ ಅಂತ್ಯಕ್ರಿಯೆಯಲ್ಲಿ ಕಂಬನಿ ಮಿಡಿಯುತ್ತಿರುವುದು. ಯೋಧ ಸೂರತ್ ಸರ್ಜೆರಾವ್ ಮೋಹಿತೆ ಮಹಾರಾಷ್ಟ್ರದ ಸಾತಾರಾದವರು.
ಎಲ್ಲಿದ್ದಿರೋ ಮಕ್ಕಳೆ?
ನೇಪಾಳದಲ್ಲಿ ಭೂಕಂಪ ಸಂಭವಿಸಿದಾಗ ಮಗ ಭರತ್ ಮತ್ತು ಸೊಸೆ ಪರಕಶ್ಳನ್ನು ಕಳೆದುಕೊಂಡಿರುವ ಜಮ್ಮುವಿನ ಅಮ್ಮನ ಮೌನಕಂಬನಿ.
ಅಮ್ಮನ ಬಿಟ್ಟು ಹೋದೆಯಾ ಮಗಳೆ?
ಅಪಘಾತದಲ್ಲಿ ಸಾವಿಗೀಡಾದ ಕಲಾವತಿ ಕೋಲಿಯ ತಾಯಿ ಸಂತೋಷ್ ಕೋಲಿಗೆ ಇನ್ನೆಲ್ಲಿ ಸಂತೋಷ?
ಕಾಮುಕರ ದೌರ್ಜನ್ಯಕ್ಕೆ ಬಲಿಯಾದ ಮಗಳ ತಾಯಿ
ಬಸ್ ಕಂಡಕ್ಟರ್ನ ಸಹಾಯಕರ ಲೈಂಗಿಕ ದೌರ್ಜನ್ಯವನ್ನು ತಪ್ಪಿಸಿಕೊಳ್ಳಲೆಂದು 13 ವರ್ಷದ ಮಗಳ ಸಮೇತ ಬಸ್ಸಿನಿಂದ ಹಾರಿದ ಅಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು. ಮಗಳು ಬದುಕಿಲ್ಲ ಎಂದು ತಿಳಿದರೆ ಅಮ್ಮನ ಹೃದಯ ಒಡೆಯದಿರುವುದೆ?
ಶೌರ್ಯಚಕ್ರ ಪಡೆದ ಮಗನ ಹೆಮ್ಮೆಯ ತಾಯಿ
ಮರಣೋತ್ತರ ಶೌರ್ಯಚಕ್ರ ಪ್ರಶಸ್ತಿಗೆ ಭಾಜನರಾದ ಬಲವಿಂದರ್ ಸಿಂಗ್ ತಾಯಿ ರಕ್ಷಾ ದೇವಿ ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು. ಪ್ರಶಸ್ತಿ ಸಿಕ್ಕ ಹೆಮ್ಮೆಯೇನೋ ಇದೆ ಆದರೆ ಮಗನೇ ಇಲ್ಲವಲ್ಲ!
ಅದ್ಯಾಕೋ ಹಿಂಗೆ ಮಾಡಿಕೊಂಡುಬಿಟ್ಟೆ?
ದೆಹಲಿಯಲ್ಲಿ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಮಗನಿಗಾಗಿ ರೋದಿಸುತ್ತಿರುವ ತಾಯಿ.