ಮೋಕ್ಷಕ್ಕಾಗಿ ಪ್ರಾರ್ಥಿಸುವ ವೈಕುಂಠ ಏಕಾದಶಿ: ದೇಗುಲಗಳ ವಿಶೇಷ
Recommended Video
ಬೆಂಗಳೂರು, ಡಿಸೆಂಬರ್ 29 : ವೈಕುಂಠ ಏಕಾದಶಿಯು ಪ್ರತಿ ವರ್ಷದ ಸಡಗರ, ಭಕ್ತರು ಎಲ್ಲೋ ಇರುವ ದೇವರನ್ನು ಹುಡುಕಿಕೊಂಡು ಬಂದು ನಮ್ಮೊಂದಿಗೇ ಇದ್ದಾನೆ ಎನ್ನುವ ಭಾವವನ್ನು ವ್ಯಕ್ತಪಡಿಸುತ್ತಾರೆ.ದೇಗುಲದ ವೈಕುಂಠ ದ್ವಾರದಲ್ಲಿ ನಿಂತು ಭಕ್ತರು ಮೋಕ್ಷಕ್ಕಾಗಿ ಪ್ರಾರ್ಥಿಸುವುದು. ಸ್ವಾಮಿಯ ಅಲಂಕಾರವನ್ನು ನೋಡುವುದೇ ಚಂದ.
ವೈಕುಂಠ ಏಕಾದಶಿ ಇದರಲ್ಲಿ ಎರಡು ಪದಗಳು ಸೇರಿಕೊಂಡಿದೆ, ಒಂದು ವೈಕುಂಠ ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂದು ಹೆಸರು ಬರಲು ಕಾರಣ ಚಾಕ್ಷುಷ ಮನ್ವಂತರದಲ್ಲಿ ವಿಷ್ಣುವು ವಿಕುಂಠ ಎಂಬ ಸ್ತ್ರೀ ಯಲ್ಲಿ ಅವತರಿಸಿದನು. ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂದಿದೆ ಎಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ. ವಿಷ್ಣು ಸಹಸ್ರನಾಮದಲ್ಲೂ ವೈಕುಂಠ ಎಂಬ ಹೆಸರಿನ ಉಲ್ಲೇಖವಾಗಿದೆ.
ವಿಶೇಷ: ವೈಕುಂಠ ಏಕಾದಶಿ ಆಚರಣೆ, ಉಪವಾಸದ ಮಹತ್ವ!
ಬೆಂಗಳೂರಿನಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸಾಕಷ್ಟು ದೇವಸ್ಥಾನಗಳಲ್ಲಿ ಪೂಜೆಗಳು ಪ್ರಾರಂಭವಾಗಿದೆ. ಎಲ್ಲ ದೇವಸ್ಥಾನಗಳಲ್ಲಿಯೂ ವೈಕುಂಠ ದ್ವಾರಗಳನ್ನು ನಿರ್ಮಿಸಲಾಗಿದ್ದು, ಮುಂಜಾನೆ 4 ಗಂಟೆಯಿಂದಲೇ ದರ್ಶನ ಆರಂಭಗೊಂಡಿದೆ. ರಾತ್ರಿ 10 ಗಂಟೆಯವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಸ್ಕಾನ್ ದೇವಸ್ಥಾನ, ವೈಯಾಲಿಕಾವಲ್ ನ ತಿರುಪತಿ ತಿರುಮಲ ದೇವಸ್ಥಾನ, ಕೋಟೆ ವೆಂಕಟೇಶ್ವರ ಸ್ವಾಮಿ, ಜೆಪಿನಗರದ ತಿರುಪತಿ ದೇವಸ್ಥಾನ ಸೇರಿದಂತೆ ನಗರದ ನಾನಾ ದೇವಸ್ಥಾನಗಳಲ್ಲಿ ವಿಶೇಷ ವೈಕುಂಠ ಏಕಾದಶಿ ಪೂಜೆ ನಡೆಯುತ್ತಿದೆ.
ವೈಕುಂಠ ಏಕಾದಶಿಯಂದು ಪಠಿಸಿ ಶ್ರೀ ವೆಂಕಟೇಶ ಸ್ತೋತ್ರ
ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಭಕ್ತರಿಗೆ ನೀಡಲು ಇಸ್ಕಾನ್ ವತಿಯಿಂದ 1 ಲಕ್ಷ ಲಾಡು ಸಿದ್ಧ ಪಡಿಸಲಾಗಿದೆ. ಅದೇ ರೀತಿ ಶರವಣ ಟ್ರಸ್ಟ್ ನಿಂದ 1 ಲಕ್ಷ ಲಾಡು ತಯಾರಿಸಿ ನಗರದ ದೇವಸ್ಥಾನಗಳಿಗೆ ಕಳುಹಿಸಲಾಗಿದೆ.
ವೈಕುಂಠ ಏಕಾದಶಿ, ಮುಕ್ಕೋಟಿ ದ್ವಾದಶಿ ಆಚರಣೆ ಹೇಗೆ, ವಿಶೇಷ ಏನು?
ವಿಶೇಷ ಅಲಂಕಾರ: ಮಹಾಲಕ್ಷ್ಮೀಪುರದ ಶ್ರೀ ಶ್ರೀನಿವಾಸ ದೇವಸ್ಥಾನದ ಸೇವಾ ಸಮಿತಿ ಟ್ರಸ್ಟ್ ನಲ್ಲಿ ಸ್ವಾಮಿ ಮತ್ತು ಅಮ್ಮನವರಿಗೆ ವಜ್ರ ಕವಚ ಧಾರಣೆ ಹಾಗೂ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿದೆ. ಸ್ವಾಮಿಗೆ ಬಂಗಾರದ ಕಿರೀಟವನ್ನು ಧಾರಣೆ ಮಾಡಿ ಸುವರ್ಣ ಚರಣ ಪಾದ ದರ್ಶನ ನೀಡಲಾಗುತ್ತಿದೆ.
ಮಲ್ಲೇಶ್ವರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ
ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಮಲ್ಲೇಶ್ವರ ಆಟದ ಮೈದಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಶ್ರೀ ಪಾಂಡುರಂಗ ವಿಷ್ಣು ಸಹಸ್ರನಾಮ ಮಂಡಳಿಯು ಶ್ರೀನಿವಾಸ ಕಲ್ಯಾಣೋತ್ಸವವನ್ನು ಹಮ್ಮಿಕೊಂಡಿದೆ. ಬೃಹತ್ ವಿಷ್ಣು ಸಹಸ್ರನಾಮ ಪಾರಾಯಣ, ಮಹಾಯಜ್ಞ 27 ಗಂಟೆಗಳ ನಿರಂತರ ಪಠಣ ಪ್ರಾರಂಭವಾಗಿದೆ.
ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಏಕಾದಶಿ
ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಭವದ ವೈಕುಂಠ ಏಕಾದಶಿ ನಡೆಯಲಿದೆ. ಮುಂಜಾನೆ ಸಪ್ತಗಿರೀಶ ವಿಗ್ರಹಕ್ಕೆ ಆಕರ್ಷಕ ಅಲಂಕಾರಗಳನ್ನು ಮಾಡಲಾಗುತ್ತಿದೆ. ಮುಂಜಾನೆ 3 ಗಂಟೆಗೆ ಸುಪ್ರಭಾತ ಸೇವೆ ಹಾಗೂ ವೈಕುಂಠ ದ್ವಾರ ಪೂಜೆ ನೆರವೇರಿದೆ.
ವೈಕುಂಠ ಏಕಾದಶಿ ಪ್ರಯುಕ್ತ ಪ್ರಸನ್ನ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ
ಶ್ರೀನಿವಾಸನಗರದ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯ ಟ್ರಸ್ಟ್ ಹಾಗೂ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಮತ್ತು ನವಗ್ರಹ ದೇವಾಲಯದಲ್ಲಿ ಮುಂಜಾನೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ವೈಕುಂಠದ್ವಾರದ ಪೂಜೆ, ಅಷ್ಟೋತ್ತರ ಶತನಾಮಾವಳಿ, ಮಂತ್ರ ಪುಷ್ಪ ಸೇವೆ, ಅಷ್ಟಾವಧಾನ ಸೇವೆ ನಡೆಯುತ್ತಿದೆ.
ಶ್ರೀ ದುರ್ಗಾ ದೇವಾಲಯದಲ್ಲಿ ವೈಕುಂಠ ದ್ವಾರ ಪ್ರವೇಶ
ಹೊಸಕೆರೆಹಳ್ಳಿಯ ಶ್ರೀದುರ್ಗಾ ದೇವಾಲಯ ಟ್ರಸ್ಟ್ ಮುಂಜಾನೆ 4.30ರಿಂದ ಮಧ್ಯರಾತ್ರಿ 12ರವರೆಗೂ ವೈಕುಂಠ ದ್ವಾರ ಪ್ರವೇಶ ವ್ಯವಸ್ಥೆ ಕಲ್ಪಿಸಿದೆ. ವಿಶ್ವರೂಪ ದರ್ಶನ, ವೈಕುಂಠ ದ್ವಾರ ಪ್ರವೇಶ, ಪ್ರಸಾದ ವಿನಿಯೋಗ ನಡೆಯಲಿದೆ. ರಾಜಾಜಿನಗರದ ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ, ಮಾಗಡಿ ರಸ್ತೆಯ ಎಂಜಿ ರೈಲ್ವೆ ಕಾಲೊನಿಯ ಶ್ರೀ ವಿನಾಯಕ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ, ಕೆಂಗೇರಿಯ ಬೆಟ್ಟನಪಾಳ್ಯದ ಸ್ಥಂಬದ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ.