ಎಂಜಿನಿಯರ್ ಗಳ ದಿನ, ಭಾರತದ ಹೆಮ್ಮೆಯ ಎಂಜಿನಿಯರ್ ಗಳಿಗೆ ನಮೋನ್ನಮಃ
ಎಂಜಿನಿಯರುಗಳಿಗೆ ನಮೋನ್ನಮಃ. ಪ್ರಾತಃಸ್ಮರಣೀರೆನಿಸಿದ ವಿಶ್ವೇಶ್ವರಯ್ಯನವರಿಂದ ಮೊದಲುಗೊಂಡು, ಒಂದು ವೇಳೆ ಅದಕ್ಕೂ ಮೊದಲು ಸಾಧನೆ ಮಾಡಿಯೂ ಎಲೆ ಮರೆ ಕಾಯಿಯಂತೆ ಉಳಿದುಹೋದ ಎಲ್ಲ ಎಂಜಿನಿಯರುಗಳಿಗೆ ಒಂದು ನಮಸ್ಕಾರ. ನಮ್ಮ ಇಂದಿನ ಬದುಕನ್ನು ನಿನ್ನೆಗಿಂತ ಚೆಂದಗಾಣಿಸಿ, ಇಂದಿಗಿಂತ ನಾಳೆಯು ಹೆಚ್ಚು ಆಶಾದಾಯಕವಾಗಿರುತ್ತದೆ ಎಂಬ ಭರವಸೆ ಮೂಡಿಸುವ ವೃತ್ತಿಗಳಲ್ಲಿ ಇದೂ ಒಂದು.
ಅಭಿಜಾತ ಅಭಿಯಂತ ಸರ್ ಎಮ್ ವಿಶ್ವೇಶ್ವರಯ್ಯ
ಸ್ಪಷ್ಟ ಗುರಿ, ಆಕಾಶದೆತ್ತರದ ಕನಸುಗಳನ್ನು ಬೊಗಸೆಯಲ್ಲಿಟ್ಟುಕೊಂಡು ಎಲ್ಲರಿಗೂ ಹಂಚುತ್ತಾ, ಆ ಕನಸುಗಳನ್ನು ಸಾಕಾರ ಮಾಡುತ್ತಾ ಸಾಗುವ ಎಂಜಿನಿಯರ್ಸ್ ಗಳಿಗೆ ಮೀಸಲಾದ ದಿನ ಸೆಪ್ಟೆಂಬರ್ 15- ಎಂಜಿನಿಯರ್ ಗಳ ದಿನ. ಕರ್ನಾಟಕವೇ ಹೆಮ್ಮೆಯಿಂದ ಕಾಣುವ, ಲಕ್ಷಾಂತರ ಮಂದಿಯ ಮನೆಯಲ್ಲಿ ದೇವರಂತೆ ಕಂಡು, ಫೋಟೋಗಳನ್ನಿಟ್ಟುಕೊಂಡು ನಮಿಸುವ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನ.
ಸರ್ ಎಂವಿ ಜನ್ಮದಿನ: ಟ್ವಿಟ್ಟರ್ ನಲ್ಲಿ ಇಂಜಿನಿಯರ್ ದಿನಕ್ಕೆ ಶುಭಾಶಯದ ಮಹಾಪೂರ
ಈ ಸಂದರ್ಭದಲ್ಲಿ ಭಾರತವೇ ಹೆಮ್ಮೆ ಪಡುವಂತೆ ಮಾಡಿರುವ ಕೆಲ ಎಂಜಿನಿಯರ್ ಗಳನ್ನು ಸ್ಮರಿಸೋಣ. ಅವರ ಸಾಧನೆಯ ಬಗ್ಗೆ ನೆನಪಿಸಿಕೊಳ್ಳಲು ಈ ದಿನವನ್ನು ನೆಪವಾಗಿಸಿಕೊಳ್ಳೋಣ. ಇಲ್ಲಿರುವ ಕೆಲವು ಮಂದಿ ಸಂಕೇತಗಳಂತೆ. ಇಂಥ ಅದೆಷ್ಟೋ ಸಾಧಕರು ಇದ್ದಾರೆ. ಅವರೆಲ್ಲರ ಪರವಾಗಿ ಇವರಿಗೊಂದು ಸಲಾಂ.
ಸುಂದರ್ ಪಿಚೈ
ಪಿಚೈ ಬಗ್ಗೆ ಹೇಳಲು ಆರಂಭಿಸಿದರೆ ಪ್ರವಚನಕ್ಕಾಗುವಷ್ಟು ಸಾಮಗ್ರಿಗಳಿವೆ. ಸಂಕ್ಷಿಪ್ತವಾಗಿ ಹೇಳುವುದೇ ಉತ್ತಮ. ಜಗತ್ತಿನ ಅತಿದೊಡ್ಡ ಟೆಕ್ ಕಂಪೆನಿಗಳಲ್ಲಿ ಒಂದಾದ ಗೂಗಲ್ ನ ಸಿಇಒ (ಚೀಫ್ ಎಕ್ಸ್ ಕ್ಯೂಟಿವ್ ಆಫೀಸರ್) ಸುಂದರ್ ಪಿಚೈ. ಖರಗ್ ಪುರ್ ಐಐಟಿಯ ಪ್ರತಿಭೆ.
ಹುಟ್ಟಿದ್ದು ಸಿಂಗಾರ ಚೆನ್ನೈನಲ್ಲಿ. ಐಐಟಿ ಖರಗ್ ಪುರ್ ನ ಮೆಟಲರ್ಜಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದವರು ಆ ನಂತರ ಎಂ.ಎಸ್ ಗಾಗಿ ಸ್ಟ್ಯಾನ್ ಫೋರ್ಡ್ ವಿ.ವಿಗೆ. ಅದಾದ ಮೇಲೆ ಎಂಬಿಎ ಪೂರ್ಣಗೊಳಿಸಿದ್ದು ವಾರ್ಟನ್ ಸ್ಕೂಲ್ ಆಫ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ. ಇವೆಲ್ಲ ಇತಿಹಾಸ. ಆದರೆ ವರ್ತಮಾನದಲ್ಲಿ ಸುಂದರ್ ಪಿಚೈ ಇಡೀ ಜಗತ್ತು ಬೆರಗಾಗಿ ನೋಡುತ್ತಿರುವ ಭಾರತ ಮೂಲದ ಎಂಜಿನಿಯರ್.
ಎನ್.ಆರ್.ನಾರಾಯಣಮೂರ್ತಿ
ಭಾರತದ ಐಟಿ ವಲಯದ ಪರ್ಯಾಯ ಹೆಸರು. ಮಾಹಿತಿ ತಂತ್ರಜ್ಞಾನ ಎಂಬ ಪದಕ್ಕೆ ಮತ್ತೊಂದು ಹೆಸರು ಎನ್.ಆರ್.ನಾರಾಯಣ ಮೂರ್ತಿ. ಇನ್ಫೋಸಿಸ್ ಕಂಪೆನಿಯ ಸ್ಥಾಪಕರಲ್ಲಿ ಒಬ್ಬರು. ಬೆಂಗಳೂರಿನಲ್ಲಿ ಜನಿಸಿದ ಕೂಸು ಇನ್ಫೋಸಿಸ್ ಜಾಗತಿಕ ಮಟ್ಟದಲ್ಲೂ ದೊಡ್ಡ ಮಟ್ಟದ ಹೆಸರು ಮಾಡಿದೆ.
ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಮೈಸೂರಿನಲ್ಲಿ ಪದವಿ ಮುಗಿಸಿದ ನಾರಾಯಣ ಮೂರ್ತಿ, ಐಐಟಿ ಕಾನ್ಪುರದಲ್ಲಿ ಎಂ.ಟೆಕ್ ಮುಗಿಸಿದವರು. ಕನ್ನಡಿಗರು ಹಾಗೂ ಕನ್ನಡದ ನೆಲದಲ್ಲಿ ಕಾಲೂರಿ ನಿಂತಿರುವವರು.
ಸತ್ಯ ನಾಡೆಲ್ಲ
ಸತ್ಯ ನಾಡೆಲ್ಲ- ಕಂಪ್ಯೂಟರ್ ಗಳಿರುವ ಮನೆ-ಮನಗಳಲ್ಲಿ ಅಚ್ಚಾಗಿರುವ ಮೈಕ್ರೋಸಾಫ್ಟ್ ಕಂಪೆನಿಯ ಸಿಇಒ. ಸತ್ಯ ನಾಡೆಲ್ಲ ಮೂಲತಃ ಹೈದರಾಬಾದ್ ನವರು. ಎಂಜಿನಿಯರಿಂಗ್ ಪದವಿ ಪಡೆದದ್ದು ಮಣಿಪಾಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ. ಆ ನಂತರ ಕಂಪ್ಯೂಟರ್ ಸೈನ್ಸ್ ನಲ್ಲಿ ಎಂ.ಎಸ್. ಪೂರ್ಣಗೊಳಿಸಿದ್ದು ಅಮೆರಿಕದ ವಿಸ್ಕಾನ್ಸಿನ್ ವಿ.ವಿಯಲ್ಲಿ ಮತ್ತು ಎಂಬಿಎ ಪೂರ್ಣಗೊಳಿಸಿದ್ದು ಷಿಕಾಗೋ ವಿಶ್ವವಿದ್ಯಾಲಯದಲ್ಲಿ.
ಸಚಿನ್ ಮತ್ತು ಬಿನ್ನಿ ಬನ್ಸಾಲ್
ಭಾರತದಲ್ಲಿ ಇ ಕಾಮರ್ಸ್ ಕಂಪೆನಿಗಳು ಎಂಬ ವಿಷಯದ ಬಗ್ಗೆ ಮಾತನಾಡಲು ಆರಂಭಿಸಿದರೆ ಫ್ಲಿಪ್ ಕಾರ್ಟ್ ಹೆಸರು ಹೇಳದಿರಲು ಸಾಧ್ಯವೆ?! ಅಂಥ ಕಂಪೆನಿಯ ಸ್ಥಾಪಕರು ಸಚಿನ್ ಹಾಗೂ ಬಿನ್ನಿ ಬನ್ಸಾಲ್. ಇಬ್ಬರು ಐಐಟಿ-ಡೆಲ್ಲಿಯ ಪ್ರತಿಭೆಗಳು. ಸಚಿನ್ ಅಮೆಜಾನ್ ನಲ್ಲೂ ಬಿನ್ನಿ ಸರ್ನಾಫ್ ನಲ್ಲೂ ಕೆಲಸ ಮಾಡುತ್ತಿದ್ದರು.
ಹತ್ತು ವರ್ಷದ ಹಿಂದೆ ಇಬ್ಬರೂ ತಮ್ಮ ಕೆಲಸಗಳನ್ನು ಬಿಟ್ಟು, ಫ್ಲಿಪ್ ಕಾರ್ಟ್ ಆರಂಭಿಸಿದರು. ಭಾರತದ ಇ ಕಾಮರ್ಸ್ ವ್ಯವಹಾರದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದ ಈ ಇಬ್ಬರು ಮೂಲತಃ ಚಂಡೀಗಡದವರು.
ವಿನೋದ್ ಖೋಸ್ಲಾ
ಸನ್ ಮೈಕ್ರೋಸಿಸ್ಟಮ್ ನ ಸಹ ಸಂಸ್ಥಾಪಕರು ವಿನೋದ್ ಖೋಸ್ಲಾ. ಐಐಟಿ-ಡೆಲ್ಲಿಯ ಪದವೀಧರರು. 2004ರಲ್ಲಿ ಖೋಸ್ಲಾ ವೆಂಚರ್ಸ್ ಎಂಬುದನ್ನು ಆರಂಭಿಸಿದರು. ವೆಂಚರ್ ಕ್ಯಾಪಿಟಲ್ ಸಂಸ್ಥೆಯಾಗಿದ್ದ ಅದು ಒಂದು ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಯನ್ನು ತಂದಿತು.