ಪರಿಸರದ ಉಳಿಕೆಗಾಗಿ ಮನಸ್ಸಿನಲ್ಲಿ ಕಸ ಕಿತ್ತು ಬಿಸಾಕಿ!
ಜೂನ್ 5 ವಿಶ್ವ ಪರಿಸರ ದಿನ. ಪರಿಸರವೆಂದರೆ ಕೇವಲ ಗಿಡ, ಮರ ಮತ್ತು ಪರ್ವತಗಳಲ್ಲ. ನಾವೂ ಸಹ ಪರಿಸರದ ಒಂದು ಭಾಗ. ನಮಗನಿಸುವ ರೀತಿ ಮತ್ತು ನಮ್ಮ ಆಲೋಚನಾ ರೀತಿ ನಮ್ಮ ಸುತ್ತಲಿನ ಪರಿಸರ ಮತ್ತು ಜನರ ಮೇಲೆ ಪ್ರಭಾವವನ್ನು ಬೀರುತ್ತದೆ. ಆದ್ದರಿಂದ ಒಬ್ಬರಿಗೊಬ್ಬರು ಆದರವನ್ನು ತೋರಿಸಿ, ನಾವೆಲ್ಲರೂ ಸಂತೋಷವಾಗಿರುವಂತೆ ಮಾಡಿದರೆ ಪರಿಸರವನ್ನು ನೋಡಿಕೊಳ್ಳುವುದರ ಭಾಗವಾಗುತ್ತದೆ.
ನಾವು ಒತ್ತಡದಿಂದಿದ್ದು ಅಸಂತೋಷವಾಗಿದ್ದಾಗ ಪರಿಸರವನ್ನು ಕಲುಷಿತಗೊಳಿಸುತ್ತಿದ್ದೇವೆ. ಕೋಪದಿಂದಿರುವ ಅಥವಾ ನಕಾರಾತ್ಮಕವಾಗಿರುವ ವ್ಯಕ್ತಿಯೊಡನೆ ಹತ್ತು ನಿಮಿಷ ಕುಳಿತು ಅವರನ್ನು ಬಿಟ್ಟು ಬಂದಾಗ, ಅವರ ನಕಾರಾತ್ಮಕತೆಯನ್ನು ನೀವೂ ಸಹ ಸ್ವಲ್ಪ ಹೊತ್ತು ಬಂದಿರುತ್ತೀರಿ. ಸಂತೋಷವಾಗಿರುವವರೊಡನೆ ಸ್ವಲ್ಪ ಕಾಲ ಕಳೆದರೆ, ಉದಾಹರಣೆಗೆ ಮಕ್ಕಳೊಡನೆ ಸ್ವಲ್ಪ ಕಾಲ ಕಳೆದರೆ, ಅವರಿಂದ ಹೊರಟು ಬರುವಾಗ ಅವರ ಸ್ವಲ್ಪ ಸಂತೋಷವನ್ನು ನೀವೂ ಸಹ ಹೊತ್ತು ಬಂದಿರುತ್ತೀರಿ.
ಪರಿಸರವನ್ನು ಕೇವಲ ದೈಹಿಕವಾಗಿ ಅಲ್ಲದೆ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿಯೂ ಸಹ ಪರಿಸರವನ್ನು ಕಲುಷಿತಗೊಳಿಸುತ್ತೇವೆ. ಇಂದು ಪರಿಸರದ ಮಾಲಿನ್ಯವು ನಕಾರಾತ್ಮಕ ಭಾವನೆಗಳಾದಂತಹ ಕೋಪ, ಅಪನಂಬಿಕೆ, ಲೋಭ, ಅಸೂಯೆ, ಇತ್ಯಾದಿಯಿಂದ ಆಗುತ್ತಿದೆ. ಮನಸ್ಸು ನಕಾರಾತ್ಮಕತೆಯಿಂದ ಕಲುಷಿತವಾಗಿದ್ದರೆ, ಪರಿಸರ ಶುದ್ಧ ವಾಗಿರಲು ಹೇಗೆ ಸಾಧ್ಯ?
ಮಡಿಕೇರಿ ಸೌಂದರ್ಯದ ಸೊಬಗು ಬಿಚ್ಚಿಟ್ಟ ಆ 4 ಚಿತ್ರಗಳು
ಸಂತೋಷವು ಪರಿಸರದೊಡನೆ ಹತ್ತಿರವಾದ ಸಂಬಂಧವನ್ನು ಹೊಂದಿದೆ. ನಾವೆಲ್ಲರೂ ಸಂತೋಷವಾಗಿಯೇ ಜನಿಸುತ್ತೇವೆ. ಪ್ರತಿಯೊಂದು ಮಗುವೂ ಸಂತೋಷವಾಗಿ ಹುಟ್ಟುತ್ತದೆ ಮತ್ತು ಸಂತೋಷವನ್ನು ಹೊರಸೂಸುತ್ತದೆ. ಆದರೆ ಬೆಳೆಯುವ ಪ್ರಕ್ರಿಯೆಯಲ್ಲಿ, ಶಿಕ್ಷಣ ಮತ್ತು ಸುತ್ತಮುತ್ತಲಿನ ಜನರನ್ನು ನಿಭಾಯಿಸುವ ಪ್ರಕ್ರಿಯೆಯಲ್ಲಿ ಎಲ್ಲೋ ಒಂದು ಕಡೆ, ನಮ್ಮೊಡನೆ ಹುಟ್ಟಿರುವ ಪ್ರಶಾಂತತೆಯನ್ನು ಮತ್ತು ಶುದ್ಧತೆಯನ್ನು ಕಳೆದುಕೊಳ್ಳುತ್ತೇವೆ. ನಮ್ಮ ನಿಜ ಸ್ವಭಾವವಾದ ಮುಗ್ಧತೆ, ಸರಳತೆ ಮತ್ತು ಪ್ರಾಮಾಣಿಕತೆಯನ್ನು ಮರಳಿ ಪಡೆಯಬೇಕಾಗಿದೆ. ಆಗ ನಾವು ಪರಿಸರದ ಬಗ್ಗೆ ನಿಜವಾದ ಕಾಳಜಿ ತೋರಿಸಿದಂತೆ.
ವಿಶ್ವ ಪರಿಸರದ ದಿನದಂದು ಕೆಳಗಿನ ಈ ಸರಳವಾದ ರೀತಿಗಳಲ್ಲಿ ಪರಿಸರ ಕಾಳಜಿಯನ್ನು ತೋರಿಸಿ:
1. ಒತ್ತಡ, ಕೋಪ ಮತ್ತು ಆಶಾಭಂಗತನವನ್ನು ಉತ್ತಮವಾಗಿ ನಿಭಾಯಿಸಿ. ಹಾಗೆಂದ ಮಾತ್ರಕ್ಕೆ ಕೋಪಿಸಿಕೊಳ್ಳಲೇಬಾರದು ಎಂದಲ್ಲ. ಆದರೆ ಕೋಪ ಬಂದಾಗ , ಮನಸ್ಸಿನಲ್ಲಿ ಅದು ಬಹಳ ಹೊತ್ತು ನಿಲ್ಲಬಾರದು. ಆಗ ಅದು ಮಲಿನವಲ್ಲ. ಮನಸ್ಸಿನಲ್ಲಿ ಕೋಪ ಬಹಳ ಕಾಲ ನಿಂತು ಬಿಟ್ಟಾಗ ಅದು ಮಲಿನತೆಯನ್ನು ಉಂಟುಮಾಡುತ್ತದೆ.
2. ಮಾನಸಿಕ ಕಸವನ್ನು ಹೊರಕ್ಕೆಸೆಯಿರಿ. ಅಪನಂಬಿಕೆ, ದ್ವೇಷ, ದೂರು ಅಥವಾ ಇನ್ನಿತರ ನಾಕಾರಾತ್ಮಕ ಭಾವನೆಗಳನ್ನು ನೀವು ಹೊತ್ತುಕೊಂಡಿದ್ದರೆ, ಅದನ್ನು ಕುಶಲತೆಯಿಂದ ನಿಭಾಯಿಸಿ. ಉತ್ಸಾಹದಿಂದ, ಸಹಜತೆಯಿಂದ ಹೊಸ ಅಧ್ಯಾಯವನ್ನು ಆರಂಭಿಸಿ.
3. ಧ್ಯಾನವನ್ನು ನಿಮ್ಮ ಜೀವನದ ಒಂದು ಭಾಗವಾಗಿ ಮಾಡಿಕೊಳ್ಳಿ. ಕಂಪನಗಳನ್ನು ಶುದ್ಧೀಕರಿಸುವ ಒಂದು ಉತ್ತಮವಾದ ರೀತಿಯೆಂದರೆ ಧ್ಯಾನ. ಧ್ಯಾನವು ನಕಾರಾತ್ಮಕ ಕಂಪನಗಳನ್ನು ಸಕಾರಾತ್ಮಕವಾಗಿ ಪರಿವರ್ತಿಸುತ್ತದೆ. ದ್ವೇಷವನ್ನು ಪ್ರೇಮವಾಗಿ, ಆಶಾಭಂಗವನ್ನು ವಿಶ್ವಾಸವಾಗಿ, ನಿರಾಶೆಯನ್ನು ಆಶೆಯಾಗಿ, ಅಜ್ಞಾನವನ್ನು ಅಂತಃಸ್ಫುರಣೆಯಾಗಿ, ಮಾರ್ಪಡಿಸುತ್ತದೆ. ಇದು ಯಾರಿಗೆ ಬೇಡ ಹೇಳಿ?
4. ನಿಮಗೆ ಕೇವಲ ಉತ್ತಮವಾದದ್ದೇ ಆಗುತ್ತದೆ ಎಂಬ ವಿಶ್ವಾಸವನ್ನು ಹೊಂದಿ.
5. ಯಾವುದಾದರೊಂದು ಕಲಾತ್ಮಕ ಅಥವಾ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿ. ಯಾವುದಾದರೊಂದು ಪ್ರದರ್ಶಿಸುವಂತಹ ಕಲಾ ಚಟುವಟಿಕೆಯಲ್ಲಿ ಭಾಗವಹಿಸಿ, ಹಾಡು, ನರ್ತನೆ, ಇತ್ಯಾದಿ. ಸುಮ್ಮನೆ ಕುಳಿತು ನೋಡುವುದಲ್ಲ, ನೀವೂ ಭಾಗವಹಿಸಿ.
6. ಸೇವೆ ಮಾಡಿ. ಅವಶ್ಯಕತೆ ಇದ್ದವರ ಬಳಿಗೆ ಹೋಗಿ ಅವರ ಸೇವೆ ಮಾಡಿ. ನನ್ನ ಬಗ್ಗೆ ಏನು? ನನ್ನ ಬಗ್ಗೆ ಏನು? ಎಂದು ಆಲೋಚಿಸುವುದನ್ನು ಬಿಡಿ. ಅದರ ಬದಲಿಗೆ, ನಾನೇನು ಮಾಡಲಿ? ನಾನು ಹೇಗೆ ಸಹಾಯ ಮಾಡಲಿ? ಈ ಜಗತ್ತಿಗೆ ನಾನು ಹೇಗೆ ಕಾಣಿಕೆ ನೀಡಲಿ? ಎಂದು ಆಲೋಚಿಸಲು ಆರಂಭಿಸಿ.
ಈ ರೀತಿಯ ಸಂಕಲ್ಪಗಳಿಂದ ನಮ್ಮ ಕಂಪನಗಳು ಬದಲಿಸುತ್ತವೆ ಮತ್ತು ನಾವು ಹೆಚ್ಚು ಸಂತೋಷವಾಗಿರುತ್ತೇವೆ. ಸಂತೋಷವಾದ ಮನಸ್ಸಿನ ಸ್ಥಿತಿಯು, ನಕಾರಾತ್ಮಕತೆಯಿಂದ ಮುಕ್ತವಾಗಿರುವ ಮನಸ್ಸಿನ ಸ್ಥಿತಿಯು ಮಾಲಿನ್ಯ ರಹಿತ ಪರಿಸರಕ್ಕೆ ಅತ್ಯಾವಶ್ಯಕ.