ಮಲಯಾಳಿಗರ ಓಣಂ ಹಬ್ಬಕ್ಕೆ ಪೌರಾಣಿಕ ಹಿನ್ನೆಲೆ
ಓಣಂ ಆಚರಣೆ ಹೇಗೆ ಜಾರಿಗೆ ಬಂತು ಎಂಬುವುದನ್ನು ಪುರಾಣದ ಹಿನ್ನೆಲೆಯಲ್ಲಿ ನೋಡುವುದಾದರೆ ವಾಮನ ರೂಪದಲ್ಲಿ ಬಂದ ವಿಷ್ಣು ಬಲಿಚಕ್ರವರ್ತಿಯನ್ನು ಸಂಹರಿಸಿದ ದಿನವನ್ನು ಬಲಿಪಾಡ್ಯಮಿಯಾಗಿ ದೀಪಾವಳಿಯಲ್ಲಿ ಆಚರಿಸಲಾಗುತ್ತದೆ. ಓಣಂ ಹಬ್ಬ ಕೂಡ ಬಲಿಚಕ್ರವರ್ತಿಯ ಸಂಹಾರದ ನಂತರ ಆಚರಣೆಗೆ ಬಂದಿದೆ ಎಂಬುವುದು ಪುರಾಣ ಕಥೆಗಳಿಂದ ತಿಳಿದು ಬರುತ್ತದೆ.
ಪೌರಾಣಿಕ ಯುಗದಲ್ಲಿ ಬಲಿ ಚಕ್ರವರ್ತಿ ರಾಕ್ಷಸನಾಗಿದ್ದರೂ ಪ್ರಜೆಗಳ ಬಗ್ಗೆ ಕಾಳಜಿವುಳ್ಳವನೂ, ವಾತ್ಸಲ್ಯವುಳ್ಳವನೂ, ಧರ್ಮಿಷ್ಠನೂ, ಮಹಾದಾನಿಯೂ ಹಾಗೂ ಮಹಾ ಪರಾಕ್ರಮಿಯೂ ಆಗಿದ್ದನು. ತನ್ನ ಮಹಾ ಪರಾಕ್ರಮದಿಂದ ಜಗತ್ತನ್ನೇ ಸುತ್ತುವ ದೇವ ವಾಹನವನ್ನು ಪಡೆದಿದ್ದನು. ಆದರೆ ರಾಕ್ಷಸ ಕುಲದವನಾದ ಬಲಿಗೆ ದೇವತೆಗಳ ಮೇಲೆ ಯುದ್ಧ ಸಾರಿ ಅವರನ್ನು ಬಗ್ಗುಪಡೆಯುವ ಹಂಬಲ ಉಂಟಾಗಿತ್ತಲ್ಲದೆ, ಇಂದ್ರಪದವಿಯನ್ನು ಪಡೆದೇ ತೀರಬೇಕೆಂಬ ದುರಾಸೆಯೂ ಮೂಡಿತ್ತು. ಹೀಗಾಗಿ ಇಂದ್ರಪದವಿಯನ್ನು ಪಡೆಯುವುದಕ್ಕಾಗಿ ಮಹಾಯಾಗ ಮಾಡಲು ಮುಂದಾದನು.
ಯಾವಾಗ ಬಲಿಚಕ್ರವರ್ತಿ ಮಹಾಯಾಗ ಮಾಡಲು ಹೊರಟಿರುವ ವಿಷಯ ದೇವತೆಗಳ ಕಿವಿಗೆ ಬಿತ್ತೋ ದೇವತೆಗಳು ನಡುಗಿ ಹೋದರು. ಇನ್ನು ನಮಗೆ ಉಳಿಗಾಲವಿಲ್ಲ ಹೇಗಾದರು ಮಾಡಿ ನಮ್ಮನ್ನು ಕಾಪಾಡು ಎಂದು ವಿಷ್ಣುವಿನ ಮೊರೆಹೋದರು. ದೇವತೆಗಳಿಗೆ ಒದಗಿ ಬಂದ ಕಷ್ಟವನ್ನು ಪರಿಹರಿಸಬೇಕಾದರೆ ಬಲಿಚಕ್ರವರ್ತಿಯನ್ನು ವಧಿಸಬೇಕು ಆದರೆ ಎದುರಿಗೆ ನಿಂತು ಯುದ್ಧ ಮಾಡುವ ಬದಲು ಉಪಾಯದಿಂದ ಸಂಹರಿಸುವ ತಂತ್ರ ರೂಪಿಸಿದ ವಿಷ್ಣು ವಾಮನ ರೂಪದಲ್ಲಿ ಬಲಿ ಚಕ್ರವರ್ತಿ ಬಳಿಗೆ ಬರುತ್ತಾನೆ. ನನಗೆ ತಪಸ್ಸು ಮಾಡಲು ಮೂರು ಅಡಿ ಜಾಗ ಬೇಕೆಂದು ಕೇಳುತ್ತಾನೆ. ಮಹಾದಾನಿಯಾಗಿದ್ದ ಬಲಿಚಕ್ರವರ್ತಿಗೆ ಮೂರು ಅಡಿ ಜಾಗವನ್ನು ಕೇಳುತ್ತಿರುವ ವಾಮನನನ್ನು ಕಂಡು ಕನಿಕರ ಉಂಟಾಗುತ್ತದೆಯಲ್ಲದೆ, ಜಾಗಕೊಡಲು ಒಪ್ಪಿಗೆ ನೀಡುತ್ತಾನೆ.
ರಾಕ್ಷಸಗುರು ಶುಕ್ರಾಚಾರ್ಯರಿಗೆ ವಾಮನ ರೂಪದಲ್ಲಿ ಬಂದಾತ ವಿಷ್ಣುವೆಂದು ಗೊತ್ತಾಗುತ್ತದೆ. ಹಾಗಾಗಿ ಆತನಿಗೆ ದಾನವಾಗಿ ಜಾಗವನ್ನು ನೀಡದಂತೆ ಬಲಿ ಚಕ್ರವರ್ತಿಯಲ್ಲಿ ಭಿನ್ನವಿಸಿಕೊಳ್ಳುತ್ತಾರೆ. ಆದರೆ ಈಗಾಗಲೇ ದಾನ ನೀಡುವುದಾಗಿ ಮಾತುಕೊಟ್ಟ ಮೇಲೆ ಅದಕ್ಕೆ ತಪ್ಪುವಾತ ನಾನಲ್ಲ. ಎಂದೂ ತನ್ನ ಬಳಿಗೆ ಬೇಡಿ ಬಂದವರನ್ನು ಬರಿಕೈಯಲ್ಲಿ ಕಳುಹಿಸಿದವನು ನಾನಲ್ಲ ಆದ್ದರಿಂದ ವಾಮನನನ್ನು ಹಿಂದಕ್ಕೆ ಕಳುಹಿಸಲಾರೆ ಎಂದು ಶುಕ್ರಾಚಾರ್ಯರ ಮಾತನ್ನು ಲೆಕ್ಕಿಸದೆ ತಪಸ್ಸಿಗೆ ಸ್ಥಳ ನೀಡುತ್ತಾನೆ.