ವಿಶೇಷ ಲೇಖನ: ಅಕ್ಷಯ ತೃತೀಯ ಸುತ್ತಾ ಮುತ್ತಲಿನ ಪುರಾಣಗಳು
ಭಾರತೀಯ ಹಬ್ಬಗಳ ಸಾಲಿನಲ್ಲಿ ಅಕ್ಷಯ ತದಿಗೆಗೆ ಶ್ರೇಷ್ಠ ಸ್ಥಾನವಿದೆ. ಅದು ಮಂಗಲ ಮುಹೂರ್ತ. ಜೀವನದ ಉತ್ಕರ್ಷದ ಬಗ್ಗೆ ಸಂಕಲ್ಪಗಳೆಲ್ಲವನ್ನೂ ಸಾಕಾರಗೊಳಿಸುವ ಮಹಾಸುದಿನ.
ಭಾರತೀಯ ಹಬ್ಬಗಳ ಸಾಲಿನಲ್ಲಿ ಅಕ್ಷಯ ತದಿಗೆಗೆ ಶ್ರೇಷ್ಠ ಸ್ಥಾನವಿದೆ. ಅದು ಮಂಗಲ ಮುಹೂರ್ತ. ಜೀವನದ ಉತ್ಕರ್ಷದ ಬಗ್ಗೆ ಸಂಕಲ್ಪಗಳೆಲ್ಲವನ್ನೂ ಸಾಕಾರಗೊಳಿಸುವ ಮಹಾಸುದಿನ, ಅಕ್ಷರಾಭ್ಯಾಸ, ಮದುವೆ, ಮುಂಜಿ, ಗೃಹಪ್ರವೇಶ, ಹೊಸ ವ್ಯವಹಾರ ಆರಂಭ, ಚಿನ್ನ-ಬೆಳ್ಳಿ ಖರೀದಿಗೂ ಸೂಕ್ತವೆಂದು ನಂಬಿಕೆ, ಅಂತೆಯೇ ದಾನಕ್ಕೂ ಪ್ರಶಸ್ತವೆನಿಸಿರುವ ಈ ಶುಭ ದಿನದ ಆಚರಣೆಗಿರುವ ಸಾಮಾಜಿಕ-ಆರ್ಥಿಕ ಹಿನ್ನೆಲೆ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಹತ್ವ ಖರೀದಿ-ಹೂಡಿಕೆಗಳ ಸಂಪ್ರದಾಯದ ಹಿಂದಿನ ಔಚಿತ್ಯ, ಇವೆಲ್ಲದರ ಅವಲೋಕನ ಇಲ್ಲಿದೆ.
ಅಕ್ಷಯ ತದಿಗೆ ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ತಿಥಿಯಾಗಿದೆ. ಈ ದಿನ ಸೂರ್ಯ-ಚಂದ್ರರು ತಮ್ಮ ಗರಿಷ್ಠತಮ ಕಾಂತಿ ಹೊಂದುವುದರಿಂದ ದಿನವಿಡೀ ಮಂಗಲಕರವೇ. ಅಕ್ಷಯತದಿಗೆ ದಿನದಂದೇ ಮಹರ್ಷಿ ವೇದವ್ಯಾಸರು ಗಣಪತಿಯ ಅಮೃತಹಸ್ತದಿಂದ ಮಹಾಭಾರತ ಮಹಾಕಾವ್ಯದ ಬರವಣಿಗೆ ಅರಂಭಿಸಿದರಂತೆ. ಮಂಗಲಕಾರಕ ಮುಹೂರ್ತಗಳಲ್ಲಿ ಇದೂ ಒಂದು.[ಅಕ್ಷಯ ತದಿಗೆ: ರಿಲಯನ್ಸ್ ಜ್ಯುವೆಲ್ಸ್ ನಿಂದ ಶೇ50ರ ತನಕ ರಿಯಾಯಿತಿ]
ಭಗವಾನ್ ಶ್ರೀ ಮಹಾವಿಷ್ಣುವಿನ ಅವತಾರವೆನಿಸಿದ ಪರಶುರಾಮನ ಜನನ ಇದೇ ದಿನವೆಂದು ಪ್ರತೀತಿ. ಇನ್ನೊಂದು ವೈಶಿಷ್ಟವೆಂದರೆ ಶ್ರೀಕೃಷ್ಣನ ಅಣ್ಣನಾದ ಬಲರಾಮ ಜನನ, ಅಂದು ಹಲವೆಡೆ ಬಲರಾಮನ ಆಯುಧವಾದ ನೇಗಿಲನ್ನು ಪೂಜಿಸುವ ರೈತರು ಆ ದಿನ ಬೆಳಿಗ್ಗೆ ಗದ್ದೆಗಳಿಗೆ ಹೊರಡುವಾಗ ಪ್ರಾಣಿ - ಪಕ್ಷಿಗಳು ಕಂಡರೆ ಈ ಬಾರಿ ಉತ್ತಮ ಬೆಳೆ, ಮಳೆ ಸಂಕೇತ ಎಂದು ಸಂಭ್ರಮಿಸುತ್ತಾರೆ.
ಆಪ್ತ ಸಖನಿಗೆ ಆತ್ಮ ಸಖನ ಸ್ಥಾನ ಕೊಟ್ಟು, ಅತಿಥಿ ಸತ್ಕಾರದ ಕೀರ್ತಿಯನ್ನು ಚಿರಸ್ಥಾಯಿಯಾಗಿಸಿದ ಶ್ರೀಕೃಷ್ಣ ಕುಚೇಲನನ್ನು ಸತ್ಕರಿಸಿದ ಶ್ರೇಷ್ಠ ದಿನವೇ ಅಕ್ಷಯತದಿಗೆ. ಹಾಗೆಯೇ ಶ್ರೀಕೃಷ್ಣ ಪಾಂಡವರಿಗೆ ಅಕ್ಷಯ ಪಾತ್ರೆಯನ್ನು ಕೊಡುಗೆಯಾಗಿತ್ತ ದಿನ ಅಕ್ಷಯತದಿಗೆ. ಇನ್ನೊಂದು ಕೌತುಕಪೂರ್ಣ ಕತೆಯೂ ಅಕ್ಷಯತದಿಗೆಯ ಮಹತ್ವ ಸಾರುತ್ತದೆ. ದರ್ಶನ, ಸ್ಪರ್ಶನ, ಕೀರ್ತನ, ಸ್ನಾನ ಪಾನಾದಿಗಳ ಮೂಲಕ ಜನ್ಮಾಂತರಗಳ ಪಾಪ, ದೋಷ ತೊಳೆಯುವ ಗಂಗಾಮಾತೆ ಸ್ವರ್ಗದಿಂದ ಧರೆಗಿಳಿದ ದಿನವಿದು.[2017ರ ಅಕ್ಷಯ ತೃತೀಯಾಕ್ಕೆ ಯಾವುದು ಶುಭ-ಯಾವುದು ಅಶುಭ?]
ಸಂಪತ್ತಿನ ಒಡೆಯ, ದೇವತೆಗಳಲ್ಲೆಲ್ಲಾ ಅತಿ ಸಿರಿವಂತ, ಅಷ್ಟದಿಕ್ಪಾಲಕರಲ್ಲಿ ಒಬ್ಬನಾದ ಯಕ್ಷರಾಜ ಕುಬೇರ ಮಹಾಲಕ್ಷ್ಮಿಯ ಮಾಡುವ ಶುಭದಿನ ಈ ಅಕ್ಷಯತದಿಗೆ. ಅಕ್ಷಯತದಿಗೆಯಂದು ಮಾಡಬಹುದಾದ ಪುಣ್ಯ ಕಾರ್ಯಗಳು ಅನ್ನದಾನ, ಹಸಿರು ಹುಲ್ಲುಗಳಿಂದ, ಮೇವಿನಿಂದ ಹಸುಗಳನ್ನು ತೃಪ್ತಿಪಡಿಸುವುದು, ಅವಶ್ಯವಿರುವ ಮಗುವಿನ ವಿದ್ಯಾಭ್ಯಾಸದ ಖರ್ಚು-ವೆಚ್ಚ ನೀಡುವುದು, ದುಶ್ಚಟಗಳನ್ನು ತ್ಯಜಿಸುವುದು, ಲೌಕಿಕ ಪಾರಮಾರ್ಥಿಕ ಸಾಧನೆಯ ಆರಂಭ.[ಅಕ್ಷಯ ತೃತೀಯಾ: ಚಿನ್ನ ಖರೀದಿ ಮಾಡಿದವರು ಏನು ಹೇಳಿದರು?]