ಇಂದು ಸ್ವರ್ಣಗೌರಿ ವ್ರತ: ಆಚರಣೆ ಏಕೆ? ಹೇಗೆ? 7 ಸಂಗತಿ
Recommended Video
ಶ್ರಾವಣ ಕಳೆದು, ಭಾದ್ರಪದ ಮಾಸ ಅಡಿಯಿಟ್ಟಾಗಿದೆ. ಹಿಂದುಗಳ ಅದ್ಧೂರಿ ಹಬ್ಬ ಗಣೇಶ ಚತುರ್ಥಿಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಗಣೇಶ ಚತುರ್ಥಿಗೂ ಮುನ್ನಾ ದಿನ ಆಚರಣೆಗೊಳ್ಳುವ ಗೌರಿ ತದಿಗೆ ಅಥವಾ ಸ್ವರ್ಣಗೌರಿ ವ್ರತ ಈ ವರ್ಷ ಸೆ.12, ಬುಧವಾರದಂದು ನಡೆಯಲಿದೆ.
ಸುಮಂಗಲಿಯರು ಕುಟುಂಬದ ಆಯುರಾರೋಗ್ಯ ಬೇಡಿ, ಶ್ರದ್ಧೆ, ಭಕ್ತಿಯಿಂದ ಆಚರಿಸುವ ಈ ವ್ರತ ಮುತ್ತೈದೆಯರ ಪಾಲಿಗೆ ಅತ್ಯಂತ ಮಹತ್ವದ್ದು. ಮುತ್ತೈದೆತನ ಕಾಪಾಡುವಂತೆ ಬೇಡಿ, ಕನಿಷ್ಠ ಐದು ಮುತ್ತೈದೆಯರಿಗೆ ಬಾಗಿನ ನೀಡುವ ಮೂಲಕ ಈ ಹಬ್ಬದ ಆಚರಣೆ ನಡೆದುಕೊಂಡುಬಂದಿದೆ.
ಸುವರ್ಣ ಗೌರಿ ವ್ರತ: ತಿಳಿದಿರಲಿ ಈ 17 ಸಂಗತಿ
ಹಲವು ಮನೆಗಳಲ್ಲಿ ಗಣೇಶನ ಹಬ್ಬಕ್ಕಿಂತ ಅದ್ಧೂರಿಯಾಗಿ ಗೌರಿ ಹಬ್ಬ ನಡೆಯುತ್ತದೆ. ಪತಿಯ ಆಯಸ್ಸು ವೃದ್ಧಿ, ಕುಟುಂಬದ ಶ್ರೇಯಸ್ಸಿಗಾಗಿ ಮುತ್ತೈದೆಯರು ಆಚರಿಸುವ ಈ ವ್ರತದ ಹಿನ್ನೆಲೆ ಏನು? ಇದರ ಆಚರಣೆ ಹೇಗೆ? ಇಲ್ಲಿದೆ ಕೆಲವು ಮಾಹಿತಿ.
ಶಿವನ ಅರ್ಧಾಂಗಿ ಸ್ವರ್ಣಗೌರಿ
ದಕ್ಷಮಹಾರಾಜನ ಮಗಳಾದ ದಾಕ್ಷಾಯಿಣೆಯೇ ಶಿವನ ಪತ್ನಿ ಗೌರಿ. ತವರಿನಲ್ಲಿ ನಡೆಯುತ್ತಿದ್ದ ಮಹಾಯಾಗಕ್ಕೆ ತೆರಳಿ ಪತಿ ಮತ್ತು ತಾನು ಅವಮಾನ ಅನುಭವಿಸಿದ್ದನ್ನು ಸಹಿಸಲಾಗದೆ ಯಜ್ಞಕುಂಡದಲ್ಲೇ ಪ್ರಾಣತ್ಯಾಗ ಮಾಡುತ್ತಾಳೆ ದಾಕ್ಷಾಯಿಣಿ. ನಂತರ ಶಿವಭಕ್ತವಾದ ಹಿಮವಂತ ಮತ್ತು ಮೇನಾದೇವಿಯರ ಮಗಳಾಗಿ ಹುಟ್ಟಿದ ಗೌರಿ ನಂತರ ತಾರಕಾಸುರನನ್ನು ವಧಿಸುವ ನೆಪದೊಂದಿಗೆ ಮತ್ತೆ ಶಿವನನ್ನು ಒಲಿಸಿಕೊಂಡು, ಆತನ ಮನದೊಡತಿಯಾಗುತ್ತಾಳೆ.
ಉಪವಾಸ ವ್ರತಾಚರಣೆ
ಈ ದಿನದಂದು ಹರತಾಳಿಕಾ ಉಪವಾಸ ಮಾಡುವ ಮೂಲಕ ಪಾರ್ವತಿ ಶಿವನನ್ನು ಒಲಿಸಿಕೊಂಡಳು ಎಂಬ ಪ್ರತೀತಿ ಇದೆ. ಆದ್ದರಿಂದಲೇ ಈ ದಿನ ಉಪವಾಸ ಆಚರಸುವುದು ಶ್ರೇಷ್ಠ. ಈ ದಿನ ಗೌರಿಯನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳೂ ಪೂರೈಸುತ್ತದೆ ಎಂಬ ನಂಬಿಕೆ ಇದೆ.
ಸ್ವರ್ಣಗೌರೀವ್ರತದ ಹಿನ್ನೆಲೆ, ವಿಶೇಷತೆ ಮತ್ತು ಸಿದ್ಧತೆ
ಗೌರಿಗೆ ಷೋಡಶೋಪಚಾರ
ಅಭಿಷೆಕ, ಸ್ನಾನ, ಗಂಧ, ಕುಂಕುಮ, ವಸ್ತ್ರ... ಹೀಗೇ ಹದಿನಾರು ಬಗೆಯ ಉಪಚಾರಗಳನ್ನು ಮಂಟಪದಲ್ಲಿರುವ ಗೌರಿಗೆ ಮಾಡಲಾಗುತ್ತದೆ. ಇದೇ ಷೋಡಶೋಪಚಾರ. ಕೊನೆಗೆ ಸಿಹಿ ಖಾದ್ಯದ ನೈವೇದ್ಯದೊಂದಿಗೆ ಗೌರಿಯನ್ನು ಸಂತೃಪ್ತಿಗೊಳಿಸಲಾಗುತ್ತದೆ. ಪೂಜೆಗೂ ಮುನ್ನ ಗೌರಿಗಾಗಿ ನಿರ್ಮಿಸುವ ಮಂಟಪವೂ ಪ್ರಾಮುಖ್ಯತೆ ಪಡೆದಿದ್ದು, ಕೆಲವರು ವರ್ಷದ ಅತ್ಯಂತ ಅದ್ಧೂರಿ ಹಬ್ಬವನ್ನಾಗಿ ಸ್ವರ್ಣಗೌರಿ ವ್ರತವನ್ನು ಆಚರಿಸುತ್ತಾರೆ.
ಸ್ವರ್ಣಗೌರಿ ವ್ರತಾಚರಣೆ ಹೇಗೆ?
ಗೌರಿ ತದಿಗೆಯಂದು ಬೆಳಿಗ್ಗೆ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು ರಂಗೋಲಿ ಬರೆದು ಪೂಜೆಗೆ ಅಣಿಯಾಗಿ. ಅರಿಶಿಣದಿಂದ ಮಾಡಿದ ಅಥವಾ ಮಾರುಕಟ್ಟೆಯಿಂದ ತಂದ ಗೌರಿ ವಿಗ್ರಹವನ್ನು ಪೂಜಾ ಕೊಠಡಿಯಲ್ಲಿ ಪ್ರತಿಷ್ಠಾಪಿಸಿ. ನಂತರ ಗೆಜ್ಜೆ ವಸ್ತ್ರಾದಿಗಳಿಂದ ಗೌರಿಯನ್ನು ಅಲಂಕರಿಸಿ. ಮಂಟಪ, ಅಲಂಕಾರಗಳು ಅವರವರ ಅನುಕೂಲಕ್ಕೆ ಬಿಟ್ಟಿದ್ದು. ಯಾವ ಅಲಂಕಾರವಿಲ್ಲದಿದ್ದರೂ ಭಕ್ತಿಯಿಂದ ಪೂಜಿಸಿದರೂ ಸಾಕು.
ಸಂತಾನ ಕರುಣಿಸುವ ಕುದೇರು ಗ್ರಾಮದ ಹಿಟ್ಟಿನ ಗೌರಮ್ಮ
ಕಳಶ, ರಂಗೋಲಿ
ತಾಮ್ರ, ಬೆಳ್ಳಿ ಅಥವಾ ಸ್ಟೀಲ್ ನ ಕಳಶಕ್ಕೆ ನೀರು ತುಂಬಿ ಅದಕ್ಕೆ ಕುಂಕುಮ, ಅರಿಶಿಣ, ಅಕ್ಷತೆ ಮತ್ತು ನಾಣ್ಯಗಳನ್ನು ಹಾಕಿ. ನಂತರ ಕಳಶದ ಮೇಲ್ಭಾಗದಲ್ಲಿ ವೀಳದೆಲೆ ಇಟ್ಟು ಅದರ ಮೇಲೆ ಅರಿಶಿಣ-ಕುಂಕುಮ ಬಳಿದ ತೆಂಗಿನ ಕಾಯಿಯನ್ನು ಇಡಿ. ನಂತರ ಬರೆದ ರಂಗೋಲಿಯ ಮೇಲೆ ತಟ್ಟೆಯೊಂದನ್ನು ಇಟ್ಟು, ಅದರ ಮೇಲೆ ಅಕ್ಕಿ ಸುರಿದು, ಅರದ ಮೇಲೆ ಕಳಶವನ್ನಿಡಿ.
ಗೌರಿಯ ಪೂಜೆ
ಕೆಲವರು ಈ ದಿನ ಉಪವಾಸ ಇದ್ದು ವ್ರತಾಚರಣೆ ಮಾಡುತ್ತಾರೆ. ಗೌರಿ ಪೂಜೆಗೂ ಮುನ್ನ ವಿಘ್ನನಾಶಕ ಗಣೇಶನ ಪೂಜೆ. ನಂತರ ಗೌರಿ ಅಷ್ಟೋತ್ತರ, ಅಥವಾ ಗೌರಿಯನ್ನು ಸ್ತಿತಿಸುವ ಯಾವುದೇ ಶ್ಲೋಕ, ಭಜನೆಯೊಂದಿಗೆ ಭಕ್ತಿಯಿಂದ ವ್ರತಾಚರಿಸಬೇಕು. ಈ ಸಂದರ್ಭದಲ್ಲಿ ಹದಿನಾರು ಸುತ್ತಿನ ಪವಿತ್ರದಾರವನ್ನು ಪೂಜಿಸಿ, ದೇವಿ ಗೌರಿಯ ಆಶೀರ್ವಾದ ಎಂಬಂತೆ ಅದನ್ನು ಕೈಗೆ ಕಟ್ಟಿಕೊಳ್ಳಲಾಗುತ್ತದೆ. ಇದಕ್ಕೆ ಗೌರಿದಾರ ಎಂಬ ಹೆಸರು. ಈ ದಿನ ಒಬ್ಬಟ್ಟು, ಪಾಯಸ, ಕೋಸುಂಬರಿ ಸೇರಿದಂತೆ ಬಗೆಗೆ ಬಗೆಯ ಖಾದ್ಯಗಳನ್ನು ಮಾಡಿ ನೈವೇದ್ಯ ಮಾಡಲಾಗುತ್ತದೆ.
ಗಣೇಶನ ಮೂರ್ತಿಯನ್ನು ನೀರಲ್ಲಿ ಮುಳುಗಿಸೋದು ಯಾಕೆ ಗೊತ್ತಾ?
ಗೌರಿ ಬಾಗೀನದ ಮಹತ್ವ
ಸುಮಂಗಲಿಯರು ಮುತ್ತೈದೆ ತನವನ್ನು ಬೇಡುತ್ತ ಕನಿಷ್ಠ ಐದು ಮುತ್ತೈದೆಯರಿಗಾದರೂ ಬಾಗೀನ ನೀಡಬೇಕು ಎಂಬ ಪದ್ಧತಿ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಅರಿಶಿಣ-ಕುಂಕುಮ, ಬಳೆ, ಕರಿಮಣಿ, ಬಾಚಣಿಗೆ, ಸೀರೆ(ಅನುಕೂಲ ಇದ್ದವರು), ಬಲೌಸ್ ಪೀಸ್, ಕಾಯಿ, ಹಣ್ಣು, ಧಾನ್ಯಗಳನ್ನೊಳಗೊಂಡ ಬಾಗೀನವನ್ನು ಮುತ್ತೈದೆಯರಿಗೆ ನೀಡಲಾಗುತ್ತದೆ. ಮದುವೆಯಾದ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಗೌರಿ ಹಬ್ಬದಂದು ಬಾಗೀನ ಇಟ್ಟು, ಅದನ್ನು ತಮ್ಮ ತಾಯಿಗೆ ನಂತರ ಕೊಡುವ ಪರಿಪಾಠ ಮಲೆನಾಡಿನ ಕಡೆಗಳಲ್ಲಿದೆ.