ಉತ್ಥಾನ ದ್ವಾದಶಿ: ತುಳಸಿ ಮದುವೆಯ ಆಚರಣೆ ಏಕೆ? ಹೇಗೆ?
Recommended Video
ತುಳಸಿ ಎಂದರೆ ಒಸಿಮಮ್ ಬೆಸಿಲಿಕಂ ಎಂಬ ಸಸ್ಯಶಾಸ್ತ್ರೀಯ ಹೆಸರು ಪಡೆದ, ಲಾಮಿಯಾಸಿಯೇ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಔಷಧೀಯ ಸಸ್ಯ ಎಂದರೆ ಸಸ್ಯಶಾಸ್ತ್ರದ ವಿದ್ಯಾರ್ಥಿಗಳು, ವಿದೇಶಿಯರು ತಲೆಯಲ್ಲಾಡಿಸಬಹುದು. ಆದರೆ ಹಿಂದುಗಳ ಪಾಲಿಗೆ ಈ ತುಳಸಿ ಎಂದರೆ ಇಷ್ಟೇ ಅಲ್ಲ.
ತುಳಸಿ ಹಬ್ಬದಂದು ಸಂಭ್ರಮದಿ ದೀಪ ಬೆಳಗಿಸಿ
ಸಮುದ್ರ ಮಂಥನದ ಸಮಯದಲ್ಲಿ ಅವತರಿಸಿದ ತುಳಸಿಯನ್ನು ಮನೆಯ ಮುಂಬದಿಯ ಅಂಗಳದಲ್ಲಿ ಬೆಳೆಸಿ ಪ್ರತಿದಿನ ಪೂಜಿಸುವವರು ನಾವು, ಅದಕ್ಕೊಂದು ಕಟ್ಟೆ ಕಟ್ಟಿ ಒಪ್ಪವಾಗಿ ಕಾಪಿಟ್ಟವರು ನಾವು, ಪ್ರತಿವರ್ಷ ಉತ್ಥಾನ ದ್ವಾದಶಿಯಂದು ವಿಷ್ಣು ಸ್ವರೂಪಿ ನೆಲ್ಲಿ ಗಿಡದೊಂದಿಗೆ ತುಳಸಿಯ ವಿವಾಹವನ್ನು ಶ್ರದ್ಧಾ ಭಕ್ತಿಯಿಂದ ಮಾಡಿ ಹಿಗ್ಗುವವರು ನಾವು!
ವಿಷ್ಣುಪ್ರಿಯೆ, ಶುಭದಾಯಿನಿ ಮಾತೆ ತುಳಸಿ ನಮೋ ನಮಃ
ನ.1, ಬುಧವಾರದಂದು ಉತ್ಥಾನ ದ್ವಾದಶಿ. ಪ್ರತಿವರ್ಷ ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ತುಳಸಿ ವಿವಾಹ ಮಾಡುವ ಪರಿಪಾಠ ನಮ್ಮಲ್ಲಿ ಎಂದಿನಿಂದಲೋ ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನಾಳೆಯ ಮದುವೆಗೆ ಸಿದ್ಧತೆ ನಡೆಸುತ್ತಿರುವ ಎಲ್ಲ ಹೆಂಗೆಳೆಯರಿಗೂ ತುಳಸಿ ವಿವಾಹದ ಕುರಿತ ಒಂದಷ್ಟು ಉಪಯುಕ್ತ ಮಾಹಿತಿ ಇಲ್ಲಿದೆ.
ತುಳಸಿ ಹಬ್ಬದ ಹಿನ್ನೆಲೆ
ಪುರಾಣಗಳ ಪ್ರಕಾರ ತುಳಸಿ ಜಲಂಧರ ಎಂಬ ರಾಕ್ಷಸನ ಪತ್ನಿ. ವೃಂದಾ ಎಂಬುದು ಆಕೆಯ ಇನ್ನೊಂದು ಹೆಸರು. ಲೋಕಕಂಟಕನಾಗಿದ್ದರೂ ಜಲಂಧರ ಪತ್ನಿಯ ಪುಣ್ಯಫಲದಿಂದಾಗಿ ಯಾರಿಂದಲೂ ತನ್ನನ್ನು ಸೋಲಿಸಲಾಗದ ಮಟ್ಟಿಗೆ ಶಕ್ತಿ ಪಡೆದಿರುತ್ತಾನೆ. ಹೀಗಿರುವಾಗ ಜಲಂಧರನ ಉಪಟಳ ತಾಳಲಾರದೆ ದೇವತೆಗಳೆಲ್ಲ ವಿಷ್ಣುವಿನ ಮೊರೆಹೋಗುತ್ತಾರೆ. ಜಲಂಧರನ ವೇಷದಲ್ಲಿ ಬಂದು ವಿಷ್ಣು ವೃಂದಾಳೊಂದಿಗೆ ಸರಸವಾಡುತ್ತಾನೆ. ಅದರಿಂದ ಆಕೆಯ ಪಾತಿವ್ರತ್ಯ ನಾಶವಾಗಿ ಜಲಂಧರ ಯುದ್ಧದಲ್ಲಿ ಮಣಿಯುತ್ತಾನೆ, ಮಡಿಯುತ್ತಾನೆ. ಸತ್ಯ ಅರಿತ ವೃಂದಾ ವಿಷ್ಣುವನ್ನು ಶಪಿಸಿ, ಆತ ಸಾಲಿಗ್ರಾಮವಾಗಲಿ ಎಂದು ಶಾಪ ನೀಡಿ ಚಿತೆಯೇರುತ್ತಾಳೆ.
ಬೆಟ್ಟದ ನೆಲ್ಲಿಕಾಯಿಯ ಸ್ಪೆಷಾಲಿಟಿ ಒಂದೇ ಎರಡೇ
ತುಳಸಿಯಾಗಿ ಜನ್ಮ ತಾಳುವ ವೃಂದಾ
ಪತಿವಿಯೋಗದ ನಂತರ ಪತಿವೃತೆ ವೃಂದಾ ತುಳಸಿಯಾಗಿ ಜನ್ಮತಾಳುತ್ತಾಳೆ. ಪ್ರತಿ ಮಹಿಳೆಯೂ ತನ್ನ ಪತಿಯ ಆಯುಷ್ಯ ವೃದ್ಧಿಗೆ, ಪತಿಯ ಒಳಿತಿಗೆ ತುಳಸಿಯನ್ನು ಪೂಜಿಸುವ ರೂಢಿಯಿದೆ. ಕಾರ್ತಿಕ ಮಾಸದಲ್ಲಿ ನೆಲ್ಲಿ ಗಿಡದಲ್ಲಿ ವಿಷ್ಣು ಇರುತ್ತಾನೆ ಎಂಬ ನಂಬಿಕೆ ಇರುವುದರಿಂದ ಉತ್ಥಾನ ದ್ವಾದಶಿಯಂದು ವಿಷ್ಣುವಿನೊಂದಿಗೆ ತುಳಸಿಯ ವಿವಾಹ ಮಹೋತ್ಸವ ನಡೆಯುತ್ತದೆ.
ತುಳಸಮ್ಮ ಯಾರು? ಅವಳಿಗಾದ ಅನ್ಯಾಯವೇನು?
ತುಳಸಿ ಪೂಜೆ ಹೇಗೆ?
ಪ್ರತಿ ಹಿಂದುಗಳ ಮನೆಯಲ್ಲಿಯೂ ತುಳಸಿ ಗಿಡ ಇದ್ದೇ ಇರುತ್ತದೆ. ಉತ್ಥಾನ ದ್ವಾದಶಿಯಂದು ತುಳಸಿ ಕಟ್ಟೆಯನ್ನು ಶುಚಿಗೊಳಿಸಿ, ಪುಟ್ಟ ಮಂಟಪ ತಯಾರಿಸಿ, ಅಲಂಕರಿಸಿ, ರಂಗೋಲಿ ಇಟ್ಟು, ಸುತ್ತ ಹಣತೆ ಬೆಳಗಿಸಿ, ಮಾವಿನ ತೋರಣ ಕಟ್ಟಿ ಪೂಜೆ ಮಾಡಬೇಕು. ತುಳಸಿಯ ಪಕ್ಕದಲ್ಲಿ ಚಿಕ್ಕ ನೆಲ್ಲಿ ಟೊಂಗೆಯನ್ನು ಇಡಬೇಕು. ಅದು ವಿಷ್ಣು ಸ್ವರೂಪ.
ದೈವಿಕ ಕಾರ್ಯದ ಸಂಕೇತ ತುಳಸಿ
ಪವಿತ್ರ ತುಳಸಿ ಎಲ್ಲ ದೈವಿಕ ಕೆಲಸಗಳಿಗೂ ಅತ್ಯಗತ್ಯ. ಅದರ ಎಲೆ, ಹೂವು, ಬೀಜ ಎಲ್ಲವೂ ಪವಿತ್ರ. ಯಾರು ತನ್ನ ಬಳಿ ತುಳಸಿಯನ್ನಿಟ್ಟುಕೊಳ್ಳುತ್ತಾನೋ ಅವನೊಂದಿಗೆ ಶ್ರೀಕೃಷ್ಣ ಸದಾ ನೆಲೆಸಿರುತ್ತಾನೆ ಎಂಬ ನಂಬಿಕೆಯಿದೆ.
ತುಳಸಿವನದ ಶ್ರೇಷ್ಠತೆ
ತುಳಸಿವನವನ್ನು ಬೆಳೆಸುವವನು ಎಲ್ಲ ಪಾಪದಿಂದ ಮುಕ್ತನಾಗುತ್ತಾನೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲ, ಮನೆಯ ಸುತ್ತ ತುಳಸಿವನ ನಿರ್ಮಿಸುವುದರಿಂದ ವ್ಯಕ್ತಿಯ ಆರೋಗ್ಯದಲ್ಲಿ ಗಣನೀಯ ಪ್ರಮಾಣದ ಸುಧಾರಣೆ ಕಾಣಬಹುದು ಎಂಬುದು ವೈದ್ಯಕೀಯವಾಗಿಯೂ ಸಾಬೀತಾದ ಸತ್ಯ.
ವಿಷ್ಣು ಸೂಕ್ತ ಪಠಿಸಿ
ಇದು ವಿಷ್ಣುವನ್ನೂ ಪೂಜಿಸುವ ಹಬ್ಬವಾದ್ದರಿಂದ ತುಳಸಿಗೆ ಅರಿಶಿಣ ಕುಂಕುಮ ಹಚ್ಚಿ, ಹೂವುಗಳಿಂದ ಸಿಂಗರಿಸಿ ನಂತರ ವಿಷ್ಣುಸೂಕ್ತ ಪಠಿಸುತ್ತಾ ಪೂಜೆ ಮಾಡುವುದು ಶ್ರೇಷ್ಠ. ಅಥವಾ ತುಳಸಿಗೆ ಸಂಬಂಧಿಸಿದ ಶ್ಲೋಕವನ್ನು ಓದಿದರೂ ಆದೀತು. ಭಕ್ತಿ ಮುಖ್ಯ ಅಷ್ಟೆ.
ದೀಪ ಬೆಳಗುವ ಪದ್ಧತಿ
ಈ ದಿನ ಫಲಾಹಾರ, ಕೋಸುಂಬರಿ, ಅವಲಕ್ಕಿ, ಕಡಲೆಕಾಯಿ ಉಸುಳಿ ಸೇರಿದಂತೆ ಬೇರೆ ಬೇರೆ ಖಾದ್ಯಗಳನ್ನು ತಯಾರಿಸಿ ಊರಿಗೆಲ್ಲ ಹಂಚುವ ಪದ್ಧತಿ ಗ್ರಾಮೀಣ ಪ್ರದೇಶಗಳಲ್ಲಿದೆ. ಚಿಕ್ಕ ಮಕ್ಕಳಿಗೆ ದಕ್ಷಿಣೆ ನೀಡುವ ಪದ್ಧತಿಯೂ ಇದೆ. ಕಾರ್ತಿಕ ಮಾಸದಲ್ಲಿ ಬೇಗ ಕತ್ತಲಾಗುವುವದರಿಂದ ಪ್ರತಿದಿನವೂ ತುಳಸಿ ಕಟ್ಟೆಯ ಮುಂದೆ ದೀಪ ಹಚ್ಚಿಡುವ ಪದ್ಧತಿ ಇದೆ.
ತುಳಸಿ ಎಂಬ ಸಂಜೀವಿನಿ
ಹಿಂದುಗಳ ಪಾಲಿಗೆ ಪೌರಾಣಿಕವಾಗಿ ಮಹತ್ವ ಹೊಂದಿರುವ ತುಳಸಿ ಆರೋಗ್ಯಕ್ಕೂ ಹಲವು ರೀತಿಯಲ್ಲಿ ಒಳ್ಳೆಯದು ಎಂದು ವೈಜ್ಞಾನಿಕವಾಗಿಯೇ ಸಾಬೀತಾಗಿದೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಉಳಸಿಗೆ ಅಗ್ರಸ್ಥಾನ.